Advertisement

ನನಗೊಂದು ಅವಕಾಶ ಕೊಡಿ; ಅವಂತಿಕಾ ಶೆಟ್ಟಿ ಮನವಿ

03:58 PM Mar 25, 2023 | Team Udayavani |

“ನನಗೆ ಸಿನಿಮಾದಲ್ಲಿ ನಟಿಸುವ ಆಸಕ್ತಿಯಿದೆ. ಯಾರಾದರೂ ಅವಕಾಶ ಕೊಡಬೇಕು ಅಷ್ಟೆ. ಅವಕಾಶ ಕೊಟ್ಟರೆ ಖಂಡಿತವಾಗಿಯೂ ನಟಿಸುತ್ತೇನೆ. ಈ ಮೂಲಕ ಅವಕಾಶಕ್ಕಾಗಿ ಕೇಳುತ್ತಿದ್ದೇನೆ’ – ಹೀಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಿನಿಮಾದಲ್ಲಿ ಅವಕಾಶಕ್ಕಾಗಿ ಅಂಗಲಾಚಿರುವ ನಟಿ ಬೇರಾರೂ ಅಲ್ಲ. ಅವರೇ ಅವಂತಿಕಾ ಶೆಟ್ಟಿ.

Advertisement

ಹೌದು, ಕನ್ನಡ ಸಿನಿಮಾ ರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ “ರಂಗಿತರಂಗ’ ಸಿನಿಮಾದ ಮೂಲಕ ಜನಪ್ರಿಯತೆ ಪಡೆದುಕೊಂಡ ನಟಿ ಅವಂತಿಕಾ ಶೆಟ್ಟಿ, ಈಗ ಸಿನಿಮಾದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು!

“ರಂಗಿತರಂಗ’ ಸಿನಿಮಾದ ಭರ್ಜರಿ ಗೆಲುವಿನ ನಂತರ ಸಾಕಷ್ಟು ಅವಕಾಶಗಳು ಅವಂತಿಕಾ ಶೆಟ್ಟಿಯನ್ನು ಹುಡುಕಿಕೊಂಡು ಬಂದರೂ, ಅವಂತಿಕಾ ಮಾತ್ರ ಅಂಥ ಅವಕಾಶಗಳನ್ನು ಬಳಸಿಕೊಳ್ಳಲಿಲ್ಲ. ಇದರ ನಡುವೆ “ರಾಜು ಕನ್ನಡ ಮೀಡಿಯಂ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರೂ, ಬಳಿಕ ವಿವಾದ ಮಾಡಿಕೊಂಡು ಸಿನಿಮಾದ ಪ್ರಚಾರದಿಂದ ದೂರ ಉಳಿದರು. ಅದಾದ ನಂತರ ನಿಧಾನವಾಗಿ ಚಿತ್ರರಂಗದಲ್ಲೂ ಅವಂತಿಕಾ ಬೇಡಿಕೆ ಮತ್ತು ಯಶಸ್ಸು ಎರಡೂ ಕಡಿಮೆಯಾಯಿತು. ಬಳಿಕ ಮುಂಬೈನತ್ತ ಮುಖ ಮಾಡಿ ಅಲ್ಲಿಯೇ ಬೀಡುಬಿಟ್ಟಿದ್ದರಿಂದ ಕನ್ನಡ ಸಿನಿಮಾ ಮಂದಿ ಕೂಡ ಅವಂತಿಕಾ ಶೆಟ್ಟಿಯನ್ನು ಕೂಡ ಎರಡು-ಮೂರು ಸಿನಿಮಾಗಳನ್ನು ಮಾಡಿ, ಹಾಗೆ ಬಂದು ಹೀಗೆ ಹೋದ ನಟಿಯರ ಸಾಲಿನಲ್ಲಿ ಸೇರಿಸಿಬಿಟ್ಟರು. ಇದೀಗ ಮತ್ತೆ ಅವಂತಿಕಾ ಶೆಟ್ಟಿ ಮತ್ತೆ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಸೋಶಿಯಲ್‌ ಮೀಡಿಯಾದ ತಮ್ಮ ಖಾತೆಯಲ್ಲಿ ಬರೆದುಕೊಂಡಿರುವ ಅವಂತಿಕಾ, “ಕುಟುಂಬದ ಸಮಸ್ಯೆಯ ಕಾರಣದಿಂದಾಗಿ ಸಿನಿಮಾ ರಂಗದಿಂದಲೇ ದೂರ ಸರಿಯಬೇಕಾಯಿತು. ನೆಮ್ಮದಿಗಾಗಿ ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡೆ. ಕೋವಿಡ್‌ ಮತ್ತಿತರ ಕಾರಣದಿಂದಾಗಿ ಬರೋಬ್ಬರಿ ಐದು ವರ್ಷಗಳಿಂದ ಅವರು ಯಾವುದೇ ಸಿನಿಮಾ ಮಾಡಿಲ್ಲ. ಮುಂಬೈನಲ್ಲೇ ಇದ್ದು ಕನ್ನಡ ಮಾತನಾಡಲು ಕೂಡ ಕಷ್ಟವಾಗುತ್ತಿದೆ’ ಎಂದು ಅವಂತಿಕಾ ಹೇಳಿಕೊಂಡಿದ್ದಾರೆ. ಜೊತೆಗೆ ಅವಕಾಶಕ್ಕಾಗಿ ಮನವಿ ಕೂಡ ಮಾಡಿಕೊಂಡಿರುವ ಅವಂತಿಕಾ, ತಮ್ಮ ವೈಯಕ್ತಿಕ ಬದುಕಿನ ಬಗ್ಗೆಯೂ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next