Advertisement

ಆನೆಗೊಂದಿ ಕರಕುಶಲಗ್ರಾಮ ಯೋಜನೆಯಲ್ಲಿ ಲಕ್ಷಾಂತರ ರೂ.ಗಳ ಗೋಲ್‌ಮಾಲ್ ಆರೋಪ

02:43 PM Jan 01, 2022 | Team Udayavani |

ಗಂಗಾವತಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕರಕುಶಲ ಗ್ರಾಮ ಯೋಜನೆ ಅನುಷ್ಠಾನದಲ್ಲಿ ಗೋಲ್‌ಮಾಲ್ ನಡೆದು ಲಕ್ಷಾಂತರ ರೂ.ಗಳನ್ನು ಕಾಮಗಾರಿ ನಿರ್ವಹಿಸದೇ ಎತ್ತುವಳಿ ಮಾಡಿದ ಆರೋಪ ತಾಲೂಕಿನ ಇತಿಹಾಸ ಪ್ರಸಿದ್ಧ ಆನೆಗೊಂದಿಯಲ್ಲಿ ಕೇಳಿಬಂದಿದೆ.

Advertisement

ಕರಕುಶಲ ಗ್ರಾಮ ಯೋಜನೆಯನ್ನು ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳ ಬಳಕೆಯಿಂದ ಮಹಿಳೆಯರಿಗೆ ಉದ್ಯೋಗ ಸೃಷ್ಠಿ ಮಾಡಿ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಗ್ರಾಮಗಳನ್ನು ಕೇಂದ್ರ ಸರಕಾರ ಆಯ್ಕೆ ಮಾಡಿ ಗ್ರಾಮದಲ್ಲಿ ನೈರ್ಮಲ್ಯ ನಿರ್ವಾಹಣೆ ಪ್ಲಾಸ್ಟಿಕ್ ವಸ್ತುಗಳ ಮರುಬಳಕೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸುವುದು ಹಾಗೂ ಗ್ರಾಮಗಳಲ್ಲಿರುವ ಕರಕುಶಲ ವಸ್ತುಗಳನ್ನು ತಯಾರಿಸುವ ಮಹಿಳೆಯರ ಮನೆಗಳನ್ನು ಮೂಲರೂಪದಲ್ಲಿ ಪಾರಂಪರಿಕವಾಗಿ ಸುಣ್ಣ ಬಣ್ಣ ಬಳಿದು ಆಕರ್ಷಣೀಯವಾಗಿ ಮಾರ್ಪಾಡು ಮಾಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಯೋಜನೆ ಅನುಷ್ಠಾನಕ್ಕೂ ಮುಂಚೆ ಕರ್ನಾಟದಲ್ಲಿ ಇನ್‌ಟ್ಯಾಕ್ ಸಂಸ್ಥೆಯ ಮೂಲಕ ವಿಸ್ತೃತ ಯೋಜನಾ ವರದಿ ತಯಾರಿಸಿ ಅದರಂತೆ ಕಾಲಕ್ಕೆ ತಕ್ಕಂತೆ ಹೆಚ್ಚು ಅನುದಾನದಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ. ಈ ಯೋಜನೆಗೆ ಉತ್ತರಪ್ರದೇಶದ ತಾಜಗಂಜ್, ಕರ್ನಾಟಕದ ಆನೆಗೊಂದಿ, ಪಶ್ಚಿಮಬಂಗಾಳದ ಕುಮಾರತುಲಿ, ಲೇಹಾ,ಮಹಾಬಲಿಪುರಂ, ನೈನಿ ಹಾಗೂ ವಾದ್ರಾಜ್ ಗ್ರಾಮಗಳನ್ನು ಆಯ್ಕೆ ಮಾಡಿ ಯೋಜನೆ ಅನುಷ್ಠಾನಕ್ಕೆ ಡಿಪಿಆರ್ ಪ್ರಕಾರ ಹಣ ಮಂಜೂರಾತಿ ಮಾಡಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ.

