ಬೆಂಗಳೂರು: ವಿಲಾಸಿ ಜೀವನ ನಡೆಸಲು ಅಪಾರ್ಟ್ಮೆಂಟ್ಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಶಿವಾಜಿನಗರದ ತಿಮ್ಮಯ್ಯ ರಸ್ತೆ ನಿವಾಸಿ ಶಾಂತಿ (38) ಬಂಧಿತೆ. ಈಕೆಯಿಂದ 5 ಲಕ್ಷ ರೂ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಕಳವು ಮಾಡಿದ್ದ ಚಿನ್ನಾಭರಣ ಮಾರಾಟ ಮಾಡಿ ಶಾಪಿಂಗ್, ಪಬ್, ವಸ್ತುಗಳ ಖರೀದಿಸಿ ವಿಲಾಸಿ ಜೀವನ ನಡೆಸುತ್ತಿದ್ದಳು. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದಳು. ಬಿಡುಗಡೆ ಬಳಿಕವೂ ಕೃತ್ಯ ಮುಂದುವರಿಸಿದ್ದಳು ಎಂದು ಪೊಲೀಸರು ಹೇಳಿದರು.
ಅಪಾರ್ಟ್ಮೆಂಟ್ಗಳೇ ಟಾರ್ಗೆಟ್: ಕೆಲಸ ಕೇಳುವ ನೆಪದಲ್ಲಿ ಅಪಾರ್ಟ್ಮೆಂಟ್ಗೆ ಹೋಗುತ್ತಿದ್ದಳು. ಯಾವುದಾದರೂ ಮನೆ ಬಾಗಿಲು ತೆಗೆದಿದ್ದರೆ ಕೈಗೆ ಸಿಕ್ಕ ವಸ್ತುಗಳನ್ನು ದೋಚುತ್ತಿದ್ದಳು. ಒಂದು ವೇಳೆ ಮನೆ ಮಾಲಿಕರು ಬಾಗಿಲು ತೆರೆದರೆ ಮನೆ ಕೆಲಸಕ್ಕೆ ಬಂದಿರುವುದಾಗಿ ಹೇಳಿ ವಾಪಸ್ ಆಗುತ್ತಿದ್ದಳು.
ನಕಲಿ ಚಿನ್ನಾಭರಣ!: ಕೆಲ ತಿಂಗಳ ಹಿಂದೆ ಈಕೆ, ಕೋರಮಂಗಲದ ಅಪಾರ್ಟ್ಮೆಂಟ್ವೊಂದರಲ್ಲಿ ಮನೆ ಕೆಲಸಕ್ಕೆ ಸೇರಿಕೊಂಡಿದ್ದಳು. ಮನೆ ಮಾಲಿಕರ ಬಳಿ ನಂಬಿಕೆಗಳಿಸುವ ನಾಟಕವಾಡಿದ್ದ ಶಾಂತಿ, ಮನೆಯಲ್ಲಿನ ಚಿನ್ನಾಭರಣ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಳು.
ಬಳಿಕ ಯಾರು ಇಲ್ಲದ ವೇಳೆ ಆ ಆಭರಣ ಕಳವು ಮಾಡಿ ಅದೇ ಸ್ಥಳದಲ್ಲಿ ನಕಲಿ ಆಭರಣ ಇಡುತ್ತಿದ್ದಳು. ಈ ಮಧ್ಯೆ ಕಬೋರ್ಡ್ನಲ್ಲಿದ್ದ ಮಾಂಗಲ್ಯ ಸರ ಕದ್ದು, ಅದೇ ಮಾದರಿಯ ಮಾಂಗಲ್ಯ ಸರವನ್ನು ಶಿವಾಜಿನಗರದಲ್ಲಿ ಮಾಡಿಸಿ ಕಬೋರ್ಡ್ನಲ್ಲಿ ಇಟ್ಟಿದ್ದಳು. ಈ ಸಂಬಂಧ ಮನೆ ಮಾಲಿಕರು ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.