Advertisement

ಗೋವಾ: ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ 81ನೇ ಜನ್ಮೋತ್ಸವ

07:12 PM May 12, 2023 | Vishnudas Patil |

ಪಣಜಿ: ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ 81ನೇ ಜನ್ಮೋತ್ಸವ ಸಪ್ತರ್ಷಿಗಳ ಆಜ್ಞೆಯಂತೆ ಈ ವರ್ಷ ಬ್ರಹ್ಮೋತ್ಸವ ಎಂದು ಆಚರಿಸಲಾಯಿತು. ಸನಾತನ ಸಂಸ್ಥೆಯ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ 10,000 ಕ್ಕೂ ಹೆಚ್ಚು ಸಾಧಕರ ಸಮ್ಮುಖದಲ್ಲಿ ಅತ್ಯಂತ ಭಾವಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.

Advertisement

ಗೋವಾದ ಫಾರ್ಮಾಗುಡಿಯ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಈ ಬ್ರಹ್ಮೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಯಿತು. ಆಂಧ್ರಪ್ರದೇಶದ ತಿರುಪತಿಯಲ್ಲಿ ಶ್ರೀ ಬಾಲಾಜಿ ದೇವಸ್ಥಾನದ ವತಿಯಿಂದ ನೆಡಸಲಾಗುವ ಮೆರವಣಿಗೆಗೆ ಬ್ರಹ್ಮೋತ್ಸವ ಎಂದು ಕರೆಯಲಾಗುತ್ತದೆ. ಅದೇ ರೀತಿ ಈ ಬಾರಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ರಥಯಾತ್ರೆಯನ್ನು ಮರದಿಂದ ತಯಾರಿಸಲಾದ ಸುವರ್ಣ ವರ್ಣದ ರಥದಲ್ಲಿ ಮಾಡಲಾಯಿತು.

ಈ ಸಮಾರಂಭದಲ್ಲಿ ಜಾರ್ಖಂಡ್ ನಿಂದ ಪೂ. ಪ್ರದೀಪ್ ಖೇಮ್ಕಾ, ಪೂ.(ಸೌ). ಸುನೀತಾ ಖೇಮ್ಕಾ, ದೆಹಲಿಯಿಂದ ಪೂ. ಸಂಜೀವ್ ಕುಮಾರ್, ಪೀತಾಂಬರಿ ಉದ್ಯೋಗ ಸಮೂಹದ ರವೀಂದ್ರ ಪ್ರಭುದೇಸಾಯಿ ಮತ್ತು ಕರ್ನಾಟಕದ ಹಿಂದುತ್ವನಿಷ್ಠ ವಕೀಲರಾದ ಪಿ. ಕೃಷ್ಣಮೂರ್ತಿ ಅವರು ಮನೋಗತವನ್ನು ವ್ಯಕ್ತಪಡಿಸಿದರು. ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಸೇರಿದಂತೆ ಸನಾತನದ ಇನ್ನಿತರ ಸಂತರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋವಾ ಸರಸಂಘಚಾಲಕರಾದ ರಾಜನ್ ಭೋಬೆ, ಮ್ಹಾದ್ರಾಳನ ಮಹಾಲಸಾ ಮಂದಿರದ ಅಧ್ಯಕ್ಷ  ಪ್ರೇಮಾನಂದ ಕಾಮತ್, ಗೋಮಾಂತಕ ಸಂತ ಮಂಡಲದ ಸಂಚಾಲಕ ಹ.ಭ.ಪ ಸುಹಾಸ್ ಬುವಾ ವಝೆ, ಗೋಮಾಂತಕ ದೇವಸ್ಥಾನದ ಮಹಾಸಂಘದ ಅಧ್ಯಕ್ಷ  ಭಾಯಿ ಪಂಡಿತ್, ಕೊಂಕಣಿ ಲೇಖಕ ಮಹೇಶ್ ಪಾರಕರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ 2021 ರಲ್ಲಿ ಜರುಗಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮದಿನದ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಬಳಿಕ ಹೊರಟ ರಥೋತ್ಸವದಲ್ಲಿ ಧರ್ಮಧ್ವಜ, ಮಂಗಲಕಲಶವನ್ನು ಹಿಡಿದ ಮುತ್ತೈದೆಯರು, ಧ್ವಜಪಥಕ, ತಾಳಪಥಕ ಮೊದಲಾದವುಗಳನ್ನು ಶ್ರೀಮನ್ನಾರಾಯಣ ನಾರಾಯಣ ಗೀತೆಯೊಂದಿಗೆ ಮೆರವಣಿಗೆ ಮಾಡಲಾಯಿತು. ಸುವರ್ಣ ರಥದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‍ಶಕ್ತಿ ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‍ಶಕ್ತಿ (ಶ್ರೀಮತಿ) ಅಂಜಲಿ ಗಾಡಗೀಳ ಅವರು ವಿರಾಜಮಾನರಾಗಿದ್ದರು. ಈ ಸಂದರ್ಭದಲ್ಲಿ ನೃತ್ಯ ತಂಡದಿಂದ ಅಚ್ಯುತಾಷ್ಟಕಮ್ ಆಧಾರಿತ ನೃತ್ಯ ಪ್ರಸ್ತುತ ಪಡೆಸಲಾಯಿತು. ಬಳಿಕ ಆತ್ಮಾರಾಮಾ ಆನಂದರಮಣ ಈ ಗೀತೆಯನ್ನು ಪ್ರಸ್ತುತಪಡಿಸಲಾಯಿತು. ವಂದನಾರ್ಪಣೆ ಮತ್ತು ರಥದರ್ಶನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಸನಾತನ ಸಂಸ್ಥೆಯು ಏಪ್ರಿಲ್ ಮತ್ತು ಮೇ ಎರಡು ತಿಂಗಳಲ್ಲಿ ದೇಶದಾದ್ಯಂತ ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿತ್ತು. ಈ ಹಿನ್ನಲೆಯಲ್ಲಿ ಇಲ್ಲಿಯವರೆಗೆ ಅನೇಕ ದೇವಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ, ನೂರಾರು ದೇವಾಲಯಗಳಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಾಮೂಹಿಕ ಪ್ರಾರ್ಥನೆಗಳು, ಪ್ರವಚನಗಳು ಮತ್ತು ಹಲವೆಡೆ ಹಿಂದೂ ಐಕ್ಯತಾ ಶೋಭಾಯಾತ್ರೆಯನ್ನು ನಡೆಸಲಾಗಿದೆ. ಈ ಎಲ್ಲಾ ಕಾರ್ಯಗಳಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next