ಇದನ್ನೂ ಓದಿ: ಡಿಕೆಶಿ ಡಿಸಿಗೆ ಅರ್ಜಿ ಹಾಕಿ ಮತಾಂತರವಾದರೆ ರಗಳೆ ಇಲ್ಲ: ಈಶ್ವರಪ್ಪ

ಆನೆಗೊಂದಿಯಲ್ಲಿ ಕಳೆದ 25 ವರ್ಷಗಳಿಂದ ಬಾಳೆ ನಾರಿನ ಮೂಲಕ ಬ್ಯಾಗ್, ಬುಟ್ಟಿ, ಸೇರಿ ಹಲವು ಅಲಂಕಾರಿಕ ವಸ್ತುಗಳನ್ನು ಸ್ಥಳೀಯ ಕಿಷ್ಕಿಂದಾ ಟ್ರಸ್ಟ್ (ಟಿಕೆಟಿ) ಸುಮಾರು 200 ಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗ ನೀಡಿ ತಯಾರಿಸಿ ದೇಶದ ಪ್ರಮುಖ ನಗರಗಳಿಗೆ ಕಳಿಸಲಾಗುತ್ತಿದೆ. ಕರಕುಶಲ ಗ್ರಾಮಯೋಜನೆಗೆ ಆನೆಗೊಂದಿಯನ್ನು ಆಯ್ಕೆ ಮಾಡಿ ಇಲ್ಲಿ ಕೆಲಸ ಮಾಡುವ ಮಹಿಳೆಯರ ಮನೆಗಳನ್ನು ಪಾರಂಪರೀಕವಾಗಿ ಅಲಂಕಾರ ಮಾಡುವುದು ಸೇರಿದಂತೆ ಸ್ಥಳೀಯವಾಗಿ ನೈರ್ಮಲ್ಯ ಜಾಗೃತಿ ಕಸ ಸೇರಿ ಘನತ್ಯಾಜ್ಯ ವಸ್ತುಗಳನ್ನು ಮರುಬಳಕೆಗೆ ಬರುವಂತೆ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಕಸ ಸಂಗ್ರಹ ಮಾಡುವ ಪ್ಲಾಸ್ಟಿಕ್ ಡಬ್ಬಿ ಇರಿಸುವುದು ಹಾಗೂ ಗ್ರಾಮದಲ್ಲಿ ನಾಮಫಲಕ ಅಳವಡಿಕೆ ಹಾಗೂ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ಮೊದಲ ಹಂತದ ಕಾಮಗಾರಿಯನ್ನು ಕೊಪ್ಪಳದ ನಿರ್ಮಿತಿ ಕೇಂದ್ರದ ಮೂಲಕ ನಿರ್ವಹಿಸಲಾಗಿದ್ದು ಸುಮಾರು 25 ಮನೆಗಳ ಮುಂದಿನ ಗೋಡೆಗೆ ಸುಣ್ಣ ಬಣ್ಣ ಬಳಿಯಲಾಗಿದ್ದು ನಂತರ ಕಾಮಗಾರಿ ಮಾಡಲು ಆಗದೇ ನಿರ್ಮಿತಿಯವರು ಯೋಜನಾ ಅನುಷ್ಠಾನದಿಂದ ಹಿಂದೆ ಸರಿದಿದ್ದಾರೆನ್ನಲಾಗಿದೆ.

Advertisement

ನಿರ್ಮಿತಿ ಕೇಂದ್ರದವರು ಕಾಮಗಾರಿಯಿಂದ ಹಿಂದೆ ಸರಿದ ನಂತರ ನೇರವಾಗಿ ರಾಜ್ಯ ಕರಕುಶಲ ಅಭವೃದ್ಧಿ ನಿಗಮದ ವತಿಯಿಂದ  ಗ್ರಾಮದಲ್ಲಿ ಸೋಲಾರ್ ದೀಪ, ಕಸದ ಡಬ್ಬಿ, ನಾಮಫಲಕಗಳನ್ನು ಹಾಕಲಾಗಿದ್ದು ಇವುಗಳ ಗುಣಮಟ್ಟ ಕಳಪೆಯಿಂದ ಕೂಡಿವೆ ಹಾಕಿದ ಮರುದಿನವೇ ಕೆಲವ ನೆಲಕ್ಕುರುಳಿವೆ. ಈ ಮಧ್ಯೆ ಗ್ರಾಮಸ್ಥರು ಹಾಗೂ ಗ್ರಾ.ಪಂ.ಆಡಳಿತ ಮಂಡಳಿಯವರು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಆನೆಗೊಂದಿಯಲ್ಲಿ ಅನುಷ್ಠಾನವಾಗುತ್ತಿರುವ ಕರಕುಶಲ ಗ್ರಾಮ ಯೋಜನೆಯಡಿ ಡಿಪಿಆರ್ ಪ್ರಕಾರ ಇಲ್ಲ ಕೂಡಲೇ ಕಾಮಗಾರಿ ಅನುಷ್ಠಾನ ನಿಲ್ಲಿಸಿ ಪರಿಶೀಲನೆ ಮಾಡುವಂತೆ ಮನವಿ ಪತ್ರ ಸಲ್ಲಿಸಲಾಗಿದೆ. ಆದರೂ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧಿಕಾರಿಗಳು ಬೆಂಗಳೂರಿನಿಂದ  ಆಗಮಿಸಿ ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ.

