Advertisement

Garadi…; ಅಖಾಡದಲ್ಲಿ ಭಟ್ರು & ಟೀಂ

10:46 AM Nov 10, 2023 | Team Udayavani |

ಒಂದು ಕಡೆ ಭಟ್ರಾ, ಮತ್ತೂಂದು ಕಡೆ ಬಿ.ಸಿ. ಪಾಟೀಲ್‌, ಇನ್ನೊಂದು ಕಡೆ ದರ್ಶನ್‌… – ಒಂದು ಸಿನಿಮಾದ ಕುತೂಹಲ ಹೆಚ್ಚಿಸಲು ಇದಕ್ಕಿಂತ ಇನ್ನೇನು ಬೇಕು ಹೇಳಿ. ಈ ವಾರ ತೆರೆಕಾಣುತ್ತಿರುವ “ಗರಡಿ’ ಚಿತ್ರದಲ್ಲಿ ಈ ಮೂವರು ಜೊತೆಯಾಗಿದ್ದಾರೆ. ಈ ಮೂಲಕ ಸಿನಿಮಾದ ಕುತೂಹಲ ಕೂಡಾ ಹೆಚ್ಚಾಗಿದೆ.

Advertisement

ಸಾಮಾನ್ಯವಾಗಿ ಯೋಗರಾಜ್‌ ಭಟ್‌ ನಿರ್ದೇಶನದ ಸಿನಿಮಾ ಎಂದರೆ ಫ‌ನ್‌, ಲವ್‌ಸ್ಟೋರಿ ಎಂಬ ಮಾತಿದೆ. ಆದರೆ, ಈ ಬಾರಿ ಭಟ್ರಾ ಆ ಗೆರೆಯನ್ನು ದಾಟಿ ನೇರವಾಗಿ ಕುಸ್ತಿ ಅಖಾಡಕ್ಕೆ ಬಂದು ನಿಂತಿದ್ದಾರೆ. ನಿಂತು ತೊಡೆ ತಟ್ಟಿಯೇ ಬಿಟ್ಟಿದ್ದಾರೆ. ಸದ್ದು ಜೋರಾಗಿ ಕೇಳುತ್ತಿದೆ. ಒಂದು ಹೊಸ ಬಗೆಯ ಕಥೆಯನ್ನು ಕಮರ್ಷಿಯಲ್‌ ಚೌಕಟ್ಟಿನಲ್ಲಿ ಹೇಳುವ ಮೂಲಕ ಭಟ್ರಾ ಪ್ರೇಕ್ಷಕರಿಗೆ ಹೊಸದನ್ನು ನೀಡಲು ಹೊರಟಿದ್ದಾರೆ. ಭಟ್ಟ ಅಖಾಡದಲ್ಲಿ ನಾಯಕ ಯಶಸ್‌ ಸೂರ್ಯ, ನಾಯಕಿ ಸೋನಾಲ್‌ ಮೊಂತೆರೋ ಇದ್ದಾರೆ. ಇನ್ನು, “ಗರಡಿ’ ಮೂಲಕ ಬಿ.ಸಿ.ಪಾಟೀಲ್‌ ಮತ್ತೂಮ್ಮೆ ಮೀಸೆ ತಿರುವಿದ್ದಾರೆ.

