Advertisement

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

10:24 AM Apr 25, 2024 | Team Udayavani |

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿಗಿಂತಲೂ ಅಕ್ರಮ ಮರಳುಗಾರಿಕೆಗೆ ಹೆಚ್ಚು ಒತ್ತು ಕೊಟ್ಟಿದ್ಧಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ ದೂರಿದರು.

Advertisement

ಬುಧವಾರ ಹರಿಹರ ತಾಲೂಕಿನ ಸಾರಥಿ, ಚಿಕ್ಕಬಿದರಿ, ಪಾಮೇನಹಳ್ಳಿ, ದೀಟೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಅವರು, ಹರಿಹರ ತಾಲೂಕಿನಲ್ಲಿ ಸಚಿವರ ಅಕ್ರಮ ಮರಗಳುಗಾರಿಕೆ ಬಗ್ಗೆ ಶಾಸಕರಾದ ಬಿ.ಪಿ. ಹರೀಶ್‌ ಅವರು ಧ್ವನಿ ಎತ್ತಿದ್ದಾರೆ. ಇದಕ್ಕಾಗಿ ಸಚಿವರ ಹಿಂಬಾಲಕರು ಶಾಸಕರಿಗೇ ಜೀವ ಬೆದರಿಕೆ ಹಾಕಿದ್ದಾರೆ ಎಂದರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನು ನೀವೇ ಯೋಚನೆ ಮಾಡಿ. ಇಂತಹವರಿಗೆ ಅಧಿಕಾರ ಕೊಟ್ಟರೆ ನಮ್ಮ-ನಿಮ್ಮ ಬದುಕು ದುಸ್ಥರವಾಗತ್ತೆ. ಅಭಿವೃದ್ಧಿಯೋ, ಅಕ್ರಮವೋ ಎಂಬುದನ್ನು ಜನರೇ ಯೋಚಿಸಬೇಕು. ಈಗ ಚುನಾವಣೆ ಬಂದಿದ್ದು ಜಿಲ್ಲಾ ಉಸ್ತುವಾರಿ ಸಚಿವರು, ಅವರ ಪತ್ನಿ ಇಬ್ಬರೂ ಈಗ ಅಭಿವೃದ್ಧಿ ಜಪ ಮಾಡುತ್ತಿದ್ದಾರೆ. ಅಂತಹವರಿಗೆ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.

ಮಾಜಿ ಶಾಸಕರಾದ ಎಚ್‌.ಎಸ್‌.ಶಿವಶಂಕರ್‌ ಮತ್ತು ಹಾಲಿ ಶಾಸಕ ಬಿ.ಪಿ.ಹರೀಶ್‌ ಹರಿಹರ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ಧಾರೆ. ಸಂಸದ ಜಿ.ಎಂ. ಸಿದ್ದೇಶ್ವರ್‌ ಇಚ್ಛಾಶಕ್ತಿಯಿಂದ ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆಯಡಿ ಹರಿಹರದಲ್ಲಿ 25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನೂತನ ರೈಲ್ವೆ ನಿಲ್ದಾಣ, ಫ್ಲಾಟ್‌ ಫಾರ್ಮ್ ವಿಸ್ತರಣೆ ನಡೆಯುತ್ತಿದೆ. ಅಮರಾವತಿ ಬಳಿ 28 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಚಿಕ್ಕಜಾಜೂರಿನಿಂದ ಹರಿಹರದವರೆಗೂ 84 ಕೋಟಿ ವೆಚ್ಚದಲ್ಲಿ ರೈಲ್ವೆ ಲೈನ್‌ ವಿದ್ಯುದೀಕರಣ ಮಾಡಲಾಗಿದೆ. ತಾಕತ್ತಿದ್ದರೆ ಹರಿಹರ ತಾಲೂಕಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕೊಡುಗೆ ಏನು ತಿಳಿಸಲಿ ಎಂದು ಸವಾಲು ಹಾಕಿದರು.

