Advertisement

ಸುವರ್ಣ ಸಾಧಕರ ಸಮಾಜ ಸೇವೆ ಇಂಗಿತ

11:42 AM Mar 19, 2018 | |

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಜನರ ಆರ್ಥಿಕ ಬಲವರ್ಧನೆಗಾಗಿ ನವೋದ್ಯೋಗ ಸ್ಥಾಪನೆ. ನಿರುದ್ಯೋಗಿ ಹಾಗೂ ಉನ್ನತ ಶಿಕ್ಷಣ ಪಡೆದವರಿಗೆ ಮಾರ್ಗದರ್ಶನ ನೀಡಿ ಉದ್ಯೋಗ ಪಡೆಯಲು ಪ್ರೇರಣೆ. ಎಂಎಸ್‌ಎಂಇ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಮಾರ್ಗದರ್ಶನ.

Advertisement

ಇದು ಪ್ರತಿಷ್ಠಿತ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸಂಸ್ಥೆಯ 43ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಸಾಧಕರು ವ್ಯಕ್ತಪಡಿಸಿದ ಸಾಮಾಜಿಕ ಕಳಕಳಿಯ ಆಶಯ. ಬನ್ನೇರುಘಟ್ಟ ರಸ್ತೆಯ ಐಐಎಂಬಿ ಆವರಣದಲ್ಲಿ ಶನಿವಾರ ಸಂಜೆ ಬಯಲು ಸಭಾಂಗಣದಲ್ಲಿ ನಡೆದ 43ನೇ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಪಡೆದವರು ಅತ್ಯುನ್ನತ ಸಾಧನೆಗೈದ ಸಂಭ್ರಮದಲ್ಲಿ ಬೀಗಿದರು. 

ಪಿಜಿಪಿಪಿಎಂ ಕಾರ್ಯಕ್ರಮದಲ್ಲಿ ಬೆಸ್ಟ್‌ ಅಕಾಡೆಮಿಕ್‌ ಪರ್‌ಫಾರ್ಮೆನ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದ 27 ವರ್ಷದ ರಿಚಾ ವಲೇಚಾ, “ಐಐಎಂಬಿಯಲ್ಲಿ ಕಲಿತ ಜ್ಞಾನದಿಂದ ನನ್ನ ಶಿಕ್ಷಣಕ್ಕೆ ಪೂರ್ಣರೂಪ ಪಡೆದಂತಾಯಿತು. ಒಂದು ವರ್ಷದ ಅವಧಿಯಲ್ಲಿ ಶೈಕ್ಷಣಿಕವಾಗಿ ಮಾತ್ರವಲ್ಲದೇ ವೃತ್ತಿಪರವಾಗಿಯೂ ಸಾಕಷ್ಟು ಕಲಿತಿದ್ದೇನೆ.

ಆರ್ಥಿಕ ಒಳಗೊಳ್ಳುವಿಕೆ ಬಗೆಗಿನ ಜ್ಞಾನ ವಿಸ್ತಾರವಾಗಿದ್ದು ಆಸಕ್ತಿಕರವಾಗಿತ್ತು. ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಎಎಚ್‌ಎಲ್‌ನ ಅಧಿಕಾರಿಗಳು, ಆರೋಗ್ಯ, ಶಿಕ್ಷಣ ಕ್ಷೇತ್ರ ತಜ್ಞರೊಂದಿಗೆ ನಡೆಸಿದ ಸಂವಾದ ಉಪಯುಕ್ತವಾಗಿತ್ತು. ಆ ಮೂಲಕ ನಮ್ಮ ಚಿಂತನಾ ವ್ಯಾಪ್ತಿ ವಿಸ್ತಾರವಾಯಿತು,’ ಎಂದು ಹೇಳಿದರು.

ಆರ್ಥಿಕ ಬಲಕ್ಕೆ ಸ್ಟಾರ್ಟ್‌ಅಪ್‌: ಈ ಹಿಂದೆ ಡೇಟಾ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಎರಡು ವರ್ಷ ಕೆಲಸ ಮಾಡಿದ್ದು, ನಂತರ ಮೂರೂವರೆ ವರ್ಷ ಸಾರ್ವಜನಿಕ ನೀತಿ ನಿರೂಪಣೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದೆ. ಐಐಎಂಬಿಯಿಂದ ಚಿನ್ನದ ಪದಕ ಪಡೆದಿರುವುದಕ್ಕೆ ಖುಷಿಯಾಗಿದೆ.

Advertisement

ಮುಂದೆ ಅಲ್ಪಾವಧಿಯಲ್ಲಿ ಇನ್ಫೋಸಿಸ್‌ನಲ್ಲಿ ಸಲಹೆಗಾರಳಾಗಿ ಕಾರ್ಯ ನಿರ್ವಹಿಸುತ್ತೇನೆ. ದೀರ್ಘಾವಧಿಯಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಆರ್ಥಿಕ ಬಲವರ್ಧನೆಗಾಗಿ ಸ್ಟಾರ್ಟ್‌ಅಪ್‌ ಆರಂಭಿಸಿ ಸಮಾಜ ಸೇವೆ ಸಲ್ಲಿಸುವ ಗುರಿ ಇದೆ ಎಂದು ಹೇಳಿದರು.

ದಿನಕ್ಕೆ ಮೂರು ಗಂಟೆ ನಿದ್ರೆ: ಪಿಜಿಪಿಇಎಂನಲ್ಲಿ ಬೆಸ್ಟ್‌ ಆಲ್‌ ರೌಂಡ್‌ ಪರ್‌ಫಾರ್ಮೆನ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದ ರಾಜಸ್ತಾನದ ಸುನೀಲ್‌ ಕುಮಾರ್‌ ವಾಯಾ ಸದ್ಯ ಬಾಷ್‌ ಕಂಪನಿಯಲ್ಲಿ ಹಿರಿಯ ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ (ಹಣಕಾಸು, ಕಾರ್ಯತಂತ್ರ). “ಕಲಿಕೆ ನಿರಂತರ ಪ್ರಕ್ರಿಯೆ ಎಂಬ ಕಾರಣಕ್ಕೆ ಐಐಎಂಬಿಯಲ್ಲಿ ಕೋರ್ಸ್‌ ಸೇರಿದೆ.

