Advertisement

ಜನರಲ್‌ ಕೆ.ಎಸ್‌.ತಿಮ್ಮಯ್ಯ ಮ್ಯೂಸಿಯಂ : ಯೋಧರ ನಾಡಿಗೆ ಮತ್ತೂಂದು ಕಿರೀಟ

01:43 AM Feb 05, 2021 | Team Udayavani |

“ಕೆಚ್ಚೆದೆಯ ಕಲಿಗಳ ನಾಡು’
ಎಂದು ಕರೆಸಿಕೊಳ್ಳುವ ಕೊಡಗು ತನ್ನ ಐತಿಹಾಸಿಕ ಹಿನ್ನೆಲೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಸಜ್ಜಾಗಿದೆ. ಮಡಿಕೇರಿಯಲ್ಲಿ ತಲೆ ಎತ್ತಿ ನಿಂತಿರುವ ಜನರಲ್‌ ಕೆ.ಎಸ್‌. ತಿಮ್ಮಯ್ಯ ಮ್ಯೂಸಿಯಂ ಇಲ್ಲಿನ ಸೇನಾ ಪರಂಪರೆ ಹಾಗೂ ಸಂಸ್ಕೃತಿಯನ್ನು ಸಾರಲಿದೆ.ಯೋಧರ ನಾಡಿಗೆ ಇದು ಮತ್ತೂಂದು ಕಿರೀಟವಾಗಲಿದ್ದು, ಫೆ. 6ರಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಈ ಭವ್ಯ ಸೇನಾ ಸಂಗ್ರಹಾಲಯವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

Advertisement

ಕೊಡಂದೇರ ಸುಬ್ಬಯ್ಯ ತಿಮ್ಮಯ್ಯನವರು 1906ರ ಮಾರ್ಚ್‌ 30ರಂದು ಕೊಡಗಿನ ಮಡಿಕೇರಿಯಲ್ಲಿ ಜನಿಸಿದರು. ಅವರ ತಂದೆ ಸುಬ್ಬಯ್ಯ, ತಾಯಿ ಸೀತಮ್ಮ. ಅವರ ನಾಮಕರಣದ ಮುಹೂರ್ತದಲ್ಲಿಟ್ಟ ಹೆಸರು ತಿಮ್ಮಯ್ಯ. ಆದರೆ ಶಾಲೆಯಲ್ಲಿ ಅವರ ಪೂರ್ಣ ಹೆಸರು ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಎಂದಾದ್ದರಿಂದ ಕೆ.ಎಸ್‌. ತಿಮ್ಮಯ್ಯ ಎಂದೇ ಪ್ರಸಿದ್ಧರಾದರು. ಕೊಡಂದೇರ ಎನ್ನುವುದು ಅವರ ಮನೆತನದ ಹೆಸರು. 1926ರಲ್ಲಿ ಬ್ರಿಟಿಷ್‌ ಇಂಡಿಯನ್‌ ಆರ್ಮಿಯಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಭಾರತದ ವಿಭಜನೆಯ ಸಂದರ್ಭ ಪಾಕಿಸ್ಥಾನದೊಂದಿಗೆ ಸೈನ್ಯದ ಮತ್ತು ಆಯುಧಗಳ ವಿಲೇವಾರಿಯನ್ನು ಕುರಿತು ರಚಿಸಿದ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಬಳಿಕ 1947ರ ಸೆಪ್ಟಂಬರ್‌ ನಲ್ಲಿ ಅವರಿಗೆ ಮೇಜರ್‌-ಜನರಲ್‌ ಆಗಿ ಭಡ್ತಿ ನೀಡ ಲಾಯಿತು.1957ರ ಮೇ 7ರಂದು ತಿಮ್ಮಯ್ಯ ಅವರು ಭಾರತೀಯ ಭೂಸೈನ್ಯದ 6ನೇ ಮುಖ್ಯಸ್ಥರಾಗಿ ಅಧಿಕಾರವನ್ನು ವಹಿಸಿಕೊಂಡರು. 1961ರ ಮೇ 7ರಂದು ತಿಮ್ಮಯ್ಯನವರು ನಿವೃತ್ತರಾದರು. 1965ರ ಡಿ. 17ರಂದು ನಿಧನ ಹೊಂದಿದರು.

