Advertisement

ಮಾನವ ರಕ್ಷಣೆಯ ಹೆಗ್ಗುರುತು: ಕ್ರಿಸ್ತ ಮರಣಿಸಿದ “ಶಿಲುಬೆ’

12:47 AM Apr 02, 2021 | Team Udayavani |

ಮಾನವಕುಲದ ರಕ್ಷಣೆಗಾಗಿ ದೇವಪುತ್ರ ಯೇಸುಕ್ರಿಸ್ತ ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ ಪವಿತ್ರ ದಿನ ಶುಭ ಶುಕ್ರವಾರ ಅಥವಾ ಗುಡ್‌ ಫ್ರೈಡೆ. ನಲ್ವತ್ತು ದಿನಗಳ ತಪಸ್ಸು ಕಾಲದ ಅಂತ್ಯದಲ್ಲಿ ಬರುವ ಪವಿತ್ರ ವಾರದ ಬಹುಮುಖ್ಯ ಆಚರಣೆ ಇದು. ಈ ದಿನದ ಚಿಂತನೆ ಹಾಗೂ ಧ್ಯಾನದ ಕೇಂದ್ರ ಬಿಂದು ಯೇಸುಕ್ರಿಸ್ತರ ಮರಣ ಹಾಗೂ ಅವರು ಮರಣಿಸಿದ ಶಿಲುಬೆ.

Advertisement

ಯೆಹೂದ್ಯ ಜನಾಂಗದಲ್ಲಿ ಹುಟ್ಟಿ ಬೆಳೆದ ಯೇಸು ಕ್ರಿಸ್ತರು ಆ ಧರ್ಮದಲ್ಲಿದ್ದ ಮೂಢನಂಬಿಕೆ, ಧಾರ್ಮಿಕ ಆಷಾಢಭೂತಿತನ, ಅರ್ಥವಿಲ್ಲದ ಕಟ್ಟುಪಾಡುಗಳು, ಪುರೋಹಿತಶಾಹಿ ಪ್ರವೃತ್ತಿ, ಅಶಕ್ತರ ಹಾಗೂ ಮಹಿಳೆಯರ ದಮನ ಇನ್ನಿತರ ಕೆಟ್ಟತನಗಳನ್ನು ಕಟುವಾಗಿ ಟೀಕಿಸಿದರು. “ಪರಪ್ರೀತಿಯೇ ಸರ್ವಶ್ರೇಷ್ಟ; ಇದರಲ್ಲಿ ಉಳಿದೆಲ್ಲ ನಿಯಮಗಳು ಅಡಕವಾಗಿವೆ’ ಎಂದು ಬೋಧಿಸಿದರು. ಅವರ ಬೋಧನೆಯನ್ನು ವಿರೋಧಿಸಿದ ಪುರೋಹಿತಶಾಹಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಬಂಧಿಸಿ, ಚಿತ್ರಹಿಂಸೆಗೆ ಒಳಪಡಿಸಿ ವಿಚಾರಣೆಯಿಲ್ಲದೆ ಅವರನ್ನು ಶಿಲುಬೆಯ ಮರಣದ ಶಿಕ್ಷೆಗೆ ಒಳಪಡಿಸಿದರು.

ಯೇಸುಸ್ವಾಮಿ ತಮ್ಮ ಮೂವತ್ತನೇ ವಯಸ್ಸಿನಲ್ಲಿ ಬಹಿರಂಗ ಜೀವನವನ್ನು ಆರಂಭಿಸಿದರು. ಅವರ ಈ ಜೀವನದ ಆರಂಭದಲ್ಲೇ ಯೆಹೂದ್ಯ ನಾಯಕರು ಹಾಗೂ ಪುರೋಹಿತರೊಡನೆ ಭಿನ್ನಾಭಿಪ್ರಾಯ ಆರಂಭವಾಯಿತು. ಮೂರು ವರ್ಷಗಳ ಅವರ ಬಹಿರಂಗ ಜೀವನದಲ್ಲಿ ಯೆಹೂದ್ಯ ನಾಯಕರೊಡನೆ ಘರ್ಷಣೆಗೆ ಕಾರಣವಾದ ಅನೇಕ ಘಟನೆಗಳನ್ನು ಮತ್ತಾಯ, ಮಾರ್ಕ, ಲೂಕ ಹಾಗೂ ಯೊವಾನ್ನ ಈ ನಾಲ್ವರೂ ಸುವಾರ್ತೆಕಾರರು ಉಲ್ಲೇಖೀಸುತ್ತಾರೆ. ಯೇಸುಸ್ವಾಮಿಯ ಸ್ವಂತ ಊರಾದ ನಜರೇತಿನ ಜನರು “ಇವನು ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಾ ನಮ್ಮೊಂದಿಗೆ ಇಲ್ಲವೇ?’ ಎಂದು ಅವರನ್ನು ಹೀಗಳೆದು ತಿರಸ್ಕರಿಸುತ್ತಾರೆ ಮಾತ್ರವಲ್ಲ, ಅವರನ್ನು ಕೊಲ್ಲಲು ಹವಣಿಸುತ್ತಾರೆ.

