Advertisement

ಸಾರಸ್ವತ ಬ್ರಾಹ್ಮಣ ಸಮಾಜ ಒಗ್ಗಟ್ಟಿನಿಂದ ಬಲಿಷ್ಠವಾಗಲಿ

02:01 AM Nov 29, 2021 | Team Udayavani |

ಮಂಗಳೂರು: ಜಗತ್ತಿನಾದ್ಯಂತ ಇರುವ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರನ್ನು ಒಂದೇ ವೇದಿಕೆಯಡಿ ತಂದು ಒಗ್ಗೂಡಿಸುವ ಕೆಲಸ ಆರಂಭವಾಗಿದ್ದು, ಇದನ್ನು ಮುಂದುವರಿಸಲಾಗುವುದು. ಸಮಾಜದ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಇದು ಅಗತ್ಯ ಎಂದು ಕಾಶೀ ಮಠ ಸಂಸ್ಥಾನದ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಹೇಳಿದರು.

Advertisement

ನಗರದ ಕೊಂಚಾಡಿಯ ವನಿತಾ ಅಚ್ಯುತ್‌ ಪೈ ಸಭಾಂಗಣದಲ್ಲಿ ರವಿವಾರ ವಿಶ್ವ ಸಾರಸ್ವತ ಫೆಡರೇಶನ್‌ ವತಿಯಿಂದ ನಡೆದ ಜಾಗತಿಕ ಸಾರಸ್ವತ ಸಂಗಮ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.

ಸಾರಸ್ವತ ಸಮಾಜದಲ್ಲಿ ಬೇರೆ ಬೇರೆ ಸಂಸ್ಕೃತಿ ಮತ್ತು ಸಿದ್ಧಾಂತಕ್ಕೆ ಸೇರಿದ ಮಂದಿ ಇದ್ದರೂ, ಒಟ್ಟು ಸಮಾಜದ ಅಭಿವೃದ್ಧಿಯ ದೃಷ್ಟಿಯಲ್ಲಿ ಬಲಿಷ್ಟ ಸಮಾಜ ಕಟ್ಟಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾದ ಆವಶ್ಯಕತೆ ಇದೆ. ನಮ್ಮ ಉದ್ದೇಶ ಈಡೇರಲು ದೇವರ ಅನುಗ್ರಹವೂ ಬೇಕು. ಈ ದಿಶೆಯಲ್ಲಿ ತಾನು ಪ್ರಾರ್ಥನೆ ಸಲ್ಲಿಸು ತ್ತೇನೆ ಎಂದು ಸ್ವಾಮೀಜಿ ನುಡಿದರು.

ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸಾರಸ್ವತ ಬ್ರಾಹ್ಮಣ ಸಮಾಜದವರು ಇದ್ದಾರೆ. ದೇಶದ ಅತ್ಯಂತ ವಿಶಾಲವಾದ ಏಕೈಕ ಸಮಾಜವಿದ್ದರೆ ಅದು ಸಾರಸ್ವತ ಬಾಹ್ಮಣ ಸಮಾಜ ಎಂದರು.

ಸಾರಸ್ವತರು ಸರಸ್ವತಿ ಪುತ್ರರು. ಸರಸ್ವತಿ ನದಿ ಕಾಶ್ಮೀರದಲ್ಲಿ ಹುಟ್ಟುತ್ತದೆ. ಈ ನದಿಯ ಉಗಮ ಸ್ಥಾನ ಈಗ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದೆ. ಸರಕಾರ ದೃಢ ನಿರ್ಧಾರ ತಳೆದರೆ ಅದನ್ನು ಭಾರತದ ಒಳಗೆ ತರ ಬಹುದು ಎಂದು ಅಭಿಪ್ರಾಯಪಟ್ಟರು.