ಎಲ್ಲಿದೆ ಈ ಕೇಂದ್ರ?
ದಿ| ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರ ಮನೆ “ಸನ್ನಿಸೈಡ್‌’ ಈಗ ಭಾರತೀಯ ಸೇನೆಯ ಶಕ್ತಿ, ಶೌರ್ಯ, ತ್ಯಾಗ ಎಲ್ಲವನ್ನೂ ಸಾರುವ ಸಂಗ್ರ ಹಾಲಯವಾಗಿ ಅಭಿವೃದ್ಧಿಗೊಂಡಿದೆ. ದೇಶದಲ್ಲಿ ಮಾತ್ರವಲ್ಲದೆ ವಿವಿಧ ದೇಶಗಳ ವಿರುದ್ಧ ನಡೆಸಿದ ಯುದ್ಧಗಳಲ್ಲಿ ಬಳಕೆಯಾದ ವಿವಿಧ ಗನ್‌ಗಳು, ಯುದ್ಧ ಡೈರಿಗಳು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿ ರುವ ಈ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿವೆ. ಮಡಿಕೇರಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಈ “ಸನ್ನಿಸೈಡ್‌’ ಇದೆ. ಈ ಸ್ಥಳದ ಮಹಾದ್ವಾರವನ್ನು ಪ್ರವೇಶಿಸುತ್ತಿದ್ದಂತೆ ಬಲ ಬದಿಗೆ ಕಾಣುವ ಯೋಧರ ಸ್ಮಾರಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಏನಿದು ಸನ್ನಿಸೈಡ್‌
ಫೀಲ್ಡ್ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್‌ ಕೆ.ಎಸ್‌.ತಿಮ್ಮಯ್ಯ ಫೋರಂ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಡಗಿನ ಜನಪ್ರತಿನಿಧಿಗಳ ಸತತ ಪ್ರಯತ್ನ ದಿಂದ ತಿಮ್ಮಯ್ಯ ಅವರು ಆಟವಾಡಿ ಬೆಳೆದಿದ್ದ “ಸನ್ನಿಸೈಡ್‌’ ನಿವಾಸವನ್ನೇ ಸ್ಮಾರಕವಾಗಿ ಅಭಿವೃದ್ಧಿಪಡಿಸಲಾಗಿದೆ. 2006ರಲ್ಲಿ ರಾಜ್ಯ ಸರಕಾರವು ಅವರ ನಿವಾಸವನ್ನು ಮ್ಯೂಸಿಯಂ ಆಗಿ ಅಭಿವೃದ್ಧಿ ಪಡಿಸುವ ಘೋಷಣೆ ಮಾಡಿತ್ತು. ಅನುದಾನದ ಕೊರತೆ ಹಾಗೂ “ಸನ್ನಿಸೈಡ್‌’ ಸುತ್ತಲಿನ ಜಾಗ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧೀನದಲ್ಲಿದ್ದ ಕಾರಣ ಸ್ವಾಧೀನ ಪಡಿಸಿಕೊಳ್ಳುವುದು ವಿಳಂಬವಾಗಿ ಮ್ಯೂಸಿಯಂ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿತ್ತು. ಬಳಿಕ ಅದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಪರ್ದಿಗೆ ತೆಗೆದುಕೊಂಡು ಅಭಿವೃದ್ಧಿಪಡಿಸಲಾಗಿದೆ. ಹೀಗೆ ಸರಕಾರದ ಘೋಷಣೆ ಈಡೇರಲು 15 ವರ್ಷಗಳಷ್ಟು ಸುದೀರ್ಘ‌ ಸಮಯ ತಗಲಿತು.

