Advertisement

ಅನುಮಾನದ ಕೂಪದಿಂದ ಹೊರಬನ್ನಿ

11:01 PM Aug 25, 2019 | mahesh |

ನಾವು ಪರಿಪೂರ್ಣವಾದ ಜೀವನ ಸಾಗಿಸಬೇಕಾದರೆ ಮೊದಲು ಅನುಮಾನವನ್ನು ಜೀವನದಿಂದ ಬಲುದೂರ ಇರಿಸಬೇಕು.

Advertisement

“ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು’ ಎನ್ನುವ ಗಾದೆ ಮಾತಿನಂತೆ ಜೀವನ ಸಾಗಬೇಕು. ಮದುವೆಯಾಗುವ ಮೊದಲು ಏನು ಮಾಡಿದರೂ ಯಾರೂ ಕೇಳುವವರಿರುವುದಿಲ್ಲ ಎನ್ನುವಂತೆ ಬದುಕು ಸಾಗುತ್ತಲಿರುತ್ತದೆ. ನಾವು ನಡೆದದ್ದೇ ದಾರಿ ಎನ್ನುವ ಹಾಗೆ ಬದುಕು ಸಾಗಿಸುತ್ತಿರುತ್ತೇವೆ. ತಂದೆ-ತಾಯಿ, ಪೋಷಕರು ಏನೇ ಬುದ್ಧಿ ಮಾತು ಹೇಳಿದರೂ ಕೇಳುವ ಸ್ಥಿತಿಯಲ್ಲಿ ನಾವಿರುವುದಿಲ್ಲ. ಆದರೆ ಮದುವೆ ಆದ ಮೇಲೆ ನಮಗೆ ಗೊತ್ತಿಲ್ಲದೆಯೇ ಬಹಳ ಜವಾಬ್ದಾರಿ ನಮ್ಮ ಹೆಗಲ ಮೇಲೇರಿ ಬಿಡುತ್ತದೆ. ಆಗ ನಮ್ಮ ಜೀವನದ ದಿಕ್ಕು ಕೂಡ ಬದಲಾಗಿರುತ್ತದೆ.

ಒಗ್ಗಿಕೊಳ್ಳೋದೇ ಇಲ್ಲ
ಗಂಡ-ಹೆಂಡಿರಿಬ್ಬರೂ ಕೆಲಸಕ್ಕೆ ಹೋಗೋದು, ಅತ್ತೆ-ಮಾವನಿಂದ ದೂರವಿದ್ದು ಪ್ರತ್ಯೇಕವಾಗಿ ಬದುಕು ಸಾಗಿಸುವುದು ಮದುವೆಯಾದವರ ಮೊದಲ ಧ್ಯೇಯವಾಗಿರುವುದು ಇತ್ತೀಚಿನ ದಿನಗಳಲ್ಲಿ ಸಹಜವಾಗಿ ಕಂಡುಬರುತ್ತದೆ. ಮುಖ್ಯವಾಗಿ ಪತ್ನಿಯರಿಗೆ ಈಗಿನ ಕೂಡು ಕುಟುಂಬದ ಜಂಜಾಟಕ್ಕೆ ಒಗ್ಗಿಕೊಳ್ಳಲು ಆಗುವುದೇ ಇಲ್ಲ. ಹಿಂದಿನ ಕಾಲದ ಅತ್ತೆ-ಮಾವನೊಂದಿಗೆ ಈಗಿನ ಕಾಲದ ಯುವತಿಯರಿಗೆ ಹೊಂದಿಕೊಳ್ಳೋಕೆ ಕಷ್ಟವಾಗುತ್ತಿದೆ. ಸಾಲ ಮಾಡಿಯಾದರೂ ಜಾಗ ಖರೀದಿಸಿ ಪ್ರತ್ಯೇಕ ಮನೆ ಮಾಡುವ ಯೋಚನೆಯೇ ಮನಸ್ಸಿನಲ್ಲಿ ಓಡಾಡುತ್ತಲಿರುತ್ತದೆ.

