ಗಂಗಾವತಿ: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಗೆ ಬಿಜೆಪಿಯಿಂದ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಸೋಮವಾರ ಬೆಂಗಳೂರಿನ ಗಾಲಿ ಜನಾರ್ದನರೆಡ್ಡಿ ನಿವಾಸದಲ್ಲಿ ಶಾಸಕ ಪರಣ್ಣ ಮುನವಳ್ಳಿ ಆಪ್ತರಾಗಿದ್ದ ಬಿಜೆಪಿ ಗ್ರಾಮೀಣ ಘಟಕದ ಉಪಾಧ್ಯಕ್ಷ ವೆಂಕಟೇಶ್ ಇಳಿಗೇರ್ ಜಬ್ಬಲಗುಡ್ಡ ಅಧಿಕೃತವಾಗಿ ಸೇರ್ಪಡೆಯಾದರು.
ಈಗಾಗಲೇ ಬಿಜೆಪಿಯಲ್ಲಿದ್ದ ಹಲವು ಪ್ರಮುಖ ಮುಖಂಡರು ಯುವ ಮುಖಂಡರು ರೆಡ್ಡಿ ಪಾಳಯಕ್ಕೆ ಜಿಗಿದಿದ್ದು ನಿತ್ಯವೂ ವಲಸೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ವೆಂಕಟೇಶ್ ಇಳಿಗೇರ್ ಜಬ್ಬಲಗುಡ್ಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಗಾಲಿ ಜನಾರ್ದನರೆಡ್ಡಿ ಕಾರಣರಾಗಿದ್ದು ಇವರ ಜತೆ ಕೆಲಸ ಮಾಡಲು ಖುಷಿಯಾಗುತ್ತದೆ. ನನ್ನ ಜತೆ ಬಿಜೆಪಿಯಲ್ಲಿ ಕೆಲಸ ಮಾಡಿದ ಹಲವು ಮುಖಂಡರು ರೆಡ್ಡಿಯವರ ಪಾರ್ಟಿಗೆ ಹೋಗಿದ್ದು ರೆಡ್ಡಿಯವರನ್ನು ಗೆಲ್ಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಬೂದಗುಂಪಾ ಭಾಗದ ಬೂದಗುಂಪ, ಜಬ್ಬಲಗುಡ್ಡ, ಹಳೆಕುಮಟ, ನಾಗೇಶನ ಹಳ್ಳಿ, ಚಂದ್ರಗಿರಿ, ಕುಕನಪಳ್ಳಿ, ಇಂದರಗಿ, ಇಂದಿರಾನಗರದ ಬಿಜೆಪಿ ಹಾಗೂ ಕಾಂಗ್ರೆಸ್ ಪಾರ್ಟಿಯ ಅನೇಕರು ರೆಡ್ಡಿಯವರ ಪಾರ್ಟಿಗೆ ಸೇರಲಿದ್ದಾರೆಂದರು.
ಪಕ್ಷಕ್ಕೆ ಬರ ಮಾಡಿಕೊಂಡ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ವೆಂಕಟೇಶ್ ಜಪಲಗುಡ್ಡ ಅವರು ಒಬ್ಬ ವಿನಯ ಶೀಲ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿ. ಸಾಕಷ್ಟು ಜನ ಯುವಕರನ್ನು ಸೆಳೆದಿರುವಂತಹ ವ್ಯಕ್ತಿ, ಬೂದುಗುಂಪ ಜಬ್ಬಲಗುಡ್ಡ ಭಾಗದಲ್ಲಿ ಅನೇಕ ಯುವ ಮಿತ್ರರನ್ನು, ಸಾಕಷ್ಟು ಜನರ ಸ್ನೇಹ ಇರುವಂತಹ ಜನನಾಯಕರಾಗಿದ್ದು, ಇವರಿಂದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಗೆ ಶಕ್ತಿ ಬಂದಿದೆ ಎಂದರು. ಈ ಸಂದರ್ಭದಲ್ಲಿ ಯಮನೂರು ಚೌಡ್ಕಿ, ದುರ್ಗಪ್ಪ ಆಗೊಲಿ, ಚಂದ್ರಶೇಖರಗೌಡ, ಜಿಲಾನಿಪಾಷಾ, ಹೊಸಮಲಿ ರಮೇಶ ನಾಯಕ, ವಿರೇಶ ಬಲ್ಕುಂದಿ ನಾಗರಾಜ್ ಚಳಗೇರಿ, ಶಿವಕುಮಾರ್ ಆದೋನಿ, ಮನೋಹರ ಗೌಡ, ಚನ್ನವೀರ ಗೌಡ, ವಿರೇಶ ಸುಳೆಕಲ್ ಇದ್ದರು.