Advertisement

ಚಲಿಸುತ್ತಿದ್ದ ರೈಲಿನಿಂದ ಗಾಂಜಾ ಎಸೆಯುತ್ತಿದ್ರು

11:13 AM Mar 05, 2023 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಕುಖ್ಯಾತ ಪೆಡ್ಲರ್‌ ದೇವರಜೀವನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದು, ಬರೊಬ್ಬರಿ 2.47 ಕೋಟಿ ರೂ. ಮೌಲ್ಯದ 4 ಕ್ವಿಂಟಲ್‌ ಗಾಂಜಾ ಜಪ್ತಿ ಮಾಡಲಾಗಿದೆ.

Advertisement

ಡಿಜೆ ಹಳ್ಳಿಯ ನಿವಾಸಿ ಅಬ್ದುಲ್‌ ರೆಹೆಮಾನ್‌ ಅಲಿಯಾಸ್‌ ಅಜ್ಜು ಬಂಧಿತ. 2.47 ಕೋಟಿ ರೂ. ಮೌಲ್ಯದ 413.580 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಫೆ.15ರಂದು ಡಿಜೆಹಳ್ಳಿ ಟ್ಯಾನರಿ ರಸ್ತೆಯ ಈದ್ಗಾ ಮೈದಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ ನವಾಜ್‌ ನನ್ನು ಬಂಧಿಸಿ 3 ಲಕ್ಷ ರೂ. ಮೌಲ್ಯದ 3.50 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿತ್ತು. ಈತನ ವಿಚಾರಣೆ ವೇಳೆ ಆಂಧ್ರದ ಕುಖ್ಯಾತ ಪೆಡ್ಲರ್‌ಗಳಾದ ಫೈರೋಜ್‌ ಖಾನ್‌ ಹಾಗೂ ಪ್ರಸಾದ್‌ನಿಂದ ಗಾಂಜಾ ಖರೀದಿಸಿ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಡಿಜೆಹಳ್ಳಿ ಠಾಣೆ ಪೊಲೀಸರು ಫೈರೋಜ್‌ ಖಾನ್‌ ಹಾಗೂ ಪ್ರಸಾದ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಫೆ.27ರಂದು ಇಬ್ಬರೂ ಆಂಧ್ರದಿಂದ ಬೆಂಗಳೂರಿಗೆ ಬಂದು ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಪೆಡ್ಲರ್‌ ಗಳಿಗೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಡಿಜೆ ಹಳ್ಳಿ ಬಳಿ ಪೊಲೀಸರು ದಾಳಿ ಮಾಡಿದಾಗ ಈ ಇಬ್ಬರು ಆರೋಪಿಗಳೂ ಓಡಿಹೋಗಿ ಪರಾರಿಯಾಗಿದ್ದರು. ಆದರೆ, ಇವರ ಜತೆಗಿದ್ದ ಕುಖ್ಯಾತ ಗಾಂಜಾ ಪೆಡ್ಲರ್‌ ಅಬ್ದುಲ್‌ ರೆಹೆಮಾನ್‌ ಸಿಕ್ಕಿಬಿದ್ದಿದ್ದ.

ಗಾಂಜಾ ಕಂಡು ಪೊಲೀಸರಿಗೆ ಅಚ್ಚರಿ: ಅಬ್ದುಲ್‌ ರೆಹಮಾನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ದಾಗ ಡಿಜೆಹಳ್ಳಿಯ ಬಾಡಿಗೆ ಮನೆಯೊಂದರ ಆವರಣದಲ್ಲಿ ಗಾಂಜಾ ಶೇಖರಿಸಿಟ್ಟಿರುವ ಬಗ್ಗೆ ಮಾಹಿತಿ ಕೊಟ್ಟಿದ್ದ. ಆತ ಕೊಟ್ಟ ಮಾಹಿತಿ ಆಧರಿಸಿ ಆತ ಹೇಳಿದ ಪ್ರದೇಶಕ್ಕೆ ಪೊಲೀಸರು ತೆರಳಿದಾಗ ಬರೊಬ್ಬರಿ 2.47 ಕೋಟಿ ರೂ. ಮೌಲ್ಯದ 4 ಕ್ವಿಂಟಲ್‌ ಗಾಂಜಾ ಶೇಖರಿಸಿಟ್ಟಿರುವುದು ಕಂಡು ಪೊಲೀಸರೇ ಅಚ್ಚರಿಗೊಂಡಿದ್ದರು. ಅಬ್ದುಲ್‌ ರೆಹಮಾನ್‌ ಗಾಂಜಾ ಮಾರಾಟ ಪ್ರಕರಣಗಳಲ್ಲಿ ಹಲವು ಬಾರಿ ಜೈಲು ಸೇರಿದ್ದು, 2017ರಲ್ಲಿ ಆತನನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದ. ಕೆಲ ವರ್ಷಗಳಿಂದ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳು ಡ್ರಗ್ಸ್‌ ಮಾರಾಟ ಮಾಡಲು ವ್ಯವಸ್ಥಿತ ಜಾಲ ಹೆಣೆದಿದ್ದು, ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು, ಸ್ಥಳೀಯ ಯುವಕರೇ ಇವರ ಗಿರಾಕಿಗಳಾಗಿದ್ದರು.

