Advertisement

ಮುಗುಳು ನಗೆಯೇ ನೀನೊಮ್ಮೆ ಮಾತಾಡು…

10:08 AM Oct 17, 2019 | mahesh |

“ಬನ್ನಿ..ವಿಪರೀತ ಬಿಸಿಲು. ಪಾನಕ ಕುಡಿದು ಹೋಗುವಿರಂತೆ…ಅದೇ ನಮ್ಮನೆ..’ ಅಂತ ಎದುರಿಗೆ ಮನೆಯೊಂದನ್ನು ತೋರಿಸಿ ಕರೆದರಾಕೆ. ನಯವಾಗಿ ನಿರಾಕರಿಸಿದೆ. “ಇನ್ನೊಂದಿನವಾದ್ರೂ ಮರೆಯದೆ ಬನ್ನಿ ಮನೆಗೆ ಹಂಗಾರೆ..’ ಅಂತ ಆಹ್ವಾನಿಸಿ ಹೋದರು.

Advertisement

ಇತ್ತೀಚೆಗೆ ಅದೊಂದು ದಿನ, ಬ್ಯಾಂಕ್‌ಗೆ ಹೋಗಿದ್ದ ಪತಿಗಾಗಿ ಕಾಯುತ್ತ ಅಲ್ಲಿಯೇ ಹೊರಗಡೆ ನಿಂತಿದ್ದೆ. ಎದುರಿನ ಖಾಲಿ ನಿವೇಶನದಲ್ಲಿ ತೊಗಟೆ ಸೊಪ್ಪು (ಚೊಗಟೆ ಅಂತಲೂ ಹೇಳುತ್ತಾರೆ) ಹುಲುಸಾಗಿ ಬೆಳೆದಿತ್ತು. ಮಳೆಗಾಲವೆಂದರೆ ಹಾಗೇ ಅಲ್ಲವೇ? ಅದು ಹಸುರಿಗೆ ಜೀವತುಂಬುವ ಚೈತನ್ಯದಾಯಕ ಸಮಯ! ಸೊಪ್ಪು ಕೊಯ್ಯಲು ಮುಂದಾದೆ. ದಾರಿಯಲ್ಲಿ ಹೋಗುತ್ತಿದ್ದ ಯಾರೋ ಒಬ್ಬ ಹಿರಿಯ ಹೆಣ್ಣುಮಗಳು ನನ್ನನ್ನೇ ಗಮನಿಸುತ್ತಾ ಏನನ್ನೋ ಹೇಳಲು ತವಕಿಸಿದಂತೆ ಭಾಸವಾಯಿತು. ಮುಗುಳ್ನಗುತ್ತ ಆಕೆಯನ್ನೇ ನೋಡಿದೆ.

“ಹುಸಾರು..ಇಷ್ಟೇಲ್ಲ ಹಾವಿರ್‌ತೈತೆ… ‘
ಆಕೆಯದು ಕಾಳಜಿಯ ಮಾತು..
“ಇಲ್ಲ..ನೋಡ್ಕೊಂಡೇ ಕೀಳ್ತಿದೀನಿ ಬಿಡಿ..’
“ಏನ್‌ ಸೊಪ್ಪು ಅದು..ಏನ್‌ ಮಾಡೀರಿ ಅದ್ರಾಗೆ..?’
“ಚಟ್ನಿ, ತಂಬುಳಿ,ಪಲ್ಯ..ಆರೋಗ್ಯಕ್ಕೆ ತುಂಬಾ ಒಳ್ಳೇದು ಇದು..’
“ಹೆಂಗೆ ಮಾಡದು…?’
ಮಾಡುವ ವಿಧಾನವನ್ನು ವಿವರಿಸಿದೆ.
“ನಿಮ್ಮಿಂದ ಹೊಸ ಅಡುಗೆ ಕಲಿತ್ಕೊಂಡ್‌ ಹಂಗಾಯ್ತು. ನಾವು ಬಸ್ಸಾರು ಮಾತ್ರ ಮಾಡದು..’
ನಗೆ ಬೀರಿದೆ.
“ಓಹ್‌..ಹೌದಾ? ಬಸ್ಸಾರು, ಅದು ಹೇಗೆ?’- ಈ ಸಲ ನಾನು ಕೇಳಿದೆ.