ಈ ಮ್ಯೂಸಿಯಂನಲ್ಲಿ ಏನೇನಿರಲಿವೆ?
ಹುತಾತ್ಮ ಯೋಧರನ್ನು ಗೌರವಿಸಿ, ಸ್ಮರಿಸುವ ಸಲುವಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಜನರಲ್‌ ಕೆ.ಎಸ್‌ ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಮನೆ ಎಲ್ಲರನ್ನು ಸೆಳೆಯುತ್ತದೆ. ಸನ್ನಿ ಸೈಡ್‌ ಪ್ರವೇಶಿಸುತ್ತಿದ್ದಂತೆ ಪ್ರತಿಮೆಯೊಂದಕ್ಕೆ ತೊಡಿಸಿರುವ ಜ| ತಿಮ್ಮಯ್ಯ ಅವರು ಧರಿಸುತ್ತಿದ್ದ ಸೇನಾ ಸಮವಸ್ತ್ರ ಗಮನ ಸೆಳೆಯುತ್ತದೆ. ಯುದ್ಧ ಟ್ಯಾಂಕರ್‌, ಸುಖೋಯ್‌ ಯುದ್ಧ ವಿಮಾನಗಳು, ದೇಶದ ಸೇನಾ ಸಂಪತ್ತನ್ನು ಎಳೆಎಳೆೆಯಾಗಿ ತೆರೆದಿಡುತ್ತವೆ. ತಿಮ್ಮಯ್ಯ ಅವರು ಸೇನಾಧಿಕಾರಿಯಾಗಿ ಗೈದ ಸಾಧನೆಯನ್ನು 2 ಪ್ರತ್ಯೇಕ ಕೋಣೆಗಳಲ್ಲಿ ಅನಾವರಣ ಮಾಡಲಾಗಿದೆ. ತಿಮ್ಮಯ್ಯ ಬದುಕಿನ ಕುರಿತಾದ ಸಾಕ್ಷ್ಯಚಿತ್ರವು ಹಳೆಯ ನೆನಪುಗಳನ್ನು ಮತ್ತೆ ಕಟ್ಟಿಕೊಡುತ್ತದೆ.

Advertisement

ಮ್ಯೂಸಿಯಂ ಪ್ರವೇಶಿಸುತ್ತಿದ್ದಂತೆಯೇ ಟಿ. 50 ಯುದ್ಧ ಟ್ಯಾಂಕರ್‌, ಯುದ್ಧ ವಿಮಾನ ಹಾಗೂ ಸ್ಮಾರಕ ಗಮನ ಸೆಳೆಯುತ್ತದೆ. ಮಹಾರಾಷ್ಟ್ರದ ಪುಣೆಯ ಖಡ್ಕಿಯಲ್ಲಿ ರುವ ಕೀರ್ಕಿ ಸೇನಾ ಕೇಂದ್ರದಿಂದ “ಸನ್ನಿಸೈಡ್‌’ಗೆ ಎರಡು ವರ್ಷಗಳ ಹಿಂದೆಯೇ ರಸ್ತೆಯ ಮೂಲಕ ಈ ಟ್ಯಾಂಕರ್‌ ಅನ್ನು ತರಲಾಗಿತ್ತು. 1971ರಲ್ಲಿ ಭಾರತ -ಪಾಕಿಸ್ಥಾನ ನಡುವಣ ಯುದ್ಧದ ಸಂದರ್ಭ “ಹಿಮ್ಮತ್‌’ ಹೆಸರಿನಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಈ ಟ್ಯಾಂಕರ್‌ ಅನ್ನು ಬಳಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಆವರಣದಲ್ಲಿ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಮತ್ತು ಜನರಲ್‌ ತಿಮ್ಮಯ್ಯ ಅವರ ಪ್ರತಿಮೆಗಳನ್ನು ಅನಾವರ ಣಗೊಳಿಸಲು ಅಂದಿನ ಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಕೊಡಗಿಗೆ ಭೇಟಿ ನೀಡಿದಾಗ, ಇವುಗಳನ್ನು ಕಳುಹಿಸು ವುದಾಗಿ ಭರವಸೆ ನೀಡಿದ್ದರು. ಜತೆಗೆ “ಮಿಗ್‌ 21′ ಯುದ್ಧ ವಿಮಾನ ಇಲ್ಲಿನ ಮತ್ತೂಂದು ಆಕರ್ಷಣೆ. ಇದು 1971ರ ಭಾರತ- ಪಾಕಿಸ್ಥಾನದ ಯುದ್ಧ ದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದು ಸೂಪರ್‌ಸಾನಿಕ್‌ ಜೆಟ್‌ ಫೈಟರ್‌ ಮತ್ತು ಇಂಟರ್‌ಸೆಪ್ಟರ್‌ ವಿಮಾನವಾಗಿದೆ. 15 ವರ್ಷಗಳಿಂದ ಈ ವಿಮಾನವನ್ನು ಬಳಸಲಾಗುತ್ತಿಲ್ಲ. ಇದೀಗ ವಿಮಾನವನ್ನು ಪ್ರದರ್ಶನಕ್ಕಿಡಲಾಗಿದೆ.