ಲೇಟಾದರೆ ಸಿಟ್ಟಾಗಬೇಡಿ
ನಿರ್ದಿಷ್ಟ ಸಮಯಗಳಿಲ್ಲದೆ ದುಡಿಯುವ ಗಂಡಂದಿರು ಸರಿಯಾದ ಸಮಯಕ್ಕೆ ಮನೆಗೆ ಬರದಿರುವುದನ್ನೇ ನೆಪವಾಗಿಟ್ಟುಕೊಂಡು ಪತ್ನಿಯರು ಸಂಶಯಕ್ಕೆ ಜೋತು ಬೀಳಬಾರದು. ದೈನಂದಿನ ಸಮಯಕ್ಕಿಂತ ಲೇಟಾಗಿ ಬಂದರೆ ವಿಷಯ ಕೇಳಿಕೊಳ್ಳಿ. ಅದು ಬಿಟ್ಟು ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಹಾಕಿ ಕೆಲಸದಿಂದ ಬರುವ ಗಂಡಂದಿರ ಮೇಲೆ ಒತ್ತಡ ತರಕೂಡದು. ಏನೋ ಕೆಲಸದ ಕಾರಣಕ್ಕೆ ತಡವಾಗಿರಬಹುದುದೆಂದು ಅರಿತುಕೊಂಡು ತಣ್ಣಗಿರಬೇಕು. ಅದು ಬಿಟ್ಟು ತಾವೇ ಏನೋ ಆಲೋಚನೆಯನ್ನು ಮಾಡಿಕೊಂಡು ಅನುಮಾನದ ಭೂತವನ್ನಿಟ್ಟುಕೊಂಡು ಗಂಡಂದಿರನ್ನು ಜರೆಯಲು ಹೋಗಬಾರದು. ಮೊದಲೇ ಕೆಲಸದೊತ್ತಡದಿಂದ ಹೊರಬಾರದೆ ಚಡಪಡಿಸುವ ಅವರಿಗೆ ಮತ್ತಷ್ಟು ಒತ್ತಡ ಕೊಟ್ಟರೆ ಜಗಳವಾಗುವ ಸಾಧ್ಯತೆಯೂ ಹೆಚ್ಚು. ಕ ಅನುಮಾನದ ಮಾತುಗಳೆಲ್ಲ ಬಂದರೆ ಸಂಬಂಧಗಳು ಮುರಿದು ಬೀಳುವ ಹಂತಕ್ಕೆ ತಲುಪಬಹುದು.

ಅನ್ಯರ ಮಾತಿಗೆ ಕಿವಿಗೊಡದಿರಿ
ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ಗಾದೆ ಮಾತು ತೆರೆಮರೆಗೆ ಸರಿಯು ತ್ತಿದೆ. ಈಗ ಪತ್ನಿಯರು ಕೂಡ ಕೆಲಸಕ್ಕೆ ಹೋಗೋದು ವಾಡಿಕೆ ಯಾಗಿದೆ. ಕೆಲಸಕ್ಕೆ ಹೋಗುವ ಪತ್ನಿಯರು ಅಲ್ಲಿ ಒಂದಷ್ಟು ಗೆಳತಿ ಯರ ಜತೆ ಸೇರಿಕೊಂಡು ಬೇರೆಯವರ ಜೀವನದ ಬಗ್ಗೆ ಮಾತನಾಡಿ ಕೊಳ್ಳುತ್ತಾರೆ. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಬರುವ ಪತ್ನಿಯು ನನಗೂ ಅವರಂತಹದ್ದೇ ಜೀವನ ಬೇಕು ಎಂದು ಗಂಡನೊಂದಿಗೆ ಜಗಳ ಮಾಡುವುದೇ ಈಗಿನ ಜೀವನದೊಂದು ಭಾಗವಾಗುತ್ತಿದೆ.

Advertisement

ಕೋಪ, ಆತುರ ಬೇಡ
ಆತುರತೆ, ಸಂಶಯ ಪಿಶಾಚಿಯನ್ನು ಮನಸ್ಸಿನಿಂದ ಹೊರಗೆಡವದೇ ಇದ್ದಲ್ಲಿ ನಮ್ಮ ಸುಂದರ ಜೀವನವನ್ನು ನಾವೇ ಹಾಳು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆನಂತರದಲ್ಲಿ ಎಷ್ಟೇ ಪರಿತಪಿಸಿದರೂ ಮತ್ತೆ ಹಿಂದಿನ ಸುಂದರ ಜೀವನ ಮರಳಿ ಬರುವುದಿಲ್ಲ. ಹಾಗಾಗಿ ಕೋಪವನ್ನು ಹದ್ದುಬಸ್ತನಲ್ಲಿಟ್ಟು ಅನುಮಾನದ ಭೂತವನ್ನು ನಾವೇ ಸ್ವಯಂ ಉಚ್ಚಾಟಿಸಿಕೊಂಡರೆ ನೆಮ್ಮದಿ, ಸಂತೋಷದ ಜೀವನ ನಮ್ಮದಾಗುತ್ತದೆ.

-  ಲತಾ ಚೇತನ್‌ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next