ಗಂಗಾವತಿ: ವಿದ್ಯುತ್ ಅವಗಡ ಸಂಭವಿಸಿ 20 ಎಕರೆ ಭೂಮಿಯಲ್ಲಿ ಬೆಳೆಯಲಾಗಿದ್ದ ಭತ್ತದ ಹುಲ್ಲಿನ ಬಣವಿಗೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ನಷ್ಟವಾದ ಘಟನೆ ತಾಲೂಕಿನ ಗೋಗಿಬಂಡಿ ಕ್ಯಾಂಪ್ ನಲ್ಲಿ ಜೂ. 15ರ ಗುರುವಾರ ಮುಂಜಾನೆ ಜರುಗಿದೆ.
ಗೂಗಿಬಂಡಿ ಕ್ಯಾಂಪಿನ ಬೈಲಪ್ಪ ಎಂಬ ರೈತ 20 ಎಕರೆ ಭೂಮಿಯಲ್ಲಿ ಬೆಳೆದ ಭತ್ತದ ಹುಲ್ಲಿನ ಬಣವೆಯನ್ನು ಗ್ರಾಮದ ಪಕ್ಕದಲ್ಲಿ ಹಾಕಿದ್ದು, ಗುರುವಾರ ಮುಂಜಾನೆ ಆಕಸ್ಮಿಕ ಬೆಂಕಿ ಬಿದ್ದು, ಸಂಪೂರ್ಣ ಹುಲ್ಲು ಬೆಂಕಿಯಲ್ಲಿ ಸುಟ್ಟು ಹೋಗಿದೆ.
ದನ, ಕರು, ಎಮ್ಮೆಗಳಿಗಾಗಿ 20 ಎಕರೆ ಭೂಮಿಯಲ್ಲಿ ಬೆಳೆದ ಭತ್ತದ ಹುಲ್ಲನ್ನು ರೈತರು ಗ್ರಾಮದ ಪಕ್ಕದಲ್ಲಿ ಹಾಕಿದ್ದರು. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಪಿಡಿಒ ಭೇಟಿ ನೀಡಿದ್ದು ಪಂಚನಾಮಿ ವರದಿ ಮಾಡಿದ್ದಾರೆ.
ಗೂಗಿಬಂಡಿ ಗ್ರಾಮದಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗುತ್ತಿದ್ದು, ಹೈನುಗಾರಿಕೆ ಇರುವ ಕಾರಣ ದನ, ಎಮ್ಮೆಗಳಿಗಾಗಿ ಭತ್ತದ ಹುಲ್ಲನ್ನು ಬಣವಿ ಹಾಕಿ ವರ್ಷವಿಡಿ ಬಳಕೆ ಮಾಡಲಾಗುತ್ತದೆ. ಬಣವುಗಳನ್ನು ವಿದ್ಯುತ್ ತಂತುಗಳ ಕೆಳಗೆ ಹಾಕಲಾಗಿತ್ತು. ಗಾಳಿ ಬೀಸಿದ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.
ವರ್ಷವಿಡಿ ದನ, ಕರು, ಎಮ್ಮೆಗಳಿಗಾಗಿ ಸಂಗ್ರಹಿಸಿದ್ದ ಭತ್ತದ ಹುಲ್ಲಿನ ಬಣವಿ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಸರಕಾರ ಸೂಕ್ತ ಪರಿಹಾರ ನೀಡುವಂತೆ ರೈತ ಬೈಲಪ್ಪ ಮನವಿ ಮಾಡಿದ್ದಾರೆ.