ಯೇಸುಸ್ವಾಮಿಯು ಬಡ ಜನರಿಗೆ ಮಾಡುತ್ತಿದ್ದ ಬೋಧನೆ, ಅವರಿಗಾಗಿ ಮಾಡುತ್ತಿದ್ದ ಪವಾಡಗಳು ಇನ್ನಿತರ ವಿಶೇಷಗಳಿಂದ ಸಂಪ್ರದಾಯಸ್ಥ ಯೆಹೂದ್ಯ ಧಾರ್ಮಿಕ ನಾಯಕರ ಅಧಿಕಾರದ ಅಸ್ತಿವಾರ ಅಲುಗಾಡಲಾರಂಭಿಸಿತು. ಬಹಳಷ್ಟು ಸಾಮಾನ್ಯ ಯೆಹೂದಿಗಳು ಈ ಧಾರ್ಮಿಕ ನಾಯಕರ ಪೊಳ್ಳುತನವನ್ನು ಅರಿತು, ಅವರನ್ನು ಧಿಕ್ಕರಿಸಿ ಯೇಸುಸ್ವಾಮಿಯನ್ನು ಹಿಂಬಾಲಿಸಲಾರಂಭಿಸಿದರು. ಆ ಧಾರ್ಮಿಕ ನಾಯಕರಿಗೆ ಯೇಸುಸ್ವಾಮಿ ಬಹಳ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದರು. ಈ ಬೆದರಿಕೆಯನ್ನು ತೊಲಗಿಸಲು ಅವರಿಗಿದ್ದ ಒಂದೇ ದಾರಿಯೆಂದರೆ ಯೇಸುಸ್ವಾಮಿಯ ಕೊಲೆ. ಯೇಸುಕ್ರಿಸ್ತರ ಜನಪ್ರಿಯತೆ ಹಾಗೂ ದಬ್ಟಾಳಿಕೆಯನ್ನು ವಿರೋಧಿಸುವ ಪ್ರವೃತ್ತಿ ಯೆಹೂದ್ಯ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಯೆಹೂದ್ಯ ಧಾರ್ಮಿಕ ನಾಯಕರಿಗೆ ಸಾಬ್ಬತ್‌ (ಶನಿವಾರ) ವಾರದ ಪವಿತ್ರ ದಿನವಾಗಿತ್ತು. ಆ ದಿನದ ಕುರಿತಾಗಿ, ಅವರಲ್ಲಿ ಅನೇಕ ನಿಯಮಗಳಿದ್ದವು. ಆ ದಿನ ಯಾವುದೇ ಕೆಲಸವನ್ನು ಮಾಡುವುದು ನಿಷಿದ್ಧವಾಗಿತ್ತು. ಆದರೆ ಯೇಸುಸ್ವಾಮಿ ಈ ಕ್ಷುಲ್ಲಕ ಹಾಗೂ ಅರ್ಥವಿಲ್ಲದ ನಿಯಮಗಳನ್ನು ಅವಗಣಿಸಿ ಸಾಬ್ಬತ್‌ ದಿನದಲ್ಲೇ ರೋಗಿಗಳನ್ನು ಗುಣಪಡಿಸುವುದು, ಬೋಧನೆಯನ್ನು ಮಾಡುವುದು ಇನ್ನಿತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದು ಯೆಹೂದ್ಯ ಧಾರ್ಮಿಕ ನಾಯಕರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತು.

Advertisement

ಹೀಗೆ ಯೆಹೂದ್ಯ ಧಾರ್ಮಿಕ ನಾಯಕರು, ಮುಖ್ಯ ಯಾಜಕರು, ಫ‌ರಿಸಾಯರು, ಧರ್ಮಪಂಡಿತರು ಹಾಗೂ ಇನ್ನಿತರರು ಯೇಸುಸ್ವಾಮಿಯ ಮರಣಕ್ಕೆ ನೇರ ಕಾರಣರು. ಇದರಲ್ಲಿ ಸಾಮಾನ್ಯ ಜನರ ಉಲ್ಲೇಖವೇ ಇಲ್ಲ. ಆದರೆ ಈ ಅಧಿಕಾರಸ್ಥ ಧಾರ್ಮಿಕ ಹಾಗೂ ಸಾಮಾಜಿಕ ನಾಯಕರು ಸಾಮಾನ್ಯ ಜನರನ್ನು ಭಯ ಬೀಳಿಸಿ, ಪ್ರಚೋದಿಸಿ ಅವರನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡರು. ಅವರ ಕುಮ್ಮಕ್ಕಿನಿಂದಲೇ, ಜನಸಾಮಾನ್ಯರು, “ಅವನನ್ನು ಶಿಲುಬೆಗೇರಿಸಿ’ ಎಂದು ಬೊಬ್ಬಿಟ್ಟರು.

