ಜುಲೈ 02 ನಟ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ. ಕೋವಿಡ್ ಮುನ್ನ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಗಣೇಶ್, ಕೋವಿಡ್ ನಂತರ ಹುಟ್ಟುಹಬ್ಬ ಆಚರಣೆಯಿಂದ ದೂರವೇ ಉಳಿದಿದ್ದಾರೆ.
ಈ ಬಾರಿಯಾದರೂ ತಮ್ಮ ಜೊತೆ ಹುಟ್ಟುಹಬ್ಬ ಆಚರಿಸುತ್ತಾರೆಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಬಾರಿಯೂ ಗಣೇಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಕುರಿತು ಗಣೇಶ್ ಅಭಿಮಾನಿಗಳಿಗೊಂದು ಪತ್ರ ಬರೆದಿದ್ದಾರೆ.
ಆ ಪತ್ರ ಹೀಗಿದೆ; “ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕವೂ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲಿಯೂ ನನ್ನೊಂದಿಗೆ ಹೆಜ್ಜೆ ಹಾಕಿ ನನ್ನ ಯಶಸ್ಸು ನಿಮ್ಮದೇ ಯಶಸ್ಸು ಎಂಬ ರೀತಿಯಲ್ಲಿ ಸಂಭ್ರಮಿಸಿ ನೀವೆಲ್ಲರೂ ಖುಷಿಪಟ್ಟಿದ್ದೀರಿ. ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತಿ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ. ನನ್ನೆಡೆಗಿನ ನಿಮ್ಮ ನಿಷ್ಕಲ್ಮಶ ಪ್ರೀತಿಭರಿತ ಅಭಿಮಾನಕ್ಕೆ ನಾನು ಸದಾ ಋಣಿ. ನನ್ನ ಹುಟ್ಟುಹಬ್ಬದ ನೆಪದಲ್ಲಾದರೂ ನಾನು ನಿಮ್ಮನ್ನೆಲ್ಲಾ ವೈಯಕ್ತಿಕವಾಗಿ ಭೇಟಿಯಾಗಿ ನಿಮ್ಮೆಲ್ಲರ ಪ್ರೀತಿಯನ್ನು ಆಸ್ವಾಧಿಸುತ್ತಾ ನಿಮ್ಮೊಡನೆಯೇ ಸಂಭ್ರಮಿಸಿ ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯುವ ಹಂಬಲ ನನಗೂ ಇದೆ. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಸಹ ಸಮಯ ಈ ಸಂಭ್ರಮಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕೆಲ ಅನಿವಾರ್ಯ ಕಾರಣಗಳಿಂದಾಗಿ ನಾನು ನನ್ನ ಹುಟ್ಟಿದ ದಿನದಂದು ಅಂದರೆ ಜುಲೈ 02ರಂದು ಮನೆಯಲ್ಲಿರಲು ಸಾಧ್ಯವಾಗು ತ್ತಿಲ್ಲ. ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ. ನೀವೆಲ್ಲರೂ ಅಭಿಮಾನದಿಂದ ನನಗಾಗಿ ತರುವ ಹಾರ-ತುರಾಯಿ, ಕೇಕ್ ಇತ್ಯಾದಿಗಳ ಬದಲಿಗೆ ಅದೇ ಹಣದಲ್ಲಿ ಅಗತ್ಯವಿರುವ ಕಡೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನಮಗೆ ತಲುಪಿಸಿಬಿಡಿ’.
ಸದ್ಯ ಗಣೇಶ್ ನಾಯಕರಾಗಿರುವ “ಗಾಳಿಪಟ-2′ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸಿದ್ದು, ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ.