Advertisement

STORY: ದೇವಾ… ನಿರೀಕ್ಷೆಗಳು ಹುಸಿಯಾಗದಿರಲಿ…

04:55 PM Sep 03, 2023 | Team Udayavani |

ಮಣಿಪುರದ ರಾಜ ಚಿತ್ರವಾಹನರ ಏಕೈಕ ಸಂತಾನ ಈ ಚಿಂತ್ರಾಂಗದೆ. ಸಾಹಸ ಪ್ರವೃತ್ತಿ ಹುಟ್ಟಿನಿಂದಲೇ ಬಂದಿತ್ತು. ಕುದುರೆ ಸವಾರಿಯಲ್ಲಿ  ಪಳಗಿ¨ªೆ. ಯುದ್ಧಕಲೆಯನ್ನು ಕರಗತ ಮಾಡಿ­ಕೊಂಡಿದ್ದೆ. ತಂದೆಯವರು ನನ್ನನ್ನು ಸಿಂಹಾಸನದ ಉತ್ತರಾಧಿಕಾರಿ­ಯಾಗಲು ತಕ್ಕನಾಗಿ ಬೆಳೆಸಿದ್ದರು.

Advertisement

ಅದು ತನುವರಳಿದ ಕಾಲ ಚಂಚಲ ಮನಸ್ಸು ಹೊಸತನ ಬಯಸಿತ್ತು! ಒಂದಿಷ್ಟು ವನಸಂಚಾರ ಮಾಡುವ ಉದ್ದೇಶದಿಂದಲೇ ಕುದುರೆಯೇರಿ ಹೊರಟವಳಿಗೆ ಪ್ರಕೃತಿ ನವ ಚೈತನ್ಯವನ್ನು ಉಣ್ಣಿಸಿತ್ತು. ವನಾಂತರ­ದಲ್ಲಿ ಪಾರ್ಥ ಮಹಾಶಯ ಭೇಟಿಯಾಗಿದ್ದ! ಅವನು ತೋರಿದ ಶಬ್ದವೇಧಿಯ ಕೌಶಲ್ಯ­ದಿಂದಲೇ ಆತ ಅರ್ಜುನ­ನೆಂದು ಗುರುತಿಸಿದ್ದೆ. ಮನಸ್ಸು ಹರುಷದಿಂದ ಕುಣಿದಾಡಿತು. ಶರವೇಗ­ದಲ್ಲಿ ಕುದುರೆಯೋಡಿಸಿಕೊಂಡು ಅರಮನೆಗೆ ಬಂದವಳೇ ನನ್ನಪ್ಪ ಚಿತ್ರವಾಹನರನ್ನು ಕುರಿತು- ‘ಪಿತಾಶ್ರೀ ಪಾರ್ಥ ಮಹಾಶಯರು ನಮ್ಮ ಮಣಿಪುರಕ್ಕೆ ಬಂದಿದ್ದಾರೆ. ಇಂದು ನಾನವರನ್ನು ಭೇಟಿ ಮಾಡಿದೆ’ ಎಂದೆ. ನಾನು ಪಾರ್ಥನ ಬಗ್ಗೆ ಮೊದಲಿನಿಂದಲೇ ಆಕರ್ಷಣೆ ಬೆಳೆಸಿಕೊಂಡವಳು ಎಂಬುದನ್ನು ಅರಿತಿದ್ದ ತಂದೆಯವರು ಹರ್ಷಗೊಂಡು, “ಹೌದೇ? ವಿಚಾರಿಸೋಣ’ ಎಂದರು.

ಅದು ಹೇಗೆ ಪಾರ್ಥನನ್ನು ನೋಡುವ ಮೊದಲೇ ಆತನ ಬಗ್ಗೆ ಆಕರ್ಷಣೆ ಬೆಳೆಸಿಕೊಂಡೆನೋ ತಿಳಿಯದು. ಬಹುಶಃ ಆತನ ಕೀರ್ತಿಗೆ ನಾನು ಮನಸೋತಿದ್ದೆ ನಿರಬೇಕು. ಇಂದು ಆತನನ್ನು ಕಂಡ ಮೇಲೆ ಅವನನ್ನು ಪಡೆದೇ ತೀರಬೇಕೆಂಬ ಬಯಕೆ ಹುಟ್ಟಿಬಿಟ್ಟಿತ್ತು. ಪಾರ್ಥನನ್ನು ಅರಮನೆಗೆ ಕರೆತರುವ ಉದ್ದೇಶ ಹೊತ್ತು, ಈ ಮೊದಲು ಆತನನ್ನು ಭೇಟಿ ಮಾಡಿದ ಸ್ಥಳಕ್ಕೆ ಹಿಂತಿರುಗಿ ಬಂದೆ. ಆದರೆ ಅವನಲ್ಲಿ ಇರಲಿಲ್ಲ! ಇಷ್ಟು ಕಿರು ಅವಧಿಯಲ್ಲಿ ಎಲ್ಲಿ ಹೋಗಿದ್ದಿರಬಹುದು? ಸುತ್ತಮುತ್ತ ಎಲ್ಲಿ ಹುಡುಕಿದರೂ ಪಾರ್ಥನ ಸುಳಿವು ಸಿಕ್ಕಲೇ ಇಲ್ಲ! ಆದರೆ ಮನಸ್ಸು ಮಾತ್ರ “ಪಾರ್ಥ ಎಲ್ಲಿಗೆ ತೆರಳಿದ್ದರೂ ಮರಳಿ ಇಲ್ಲಿಗೆ ಬರಲಿದ್ದಾನೆ’ ಎನ್ನುತ್ತಿತ್ತು. ಹತ್ತಿರದಲ್ಲಿದ್ದ ಪೂಜಾ ಮಂದಿರದಲ್ಲಿ ವ್ರತಸ್ಥಳಾಗಿ ಕುಳಿತುಬಿಟ್ಟೆ!

ಬಂದೇಬಿಟ್ಟ ಪಾರ್ಥ! ನನ್ನ ವ್ರತ ಸಾರ್ಥಕವಾಗಿತ್ತು. ಆತ ನನಗೆ ಒಲಿದಿದ್ದ. ನಮಗೆ ಗಾಂಧರ್ವ ವಿವಾಹದಲ್ಲಿ ತಪ್ಪು ಕಂಡಿರಲಿಲ್ಲ. ನನ್ನನ್ನು ಅವನಿಗೆ ಒಪ್ಪಿಸಿಕೊಂಡಿದ್ದೆ. ನನ್ನ ಕನಸು ನನಸಾಗಿತ್ತು. ಅತ್ಯಂತ ಸಂಭ್ರಮದಿಂದ ಮಣಿಪುರ ಅರಮನೆಗೆ ನಮ್ಮ ಪ್ರವೇಶವಾಗಿತ್ತು.

ಮಣಿಪುರದ ಅರಸು ಕುಲಕ್ಕೆ ನಾನೊಬ್ಬಳೇ ಹಕ್ಕುಧಾರಿಣಿಯಾದ ಕಾರಣ, ನನ್ನಪ್ಪ ಅರ್ಜುನನಿಗೆ ನಿರ್ಬಂಧವಿರಿಸಿದ್ದ. “ಪಾರ್ಥಾ, ಈ ಚಿತ್ರಾಂಗದೆ ನನಗೆ ಮಗಳಾದರೂ ಮಗನಂತೆ ಬೆಳೆಸಿದ್ದೇನೆ. ಇವಳ ಸಂತಾನಕ್ಕೇ ಮಣಿಪುರದ ಅರಸೊತ್ತಿಗೆ. ಆದ್ದರಿಂದ ಚಿತ್ರಾಂಗದೆಯನ್ನು ವರಿಸಿ, ನೀನೂ ಇಲ್ಲಿಯೇ ನೆಲೆ ನಿಂತುಬಿಡು’

Advertisement

ಪಾರ್ಥನದು ಬೇರೊಂದು ವರಸೆ: “ಅದಾಗದು ಮಹಾರಾಜ. ಚಿತ್ರಾಂಗದೆಗೆ ಮನಸೋತಿದ್ದೇನೆ ಎಂಬುದು ನಿಜ. ಆದರೆ ನಾನು ಇಲ್ಲಿಯೇ ನಿಲ್ಲುವವನಲ್ಲ. ಇಂದ್ರಪ್ರಸ್ಥ ನನ್ನ ನಿರೀಕ್ಷೆಯಲ್ಲಿರುತ್ತದೆ. ಕೇವಲ 3 ವರ್ಷಗಳ ಕಾಲ ನಾನು ಇಂದ್ರಪ್ರಸ್ಥದಿಂದ ಹೊರಗುಳಿಯಬೇಕಿದೆ. ತೀರ್ಥಕ್ಷೇತ್ರಗಳ ದರ್ಶನಾಕಾಂಕ್ಷಿಯಾಗಿ ಹೊರಟ ನಾನು ಮಾರ್ಗಮಧ್ಯದಲ್ಲಿ ಮಣಿಪುರಕ್ಕೂ ಬಂದಿದ್ದೆ. ಇಲ್ಲಿ ಬಂದ ಮೇಲೆ ನನ್ನ ತೀರ್ಥಯಾತ್ರೆಯ ಫ‌ಲ ಬೇರೊಂದು ರೀತಿಯಲ್ಲಿ ಸಫ‌ಲ­ವಾಯಿತು’ ಎಂದು, ನನ್ನ ಕಡೆ ನೋಡಿ ಕಣ್ಣು ಹೊಡೆದ. ನಾಚಿಕೆಯಿಂದ ನನ್ನ ಕೆನ್ನೆ ಕೆಂಪೇರಿತು.

ಅಪ್ಪ ಶಾಂತಚಿತ್ತರಾಗಿ ಪಾರ್ಥನ ಮಾತನ್ನು ಕೇಳುತ್ತಿದ್ದರು: “ಮಗಳಿಗೆ ದೀರ್ಘ‌ ಕಾಲದ ದಾಂಪತ್ಯ ಸುಖ ಸಿಗುವುದಿಲ್ಲವಲ್ಲ ಎಂಬ ನೋವು ನನಗಿದೆ. ಆದರೆ ನೀನು ಆಕೆಯ ಆಯ್ಕೆ. ಅವಳ ಆಯ್ಕೆಯನ್ನು ನಾನು ಪ್ರಶ್ನಿಸುವುದಿಲ್ಲ. ಇಷ್ಟು ವರ್ಷಗಳ ಕಾಲ ಆಕೆಯ ಯಾವುದೇ ಆಯ್ಕೆಯನ್ನು ನಾನು ಪ್ರಶ್ನಿಸಿದವನೇ ಅಲ್ಲ. ಮೂರು ವರ್ಷಗಳ ಕಾಲವಾದರೂ ಇಲ್ಲಿಯೇ ಇದ್ದುಬಿಡು ಎಂದು  ಕೇಳಬಹುದಷ್ಟೇ?’ ಎಂದರು ಅಪ್ಪ.

ಅದೆಷ್ಟು ಸಂತಸದ ದಿನಗಳು! ಉದರದೊಳಗೊಂದು ಜೀವವು ಅಂಕುರಿಸಿತ್ತು! ಪಾರ್ಥ ಹೊರಟು ಹೋಗಿದ್ದ. ಅವನು ಹೊರಟು ಹೋದ ಮೇಲೆ ನನ್ನನ್ನು ಖನ್ನತೆ ಆವರಿಸಿತು. ತೊಳಲಾಡಿಬಿಟ್ಟೆ. ಮಣಿಪುರದ ಪ್ರಜೆಗಳು ತಲೆಗೊಂದರಂತೆ ಮಾತನಾಡಿದರು. ನಾನು ಪಾರ್ಥನೊ­ಡನೆ ಗಾಂಧರ್ವ ವಿವಾಹವಾದ ಮತ್ತು ಆತನ ಸಂತಾನ ನನ್ನ ಉದರದಲ್ಲಿ ಕೊನರಿದ ಸತ್ಯ ಗುಟ್ಟಾಗೇನೂ ಉಳಿದಿರಲಿಲ್ಲ. ಆದರೂ ಕಥೆ ಕಟ್ಟುವವರಿಗೆ ಕೊರತೆ ಇರಲಿಲ್ಲ.

ನಾಗಲೋಕದ ಉಲೂಪಿ ಅಕ್ಕನಾಗಿ ಒದಗಿ ಬಂದಿದ್ದಳು. ನನ್ನ ಮತ್ತು ಪಾರ್ಥನ ಮೊದಲ ಭೇಟಿಯ ನಂತರ ಪಾರ್ಥ ಅಲ್ಪಕಾಲ ನಾಗಲೋಕಕ್ಕೂ ಭೇಟಿ ಕೊಟ್ಟಿದ್ದನೆಂಬ ವಿಷಯ ಉಲೂಪಿಯಿಂದ ತಿಳಿಯಿತು. ಆದರೆ ಈಗ ಪಾರ್ಥ ನಮ್ಮ ಜೊತೆಯಿಲ್ಲದೆ ಇಬ್ಬರೂ ಸಮಾನ ದುಃಖೀಗಳಾಗಿ¨ªೆವು; ವಿರಹದುರಿಯಲ್ಲಿ ಬೇಯುತ್ತಿದ್ದೆವು.

ದಿನತುಂಬಿದ ನಂತರ ಮಗರಾಯ ಹುಟ್ಟಿದ್ದ. ಕಂದನ ಕೇಕೆ ಮಣಿಪುರದ ಅರಮನೆಯಲ್ಲಿ ಪ್ರತಿಧ್ವನಿಸಿತ್ತು. ನನ್ನಪ್ಪ ಚಿತ್ರವಾಹನನ ಆನಂದಕ್ಕೆ ಎಣೆಯಿರಲಿಲ್ಲ. ನಮ್ಮೆಲ್ಲರ ಕಣ್ಮಣಿಯಾಗಿ ಬಬ್ರುವಾಹನ ಬೆಳೆಯತೊಡಗಿದ. ಅರಮನೆಯಲ್ಲಿ ಸಂಭ್ರಮವೋ ಸಂಭ್ರಮ!

ಉಲೂಪಿಯು ಬಬ್ರುವಾಹನ­ನನ್ನು ಬೆಳೆಸುವ ಸರ್ವ ಹೊಣೆ­ಗಾರಿಕೆ­ಯನ್ನು ವಹಿಸಿ­ಕೊಂಡಿ­ದ್ದಳು. ಮಗನ ಬೆಳವಣಿಗೆಯಲ್ಲಿ ತನ್ನ ವಿರಹದ ನೋವನ್ನು ಮರೆತಿದ್ದಳು. ಮಗನಿಗೂ ತನ್ನ ದೊಡ್ಡಮ್ಮನೆಂದರೆ ಬಲುಪ್ರೀತಿ. ಆದರೆ ನನಗೆ ವೈರಾಗ್ಯವಂಟಿತ್ತು! ಅರಮನೆಯ ಬದುಕನ್ನು ತ್ಯಜಿಸಿ ತಪಸ್ವಿನಿಯಂತೆ ಬದುಕುತ್ತಿದ್ದೆ.  ವಿರಹದುರಿಯ ತಾಪ ನನ್ನೆದೆಯನ್ನು ಸುಡುತ್ತಿತ್ತು. ಬಬ್ರುವಾಹನನನ್ನು ನೋಡಿದಾಗಲೆಲ್ಲ ಪಾರ್ಥನೇ ನೆನಪಾಗುತ್ತಿದ್ದ. ಪಾರ್ಥನ ಸಾನ್ನಿಧ್ಯಕ್ಕಾಗಿ ಮನಸ್ಸು ಹಾತೊರೆಯುತ್ತಿತ್ತು.

ದೀಪದ ಶಾಖಕ್ಕೆ ತನ್ನ ರೆಕ್ಕೆಗಳು ಸುಡುತ್ತವೆಂದು ಪತಂಗವೊಂದಕ್ಕೆ ಗೊತ್ತಿರುತ್ತದೆಯೇ? ಆದರೂ ಪತಂಗವೇಕೆ ದೀಪವನ್ನೇ ಅರಸಿ ಹೋಗುತ್ತದೆ? ನನ್ನ ಬದುಕಿನ ವಿಷಯವೂ ಹೀಗೇ ಆಗಿತ್ತು. ಪಾರ್ಥನ ಬಗ್ಗೆ ಆಕರ್ಷಣೆಯಿತ್ತು ಎನ್ನುವುದು ಸತ್ಯ. ಆದರೆ ನಾಳಿನ ಬದುಕಿನ ಬಗೆಗೆ ನನಗೆ ಕಲ್ಪನೆಯಿರಲಿಲ್ಲ. ಪಾರ್ಥ  ದೀರ್ಘಾವಧಿಗೆ ಮಣಿಪುರದಲ್ಲಿ ಉಳಿಯಲಾರ ಎಂಬ ವಿಷಯ ಗೊತ್ತಿದ್ದೂ ಪಾರ್ಥನನ್ನು ಮೆಚ್ಚಿದ್ದೆ, ವರಿಸಿದ್ದೆ.