ಯೇಸುಸ್ವಾಮಿ ಜೀವಿಸಿ, ಬೋಧಿಸಿದ ಮೊದಲನೇ ಶತಮಾನದ ಆದಿಭಾಗದಲ್ಲಿ ಈಗಿನ ಇಸ್ರೇಲ್‌-ಪ್ಯಾಲೆಸ್ತೀನ್‌ ಭಾಗಗಳು ರೋಮ್‌ ಅಧಿಪತ್ಯಕ್ಕೆ ಒಳಪಟ್ಟಿದ್ದವು. ಧಾರ್ಮಿಕ ನಿಯಮಗಳು ಯೆಹೂದ್ಯರ ಸಂಪ್ರದಾಯದಂತೆ ಇದ್ದು, ಇತರ ಎಲ್ಲ ನಿಯಮಗಳು ರೋಮ್‌ ಆಡಳಿತ ವಿಧಿಸಿದ್ದಾಗಿದ್ದವು. ಯೇಸುಸ್ವಾಮಿಗೆ ಶಿಕ್ಷೆ ಅಥವಾ ಮರಣದಂಡನೆಯನ್ನು ವಿಧಿಸಲು ಯೆಹೂದ್ಯರಿಗೆ ಅಧಿಕಾರವಿಲ್ಲದುದರಿಂದ, ಅವರನ್ನು ಯೆಹೂದ್ಯರು ರೋಮನರ ಕೈಗೆ ಒಪ್ಪಿಸಿದರು. ರೋಮನರಿಗೆ ಒಪ್ಪಿಸುವಾಗ ಯೇಸುಸ್ವಾಮಿಯ ಮೇಲೆ ಹೊರಿಸಿದ ಸುಳ್ಳು ಆರೋಪಗಳು: “ಅವರು ಯೆಹೂದ್ಯರ ಪವಿತ್ರ ದೇವಾಲಯವನ್ನು ಕೆಡವಲು ಪ್ರಯತ್ನಿಸಿದ್ದು; ದೇವದೂಷಣೆ ಮಾಡಿದ್ದು; ರೋಮ್‌ ಆಡಳಿತದ ವಿರುದ್ಧ ದಂಗೆ ಎದ್ದದ್ದು ಇತ್ಯಾದಿ. ಆದರೆ ಯೇಸುಸ್ವಾಮಿ ತನ್ನ ಮರಣಾನಂತರ ಮೂರನೇ ದಿನ ಜೀವಂತವಾಗಿ ಏಳುವುದಾಗಿ ತನ್ನ ದೇಹದ ಬಗ್ಗೆ ಮಾತನಾಡಿದ್ದು ಹಾಗೂ ದೇವರನ್ನು ತಂದೆ ಎಂದು ಕರೆದದ್ದು, ರೋಮ್‌ ಆಡಳಿತದ ಬಗ್ಗೆ ಯೇಸುಸ್ವಾಮಿ, “ಅರಸನಿಗೆ ಕೊಡಬೇಕಾಗಿದ್ದನ್ನು ಅರಸನಿಗೆ ಕೊಡಿ; ದೇವರಿಗೆ ಸಲ್ಲುವುದನ್ನು ದೇವರಿಗೆ ಕೊಡಿ’ ಎಂದು ಪ್ರಾಮಾಣಿಕವಾಗಿ ರಾಜ್ಯಕ್ಕೆ ತೆರಿಗೆಯನ್ನು ಸಲ್ಲಿಸಬೇಕೆಂದು ಎಲ್ಲರಿಗೂ ಹೇಳಿದ್ದರು ಅಷ್ಟೇ.

