ಗಂಗಾವತಿ: ವಿವಿಧಕಾರಣಕ್ಕಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ರೌಡಿಶೀಟರ್ಗಳು ಸಮಾಜದಲ್ಲಿ ಅಶಾಂತಿ ಮತ್ತು ದುಷ್ಕೃತ್ಯವೆಸಗಲು ಯತ್ನಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಪೊಲೀಸ್ ಇಲಾಖೆ ರೌಡಿಶೀಟರ್ ಮತ್ತು ಸಾಮಾಜಿಕ ದುಷ್ಟ ಶಕ್ತಿಗಳ ವಿರುದ್ಧ ಹದ್ದಿನಕಣ್ಣಿಟ್ಟು ಕಾಯುತ್ತಿದೆ ಎಂದು ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಎಚ್ಚರಿಸಿದ್ದಾರೆ.
ಅವರು ಶನಿವಾರ ಸಂಜೆ ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೌಡಿಶೀಟರಗಳ ಪರೇಡ್ ನಡೆಸಿ ಮುಂಬರುವ ಬಕ್ರೀದ್ ಹಾಗೂ ವಿವಿಧ ಕಾರಣಕ್ಕಾಗಿ ಪ್ರತಿಭಟನೆ ಹಾಗೂ ವಿದ್ವಾಂಸಕ ಕೃತ್ಯಗಳಲ್ಲಿ ಪಾಲ್ಗೊಳ್ಳುವ ರೌಡಿಶೀಟರ್ ಮತ್ತು ಹಲವು ಪ್ರಕರಣಗಳಲ್ಲಿ ಹೆಸರು ಇರುವವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ನಗರ ಠಾಣೆಯಲ್ಲಿ 241 ಗ್ರಾಮೀಣ ಠಾಣೆಯಲ್ಲಿ 101 ರೌಡಿಶೀಟರ್ಗಳಿದ್ದು ಇವರಿಗೆಲ್ಲ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 107 ನಿಯಮದಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
ಇವರೆಲ್ಲ ತಾಲೂಕು ದಂಡಾಧಿಕಾರಿಗಳಿಗೆ ಬಾಂಡ್ ನೀಡಿ ಬೇಲ್ ಪಡೆಯಬೇಕು.ಮುಂದಿನ ದಿನಗಳಲ್ಲಿಯೂ ಅತ್ಯುತ್ತಮ ನಡತೆಯ ಮೂಲಕ ರೌಡಿಶೀಟರ್ ಕೇಸ್ ನಿಂದ ಹೊರತೆ ಬರಬೇಕು. 10 ವರ್ಷಗಳ ವರೆಗೆ ಯಾವುದೇ ಕೇಸ್ ಆಗದಂತೆ ಎಚ್ಚರಿಕೆಯಿಂದ ತಮ್ಮ ಜೀವನ ನಡೆಸಬೇಕು. ಇದು ಪೊಲೀಸ್ ಇಲಾಖೆಗೆ ಮನವರಿಕೆಯಾದರೆ ಕೇಸ್ ವಾಪಸ್ ಪಡೆಯಲು ಅವಕಾಶವಿರುತ್ತದೆ. ಕೆಲವರು ರೌಡಿಶೀಟರ್ ಕೇಸ್ ಹಾಕಿಸಿಕೊಂಡು ಮತ್ತೆ ಮತ್ತೆ ಗಲಭೆ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಕಂಡು ಬಂದಿದ್ದು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರಠಾಣೆಯ ಪಿಐ ಟಿ.ವೆಂಕಟಸ್ವಾಮಿ, ಗ್ರಾಮೀಣ ಸಿಪಿಐ ಮಂಜುನಾಥ, ಪಿಎಸೈ ಕಾಮಣ್ಣ, ಶಾರದಮ್ಮ ಸೇರಿ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರಿದ್ದರು.