Advertisement

ಉಸಿರು ಚೆಲ್ಲಿದೆ ಗಂಗೆ |ಸಕ್ರೆಬೈಲು ಬಿಡಾರದಲ್ಲಿ ಶೋಕ

06:41 PM Sep 26, 2021 | Team Udayavani |

ಶಿವಮೊಗ್ಗ: ಸಕ್ರೆಬೈಲು ಬಿಡಾರದ ಹಿರಿಯ ಆನೆ ಗಂಗೆ ಕೊನೆಯುಸಿರೆಳೆದಿದೆ. ಅನಾರೋಗ್ಯಕ್ಕೀಡಾಗಿದ್ದ ಗಂಗೆ ಆನೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.

Advertisement

ಕೆಲವು ತಿಂಗಳಿಂದ ಗಂಗೆಯ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಬಿಡಾರದಲ್ಲೇ ಚಿಕಿತ್ಸೆ ನೀಡಲಾಗುತಿತ್ತು. ಕಳೆದ ಎರಡು ವಾರದಿಂದ ಆರೋಗ್ಯ ಮತ್ತಷ್ಟು ಬಿಗಡಾಯಿಸಿತ್ತು. ಇಂದು ಉಸಿರು ಚೆಲ್ಲಿದೆ.

ಬಿಡಾರದಲ್ಲಿ ಶೋಕ :

ಸಕ್ರೆಬೈಲು ಬಿಡಾರದ ಅತ್ಯಂತ ಹಿರಿಯ ಆನೆ ಗಂಗೆ. 1971ರಲ್ಲಿ ಕಾಕನಕೋಟೆಯಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಅಲ್ಲಿಂದ ಶಿವಮೊಗ್ಗದ ಸಕ್ರೆಬೈಲು ಬಿಡಾರಕ್ಕೆ ಕಳುಹಿಸಲಾಗಿತ್ತು. ಆಗಿನಿಂದಲೂ ಬಿಡಾರದ ಪ್ರಮುಖ ಆನೆಗಳಲ್ಲಿ ಒಂದಾಗಿತ್ತು.

ಖೆಡ್ಡಾ ಕಾರ್ಯಾಚರಣೆಯಲ್ಲಿ ನೈಪುಣ್ಯ

Advertisement

ಗಂಗೆಯು ಹೆಣ್ಣಾನೆಗಳಲ್ಲಿ ಸ್ಪುರದ್ರೂಪಿ ಎನ್ನುವ ಹೆಗ್ಗಳಿಕೆ ಪಡೆದಿತ್ತು. ಅಲ್ಲದೆ ಖೆಡ್ಡಾ ಕಾರ್ಯಾಚರಣೆಯಲ್ಲಿ ನೈಪುಣ್ಯ ಹೊಂದಿತ್ತು. ರಾಜ್ಯದ ವಿವಿಧೆಡೆ ಪುಂಡಾನೆಗಳನ್ನು ಖೆಡ್ಡಾಗೆ ಕೆಡವುವ ಕಾರ್ಯಾಚರಣೆಯಲ್ಲಿ ಗಂಗೆ ಪಾಲ್ಗೊಂಡು ಯಶಸ್ವಿಯಾಗಿದೆ. ಕಾರ್ಯಾಚರಣೆ ವೇಳೆ ಗಂಗೆಯನ್ನು ಕಂಡು ಪುಂಡಾನೆಗಳು ಬಳಿಗೆ ಬರುತ್ತಿದ್ದವು. ಈ ವೇಳೆ ಅವುಗಳನ್ನು ಖೆಡ್ಡಾಗೆ ಕೆಡವಿಕೊಳ್ಳಲಾಗುತಿತ್ತು.

ಬಿಡಾರದ ಹಿರಿಯಜ್ಜಿಯಾಗಿದ್ದ ಗಂಗೆ

ಗಂಗೆಯು ಸಕ್ರೆಬೈಲು ಬಿಡಾರದ ಹಿರಿಯಜ್ಜಿಯಾಗಿದ್ದಳು. ಈಕೆಯ ಆರು ಮರಿಗಳು ಇದೆ ಬಿಡಾರದ ಸದಸ್ಯರು. ಅಲ್ಲದೆ ಈ ಬಿಡಾರದಲ್ಲಿ ಯಾವುದೆ ಆನೆ ಮರಿ ಹಾಕಿದರೂ ಆರೈಕೆಗೆ ಗಂಗೆಯನ್ನು ಬಿಡಲಾಗುತಿತ್ತು. ಅಲ್ಲದೆ ತಾಯಿ ಆನೆಯಿಂದ ಮರಿಯನ್ನು ಬೇರ್ಪಡಿಸುವ ವೀನಿಂಗ್ ಪ್ರಕ್ರಿಯೆ ಸಂದರ್ಭದಲ್ಲೂ ಗಂಗೆ ಪ್ರಮುಖ ಪಾತ್ರ ವಹಿಸುತ್ತಿದ್ದಳು.

ಗಂಗೆ ಆನೆಯನ್ನು ಕಳೆದುಕೊಂಡು ಸಕ್ರೆಬೈಲು ಬಿಡಾರ ದುಃಖದಲ್ಲಿದೆ. ಗಂಗೆಗೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next