Advertisement

ಗಂಗಾವತಿ: ಆನೆಗೊಂದಿ ಉತ್ಸವ ಮೆರವಣಿಗೆಗೆ ರೆಡ್ಡಿ ಚಾಲನೆ

06:19 PM Mar 12, 2024 | Team Udayavani |

ಉದಯವಾಣಿ ಸಮಾಚಾರ
ಗಂಗಾವತಿ: ಐತಿಹಾಸಿಕ ಸ್ಥಳ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಇತಿಹಾಸದಲ್ಲಿ ಉಲೇಖವಾಗಿರುವ ಆನೆಗೊಂದಿ ಉತ್ಸವದ ಮೆರವಣಿಗೆಗೆ ಗಂಗಾವತಿ ಶಾಸಕರಾದ ಜಿ. ಜನಾರ್ಧನ ರೆಡ್ಡಿ ಅವರು ಅಂಬಾರಿಯಲ್ಲಿನ ಶ್ರೀ ಆದಿಶಕ್ತಿ ದುರ್ಗಾದೇವಿ ಮೂರ್ತಿಗೆ ಪೂಜೆ ಸಲ್ಲಿಸಿ ಬಳಿಕ ಪುಷ್ಪ ಅರ್ಪಿಸುವ ಮೂಲಕ ಚಾಲನೆ ನೀಡಿದರು.

Advertisement

ಸಮೀಪದ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ರಾಜಬೀದಿಯ ಮೂಲಕ ಗಗನ್‌ ಮಹಲ್‌ವರೆಗೆ ನಡೆಯಿತು. ಮೆರವಣಿಗೆಯಲ್ಲಿ ಶ್ರೀ ಆದಿಶಕ್ತಿ ದುರ್ಗಾದೇವಿ ಮೂರ್ತಿಯನ್ನು ಹೊತ್ತು ರಾಜ ಗಾಂಭಿರ್ಯದೊಂದಿಗೆ ಬಂದ ಗಜರಾಜನ ನಡಿಗೆ ವೈಭವ ನೋಡಲು ಜನಸಾಗರವೇ ಸೇರಿಕೊಂಡಿತ್ತು.

ಅಂಬಾರಿ ಹೊತ್ತ ಗಜರಾಜನ ನಡಿಗೆಗೆ ಡೊಳ್ಳು ಕುಣಿತ, ನಂದಿ ಧ್ವಜ ಸಮಾಳ ವಾದನ, ಕಹಳೆ ವಾದನ, ಕರಡಿ ಮಜಲು, ಹಲಗೆ ವಾದನ, ಮಹಿಳಾ ವೀರಗಾಸೆ, ಗೊರವರ ಕುಣಿತ, ಪೂಜಾ ಕುಣಿತ, ಜಗ್ಗಲಿಗೆ, ಮಹಿಳಾ ಡೊಳ್ಳು ಕುಣಿತ, ಹಗಲುವೇಷ, ಮೋಜಿನಗೊಂಬೆ, ಮಹಿಳಾ ತಮಟೆ ವಾದನ, ಕೀಲುಕುದುರೆ, ನಾಸಿಕ್‌ ಡೊಲ್‌, ನಗಾರಿ, ಗಾರುಡಿ ಗೊಂಬೆ, ಸೋಮನ ಕುಣಿತ, ಕಂಸಾಳೆ, ಲಂಬಾಣಿ ನೃತ್ಯ, ಹುಲಿವೇಷ, ಕೋಳಿ ನೃತ್ಯ, ಬೇಡರ ಪಡೆ, ಡ್ರಮ್‌ ವಾದನ, ಮಹಿಳಾ ಡೊಳ್ಳು, ಮಹಿಳಾ ಕೋಲಾಟ, ಮರಗಾಲು, ಹಗಲುವೇಷ, ಚಿಲಿಪಿಲಿಗೊಂಬೆ, ಪಟ ಕುಣಿತ, ವೀರಗಾಸೆ, ಚಂಡೆ ವಾದನ, ಕರಡಿ ಮಜಲು, ಯಕ್ಷಗಾನ ಕುಣಿತ, ಮೋಜಿನ ಗೊಂಬೆ, ಲೇಜಿಮ್‌ ನೃತ್ಯ ಹಾಗೂ ಇತರ ಕಲೆಗಳ ಪ್ರದರ್ಶನವು ಆಕರ್ಷಣೀಯವಾಗಿತ್ತು.

