Advertisement

ಅನುದಾನ, ಅಧಿಕಾರವಿಲ್ಲದ ತಾಪಂ ರದ್ದತಿಯೇ ಲೇಸು : ಮೂಲಸೌಲಭ್ಯಕ್ಕೆ ಅನುದಾನವೇ ಇಲ್ಲ

02:29 PM Jan 20, 2021 | Team Udayavani |

ಚಾಮರಾಜನಗರ: ರಾಜ್ಯದಲ್ಲಿ ತಾಲೂಕು ಪಂಚಾಯಿತಿ ವ್ಯವಸ್ಥೆಯನ್ನೇ ರದ್ದುಪಡಿಸಬೇಕೆಂಬ ಚಿಂತಿಸಲಾಗುತ್ತಿದೆ ಎಂಬ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ಹರಿಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಅನುದಾನ, ಅಧಿಕಾರವೇ ಮುಂದುವರಿದಲ್ಲಿ ತಾಪಂಗಳ ಇದ್ದೂ ಪ್ರಯೋಜನವಿಲ್ಲ ಎಂಬ ಅಭಿಪ್ರಾಯಗಳು ಒಂದೆಡೆ ಕೇಳಿ ಬಂದರೆ, ಹೆಚ್ಚಿನ ಅನುದಾನ ನೀಡಿ ತಾಪಂ ಅಧಿಕಾರವನ್ನು ಬಲಪಡಿಸಬೇಕೆಂದು ಇನ್ನೊಂದೆಡೆ ಕೇಳಿ ಬರುತ್ತಿವೆ.

Advertisement

ಜಿಲ್ಲೆಯಲ್ಲಿ 5 ತಾಲೂಕು ಪಂಚಾಯಿತಿಗಳಿದ್ದು, ಈ ಐದೂ ತಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪ್ರತಿ ವರ್ಷ ತಾಪಂಗೆ ದೊರಕುವ ಅನುದಾನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಸುಮಾರು 1.5 ಕೋಟಿ ರೂ.ಅನುದಾನ ತಾಪಂಗಳಿಗೆ ಸರ್ಕಾರದಿಂದ ದೊರಕುತ್ತಿದೆ. ಇದನ್ನು ಪ್ರತಿ ಸದಸ್ಯರಿಗೂ ಭಾಗಿಸಿದರೆ 5 ಲಕ್ಷ ರೂ. ಪ್ರತಿ ಸದಸ್ಯರಿಗೆ ದೊರಕುತ್ತದೆ. ಈ 5 ಲಕ್ಷ ರೂ.ಗಳಲ್ಲಿ ಏನು ತಾನೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಎಂದು ಅನೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ತಾಪಂ ಅಂದ ತಕ್ಷಣ ನೋಡುವವರ ಕಣ್ಣಿಗೆ ಇಡೀ ತಾಲೂಕಿನ ಆಡಳಿತದ ಅಭಿವೃದ್ಧಿ, ಅಧಿಕಾರ ಚಲಾವಣೆ ಇರುತ್ತದೆ ಎಂಬಂತೆ ಕಾಣುತ್ತದೆ. ತಾಪಂ ಸದಸ್ಯ, ಅಧ್ಯಕ್ಷ ಎಂದರೆ ಒಂದು ದೊಡ್ಡ ಹುದ್ದೆ ಎಂಬಂತೆ ಗೋಚರಿಸುತ್ತದೆ. ಆದರೆ, ವಾಸ್ತವದಲ್ಲಿ ಹೇಳಿಕೊಳ್ಳುವಂತಹ ಅಧಿಕಾರವೇ ಇಲ್ಲ, ಅಭಿವೃದ್ಧಿ ಕಾರ್ಯಗಳಿಗೂ ಅನುದಾನವೇ ಇಲ್ಲ ಎಂಬಂತಹ
ವ್ಯವಸ್ಥೆ ಇದೆ ಎಂಬುದು ಸದಸ್ಯರ ಅಳಲು.