ಅವರು ವಿವರಿಸಿದರು.
“ನೋಡಿ..ನಂಗೂ ನಿಮ್ಮಿಂದ ಹೊಸ ಅಡುಗೆ ಕಲಿತಂಗಾಯ್ತು.’
ನನ್ನ ಮಾತು ಕೇಳಿ, ಆಕೆಯೂ ಖುಷಿಯಿಂದ ನಗೆ ಬೀರಿದರು. ಬಿರುಬಿಸಿಲಿಗೆ ನನ್ನ ಮುಖ ಕೆಂಪಗಾಗಿದ್ದನ್ನು ಗಮನಿಸಿ.. “ಇಲ್ಲಿ ನೆಳ್‌ ಐತೆ ಬನ್ನಿ.. ಸುಧಾಸ್ಕìಳಿ.. ‘ಅಂತ ರಸ್ತೆಯ ಸಾಲುಮರದ ಕೆಳಗೆ ಬರಲು ಕರೆದರು. ಪತಿ ಇನ್ನೂ ಬಂದಿರಲಿಲ್ಲ. ಸುಮ್ಮನೆ ಆಕೆಯ ಮಾತಿಗೆ ಕಿವಿಗೊಟ್ಟೆ.
“ರಕ್ತ ಪರೀಕ್ಷೆ ಮಾಡ್ಸಕೆ ಓಗಿದ್ದೆ ಆಸ್ಪತ್ರೆಗೆ. ಸುಗರ್‌ ಹೆಚ್ಚಾಗೈತಂತೆ..’ಅಂದರು. ಮುಖದಲ್ಲಿ ದುಗುಡವಿತ್ತು.
“ಗಾಬರಿಯಾಗ್ಬೇಡಿ…ಕಂಟ್ರೋಲ್‌ ಮಾಡಿದ್ರೆ ಎಲ್ಲ ಸರಿಹೋಗುತ್ತೆ..’ ಅಂದೆ ಲೋಕಾಭಿರಾಮವಾಗಿ.
ತಮ್ಮ ಪತಿ ಈಗಿಲ್ಲವೆಂದೂ…ಮಗ, ಸೊಸೆ, ಮೊಮ್ಮಕ್ಕಳ ಜೊತೆ ಖುಷಿಯಾಗಿ ಇದ್ದೇನೆಂದೂ ಹೇಳಿಕೊಂಡರು. ಆದರೆ, ಮಗಳಿಗೆ ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲವೆಂದು ವ್ಯಥೆಪಟ್ಟರು. ಪಾಪ ತಾಯಿ ಕರುಳು..ಎಷ್ಟೇ ಆದರೂ..!

“ಆಗುತ್ತೆ ಬಿಡಿ..ಚಿಂತಿಸಬೇಡಿ…’ ಅಂದೆ ಬೇರೇನೂ ಹೇಳಲು ತೋಚದೆ…
“ನಿಮ್ಮ ಬಾಯಿ ಹರಕೆಯಿಂದ ಹಾಗೇ ಆಗಿಬಿಟ್ರೆ ಸಾಕು..’ ಎಂದರು.

Advertisement

“ಬನ್ನಿ..ವಿಪರೀತ ಬಿಸಿಲು. ಪಾನಕ ಕುಡಿದು ಹೋಗುವಿರಂತೆ…ಅದೇ ನಮ್ಮನೆ..’ ಅಂತ ಎದುರಿಗೆ ಮನೆಯೊಂದನ್ನು ತೋರಿಸಿ ಕರೆದರಾಕೆ. ನಯವಾಗಿ ನಿರಾಕರಿಸಿದೆ. “ಇನ್ನೊಂದಿನವಾದ್ರೂ ಮರೆಯದೆ ಬನ್ನಿ ಮನೆಗೆ ಹಂಗಾರೆ..’ ಅಂತ ಆಹ್ವಾನಿಸಿ ಹೋದರು.
ಬ್ಯಾಂಕ್‌ ಕೆಲಸ ಮುಗಿಸಿ ಬಂದ ಪತಿ ಕೇಳಿದರು- “ಯಾರವರು? ಬಹಳ ಮಾತಾಡ್ತಿದ್ರಲ್ಲ’ ಅಂತ. ಗೊತ್ತಿಲ್ಲವೆಂದೆ. ಮಾತಿನ ಭರದಲ್ಲಿ ಆಕೆಯ ಹೆಸರು ಕೇಳಲೂ ಮರೆತುಬಿಟ್ಟಿದ್ದೆ.

ಅಚ್ಚರಿಯಾಯಿತು. ಆಕೆ ಯಾರೋ, ನಾನ್ಯಾರೋ.ಅರ್ಧಗಂಟೆಯ ಪರಿಚಯದಲ್ಲೇ ಮನೆಗೂ ಆಹ್ವಾನಿಸಿಬಿಟ್ಟರು. ಆಕೆ ಕರೆದರೆಂದು ನಾನೇನು ಅವರ ಮನೆಗೆ ಹೋಗುತ್ತಿರಲಿಲ್ಲ. ಗುರುತು,ಪರಿಚಯವಿಲ್ಲದವರನ್ನು ನಂಬುವ ಕಾಲವೂ ಇದಲ್ಲ.
ಯೋಚಿಸುತ್ತಾ ನಗು ಬಂತು. ಆಕೆಗೂ ನಾನು ಹಾಗೆಯೇ ಅಲ್ಲವೇ..ಯಾವ ಧೈರ್ಯದ ಮೇಲೆ ಆಹ್ವಾನಿಸಿಬಿಟ್ಟರು..ಆಕೆ ? ಇಷ್ಟಕ್ಕೂ, ಅಪರಿಚಿತೆಯಾದ ನನ್ನ ಹತ್ತಿರ ಆಕೆ ಅಷ್ಟೊಂದು ಮಾತಾಡಿದ್ದಾದರೂ ಏಕೆ? ಹೇಗೆ? ಅಂತೆಲ್ಲ ಯೋಚಿಸಿದಾಗ ಸಿಕ್ಕ ಉತ್ತರ…ಅದು ನನ್ನ ಒಂದು ಮುಗುಳ್ನಗು ಮತ್ತು ಧನಾತ್ಮಕ ಮಾತುಗಳು!