ದೇಶದ ಜನ ಮೂರನೇ ಬಾರಿಗೂ ಮೋದಿ ಅವರೇ ಪ್ರಧಾನಿ ಆಗಬೇಕು ಎಂದು ಬಯಸಿದ್ದಾರೆ. ಲೋಕಸಭಾ ಕ್ಷೇತ್ರದ ಜನ ಕೂಡ ಗಾಯಿತ್ರಿ ಸಿದ್ದೇಶ್ವರ್‌ ಸಂಸದರಾದರೆ ಜಿಲ್ಲೆ ಅಭಿವೃದ್ಧಿ ಆಗುತ್ತದೆ ಎಂದು ನಂಬಿದ್ದಾರೆ. ನೀವು ನನಗೆ ಮತ ಹಾಕಿದರೆ ಅದು ನೇರವಾಗಿ ನರೇಂದ್ರ ಮೋದಿ ಅವರಿಗೆ ಹಾಕಿದಂತೆ. ಮೋದಿ ಅವರು ಮತ್ತೆ ಪ್ರಧಾನಿ ಆಗುವುದು ಶತಸಿದ್ಧ. ದಾವಣಗೆರೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಸಾ ಧಿಸಿದರೆ ಕೇಂದ್ರದಿಂದ ಮತ್ತಷ್ಟು ಯೋಜನೆಗಳನ್ನು ಹರಿಹರಕ್ಕೆ ತರಬಹದು. ಪ್ರತಿಯೊಬ್ಬರೂ ಇನ್ನೂ 12 ದಿನ ವಿರಮಿಸದೆ ಕೆಲಸ
ಮಾಡಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮಾತನಾಡಿ, ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಬೇಕು. ದಾವಣಗೆರೆಯಲ್ಲಿ ಗಾಯಿತ್ರಿ ಸಿದ್ದೇಶ್ವರ್‌ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವರು. ಹರಿಹರ ದಲ್ಲಿ ಅತಿ ಹೆಚ್ಚು ಲೀಡ್‌ ಕೊಡುವ ಮೂಲಕ ಜೆಡಿಎಸ್‌ ಕಾರ್ಯಕರ್ತರು ಎಚ್‌.ಶಿವಪ್ಪ ಅವರ ಶಕ್ತಿ ಏನು ಎಂದು ಕಾಂಗ್ರೆಸ್‌ನವರಿಗೆ ತೋರಿಸಬೇಕು ಎಂದರು.

Advertisement

ಶಾಸಕ ಬಿ.ಪಿ.ಹರೀಶ್‌ ಮಾತನಾಡಿ, ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹರಿಹರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ದಾವಣಗೆರೆಯಿಂದ ಕೂಗಳತೆ ದೂರದಲ್ಲಿರುವ ಹರಿಹರಕ್ಕೆ ವರ್ಷದಲ್ಲಿ ಎಷ್ಟು ಬಾರಿ ಭೇಟಿ ಕೊಟ್ಟಿದ್ದಾರೆ. ಅವರ ಹಿಂಬಾಲಕರನ್ನು ಬಿಟ್ಟು ಅಕ್ರಮ ಮರಳುಗಾರಿಕೆ ಮಾಡಿರುವುದು ಬಿಟ್ಟರೆ ಹರಿಹರಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಗೂಂಡಾ ವರ್ತನೆ ಬಗ್ಗೆ ಮಾಹಿತಿ ನೀಡಿ, ನಮ್ಮ ಅಭಿವೃದ್ಧಿ ಕೆಲಸಗಳ ವಿವರ ನೀಡಿ ಗಾಯಿತ್ರಿ ಪರ ಮತಯಾಚಿಸಬೇಕು ಎಂದು ಮನವಿ ಮಾಡಿದರು.

ಎಥೆನಾಲ್‌ ಘಟಕ ನಿರ್ಮಾಣಕ್ಕೆ ಕ್ರಮ
ಕರ್ನಾಟಕ ನೀರಾವರಿ ನಿಗಮ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರ ಮಾಡಿಸಲಾಗುವುದು. ನೀರಾವರಿ ನಿಗಮ ದಾವಣಗೆರೆಗೆ ಬಂದರೆ ಕಾಡಾ ಸಭೆಗಳನ್ನು ನಡೆಸಬಹುದು. ಕೊನೆ ಭಾಗದ ಗ್ರಾಮಗಳಿಗೆ ಭದ್ರಾ ನಾಲೆ ನೀರು ಸಮರ್ಪಕವಾಗಿ ಹರಿಸಲು ಸಾಧ್ಯವಾಗುತ್ತದೆ. ಹರಿಹರ ತಾಲೂಕಿನ ಹನಗವಾಡಿ ಬಳಿ 60 ಕೆಎಲ್ಪಿಡಿ ಸಾಮರ್ಥಯದ 960 ಕೋಟಿ ವೆಚ್ಚದ 2 ಜಿ ಎಥೆನಾಲ್‌ ಘಟಕವನ್ನು ಎಂ.ಆರ್‌.ಪಿ.ಎಲ್‌ ಅವರು ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದಾರೆ. ಮೊದಲ ಆದ್ಯತೆ ಮೇರೆಗೆ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ಗಾಯಿತ್ರಿ ಸಿದ್ದೇಶ್ವರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next