ಇದನ್ನೂ ಓದಿ:ಕುರುಬ ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ: ಸಿದ್ದರಾಮಯ್ಯಗೆ ವಿಶ್ವನಾಥ್ ಎಚ್ಚರಿಕೆ

ತಾಪಂಗೆ ಹೋಲಿಸಿದರೆ, ಗ್ರಾಮ ಪಂಚಾಯಿತಿಗಳಿಗೇ ಹೆಚ್ಚಿನ ಅನುದಾನ ದೊರಕುತ್ತದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ
ಯೋಜನೆಯಲ್ಲಿ ಮಿತಿಯಿಲ್ಲದೇ ಅನುದಾನ ಬಳಸಿಕೊಳ್ಳಬಹುದಾಗಿದೆ. ಅದರ ಮೂಲಕವೇ ಗ್ರಾಮಗಳಲ್ಲಿ ಚರಂಡಿ, ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಅಂಬೇಡ್ಕರ್‌, ರಾಜೀವ್‌ಗಾಂಧಿ ವಸತಿ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಮನೆಗಳು ಮಂಜೂರಾಗುತ್ತವೆ. ತಾಪಂ ವ್ಯವಸ್ಥೆಯ ಅಗತ್ಯ ಇದೆ. ಅದನ್ನು ಸದೃಢಗೊಳಿಸಬೇಕು. ಆಡಳಿತಾತ್ಮಕವಾಗಿ ಸುಧಾರಣೆ ಆಗಬೇಕು. ಅಧ್ಯಕ್ಷ ಉಪಾಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಕೊಡಬೇಕು. 25-30 ಇಲಾಖೆಗಳು ಇದರ ವ್ಯಾಪ್ತಿಗೊಳಪಡುತ್ತವೆ. ಇದನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು ಎಂಬುದು ಸದಸ್ಯರ ಒತ್ತಾಯ.

ಗ್ರಾಪಂಗೆ ಪರಮಾಧಿಕಾರ ಸಿಕ್ಕ ಬಳಿಕ ತಾಪಂ ಮಹತ್ವ ಕಡಿಮೆ
ಯಳಂದೂರು: ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಸ್ಥಳೀಯ ಆಡಳಿತವನ್ನು ಸುಗಮಗೊಳಿಸಲು ತಾಲೂಕು ಪಂಚಾಯಿತಿ ಗಳು ರಚನೆಯಾದವು. ಆರಂಭದಲ್ಲಿ ತಾಪಂ ಸದಸ್ಯ, ಅಧ್ಯಕ್ಷ ಪದವಿ ಹೆಚ್ಚು ಗೌರವ ಹಾಗೂ ಅಧಿಕಾರಯುತವಾಗಿತ್ತು.
ಆದರೆ, ಜಿಲ್ಲಾ ಪಂಚಾಯಿತಿಗೆ ಹೆಚ್ಚು ಅಧಿಕಾರ ಬಂದ ಮೇಲೆ, ಇದಕ್ಕಿಂತಲೂ ಹೆಚ್ಚಾಗಿ ಗ್ರಾಮ ಪಂಚಾಯಿತಿಗಳ ಸದಸ್ಯರು, ಅಧ್ಯಕ್ಷರಿಗೆ ಪರಮ ಅಧಿಕಾರ ದೊರೆತಾಗ ತಾಪಂಗಳ ಮಹತ್ವ ಕಡಿಮೆಯಾಗಿದೆ. ಆದರೆ, ಜಿಪಂ ಸದಸ್ಯರು ಹಲವು ಗ್ರಾಮ, ತಾಲೂಕು ಪಂಚಾಯಿತಿಗಳ ಒಳಗೂಡಿ ಒಂದೇ ಸದಸ್ಯರಾಗಿರುತ್ತಾರೆ. ಹಾಗಾಗಿ ಇಲ್ಲಿನ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಹಾರ
ಹುಡುಕಲು ಇವರಿಗೆ ಕಷ್ಟವಾಗುತ್ತದೆ. ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸದಸ್ಯರು ತಮ್ಮ ವಾರ್ಡ್‌ ಹಾಗೂ ಗ್ರಾಮಗಳ ಮೂಲ
ಸಮಸ್ಯೆಗಳ ನಿವಾರಣೆಗೆ ಹೆಚ್ಚು ಒತ್ತು ನೀಡುತ್ತವೆ. ಆದರೆ, ಗ್ರಾಮೀಣ ಭಾಗದಲ್ಲಿರುವ ಇತರೆ ಸರ್ಕಾರಿ ಕಟ್ಟಡಗಳು, ವಿದ್ಯಾರ್ಥಿ ನಿಲಯಗಳು, ಗ್ರಂಥಾಲಯಗಳು, ಆರೋಗ್ಯ ಕೇಂದ್ರಗಳು ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳು, ಇದರ ನಿರ್ವಹಣೆ, ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಹೆಚ್ಚು ಚರ್ಚೆಯಾಗುವುದು ತಾಲೂಕು ಪಂಚಾಯಿತಿಯಲ್ಲಿ, ಹಾಗಾಗಿ ತಾಲೂಕು
ಪಂಚಾಯಿತಿಗಳು ಇರಬೇಕು. ಆದರೆ, ಈಚಿನ ವರ್ಷಗಳಲ್ಲಿ ಇದಕ್ಕೆ ಬರುವ ಅನುದಾನ ಕಡಿಮೆಯಾಗಿದೆ. ಇಲ್ಲಿಂದ ಆಯ್ಕೆಗೊಂಡಿರುವ ಜನಪ್ರತಿನಿಧಿಗಳು ಕೇವಲ ರಾಜಕಾರಣಿ ಎಂದು ಗುರುತಿಸಿಕೊಳ್ಳುತ್ತಾರೆ. ಇವರಿಗೆ ಹೆಚ್ಚಿನ ಅಧಿಕಾರವೂ ಲಭಿಸುತ್ತಿಲ್ಲ. ಅನುದಾನಗಳೂ ಬರುವುದಿಲ್ಲ. ಇದನ್ನು ಹೆಚ್ಚು ಮಾಡಿದ್ದಲ್ಲಿ ಅಲ್ಪ ಬದಲಾವಣೆ ಸಾಧ್ಯ.

