Advertisement

ಮಾದರಿ ಕ್ಷೇತ್ರ ಮಾಡಲು ಮತ್ತೂಂದು ಅವಕಾಶ ಕೊಡಿ

12:35 PM Apr 27, 2018 | Team Udayavani |

ಬೆಂಗಳೂರು: ಶಾಂತಿನಗರ ಮಾದರಿ ಕ್ಷೇತ್ರವಾಗಲು ಅಭಿವೃದ್ಧಿ ಕುರಿತು ಸ್ಪಷ್ಟ ಕಲ್ಪನೆ ಹೊಂದಿರುವ ನನಗೆ ಮತ್ತೂಮ್ಮೆ ಅವಕಾಶ ಕೊಡಿ ಎಂದು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎನ್‌.ಎ.ಹ್ಯಾರಿಸ್‌ ಮನವಿ ಮಾಡಿದ್ದಾರೆ.

Advertisement

ಗುರುವಾರ ಕ್ಷೇತ್ರದ ಜೋಗುಪಾಳ್ಯ ಮತ್ತು ಶಾಂತಿನಗರದಲ್ಲಿ ಪಾದಯಾತ್ರೆ ನಡೆಸಿ ಮತ ಯಾಚಿಸಿದ ಅವರು, ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಸಂಪೂರ್ಣ ಮೇಲ್ದರ್ಜೆಗೆ ಏರಿಸುವ ಆಶಯ ಹೊಂದಿದ್ದೇನೆ. ಇದರಿಂದ ಬಡವರು ಮತ್ತು ಅವರ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಮಟ್ಟ ಸುಧಾರಿಸಲಿದೆ ಎಂದು ಹೇಳಿದರು. 

ಕ್ಷೇತ್ರ ಎದುರಿಸುತ್ತಿದ್ದ ಹತ್ತಾರು ಸಮಸ್ಯೆಗಳನ್ನು ಕಳೆದ ಎರಡು ಅವಧಿಯಲ್ಲಿ ಹಂತಹಂತವಾಗಿ ಬಗೆಹರಿಸಿದ್ದೇನೆ. ಮುಂದೆ ಮಾದರಿ ಕ್ಷೇತ್ರವಾಗಿ ಮಾಡುವ ಕನಸಿದ್ದು, ಜನರ ಆಶೀರ್ವಾದ, ಸಹಕಾರ ಅತ್ಯಗತ್ಯ ಎಂದರು. ನಾನು ನುಡಿದಂತೆ ನಡೆದಿದ್ದೇನೆ. ಮುಂದೆಯೂ ಸಹ ಅದೇ ದಾರಿಯಲ್ಲಿ ಸಾಗುತ್ತೇನೆಂದು ಕ್ಷೇತ್ರದ ಜನತೆಗೆ ಭರವಸೆ ನೀಡುವೆ ಎಂದು ತಿಳಿಸಿದರು.

ಹ್ಯಾರಿಸ್‌ ಅವರ ಜತೆ ಮತಯಾಚನೆಗೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರ ಪಡೆ ಸೇರಿಕೊಂಡಿದೆ. ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೇ ಕಾಂಗ್ರೆಸ್‌ ಪಕ್ಷದ ನೂರಾರು ಕಾರ್ಯಕರ್ತರು ಒಟ್ಟಾಗಿ ಪ್ರಚಾರಕ್ಕೆ ಇಳಿದಿದೆ.

ಕೆಲಸ ಮಾಡಿದ್ದನ್ನು ನೆನಪಿಸಿ ಮತ ಯಾಚನೆ: ಎನ್‌.ಎ.ಹ್ಯಾರಿಸ್‌ ಅವರು ಮನೆಮನೆಗೆ ತೆರಳಿ ಮತಯಾಚಿಸುವಾಗ ದೊಡ್ಡ ದೊಡ್ಡ ಮಾತುಗಳನ್ನು ಪ್ರಸ್ತಾಪಿಸದೇ ಕ್ಷೇತ್ರಕ್ಕೆ ತಾವು ಯಾವರೀತಿ ಸಹಕಾರಿಯಾಗಿದ್ದೇನೆ ಎಂದು ತಿಳಿಸುವ ಪ್ರಯತ್ನ ಮಾಡುತ್ತಿರುವುದು ವಿಶೇಷವಾಗಿದೆ.

Advertisement

ನಾನು ಬರೀ ಭರವಸೆ ಕೊಡುವವನಲ್ಲ, ಹೇಳಿದ್ದನ್ನು ಮಾಡಿ ತೋರಿಸಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ಶಾಂತಿ ನಗರ ಭಾಗದಲ್ಲಿ ಏನೆಲ್ಲ ಕೆಲಸಗಳಾಗಿವೆ ಎಂಬುದು ನಿಮಗೆಲ್ಲ ತಿಳಿದ ವಿಚಾರವೇ.ರಂಗುರಂಗಿನ ಮಾತನಾಡಿ ನಾನು ಮತ ಸೆಳೆಯುವುದಿಲ್ಲ. ಜನರ ಮಧ್ಯೆಯೇ ಇರುವವನು, ಕೊಟ್ಟ ಭರವಸೆ ಈಡೇರಿಸುವವನು ಎಂದು ಹೇಳಿದರು.

ಮುಂದಿನ ಐದು ವರ್ಷದೊಳಗೆ ಇಡೀ ಕ್ಷೇತ್ರದ ಎಲ್ಲ ಪ್ರಮುಖ ಸ್ಥಳಗಳು ಸಿಸಿಟಿವಿ ನಿಗಾ ವ್ಯವಸ್ಥೆಯೊಳಗೆ ಬರುವಂತೆ ಮಾಡುತ್ತೇನೆ. ಇದರಿಂದ ಕಳ್ಳತನ, ಡ್ರಗ್ಸ್‌ ದಂಧೆಯಂತಹ ಚಟುವಟಿಕೆಗಳು ಸಸಂಪೂರ್ಣ ನಿಯಂತ್ರಣವಾಗಲಿದೆ. ಕಾನೂನು ಸುವ್ಯವಸ್ಥೆ ಇನ್ನಷ್ಟು ಉತ್ತಮಗೊಳ್ಳಲಿದೆ.
-ಎನ್‌.ಎ. ಹ್ಯಾರಿಸ್‌, ಶಾಂತಿನಗರ ಕಾಂಗ್ರೆಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next