Advertisement

ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ತನ್ನ ಕಾಶ್ಮೀರ‌ ಭೇಟಿಯ ಅನುಭವ ವನ್ನು ವಿವರಿಸಿದ ಸ್ವಾಮೀಜಿ, ತಾನು ಅಲ್ಲಿ ಹಲವಾರು ದೇವಸ್ಥಾನಗಳನ್ನು ಸಂದರ್ಶಿಸಿದ್ದೇನೆ, ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರ ಜನರ ಜೀವನವನ್ನು ಕಂಡಿದ್ದೇನೆ. ಅಂತಹ ಪರಿಸ್ಥಿತಿ ಯಾರಿಗೂ ಬರಬಾರದು. ಅಲ್ಲಿನವರ ಸ್ಥಿತಿಯನ್ನು ನೋಡಿ ಅವರ ಕಷ್ಟ ನಿವಾರಣೆಗಾಗಿ ಏನಾದರೂ ಮಾಡಬೇಕೆಂದೆನಿಸಿತು ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್‌ ಸ್ವಾಗತಿಸಿ ದೇಶ ವಿದೇಶಗಳಲ್ಲಿ ಇರುವ ಸಾರಸ್ವತ ಸಮಾಜದವರನ್ನು ಒಂದೇ ವೇದಿಕೆಗೆ ಕರೆ ತಂದು ಸಮಾಜದ ಅಭಿವೃದ್ಧಿಗೆ ಸಂಘಟಿತವಾಗಿ ಕಾರ್ಯ ನಿರ್ವಹಿಸಬೇಕೆಂದು ಆಗಿನ ಸ್ವಾಮೀಜಿ ಸುಧೀಂದ್ರ ತೀರ್ಥರು 2002ರಲ್ಲಿ ವಿಶ್ವ ಸಾರಸ್ವತ ಫೆಡರೇಶನ್‌ ಸ್ಥಾಪಿಸಿದ್ದು, ಅವರ ಕನಸನ್ನು ಸಾಕಾರಗೊಳಿಸಲು ಈಗಿನ ಸ್ವಾಮೀಜಿಯವರು ಶ್ರಮಿಸುತ್ತಿದ್ದಾರೆ ಎಂದರು.

ಸಮ್ಮೇಳನದ ನಿರ್ಣಯಗಳ ಬಗ್ಗೆ ಸಾರಸ್ವತ ಸಮಾಜದ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಕಾಮತ್‌ ವಿವರ ನೀಡಿದರು.

ನಿರ್ಣಯಗಳು
– 2022 ಮೇ ತಿಂಗಳಲ್ಲಿ 2ನೇ ವಿಶ್ವ ಸಾರಸ್ವತ ಸಂಗಮ ವಾಶಿಯಲ್ಲಿ ಈ ಎಲ್ಲ ಮಠಗಳ (ಕಾಶೀ ಮಠ, ಕವಳೆ ಮಠ, ಪರ್ತಗಾಳಿ, ಚಿತ್ರಾಪುರ ಮಠ ) ಸ್ವಾಮೀಜಿಗಳನ್ನು ಸೇರಿಸಿ ನಡೆಸುವುದು.
– ಕಾಶ್ಮೀರದ 101 ವಿದ್ಯಾರ್ಥಿಗಳಿಗೆ ವಿಶ್ವ ಸಾರಸ್ವತ ಫೆಡರೇಶನ್‌ ವತಿಯಿಂದ ವಿದ್ಯಾರ್ಥಿ ವೇತನ ನೀಡುವುದು. ಈ ವಿದ್ಯಾರ್ಥಿ ವೇತನ ನಿಧಿಗೆ ವಿವಿಧ ಸಂಘ ಸಂಸ್ಥೆಗಳು ಆರ್ಥಿಕ ನೆರವು ಒದಗಿಸುವುದು.
– ಮುಂದಿನ 6 ತಿಂಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಅತುಲ್‌ ಕುಡ್ವ ಅವರ ನೇತೃತ್ವದಲ್ಲಿ ಸಾರಸ್ವತ ಸಮಾಜದ ಬಗ್ಗೆ ಸಂಶೋಧನೆ ನಡೆಸಿ ಚರಿತ್ರೆಯ ಪುಸ್ತಕವನ್ನು ಪ್ರಕಟಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next