Advertisement

ತಾಪಂನಿಂದ ಆಡಳಿತ ಚುರುಕು
ಗುಂಡ್ಲುಪೇಟೆ: ಯಾವುದೇ ಒಂದು ತಾಲೂಕು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ತಾಲೂಕು ಪಂಚಾಯಿತಿಯ ಕಾರ್ಯ ಮಹತ್ತರವಾದುದು. ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ತಾಲೂಕು ಪಂಚಾಯಿತಿಯು ಗ್ರಾಮ ಪಂಚಾಯಿತಿಯ ಕಾರ್ಯಗಳನ್ನು ಗಮನಿಸುತ್ತಾ, ಅದರ ಆಡಳಿತ ವೈಖರಿಯನ್ನು ತಿದ್ದಿ ತೀಡಿ ಅಭಿವೃದ್ಧಿ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಆದರೆ, ತಾಪಂ ಬಿಟ್ಟು ಕೇವಲ ಗ್ರಾಮ ಪಂಚಾಯಿತಿಯನ್ನು ಅವಲಂಭಿಸಿದರೆ ಇದು ಸಾಧ್ಯವಾಗುವುದಿಲ್ಲ. ಇಡೀ ತಾಲೂ ಕಿನ ಸರ್ಕಾರಿ ಕಚೇರಿಗಳ ಆಡಳಿತವನ್ನು ಪ್ರಗತಿ ಪರಿಶೀಲನಾ ಸಭೆಯ ಮುಖಾಂತರ ಅಲ್ಲಿನ ಆಡಳಿತವನ್ನು ಚುರುಕುಗೊಳಿಸಲು ತಾಪಂ ಸಹಕಾರಿಯಾಗಿದೆ. ತಾಲೂಕು ಪಂಚಾಯ್ತಿಯನ್ನು ಕೈಬಿಟ್ಟರೆ ಕೇವಲ ಗ್ರಾಮ ಪಂಚಾಯಿತಿಯಿಂದ ಯಾವುದೇ ರೀತಿಯ ಅಭಿವೃದ್ಧಿಯಾಗಲು ಸಾಧ್ಯವಾಗುವುದಿಲ್ಲ. ತಾಪಂಗೆ ಈಗಾಗಲೇ 1.70 ಕೋಟಿ ರೂ. ಅನುದಾನ ಬಂದಿದ್ದರೂ
ಸಹ ತಾಪಂ ಆರ್ಥಿಕ ಮೂಲ ಕಡಿಮೆ. ತಾಲೂಕಿನ ಜನಸಂಖ್ಯೆಯನ್ನು ಪರಿಗಣನೆಗೆ ತೆಗೆದು ಕೊಂಡರೆ ಕನಿಷ್ಠ ಮೂಲ ಸೌಕರ್ಯವನ್ನು ನೀಡಲು ಹೆಚ್ಚಿನ ಆರ್ಥಿಕ ಮೂಲ ಸರ್ಕಾರದಿಂದ ನೀಡಬೇಕಾಗಿದೆ. ಆದರೆ, ಗ್ರಾಪಂಗಳಿಗೆ ಕಂದಾಯ, ನೀರಿನ ತೆರಿಗೆ, ಕಟ್ಟಡ ತೆರಿಗೆ ಸೇರಿದಂತೆ ವಿವಿಧ ಆದಾಯದ ಮೂಲದೊಂದಿಗೆ ವಿವಿಧ ಹಣಕಾಸು ಯೋಜನೆಗಳ ಶೇ 85ರಷ್ಟು ಅನುದಾನವನ್ನು ಸರ್ಕಾರ ನೀಡುತ್ತದೆ

