Advertisement

ಸೋಂಕಿತರು 7 ದಿನ ಪೂರೈಸಿದರೆ ಮುಕ್ತ : ನೆಗೆಟಿವ್‌ ವರದಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ

02:43 PM Jan 13, 2022 | Team Udayavani |

ಬೆಂಗಳೂರು: ನಗರದಲ್ಲಿ ಸೋಂಕಿತರು ಏಳು ದಿನ ಪೂರೈಸಿದರೆ, ಅಟೋಮೆಟಿಕ್‌ ಆಗಿ ಎಂಟನೇ ದಿನ ಅವರು ಸೋಂಕಿನಿಂದ ಮುಕ್ತ ಆಗಲಿದ್ದಾರೆ! ಸೋಂಕು ಕಾಣಿಸಿಕೊಂಡ ವ್ಯಕ್ತಿಯು ಈಗ ಏಳು ದಿನ ಕ್ವಾರಂಟೈನ್‌ ಅವಧಿ ಪೂರೈಸಿದ ನಂತರ ಮತ್ತೆ ಪರೀಕ್ಷೆಗೊಳಪಟ್ಟು ನೆಗೆಟಿವ್‌ ವರದಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಆ ವ್ಯಕ್ತಿಯನ್ನು ಎಂಟನೇ ದಿನದಿಂದ “ಗುಣಮುಖ’ ಎಂದೇ ಪರಿಗಣಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

Advertisement

ಸರ್ಕಾರದ ಸೂಚನೆ ಅನ್ವಯ ಸೋಂಕಿತ ವ್ಯಕ್ತಿಗೆ ಪ್ರಸ್ತುತ ಏಳು ದಿನ ಮಾತ್ರ ಕ್ವಾರಂಟೈನ್‌ ಅವಧಿಯಾಗಿದೆ. ಹೀಗಾಗಿ, ಮನೆ ಐಸೋಲೇಷನ್‌, ಹೋಟೆಲ್‌ ಕ್ವಾರಂಟೈನ್‌, ಸ್ಟೆಪ್‌ ಡೌನ್‌ ಆಸ್ಪತ್ರೆ ಆರೈಕೆ ಅಥವಾ ಪಾಲಿಕೆಯ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಏಳು ದಿನ ಪ್ರತ್ಯೇಕವಾಗಿರಬೇಕು. ಈ ಅವಧಿ ಪೂರ್ಣ ಗೊಂಡ ನಂತರ ಅವರನ್ನು ಸೋಂಕಿನಿಂದ ಗುಣಮುಖರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಆ ವ್ಯಕ್ತಿಯು ಎಂದಿನ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಕಳೆದ 15 ದಿನಗಳ ಹಿಂದೆ ಕೇವಲ 200 ಇದ್ದ ಪ್ರಕರಣ, 15 ಸಾವಿರಕ್ಕೆ ತಲುಪಿದೆ. ಇದರಲ್ಲಿ ಮಕ್ಕಳ ಸೋಂಕಿತರ ಪ್ರಮಾಣ ಶೇ.12ಕ್ಕಿಂತ ಕಡಿಮೆಯಿದೆ. ಮುಂದಿನ 20 ದಿನಗಳಲ್ಲಿ ಸೋಂಕು ಉತ್ತುಂಗ ಸ್ಥಿತಿ ತಲುಪುವ ಸಾಧ್ಯತೆ ಇದೆ ಎಂದು ಗೌರವ್‌ ಗುಪ್ತ ತಿಳಿಸಿದರು. ಇದಕ್ಕೆ ಪೂರಕವಾಗಿ ಎಲ್ಲ ಪೂರ್ವಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಕೊರೊನಾ ಸೋಂಕು ನಿಯಂತ್ರಣ
ಮತ್ತು ನಿರ್ವಹಣೆಗೆ ಪಾಲಿಕೆ ಕೇಂದ್ರ ಕಚೇರಿ ಹಾಗೂ ಎಂಟೂ ವಲಯಗಳಲ್ಲಿ ವಾರ್‌ರೂಮ್‌ ತೆರೆಯಲಾಗಿದ್ದು, ಇವುಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ಜತೆಗೆ 27 ವಿಧಾನಸಭಾ ಕ್ಷೇತ್ರಗಳಲ್ಲೂ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ನಿತ್ಯ ಪಾಸಿಟಿವ್‌ ಪ್ರಕರಣಗಳ ಬಗ್ಗೆ 198 ವಾರ್ಡ್‌ಗಳು ಮತ್ತು 27 ಕ್ಷೇತ್ರಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದಕ್ಕಾಗಿ 35 ಮಂದಿ ಅಧಿಕಾರಿಗಳ ತಂಡ ರಚಿಸಲಾಗಿದೆ. ನಗರದಲ್ಲಿ ಪಾಲಿಕೆ ಮತ್ತು ಖಾಸಗಿ ಪ್ರಯೋಗಾಲಯ ಸೇರಿ ಒಟ್ಟು ಒಂದು ಲಕ್ಷಕ್ಕಿಂತ ಅಧಿಕ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಇದನ್ನೂ ಓದಿ : 3 ನೇ ಅಲೆ ಎರಡೇ ದಿನಕ್ಕೆ ಡಬಲ್ ಆಗುತ್ತಿದೆ : ಡಾ. ಸುಧಾಕರ್ ಎಚ್ಚರಿಕೆ