ಬೆಳೆದು ನಿಂತ ಮಗ ಮಣಿಪುರಕ್ಕೆ ಸಮರ್ಥ ಉತ್ತರಾಧಿಕಾರಿಯಾದಾಗ ತಂದೆ ತೃಪ್ತರಾಗಿದ್ದರು. ನನಗೆ ಮಾತ್ರ ಪ್ರತಿ ಕ್ಷಣ ಪಾರ್ಥ ನೆನಪಾಗುತ್ತಿದ್ದ. ಬಬ್ರುವಾಹನ ಮತ್ತೆ ಮತ್ತೆ ತನ್ನಪ್ಪನ ಬಗೆಗೆ ಪ್ರಶ್ನೆ ಕೇಳುತ್ತಿದ್ದ. “ಅಮ್ಮಾ ಅಪ್ಪನೇಕೆ ನಮ್ಮೊಂದಿಗಿಲ್ಲ? ನಮ್ಮನ್ನು ಕಂಡರೆ ಅವರಿಗೆ ಇಷ್ಟವಿಲ್ಲವೇ? ಅವರೇಕೆ ನಮ್ಮನ್ನು ನೋಡಲು ಬರುವುದಿಲ್ಲ? ನಾವಾದರೂ ಅವರನ್ನು ನೋಡಿಕೊಂಡು ಬರಲು ಹೋಗಬಹುದಿತ್ತಲ್ಲವೇ? ನಮ್ಮ ಬಗ್ಗೆ ಅವರೂರಿನಲ್ಲಿ, ಅವರ ಮನೆಯಲ್ಲಿ ಹೇಳಿಕೊಳ್ಳಲು ಅವರಿಗೇನು ಭಯವೇ? ನನ್ನ ಹುಟ್ಟಿನ ಹಿನ್ನೆಲೆಯನ್ನು ಹೇಳಮ್ಮಾ’ ಈ ರೀತಿಯಲ್ಲಿ ಮಗ ಸದಾ ಕಾಡುತ್ತಿದ್ದ.

ಪಾರ್ಥನ ಬಗ್ಗೆ ಮಗನಿಗೆ ಉತ್ತರಿಸುವಾಗ ಗಂಟಲ ಸೆರೆಯುಬ್ಬುತ್ತಿತ್ತು. “ನಿನ್ನಪ್ಪ ಪುರುಷೋತ್ತಮ- ವೀರಾಧಿ­ವೀರ. ದಯವಿಟ್ಟು ಮತ್ತೆ ಮತ್ತೆ ಪ್ರಶ್ನಿಸಬೇಡ ಕುಮಾರ’ ಎಂದಿದ್ದೆ ಒಮ್ಮೆ. ನನ್ನ ಕಣ್ಣೀರನ್ನು ನೋಡಿದ ಮಗ ಮತ್ತೆ ಆ ಬಗ್ಗೆ ಕೇಳಲೇ ಇಲ್ಲ. “ಪಾರ್ಥಾ ನಿನ್ನ ಅಗಲಿಕೆಯ ನೋವು ಸುಡುತ್ತಿರುವುದು ನನ್ನ ಮತ್ತು ಉಲೂಪಿಯ ಹೃದಯವನ್ನು ಮಾತ್ರವಲ್ಲ. ನಮ್ಮ ಮಗನ ಬಾಳನ್ನೂ ಸುಡುತ್ತಿದೆ. ಒಮ್ಮೆ ಬರಲಾರೆಯಾ… ಮನಸ್ಸು ಚೀರಿ ಚೀರಿ ಹೇಳುತ್ತಿದೆ. ಒಂದಲ್ಲಾ ಒಂದು ದಿನ ನನ್ನ ಅಂತರಂಗದ

ಧ್ವನಿ ಪಾರ್ಥನನ್ನು ತಲುಪುವುದೆಂದು ಭಾವಿಸಿ ಕಾಯುತ್ತಿರುವೆ. “ನನ್ನ ನಿರೀಕ್ಷೆ ಹುಸಿಯಾಗದಿರಲಿ…’ ಎಂದು ಭಗವಂತನಲ್ಲಿ ಬೇಡುತ್ತಿರುವೆ. ಕಾಯುವಿಕೆಗಿಂತ ಅನ್ಯ ತಪವಿಲ್ಲ ಅಲ್ಲವೇ

-ಸುರೇಖಾ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next