ತಾಪಂ ವಜಾ ಆದರೆ ಅಧಿಕಾರಿಗಳು ಹಿಡಿತಕ್ಕೆ ಸಿಗಲ್ಲ
ಕೊಳ್ಳೇಗಾಲ: ಅಧಿಕಾರ ವಿಕೇಂದ್ರೀಕರಣದಿಂದ ಎಲ್ಲಾ ಕೆಲಸ ಸುಗಮವಾಗಿ ಸಾಗುತ್ತದೆ ಎಂದು ಸರ್ಕಾರ ಮನಗಂಡು ಗ್ರಾಮೀಣ ಪ್ರದೇಶ ಅಭಿವೃದ್ಧಿ ಮಾಡಲು ಸ್ಥಳೀಯ ಸಂಸ್ಥೆಗಳಲ್ಲಿ ಒಂದಾದ ತಾಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಬಂದಿದೆ. ಇದನ್ನು ತಾಲೂಕು ಪಂಚಾಯಿತಿಯನ್ನು  ಸರ್ಕಾರ ಉಳಿಸಬೇಕು ಎಂದು ಕೊಳ್ಳೇಗಾಲ ತಾಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್‌ ಹೇಳುತ್ತಾರೆ.

ಒಂದು ವಿಧಾನಸಭಾ ಕ್ಷೇತ್ರದ ಶಾಸಕರು ತಾಲೂಕಿನ ಎಲ್ಲಾ ಗ್ರಾಮಗಳ ಅಭಿವೃದ್ಧಿ ಮತ್ತು 36 ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ಏಕಕಾಲದಲ್ಲಿ ನೋಡಲು ಸಾಧ್ಯವಿಲ್ಲ. ಇದೆಲ್ಲವನ್ನು ವೀಕ್ಷಣೆ ಮಾಡಬೇಕಾದರೆ ತಾಲೂಕು ಪಂಚಾಯಿತಿ ಇದ್ದಾಗ ಮಾತ್ರ ಸಾಧ್ಯ. ತಾಲೂಕು ಪಂಚಾಯಿತಿ ಇಲ್ಲ ಎಂದರೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಿಡಿತದಲ್ಲಿ ಸಿಗುವುದಿಲ್ಲ. ಆದ್ದರಿಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳು ಸಮರ್ಪಕವಾಗಿ ಅಭಿವೃದ್ಧಿಯಾಗಬೇಕಾದರೆ ತಾಲೂಕು ಪಂಚಾಯಿತಿಯಿಂದ ಮಾತ್ರ ಸಾಧ್ಯ ಎಂದು ಅವರು ಹೇಳುತ್ತಾರೆ.

ಗ್ರಾಮಪಂಚಾಯಿತಿಯಲ್ಲಿ ಗೆದ್ದ ಸದಸ್ಯರು ತಮ್ಮ ಗ್ರಾಮಗಳ ಅಸ್ತಿತ್ವಕ್ಕೆ ಮಾತ್ರ ಇರುತ್ತಾರೆ. ಅದೇ ರೀತಿ ಜಿಲ್ಲಾಪಂಚಾಯ್ತಿ ಸದಸ್ಯರು ಜಿಲ್ಲಾ ವ್ಯಾಪ್ತಿಯಲ್ಲಿ ಕೆಲಸ ಮಾಡುವುದರಿಂದ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡಲು ತಾಲೂಕು ಪಂಚಾಯಿತಿ ಸದಸ್ಯರು ಅವಶ್ಯಕತೆ ಇರುವುದರಿಂದ ಸರ್ಕಾರ ಯಾವುದೇ ಕಾರಣಕ್ಕೂ ತಾಲೂಕು ಪಂಚಾಯಿತಿಯನ್ನು ವಜಾ ಮಾಡಬಾರದು ಎಂದು ಸುರೇಶ್‌ ಮನವಿ ಮಾಡಿದ್ದಾರೆ.

