Advertisement

ಗೌರಿ ಹೊಳೆ ಸೇತುವೆ: ಕಬ್ಬಿಣದ ತಡೆ ಬೇಲಿ ನಿರ್ಮಾಣ

09:15 PM Jun 10, 2019 | mahesh |

ಸವಣೂರು: ಪುತ್ತೂರು-ದರ್ಬೆ-ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಕಾಣಿಯೂರು, ಸವಣೂರು ಭಾಗದ ಜನತೆಯನ್ನು ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಸರ್ವೆಯಲ್ಲಿ ಗೌರಿ ಹೊಳೆಗೆ ನಿರ್ಮಿಸಲಾದ ಮುಳುಗು ಸೇತುವೆಗೆ ಕೊನೆಗೂ ಲೋಕೋಪಯೋಗಿ ಇಲಾಖೆಯಿಂದ ತಡೆ ಬೇಲಿ ನಿರ್ಮಾಣವಾಗಿದೆ.

Advertisement

ಈ ಸೇತುವೆಯಲ್ಲಿ ತಡೆಬೇಲಿ ಇಲ್ಲದೆ ಅಪಾಯಕಾರಿ ಸ್ಥಿತಿ ಇರುವ ಕುರಿತು “ಉದಯವಾಣಿ’ ಸುದಿನ ಹಲವು ಬಾರಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಮೂರು ಗ್ರಾ.ಪಂ. ವ್ಯಾಪ್ತಿಗೆ ಈ ಸೇತುವೆ ಸವಣೂರು – ಪುತ್ತೂರು ಮಾರ್ಗವಾಗಿ ಸಂಪರ್ಕ ದೃಷ್ಟಿಯಲ್ಲಿರುವ ಏಕೈಕ ದಾರಿ. ಈ ಸೇತುವೆಯು ಸವಣೂರು, ಮುಂಡೂರು ಹಾಗೂ ನರಿಮೊಗರು ಈ ಮೂರು ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ.

ತಡೆಬೇಲಿ ನಿರ್ಮಾಣ
ಮುಳುಗು ಸೇತುವೆಯಾಗಿರುವ ಕಾರಣದಿಂದ ಎರಡು ಬದಿಯಲ್ಲಿ ತಡೆಬೇಲಿ ರಚಿಸದೆ, ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇತ್ತು. ಇದು ವಾಹನ ಸವಾರರಿಗೆ ಅಪಾಯಕಾರಿಯಾಗಿತ್ತು. ಕಳೆದ ಬಾರಿಯ ಮಳೆಗಾಲದಲ್ಲಿ ಈ ಸೇತುವೆಯ ಮಟ್ಟದಲ್ಲಿ ನೀರು ಹರಿಯುತ್ತಿತ್ತು. ಈ ಬಾರಿ ಲೋಕೋಪಯೋಗಿ ಇಲಾಖೆ ಮಳೆಗಾಲಕ್ಕೂ ಮುನ್ನ ತಡೆಬೇಲಿ ನಿರ್ಮಿಸುವ ಮೂಲಕ ಅಪಾಯವನ್ನು ದೂರ ಮಾಡಿದೆ.

ಮೇಲ್ದರ್ಜೆ ಇನ್ನೂ ದೂರ?
ಈ ಸೇತುವೆಯ ಮೇಲೆ ದಿನೇ ದಿನೇ ವಾಹನ ದಟ್ಟಣೆ ಅಧಿಕವಾಗುತ್ತಿದೆ. ಪ್ರಮುಖ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯ ಸಹಿತ ಕಾಣಿಯೂರು, ಪಂಜ ಹಾಗೂ ಇತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪುತ್ತೂರು -ಸವಣೂರು -ಕಾಣಿಯೂರು ರಸ್ತೆಯ ಸರ್ವೆಯಲ್ಲಿನ ಮುಳುಗು ಸೇತುವೆಯನ್ನು ಮೇಲ್ಮಟ್ಟದ ಸೇತುವೆಯಾಗಿ ಪರಿವರ್ತಿಸುವ ಕಾರ್ಯ ನಡೆದಿಲ್ಲ.

ಇಲಾಖೆಯಿಂದ ಪ್ರಸ್ತಾವನೆ
1963ರಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ನಿರ್ಮಾಣಗೊಂಡ ಈ ಸೇತುವೆಯನ್ನು ಮೇಲ್ಸೇತುವೆಯಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅನುದಾನ ಬಿಡುಗಡೆಯಾಗಿಲ್ಲ. ಲೋಕೋಪಯೋಗಿ ಇಲಾಖೆಯ ಪ್ರಕಾರ ಸೇತುವೆ ಬಳಕೆಗೆ ಯೋಗ್ಯ ಸ್ಥಿತಿಯಲ್ಲಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದ ಅನುದಾನ ಬಿಡುಗಡೆಯಾದ ಬಳಿಕ ಮೇಲು ಸೇತುವೆಯ ಕನಸು ನನಸಾಗಲಿದೆ. ತಿರುವು ಪ್ರದೇಶಗಳ ಸುರಕ್ಷತೆಯ ದೃಷ್ಟಿಗೆ ಮೇಲು ಸೇತುವೆ ಅನುಕೂಲ ಎನ್ನುವ ಲೆಕ್ಕಾಚಾರ. ಅನುದಾನ ಬಿಡುಗಡೆಗೆ ಜನಪ್ರತಿನಿಧಿಗಳು ಫಾಲೋಅಪ್‌ ಮಾಡಬೇಕಿದೆ.

Advertisement

 ನಿರ್ವಹಣ ವೆಚ್ಚದಲ್ಲಿ ತಡೆಬೇಲಿ
ಲೋಕೋಪಯೋಗಿ ಇಲಾಖೆಯ ನಿರ್ವಹಣ ಅನುದಾನದಲ್ಲಿ ದರ್ಬೆ-ಕಾಣಿಯೂರು ಹೆದ್ದಾರಿಯ ಬೆದ್ರಾಳದ ಸೇತುವೆಯ ಅಭಿವೃದ್ಧಿ ಹಾಗೂ ಸರ್ವೆ ಸೇತುವೆಗೆ ತಡೆಬೇಲಿ ಸಹಿತ ಇತರ ಅಗತ್ಯ ಕೆಲಸಗಳನ್ನು ಮಳೆಗಾಲಕ್ಕೂ ಮುಂಚೆ ಮಾಡಲಾಗುತ್ತಿದೆ.
– ಬಿ. ರಾಜರಾಮ್‌, ಎಇ, ಪಿಡಬ್ಲೂ ಡಿ, ಪುತ್ತೂರು

 ಅಪಾಯ ದೂರ
ಸರ್ವೆ ಸೇತುವೆಗೆ ತಡೆಬೇಲಿ ನಿರ್ಮಿಸುವ ಮೂಲಕ ಲೋಕೋಪಯೋಗಿ ಇಲಾಖೆ ಅಪಾಯವನ್ನು ದೂರ ಮಾಡಿದೆ. ಮಳೆಗಾಲದಲ್ಲಿ ಇಲ್ಲಿ ಸಂಚರಿಸುವಾಗ ಭಯದ ವಾತಾವರಣ ಇತ್ತು.
– ಸುರೇಶ್‌ ಗೌಡ ಸರ್ವೆ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next