ಶಾಸಕರಿಂದ ಕೋಲಾಟ ಪ್ರದರ್ಶನ: ಆನೆಗೊಂದಿ ಉತ್ಸವದ ಮೆರವಣಿಗೆಯಲ್ಲಿ ಆಕರ್ಷಕ ಕೋಲಾಟ ಪ್ರದರ್ಶನ ನಡೆಯಿತು. ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಸಿಇಓ ಹಾಗೂ ಇತರ ಅಧಿಕಾರಿಗಳು ಕೋಲಾಟ ಆಡುವುದರ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಆನೆಗೊಂದಿ ಉತ್ಸವದ ಮೆರವಣಿಗೆಯಲ್ಲಿ ಶ್ರೀ ಆದಿಶಕ್ತಿ ದುರ್ಗಾದೇವಿ ಮೂರ್ತಿಯನ್ನು ಹೊತ್ತ
ಅಂಬಾರಿ ಮೆರವಣಿಗೆಯ ಮೆರಗನ್ನು ಹೆಚ್ಚಿಸಿತು. ಅಂಬಾರಿಯನ್ನು ಹೊತ್ತ ಆನೆಯ ಹೆಸರು ಲಕ್ಷ್ಮೀ ಈ ಆನೆಯು ಪಕ್ಕದ ವಿಜಯನಗರ ಜಿಲ್ಲೆಯ ಹಂಪಿ ವಿರೂಪಾಕ್ಷೇಶ್ವರ ಸನ್ನಿಧಿಗೆ ಸೇರಿದ್ದು, ಇತ್ತೀಚೆಗೆ ನಡೆದ ಕನಕಗಿರಿ ಉತ್ಸವವದಲ್ಲಿಯೂ ಪಾಲ್ಗೊಂಡು ಗಮನ ಸೆಳೆದಿತ್ತು. ಈಗ ಮತ್ತೆ ಆನೆಗೊಂದಿ ಉತ್ಸವಕ್ಕಾಗಿ ನಮ್ಮ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದು ವಿಶೇಷವಾಗಿತ್ತು.

ಆನೆಗೊಂದಿಯ ಉತ್ಸವದ ಮೆರವಣಿಗೆಯಲ್ಲಿ ಆನೆಗೊಂದಿಯ ಗತಕಾಲದ ಸಂಸ್ಕೃತಿ, ಪರಂಪರೆಯ ಮೆಲುಕು ಹಾಕುವ ರೀತಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್‌ ಅತುಲ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್‌ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಕೊಪ್ಪಳ ಉಪವಿಭಾಗಾ ಧಿಕಾರಿಗಳಾದ ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ, ಉತ್ಸವದ ಮೆರವಣಿಗೆ ಸಮಿತಿ ಅಧ್ಯಕ್ಷರು ಆಗಿರುವ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್‌., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ
ನಿರ್ದೇಶಕರಾದ ಕೊಟ್ರೇಶ ಮರಬನಹಳ್ಳಿ ಗಂಗಾವತಿ ತಹಶೀಲ್ದಾರ್‌ರಾದ ಯು. ನಾಗರಾಜ, ತಾಪಂ ಇಒ ಲಕ್ಷ್ಮೀದೇವಿ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಗಮನ ಸೆಳೆದ ಮಳಿಗೆಗಳು
ಗಂಗಾವತಿ: ಆನೆಗೊಂದಿ ಉತ್ಸವ-2024ರ ಪ್ರಯುಕ್ತ ಶ್ರೀ ರಂಗದೇವರಾಯಲು ವೇದಿಕೆ ಮುಂಭಾಗದಲ್ಲಿ ಆಯೋಜಿಸಿದ್ದ ವಿವಿಧ ವಸ್ತುಗಳ ಪ್ರದರ್ಶನ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು. ಮಳಿಗೆಗಳಲ್ಲಿ ದಿ ಕಿಷ್ಕಿಂದ ಟ್ರಸ್ಟ್‌ ವತಿಯಿಂದ ಮೆಕ್ಕೆಜೋಳ, ಬಾಳೆ ಮತ್ತು ಇತರೆ ಒಣಗಿದ ಎಲೆಗಳಿಂದ ಮಾಡಿದ ಗೃಹಲಂಕಾರ ವಸ್ತುಗಳ ಪ್ರದರ್ಶನ, ಬಂಗಾಲಿ ಟ್ರಸ್ಟ್‌ನಿಂದ ವಿವಿಧ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ, ಗಂಗಾವತಿಯ ಈಶ್ವರೀಯ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಿಂದ ಅಧ್ಯಾತ್ಮ ಚಿತ್ರದ ಪ್ರದರ್ಶನ ಮತ್ತು ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ, ಗಂಗಾವತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಿಂದ ಅಂಗನವಾಡಿಯ ಮಕ್ಕಳ ಆಟಿಕೆ ವಸ್ತು ಹಾಗೂ ಇತರೆ ವಸ್ತುಗಳ ಪ್ರದರ್ಶನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್‌ ಸ್ಟಾಪ್‌ ಸೆಂಟರಿನ ಸೇವೆಗಳು, ಪಂಪಾ ವಿರೂಪಾಕ್ಷೇಶ್ವರ ಸ್ವ-ಸಹಾಯ ಸಂಘದಿಂದ ವಿವಿಧ ಅಡುಗೆ ಪದಾರ್ಥ ಪದರ್ಶನ ಮತ್ತು ಮಾರಾಟ, ಧಾತ್ರಿ ಸ್ವ-ಸಹಾಯ ಸಂಘದಿಂದ ಮುಂಬತ್ತಿ ಮತ್ತು ಕೈಚೀಲಗಳ ಪ್ರದರ್ಶನ ಮತ್ತು ಮಾರಾಟ, ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅರಿವು ಮತ್ತು ಪ್ರದರ್ಶನ ಮಳಿಗೆ ಹಾಗೂ ಸ್ವ-ಸಹಾಯ ಗುಂಪುಗಳ ಸದಸ್ಯರು ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸೇರಿದಂತೆ ಒಟ್ಟು 24 ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

*ಶ್ರೀನಿವಾಸ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next