ಸುಮ್ಮನೆ ನಮ್ಮ ಸಂಭಾಷಣೆಯನ್ನೊಮ್ಮೆ ಮೆಲುಕು ಹಾಕಿದೆ. ಅರ್ಧ ಗಂಟೆಯ ಈ ಸಂಭಾಷಣೆಯಲ್ಲಿ ನಾನು ಎಲ್ಲವನ್ನೂ ಧನಾತ್ಮಕವಾಗಿಯೇ ಮಾತಾಡಿದ್ದು ಗಮನಕ್ಕೆ ಬಂತು..
ಒಮ್ಮೆ ಆಕೆ ನನ್ನನ್ನೇ ನೋಡುತ್ತಿದ್ದಾಗ ನಾನೂ ದುರುಗುಟ್ಟಿ ನೋಡಿದ್ದಿದ್ದರೆ, ಹೇಗಿರಬಹುದಿತ್ತು…ಕಲ್ಪಿಸಿಕೊಂಡೆ.
“ಏನ್‌ ನನ್‌ ಮುಖದ್‌ ಮೇಲೆ ಗೊಂಬೆ ಕುಣೀತಿದೆಯಾ..ನನ್ನೇ ನೋಡ್ತಾರಪ್ಪ..’ ಅಂತ ನಾನೂ…
“ಇಲ್ಲೆಲ್ಲ ಹಾವಿರ್‌ತೈತೆ ಅಂತ ಎಚ್ಚರ್ಸನ ಅನ್ಕಂಡ್ರೆ..ಈವಮ್ಮ ಗುಮ್‌ ಅಂತವೆ. ನಂಗ್ಯಾಕ್‌ ಬುಡು…’ ಅಂತ ಆಕೆಯೂ..
ಮಾತಾಡದೆ ಹೋಗಿಬಿಡುತ್ತಿದ್ದೇವೆನೋ…!

ಮುಗುಳ್ನಗು… ಸೌಹಾರ್ದ ಮಾತುಕತೆಗೊಂದು ಮುನ್ನುಡಿ. ಧನಾತ್ಮಕ ಮಾತುಗಳು ಆ ಮಾತುಕತೆಯನ್ನು ಇನ್ನಷ್ಟು ಆತ್ಮೀಯತೆಗೊಳಿಸಬಲ್ಲ, ಆ ಮೂಲಕ ಸಂಬಂಧವನ್ನು ಗಟ್ಟಿಗೊಳಿಸಬಲ್ಲ ಸೇತುವೆ. ಎಷ್ಟೋ ಮನ-ಮನೆಗಳನ್ನು ಬೆಸೆಯುವ ಕೊಂಡಿ. ಅಯ್ನಾ ಎಂದರೆ ಸ್ವರ್ಗ..ಎಲವೋ ಎಂದರೆ ನರಕ… ಅಂತ ಹಿರಿಯರು ಸುಮ್ಮನೆ ಹೇಳಿದ್ದಲ್ಲ.
ಒಂದೇ ಒಂದು ಮುಗುಳ್ನಗು..ಕೆಲವು ಧನಾತ್ಮಕ ಮಾತುಗಳು ನನ್ನನ್ನು ಆ ದಿನವಿಡೀ ಖುಷಿಖುಷಿಯಾಗಿಡುವಲ್ಲಿ ಸಂಪನ್ನವಾಯಿತು ಎಂಬುದು ಮಾತ್ರ ನಾನು ಕಂಡುಕೊಂಡ ಸತ್ಯ..!

ನೀವೂ ನಿಮ್ಮ ದಿನವನ್ನು ಮುಗುಳ್ನಗು ಮತ್ತು ಧನಾತ್ಮಕ ಮಾತುಗಳೊಂದಿಗೆ ಒಮ್ಮೆ ಪ್ರಾರಂಭಿಸಿ ನೋಡಿ…
ಪರಿಣಾಮ ಗಮನಿಸಿ….

-ಸುಮನಾ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next