ರೋಮ್‌ ರಾಜ್ಯಪಾಲನಾದ ಪೊಂತ್ಸಿಯಸ್‌ ಪಿಲಾತನಿಗೆ ಯೇಸುಸ್ವಾಮಿ ಸಂಪೂರ್ಣ ನಿರಪರಾಧಿ ಎಂದು ತಿಳಿದಿದ್ದರೂ ಧಾರ್ಮಿಕ ನಾಯಕರು ಹಾಗೂ ಯಾಜಕರಿಗೆ ಹೆದರಿ ರಾಜಕೀಯ ಕೈದಿಗೆ ನೀಡುವ ಶಿಲುಬೆಯ ಮರಣದ ತೀರ್ಪನ್ನು ಯೇಸುಸ್ವಾಮಿಗೆ ನೀಡುತ್ತಾನೆ. ಸಕಾರಣವಿಲ್ಲದೇ ಯೇಸುಸ್ವಾಮಿ ಶಿಲುಬೆಯ ಮರಣಕ್ಕೆ ಒಳಗಾದರು. ಅನಂತರ ಪುನರುತ್ಥಾನರಾಗಿ ಎದ್ದು ಸ್ವರ್ಗಕ್ಕೆ ಏರಿಹೋದರು.

ಯಾರಾದರೂ ನನ್ನ ಹಿಂಬಾಲಕರಾಗಲು ಬಯಸುವುದಾದರೆ ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸಲಿ ಎಂಬ ಕರೆಯನ್ನು ಯೇಸುಸ್ವಾಮಿ ತಮ್ಮ ಬೋಧನೆಯಲ್ಲಿ ನೀಡಿದರು. ಶಿಲುಬೆಯೆಂದರೆ ಜೀವನದಲ್ಲಿ ಎದುರಾಗುವ ಕಷ್ಟಗಳು, ದುಃಖ-ದುಗುಡಗಳು, ಸಾವು, ನೋವು, ಸಂಕಟಗಳು. ತನ್ನ ಶಿಲುಬೆಯನ್ನು ಹೊತ್ತು ಯೇಸುಸ್ವಾಮಿ ಗೊಲ್ಗೊಥಾದ ತುದಿಗೆ ಸಾಗಿದಂತೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಎದುರಾಗುವ ವಿವಿಧ ಶಿಲುಬೆಗಳನ್ನು ಹೊತ್ತು ನಡೆದರೆ ಪುನರುತ್ಥಾನದ ಆನಂದವನ್ನು ಪಡೆಯಬಹುದು ಎಂಬ ಭರವಸೆಯನ್ನು ಅವರು ನೀಡುತ್ತಾರೆ. ದೀನತೆಯ ಸಂಕೇತವಾದ ಶಿಲುಬೆಯು ಮಾನವನ ಅಹಂಕಾರ ಹಾಗೂ ಸ್ವಾರ್ಥಕ್ಕೊಂದು ಸವಾಲು. ಮನುಷ್ಯ ತನ್ನ ಸ್ವಾರ್ಥವನ್ನು ತ್ಯಜಿಸಿ ಪರಪ್ರೀತಿಯಲ್ಲಿ ಬಾಳಲು ಶಿಲುಬೆಯೊಂದು ಹಾದಿ.

ತಪಸ್ಸು ಕಾಲದ ಶುಕ್ರವಾರಗಳಲ್ಲಿ ಹಾಗೂ ವಿಶೇಷವಾಗಿ ಗುಡ್‌ ಫ್ರೆçಡೆಯಂದು ಯೇಸುಸ್ವಾಮಿ ಮರಣ ದಂಡನೆಯ ತೀರ್ಪನ್ನು ಪಡೆದು ಶಿಲುಬೆಯನ್ನು ಹೊತ್ತು “ಗೊಲ್ಗೊಥಾ ಬೆಟ್ಟಕ್ಕೆ ಸಾಗಿದುದ್ದನ್ನು ಪ್ರತಿಬಿಂಬಿಸುವ “ಶಿಲುಬೆ ಹಾದಿ’ಯನ್ನು ಕ್ರೈಸ್ತರು ನಡೆಸುತ್ತಾರೆ. ಆ ಹಾದಿಯಲ್ಲಿ ತಮ್ಮ ಜೀವನದ ಕಷ್ಟ-ದುಃಖದ, ಸಾವು-ನೋವಿನ ಹಾದಿಯನ್ನು ಕಾಣುತ್ತಾರೆ. ಹೀಗೆ ಗುಡ್‌ ಫ್ರೆçಡೆ ಹಾಗೂ “ಶಿಲುಬೆಯ ಹಾದಿ’ ಪವಿತ್ರ ವಾರದ ಅತ್ಯಂತ ಗಾಢ ಆಧ್ಯಾತ್ಮಿಕ ಧ್ಯಾನ ಹಾಗೂ ಚಿಂತನೆಯಾಗಿವೆ.

 

ಫಾದರ್ ಚೇತನ್

ಸಾರ್ವಜನಿಕ ಸಂಪರ್ಕಾಧಿಕಾರಿ,

ಉಡುಪಿ ಧರ್ಮಪ್ರಾಂತ

Advertisement

Udayavani is now on Telegram. Click here to join our channel and stay updated with the latest news.

Next