ಆನೆಗೊಂದಿ ಅಂತರಾಷ್ಟಿಯ ಖ್ಯಾತಿ ಪಡೆದಿದ್ದು ಗ್ರಾಮದಲ್ಲಿ ನಡೆಯುತ್ತಿರುವ ಕರಕುಶಲ ಗ್ರಾಮ ಯೋಜನೆ ಅನುಷ್ಠಾನ ಗುಣಮಟ್ಟದ ಕಾಮಗಾರಿ ನಡೆಯಬೇಕು. ನಿತ್ಯವೂ ಸಾವಿರಾರು ಪ್ರವಾಸಿಗರು ಬರುವುದರಿಂದ ಗ್ರಾಮ ಮಾದರಿಯಾಗಬೇಕಿದೆ. ಕೋಟ್ಯಾಂತರ ರೂ. ಖರ್ಚು ಮಾಡಿ ಕಾಗದದಲ್ಲಿ ಮಾತ್ರ ಕಾಮಗಾರಿ ಪೂರ್ಣ ಎನ್ನುವಂತಾಗಬಾರದು. ಕೂಡಲೇ ಜಿಲ್ಲಾಡಳಿತ ಮಧ್ಯೆ ಪ್ರವೇಶ ಮಾಡಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುವಂತೆ ಮಾಡಬೇಕಿದೆ.

 ಡಿಸಿ ಮಧ್ಯಪ್ರವೇಶ ಮಾಡಲಿ :

ಆನೆಗೊಂದಿಯಲ್ಲಿ ಬಾಳೆ ನಾರಿನ ಮೂಲಕ ಮಹಿಳೆಯರು ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ದೇಶದ ವಿವಿಧ ನಗರಗಳಲ್ಲಿ ಮಾರಾಟ ಮಾಡುವ ಮೂಲಕ ಗ್ರಾಮದ ಕೀರ್ತಿಯನ್ನು ಬೆಳೆಸಿದ್ದಾರೆ. ಕೇಂದ್ರ ಸರಕಾರನ ಕರಕುಶಲ ಗ್ರಾಮವನ್ನಾಗಿ ಇನ್ನಷ್ಟು ಅಭಿವೃದ್ಧಿಪಡಿಸಲು ಆನೆಗೊಂದಿಯನ್ನು ಆಯ್ಕೆ ಮಾಡಿದ್ದು ಸಂತೋಷದ ವಿಷಯವಾಗಿದ್ದು ಕಾಮಗಾರಿ ಅನುಷ್ಠಾನ ಕಳಪೆಯಿಂದ ನಡೆಯುತ್ತಿದ್ದು ಬಿದ್ದ ಮನೆಗಳ ಮುಂದಿನ ಗೋಡೆಗೆ ಸುಣ್ಣಬಣ್ಣ ಹಚ್ಚಿ ಲಕ್ಷಾಂತರ ರೂ ಎತ್ತುವಳಿ ಮಾಡಲಾಗಿದೆ. ಗ್ರಾಮಸ್ಥರು ಆಕ್ಷೇಪವೆತ್ತಿದರೆ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ರಾತ್ರೋರಾತ್ರಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶ ಮಾಡಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ಕ್ರಮ ಜರುಗಿಸಬೇಕೆಂದು ಆನೆಗೊಂದಿ ಗ್ರಾ ಪಂ ಅಧ್ಯಕ್ಷ ಬಾಳೆಕಾಯಿ ತಿಮ್ಮಪ್ಪನಾಯಕ  ಒತ್ತಾಯಿಸಿದ್ದಾರೆ

ಪರಿಶೀಲನೆ :ಆನೆಗುಂದಿಯಲ್ಲಿ :

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕರಕುಶಲ ಗ್ರಾಮ ಯೋಜನೆ ಅನುಷ್ಠಾನ ಮಾಡುತ್ತಿದೆ. ಕಾಮಗಾರಿ ಬಗ್ಗೆ ಸ್ಥಳೀಯರು ಆಕ್ಷೇಪವೆತ್ತಿದ್ದರಿಂದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಎಂ.ಡಿ. ರೂಪ ಮೌದ್ಗೀಳ್ ಅವರ ಸೂಚನೆ ಮೇರೆಗೆ ಆನೆಗೊಂದಿ ಆಗಮಿಸಿದ್ದು ಗ್ರಾ.ಪಂ. ಸದಸ್ಯರು ಹಾಗೂ ಸ್ಥಳೀಯರ ಜತೆ ಮಾತನಾಡಿ ಸಮಸ್ಯೆ ಪರಿಹರಿಸಲಾಗುತ್ತದೆ. ಹೆಚ್ಚಿನ ವಿಷಯಗಳನ್ನು ಮಾತನಾಡದಂತೆ ಎಂ.ಡಿ.ಯವರು ತಾಕೀತು ಮಾಡಿದ್ದಾರೆಂದು ಕರಕುಶಲ ಅಭಿವೃದ್ಧಿ ನಿಗಮದ ಯೋಜನಾ ನಿರ್ದೇಶಕ ಪ್ರಶಾಂತ್ ತಿಳಿಸಿದ್ದಾರೆ.

 

-ವಿಶೇಷ ವರದಿ :ಕೆ ನಿಂಗಜ್ಜ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next