ಸೈನ್ಯದಲ್ಲಿ ಬಳಸುವ ವಸ್ತುಗಳು
ಭಾರತೀಯ ಸೈನಿಕರ ಶೌರ್ಯವನ್ನು ಒಳಗೊಂಡ ಕಲಾಕೃತಿಗಳು ಮ್ಯೂಸಿಯಂನ ಸಂಗ್ರಹದಲ್ಲಿ ಸೇರಿವೆ. ತಿಮ್ಮಯ್ಯ ಅವರ ಬಾಲ್ಯದ ಚಿತ್ರಗಳು, ಕಲಾಕೃತಿ ಗಮನ ಸೆಳೆಯುತ್ತವೆ. ಜನರಲ್‌ ತಿಮ್ಮಯ್ಯ ಅವರು ಬಳಸಿದ ಲೇಖನಿಗಳು, ಮಿಲಿಟರಿ ಸಮವಸ್ತ್ರಗಳು, ಪುಸ್ತಕಗಳನ್ನು ಪ್ರದರ್ಶನಕ್ಕಿರಿಸಲಾಗಿದೆ. ಸೈನಿಕರು ಬಳಸುವ 24ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು, 50ರಿಂದ 60 ವರ್ಷಗಳ ಇತಿಹಾಸ ಇರುವ ಲೈಟ್‌ ಮೆಷಿನ್‌ ಗನ್‌, ಮಧ್ಯಮ ಮೆಷಿನ್‌ ಗನ್‌ ಮತ್ತು ಸೆಲ್ಫ್ ಲೋಡಿಂಗ್‌ ರೈಫ‌ಲ್ಸ್‌, 7.62, .38 ರೈಫ‌ಲ್‌ ಮತ್ತು 303 ಬೋರ್ಡ್‌ ರೈಫ‌ಲ್‌ಗ‌ಳು, ರಾಕೆಟ್‌ ಲಾಂಚರ್‌ಗಳು, 32 ಎಂಎಂ ರೈಫ‌ಲ್‌ ಮತ್ತು 38 ಎಂಎಂ ರೈಫ‌ಲ್‌ಗ‌ಳು ಸಹಿತ ಹತ್ತು ಹಲವು ವಸ್ತುಗಳು ಸಂಗ್ರಹಾಲಯದಲ್ಲಿ ಸ್ಥಾನ ಪಡೆದಿವೆ. ಅಲ್ಲದೆ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಕುರಿತಾದ ಮಾಹಿತಿಗಳೂ ಇಲ್ಲಿವೆ.

ಪೂರಕ ಮಾಹಿತಿ: ಎಲ್‌.ಕೆ. ಲಕ್ಷ್ಮೀಶ್‌

Advertisement

Udayavani is now on Telegram. Click here to join our channel and stay updated with the latest news.

Next