ಇಲ್ಲಿನ ತಜ್ಞರ ಕಲಿಕಾ ವಿಧಾನ, ಜ್ಞಾನದಿಂದಾಗಿ ಹಣಕಾಸು ಜ್ಞಾನದ ಜತೆಗೆ ವ್ಯವಹಾರ ತಜ್ಞತೆಯನ್ನು ಪಡೆದಿದ್ದೇನೆ. ಕೆಲಸ, ಕೋರ್ಸ್‌ ಒಟ್ಟಿಗೆ ನಡೆದಿದ್ದರಿಂದ ಬಹಳ ಕಾಲ ನಿತ್ಯ ಮೂರು ಗಂಟೆಯಷ್ಟೇ ನಿದ್ರೆಯಾಗುತ್ತಿತ್ತು ಎಂದು ತಿಳಿಸಿದರು. ಉಳಿದಂತೆ ಇಪಿಜಿಪಿ ಕಾರ್ಯಕ್ರಮದಲ್ಲಿ ಬೆಸ್ಟ್‌ ಆಲ್‌ ರೌಂಡ್‌ ಪರ್‌ಫಾರ್ಮೆನ್ಸ್‌ ವಿಭಾಗದಲ್ಲಿ ಜಿಗರ್‌ ದೋಷಿ ಚಿನ್ನದ ಪದಕ,

ಸ್ನಾತಕೋತ್ತರ ಪದವಿ ಕಾರ್ಯಕ್ರಮದಲ್ಲಿ (ಪಿಜಿಪಿ) ಪ್ರತೀಕ್‌ ಆನಂದ್‌ ಪ್ರಥಮ ರ್‍ಯಾಂಕ್‌, ಮೆಹ್ತಾ ಉಮಾಂಗ್‌ ಅಮಿತ್‌ ದ್ವಿತೀಯ ರ್‍ಯಾಂಕ್‌ ಹಾಗೂ ವಿ.ವಾಗೀಶ್‌ ಬೆಸ್ಟ್‌ ಆಲ್‌ರೌಂಡ್‌ ಪರ್‌ಫಾರ್ಮೆನ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಪಿಜಿಪಿಇಎಂ ಕಾರ್ಯಕ್ರಮದಲ್ಲಿ ಗೌರವ್‌ ಕುಮಾರ್‌ ಹಾಗೂ ಇಪಿಜಿಪಿ ಕಾರ್ಯಕ್ರಮದಲ್ಲಿ ಪ್ರಗ್ಯಾ ದಾಲಿಯಾ ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.

ಇದೇ ಮೊದಲ ಬಾರಿ ಪದವಿ ಪ್ರದಾನ: ಎರಡು ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್‌ನಡಿ ಐಐಎಂಬಿ ಇದೇ ಮೊದಲ ಬಾರಿ ಪದವಿ ಪ್ರದಾನ ಮಾಡಿದೆ. ಒಟ್ಟು 406 ಮಂದಿ ಈ ಕೋರ್ಸ್‌ನಡಿ ಪದವಿ ಪಡೆದಿದ್ದಾರೆ. ಈ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಐಐಎಂಬಿ ನಿರ್ದೇಶಕ ಪ್ರೊ.ಜಿ.ರಘುರಾಂ, ಈ ಹಿಂದೆ ಈ ಕೋರ್ಸ್‌ನಲ್ಲಿ ಡಿಪ್ಲೋಮಾ ಪದವಿ ನೀಡಲಾಗುತ್ತಿತ್ತು.

ಇದೇ ಮೊದಲ ಬಾರಿಗೆ ಪದವಿ ನೀಡಲಾಗುತ್ತಿದೆ. ಕಳೆದ ತಿಂಗಳಷ್ಟೇ ನಿಯಮಾನುಸಾರ ಮಂಜೂರಾತಿಗಳನ್ನು ಪಡೆಯಲಾಗಿದೆ. ಐಐಎಂ ಕಾಯ್ದೆಯಡಿ ಐಐಎಂಬಿ ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂಬ ಮಾನ್ಯತೆ ಪಡೆದಿದೆ. ಇದರಿಂದ ಆಡಳಿತ ಮಂಡಳಿಯು ನಿರ್ದೇಶಕರ ನೇಮಕ, ಆಡಳಿತ ಮಂಡಳಿ ಸದಸ್ಯರ ನೇಮಕ ಸೇರಿದಂತೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಹೇಳಿದರು.

ಮ್ಯಾನೇಜ್‌ಮೆಂಟ್‌ ಕ್ಷೇತ್ರಕ್ಕೆ ಬರುವವರು ದೀರ್ಘಾವಧಿ ಗುರಿ ಹೊಂದಿ, ಅದನ್ನು ತಲುಪಲು ಸದಾ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ತಾವು ಕೈಗೊಳ್ಳುವ ನಿರ್ಧಾರಗಳು ಮೌಲ್ಯಾಧಾರಿತ ವ್ಯವಹಾರದ ಮೇಲೆ ಅವಲಂಬಿತವಾಗಿರಬೇಕು.
-ಅಜಯ್‌ ಪಿರಾಮಲ್‌, ಪಿರಾಮಲ್‌ ಹಾಗೂ ಶ್ರೀರಾಮ್‌ ಗ್ರೂಪ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next