6,255 ಹಾಸಿಗೆ ಸಿದ್ಧ: ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರಿ ಕೋಟಾದಡಿ ಕೋವಿಡ್‌ ಹಾಸ್ಪಿಟಲ್‌ ಬೆಡ್‌ ಮ್ಯಾನೇಜ್‌ ಮೆಂಟ್‌ ಸಿಸ್ಟ್‌ಂ (ಸಿಎಚ್‌ಬಿಎಂಎಸ್‌) ಪೋರ್ಟಲ್‌ ಅಡಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಈವರೆಗೆ 6,255 ಹಾಸಿಗೆ ಸಿದ್ಧಪಡಿಸಲಾಗಿದೆ. ಈ ಪೈಕಿ 362 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಜತೆಗೆ ಸರ್ಕಾರವು ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ನೀಡಲು ಪರಿಷ್ಕೃತ ದರ
ನಿಗದಿಪಡಿಸಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ 838 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಸಕ್ರಿಯ ಪ್ರಕರಣಗಳ ಸಂಖ್ಯೆ 60 ಸಾವಿರ ಗಡಿ ದಾಟಿದ್ದರೂ, 1,200 ಮಂದಿ (ಶೇ. 1ಕ್ಕಿಂತ ಕಡಿಮೆ) ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂದಿನ ನಾಲ್ಕೈದು ದಿನಗಳಲ್ಲಿ ಕೋವಿಡ್‌ ಹಾಸಿಗೆ ಸಾಮರ್ಥ್ಯ ಹೆಚ್ಚಳ ಮಾಡಲಾಗುವುದು. ಅಲ್ಲದೆ, ಜ. 14ರ ಒಳಗೆ ವಿಧಾನಸಭಾ ಕ್ಷೇತ್ರಕ್ಕೊಂದರಂತೆ 3 ಸಾವಿರ ಹಾಸಿಗೆ ಸಾಮರ್ಥ್ಯದ 27 ಕೋವಿಡ್‌ ಆರೈಕೆ ಕೇಂದ್ರ ಸ್ಥಾಪಿಸಲಾಗುವುದು
ಎಂದು ತಿಳಿಸಿದರು.

ಬೆಡ್‌ ಬ್ಲಾಕಿಂಗ್‌ನಲ್ಲಿ ಯಾರದ್ದೂ ಕೈವಾಡ ಇಲ್ಲ
ನಗರಾದ್ಯಂತ ಕಾರ್ಯನಿರ್ವಹಿಸುತ್ತಿರುವ ಟ್ರಯಾಜಿಂಗ್‌ ತಂಡಗಳು ಶೇ. 40ರಷ್ಟು ರೋಗಿಗಳನ್ನು ಭೌತಿಕವಾಗಿ ತಪಾಸಣೆ ಮಾಡಲಿವೆ. ವೃದ್ಧರು, ದೀರ್ಘ‌ಕಾಲಿಕ ರೋಗದಿಂದ ಬಳಲುವವರು ಹಾಗೂ ಆರೋಗ್ಯದಲ್ಲಿ ಸಮಸ್ಯೆ ಇರುವವರು ಸೇರಿ ಶೇ. 40 ಮಂದಿಯನ್ನು ಭೌತಿಕವಾಗಿ ಪಾಲಿಕೆ ಆರೋಗ್ಯ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ನಂತರ, ಆಯಾ ವಿಧಾನಸಭಾ ಕ್ಷೇತ್ರವಾರು ಸೋಂಕಿತರಿಗೆ ಆಸ್ಪತ್ರೆ ಚಿಕಿತ್ಸೆ ಅಗತ್ಯವಿದ್ದಲ್ಲಿ ಹಾಸಿಗೆ ಬ್ಲಾಕಿಂಗ್‌ ಮಾಡಲಾಗುತ್ತದೆ. ಬೆಡ್‌ ಬ್ಲಾಕಿಂಗ್‌ನಲ್ಲಿ ಯಾರದ್ದೇ ಕೈವಾಡ ಬಳಕೆ ಆಗದಂತೆ, ಕ್ಷೇತ್ರಕ್ಕೊಬ್ಬ ವ್ಯಕ್ತಿಗೆ ಮಾತ್ರ ಆ್ಯಕ್ಸೆಸ್‌
ನೀಡಲಾಗುತ್ತದೆ ಎಂದು ಗೌರವ್‌ಗುಪ್ತ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next