“ಗರಡಿ’ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೆ ಕಾರಣ ರಿಲಯನ್ಸ್‌ ಎಂಟರ್‌ಟೈನ್ಮೆಂಟ್‌. ಹೌದು, ಬಿ.ಸಿ.ಪಾಟೀಲ್‌ ಅವರ ಕೌರವ ಪ್ರೊಡಕ್ಷನ್ಸ್‌ಗೆ ರಿಲಯನ್ಸ್‌ ಕೈ ಜೋಡಿಸಿದ್ದು, ಸಿನಿಮಾದ ವಿತರಣಾ ಹಕ್ಕನ್ನು ಪಡೆದಿದೆ. ಈ ಮೂಲಕ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಿಟ್‌ ಆಗಿವೆ. ಅದರಲ್ಲೂ ಉತ್ತರ ಕರ್ನಾಟಕ ಶೈಲಿಯಲ್ಲಿರುವ “ಹೊಡಿರಲೆ ಹಲಗಿ’ ಎಂಬ ಈ ಹಾಡಿನಲ್ಲಿ ನಿಶ್ವಿ‌ಕಾ ನಾಯ್ಡು ಸ್ಟೆಪ್‌ ಹಾಕಿದ್ದು, ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ವರ್ಷದ ಹಿಟ್‌ ಸಾಂಗ್‌ ಲಿಸ್ಟ್‌ನಲ್ಲಿ ಸೇರಿಕೊಳ್ಳುವ ನಿರೀಕ್ಷೆ ಇದೆ. ಇನ್ನು, ಡ್ಯಾನ್ಸ್‌ ಸ್ಟೆಪ್‌ ನೋಡಿ ಫಿದಾ ಆಗಿರುವ ಯೋಗರಾಜ್‌ ಭಟ್‌ ನಿಶ್ವಿ‌ಕಾಗೆ “ಡ್ಯಾನ್ಸಿಂಗ್‌ ಡಾಲ್‌’ ಎಂಬ ಹೊಸ ಹೆಸರು ನೀಡಿದ್ದಾರೆ. ಅಂದಹಾಗೆ, “ಗರಡಿ’ ಚಿತ್ರದಲ್ಲಿ ಯಶಸ್‌ ಸೂರ್ಯ ನಾಯಕರಾಗಿ ನಟಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಯೋಗರಾಜ್‌ ಭಟ್‌, “ನಾನು ಬರೆದ ಕಥೆಯಲ್ಲಿ ನನಗೆ ತುಂಬಾ ಇಷ್ಟವಾದ ಕಥೆ. ಗರಡಿ ಮನೆಯಲ್ಲಿ ಅಡುಗೆ ಮಾಡಿಕೊಂಡಿದ್ದ ಯುವಕನೊಬ್ಬನ ಕಥೆ. ಏಕಲವ್ಯನಂತಹ ಯುವಕನ ಕಥೆ ಎನ್ನಬಹುದು. ಗರಡಿ ಮನೆಯಿಂದ ಆತನನ್ನು ಹೊರ ಹಾಕಿದ ನಂತರ ಏನಾಗುತ್ತದೆ ಎಂಬ ಅಂಶದೊಂದಿಗೆ ಈ ಚಿತ್ರ ಸಾಗುತ್ತದೆ’ ಎನ್ನುತ್ತಾರೆ.

ಬಿ.ಸಿ.ಪಾಟೀಲ್‌ ಕಂಬ್ಯಾಕ್‌

Advertisement

ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರು “ಗರಡಿ’ ಚಿತ್ರದ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರ ಕೂಡಾ ಮಾಡಿದ್ದಾರೆ. ಇಲ್ಲಿ ಅವರು ಗರಡಿ ಮನೆಯ ಕುಸ್ತಿ ಗುರುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಇದು ನನ್ನ ಪ್ರೊಡಕ್ಷನ್‌ನ 16ನೇ ಸಿನಿಮಾ. ಈ ಕಥೆ ಚೆನ್ನಾಗಿದೆ. ಮುಂದೆಯೂ ನಮ್ಮ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಲಿದ್ದೇವೆ’ ಎಂದರು. ಚಿತ್ರದ ವಿಲನ್‌ ಪಾತ್ರದಲ್ಲಿ ಬಿ.ಸಿ.ಪಾಟೀಲ್‌ ಅಳಿಯ ಸುಜಯ್‌ ಬೇಲೂರು ನಟಿಸಿದ್ದಾರೆ.

ದರ್ಶನ್‌ ಗೆಸ್ಟ್‌

“ಗರಡಿ’ ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ನಟ ದರ್ಶನ್‌ ಕೂಡಾ ಒಂದು. ಹೌದು, ನಟ ದರ್ಶನ್‌ “ಗರಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಅತಿಥಿ ಪಾತ್ರದಲ್ಲಿ. ಸಿನಿಮಾಕ್ಕೆ ಟ್ವಿಸ್ಟ್‌ ಕೊಡುವ ಪಾತ್ರ ಇದಾಗಿದ್ದು, ದರ್ಶನ್‌ ಅಭಿಮಾನಿಗಳಿಗೆ ಅವರ ಎಂಟ್ರಿ ಖುಷಿಕೊಡಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next