ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಸಹಾಯ ಮಾಡುವ ನೆಪದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರ ನಿವಾಸಿ ಕಾರು ಚಾಲಕ ಸೋಮಶೇಖರ್ ಬಂಧಿತ. ಈತನಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಆರೋಪಿ ನ.3ರಂದು ಕುಣಿಗಲ್ ರಸ್ತೆಯ ಅಮೃತ್ತೂರು ಠಾಣೆ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದ ಬಳಿ ವೇಣುಗೋಪಾಲ ಎಂಬುವರ ಇನೋವಾ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಈ ವೇಳೆ ತನ್ನ ಸ್ನೇಹಿತರ ಜತೆ ಗಾಯಾಳುಗಳ ನೆರವಿಗೆ ಬಂದಿದ್ದ ಆರೋಪಿ, ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯರ ಸರ ಹಾಗೂ ಪುರುಷರ ಬ್ರಾಸ್ಲೆಟ್, ಉಂಗುರ ಸೇರಿದಂತೆ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನ.3ರಂದು ಚನ್ನರಾಯಪಟ್ಟಣದಿಂದ ನಗರಕ್ಕೆ ವೇಣುಗೋಪಾಲ್ ಕುಟುಂಬ ಕಾರಿನಲ್ಲಿ ಬರುತ್ತಿದ್ದಾಗ ಕುಣಿಗಲ್ ರಸ್ತೆ ಬಳಿ ನಡೆದ ಲಾರಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಸ್ನೇಹಿತರೊಂದಿಗೆ ಪ್ರವಾಸ ಮುಗಿಸಿ ಟೆಂಪೊ ಟ್ರಾವೆಲರ್ನಲ್ಲಿ ಬರುತ್ತಿದ್ದ ಸೋಮಶೇಖರ್ ಗಾಯಾಳುಗಳಿಗೆ ನೆರವಾಗುವ ನೆಪದಲ್ಲಿ 288.03 ಗ್ರಾಂ. ಚಿನ್ನಾಭರಣ ದೋಚಿ, ಕೆಲ ದಿನಗಳ ಕಾಲ ಆಭರಣಗಳನ್ನು ಮನೆಯಲ್ಲಿ ಇರಿಸಿಕೊಂಡಿಸಿದ್ದ. ಈ ವಿಷಯ ಆತನ ಜೊತೆಗಿದ್ದ ಸ್ನೇಹಿತರಿಗೂ ತಿಳಿದಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಗಿರಿವಿ ಇಡುವಾಗ ಸಿಕ್ಕಿಬಿದ್ದ: ಸುಮಾರು 23 ದಿನಗಳ ಕಾಲ ಆಭರಣಗಳನ್ನು ಮನೆಯಲ್ಲೇ ಇರಿಸಿಕೊಂಡಿದ್ದ ಆರೋಪಿ, ನ.26ರಂದು ಹುಣಸೆಮಾರನಹಳ್ಳಿಯಲ್ಲಿರುವ ಗಿರವಿ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಗಿರವಿ ಇಡಲು ಮುಂದಾಗಿದ್ದ. ಈ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಆರೋಪಿ ಸಿಕ್ಕಿ ಬಿದಿದ್ದಾನೆ. ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.