ಮೂಲಸೌಲಭ್ಯಕ್ಕೆ ಅನುದಾನವೇ ಇಲ್ಲ
ಹನೂರು: ನೂತನ ತಾಲೂಕಾಗಿ ಘೋಷಣೆಯಾದ ಬಳಿಕ ತಾಲೂಕು ಪಂಚಾಯಿತಿ ರಚನೆಯಾಗಿ ಪರಿಪೂರ್ಣ ಪ್ರಮಾಣದಲ್ಲಿ ಆಡಳಿತ ಯಂತ್ರ ಚುರುಕುಗೊಳ್ಳುವ ಮುನ್ನವೇ ತಾಲೂಕು ಪಂಚಾಯಿತಿಗಳನ್ನು ರದ್ದು ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ
ಚರ್ಚೆಯಲ್ಲಿ ನಡೆಯುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿಂದೆ ಅವಿಭಜಿತ ಕೊಳ್ಳೇಗಾಲ ತಾಲೂಕಿಗೆ ಸೇರ್ಪಡೆಯಾಗಿದ್ದ ಹನೂರು ತಾಲೂಕು ಕೇಂದ್ರವಾದ ಬಳಿಕ 2020ರ ಜುಲೈ 29ರಂದು ಅಧಕ್ಷ ಹಾಗೂ
ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು. ಆದರೆ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿ 6 ತಿಂಗಳುಗಳೇ ಕಳೆದರೂ ಒಂದು ತಾಪಂ ಕಚೇರಿಯನ್ನೇ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಇನ್ನು 2020-21ನೇ ಸಾಲಿನಲ್ಲಿ ತಾಪಂಗೆ ಮಂಜೂರಾದ ಅನುದಾನದಲ್ಲಿ
ಕೊಳ್ಳೇಗಾಲ-ಹನೂರು ತಾಲೂಕುಗಳಿಗೆ ಹಂಚಿಕೆ ಪ್ರಕ್ರಿಯೆಯೂ ಕೂಡ ಸಮರ್ಪಕವಾಗಿ ಜರುಗಿಲ್ಲ. ಇದನ್ನು ಹೊರತುಪಡಿಸಿ ನೂತನ ತಾಲೂಕು  ಪಂಚಾಯಿತಿಗೆ 1.50 ಕೋಟಿ ಅನುದಾನ ಬಿಡುಗಡೆಯಾಗಿದ್ದು ಇನ್ನೂ ಸಹ ಕ್ರಿಯಾಯೋಜನೆ ಹಂತದಲ್ಲಿ ಇದೆ.

ತಾಲೂಕು ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನದ ಬಗ್ಗೆ ಬಹುತೇಕ ಎಲ್ಲಾ ಸದಸ್ಯರಿಗೂ ಅಸಮಾಧಾನವಿದ್ದು, ತಾಪಂಗೆ ಹೋಲಿಕೆ ಮಾಡಿದಲ್ಲಿ ಗ್ರಾಮ ಪಂಚಾಯಿತಿಗಳೇ ಮೇಲೆಂಬ ಭಾವನೆಯಿದೆ. ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಅನಿಯಮಿತ ಅನುದಾನ ಲಭ್ಯವಿದ್ದು ಉದ್ಯೋಗ ಕಲ್ಪಿಸಿಕೊಡಲು, ಗ್ರಾಮಕ್ಕೆ ಕಾಂಕ್ರೀಟ್‌ ರಸ್ತೆ, ಚರಂಡಿ,
ಒಕ್ಕಣೆ ಕಣ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅವಕಾಶಗಳಿದ್ದು ತಾಪಂನಲ್ಲಿ ಈ ಪ್ರಮಾಣದಲ್ಲಿ ಅನುದಾನ ಲಭ್ಯವಿಲ್ಲ ಎಂಬ ಭಾವನೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next