Advertisement

ಗಾಂಜಾ ಪೂರೈಕೆಗೆ ಹೊಸ ತಂತ್ರ: ರೋಪಿಗಳು ಪೊಲೀಸರ ಕಣ್ಣಿಗೆ ಬೀಳದೆ ಗಾಂಜಾ ಪೂರೈಕೆ ಮಾಡಲು ಹೊಸ ತಂತ್ರ ರೂಪಿಸಿದ್ದರು. ಪರಾರಿಯಾಗಿರುವ ಪೆಡ್ಲರ್‌ ಗಳಾಗ ಫೈರೋಜ್‌ ಖಾನ್‌ಹಾಗೂ ಪ್ರಸಾದ್‌ ಆಂಧ್ರಪ್ರದೇಶದ ವೈಜಾಕ್‌ನಲ್ಲಿ ಕೆ.ಜಿಗೆ 25 ಸಾವಿರ ರೂ. ಕೊಟ್ಟು 15-20 ಕೆಜಿ ಗಾಂಜಾ ಖರೀದಿಸುತ್ತಿದ್ದರು. ಬಳಿಕ ರೈಲಿನಲ್ಲಿ ಆಂಧ್ರದಿಂದ ಬೆಂಗಳೂರಿಗೆ ತರುತ್ತಿದ್ದರು. ರೈಲು ಬೆಂಗಳೂರು ತಲುಪುವುದಕ್ಕೂ ಒಂದು ಗಂಟೆ ಮೊದಲು ಅಬ್ದುಲ್‌ ರೆಹಮಾನ್‌ಗೆ ಕರೆ ಮಾಡಿ ಸಿಗ್ನಲ್‌ ಕೊಡುತ್ತಿದ್ದರು. ಅಬ್ದುಲ್‌ ರೆಹಮಾನ್‌ ಡಿಜೆ ಹಳ್ಳಿ ವ್ಯಾಪ್ತಿಯ ರೈಲ್ವೆ ಹಳಿ ಬಳಿ ನಿಂತಿಕೊಂಡು ಇವರ ಸಂಪರ್ಕದಲ್ಲಿರುತ್ತಿದ್ದ. ಆತ ನಿಂತಿರುವ ಪ್ರದೇಶಕ್ಕೆ ರೈಲು ಬಂದಾಗ ಫೈರೋಜ್‌ ಖಾನ್‌ ಹಾಗೂ ಪ್ರಸಾದ್‌ ಚಲಿಸುತ್ತಿರುವ ರೈಲಿನಿಂದಲೇ ಗಾಂಜಾ ತುಂಬಿದ್ದ ಗೋಣಿ ಚೀಲವನ್ನು ಅಬ್ದುಲ್‌ ರೆಹಮಾನ್‌ ಬಳಿ ಎಸೆಯುತ್ತಿದ್ದರು.

ಈ ಗೋಣಿಚೀಲದಲ್ಲಿ ತುಂಬಿದ್ದ ಗಾಂಜಾವನ್ನು ಅಬ್ದುಲ್‌ ರೆಹಮಾನ್‌ ದ್ವಿಚಕ್ರವಾಹನದಲ್ಲಿಟ್ಟು ಡಿಜೆ ಹಳ್ಳಿಯ ಬಾಡಿಗೆ ಮನೆಗೆ ತಂದು ಶೇಖರಿಸಿಡುತ್ತಿದ್ದ. ಇದೇ ಮಾದರಿಯಲ್ಲಿ ಆರೋಪಿಗಳು ಹಂತ-ಹಂತವಾಗಿ ಶೇಖರಿಸಿಟ್ಟಿದ್ದ ಗಾಂಜಾದ ಪ್ರಮಾಣವು 4 ಕ್ವಿಂಟಲ್‌ ದಾಟಿತ್ತು. ಬಳಿಕ ಇವುಗಳನ್ನು ಸಣ್ಣ ಪ್ಯಾಕ್‌ಗಳಲ್ಲಿ ತುಂಬಿ ಕೆ.ಜಿಗೆ 50 ಸಾವಿರ ರೂ.ನಂತೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇನ್ನು ರೈಲು ನಿಲ್ದಾಣಕ್ಕೆ ಗಾಂಜಾ ತಂದರೆ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬೀಳಬಹುದು ಎಂಬ ಮುಂಜಾಗ್ರತೆಯಿಂದ ಈ ರೀತಿಯಾಗಿ ಗಾಂಜಾ ಪೂರೈಸುತ್ತಿರುವುದಾಗಿ ಆರೋಪಿ ಅಬ್ದುಲ್‌ ರೆಹೆಮಾನ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next