Advertisement
ಜೂನ್ 1ರಿಂದ 26ರವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ. 35ರಷ್ಟು ಹಾಗೂ ಮಲೆನಾಡು ಭಾಗಗಳಲ್ಲಿ ಶೇ. 19ರಷ್ಟು ಮಳೆ ಕೊರತೆ ಕಂಡುಬಂದಿದೆ. ಉತ್ತರ ಒಳನಾಡಿನಲ್ಲಿ ಮಾತ್ರ ವಾಡಿಕೆ ಮಳೆಯಾಗಿದೆ. ಕರಾವಳಿಯಲ್ಲಿ ಶೇ. 3ರಷ್ಟು ಕಡಿಮೆ ಮಳೆಯಾಗಿದ್ದರೂ, ಅದನ್ನು ವಾಡಿಕೆ ಮಳೆ ಎಂದೇ ಪರಿಗಣಿಸಲಾಗುತ್ತದೆ.
Related Articles
Advertisement
ಆದರೆ, ತಿಂಗಳಾಂತ್ಯಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇದ್ದು, ಭಾನುವಾರದಿಂದ ರಾಜ್ಯದಲ್ಲಿ ಮುಂಗಾರು ಕೂಡ ಚುರುಕಾಗಿದೆ. ಮುಂದಿನ ಎರಡು ದಿನಗಳು ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.
ಸಾಮಾನ್ಯವಾಗಿ ಮೊದಲ ತಿಂಗಳು ಮಾರುತಗಳ ಏರಿಳಿತ ಇದ್ದೇ ಇರುತ್ತದೆ. ಆರಂಭದಲ್ಲಿ ಚೆನ್ನಾಗಿ ಮಳೆಯಾಯಿತು. ನಂತರ ವಿರಾಮ ನೀಡಿತು. ಈಗ ಮತ್ತೆ ಮಾರುತಗಳು ಚುರುಕುಗೊಂಡಿದ್ದು, ಉತ್ತಮ ಮಳೆಯಾಗುತ್ತಿದೆ. ಹಾಗಾಗಿ, ಈಗಲೇ ಮಳೆ ಕೊರತೆ ಆಯಿತು ಎಂದು ಹೇಳಲಾಗದು. ಕಳೆದೆರಡು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಮುಂಗಾರು ಆರಂಭ ಉತ್ತಮವಾಗಿಯೇ ಇದೆ. ಮುಂದಿನ ಮೂರ್ನಾಲ್ಕು ದಿನ ಉತ್ತಮ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ರಮೇಶಬಾಬು ಸ್ಪಷ್ಟಪಡಿಸುತ್ತಾರೆ.
ಮೂರ್ನಾಲ್ಕು ದಿನ ಉತ್ತಮ ಮಳೆರಾಜ್ಯದಲ್ಲಿ ಭಾನುವಾರದಿಂದ ಮುಂಗಾರು ಮಾರುತಗಳು ಚುರುಕಾಗಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಜೂನ್ 28ರಿಂದ ಜುಲೈ 1ರವರೆಗೆ ಬುಧವಾರ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತಿತರ ಕಡೆಗಳಲ್ಲಿ ಮಳೆಯಾಗಲಿದೆ. ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಮಧ್ಯೆ ಕೊಲ್ಲೂರು, ಕಾರ್ಕಳ, ಮಾಣಿ, ಪುತ್ತೂರು, ಭಾಗಮಂಡಲ, ಶೃಂಗೇರಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಬೆಳಿಗ್ಗೆ 8.30ಕ್ಕೆ ಗರಿಷ್ಠ 15 ಸೆಂ.ಮೀ.ನಿಂದ ಕನಿಷ್ಠ 12 ಸೆಂ.ಮೀ. ಮಳೆ ದಾಖಲಾಗಿದೆ. ಅದೇ ರೀತಿ, ಸಿದ್ದಾಪುರ, ಕೊಟ್ಟಿಗೆಹಾರ, ಕಮ್ಮರಡಿ, ಬೆಳ್ತಂಗಡಿ, ಮಂಗಳೂರು, ಜಯಪುರ, ಧರ್ಮಸ್ಥಳ ಸುತ್ತಲಿನ ಪ್ರದೇಶಗಳಲ್ಲಿ ಗರಿಷ್ಠ 10ರಿಂದ ಕನಿಷ್ಠ 7 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಶಿವಮೊಗ್ಗ, ಹಾಸನ, ಬೆಳಗಾವಿ, ಮೈಸೂರು, ಯಾದಗಿರಿ, ಕಲಬುರಗಿ, ಹಾವೇರಿ, ವಿಜಯಪುರ ಮತ್ತಿತರ ಜಿಲ್ಲೆಗಳ ಕೆಲವೆಡೆ 6ರಿಂದ 1 ಸೆಂ.ಮೀ.ವರೆಗೂ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.