Advertisement

Gandhi Jayanti: ಉಡುಪಿಯವರನ್ನು ತಾಜಾ ಬನಿಯಾ ಎಂದಿದ್ದ ಗಾಂಧೀಜಿ!

12:59 PM Oct 02, 2024 | Team Udayavani |

ಉಡುಪಿ: ಗಾಂಧೀಜಿಯವರು 1920, 1927, 1934ರಲ್ಲಿ ದ.ಕ. ಜಿಲ್ಲೆಗೆ ಮೂರು ಬಾರಿ ಭೇಟಿ ನೀಡಿದ್ದರೂ ಉಡುಪಿ, ಬ್ರಹ್ಮಾವರ, ಕುಂದಾಪುರಕ್ಕೆ ಭೇಟಿ ಕೊಟ್ಟದ್ದು ಒಂದೇ ಬಾರಿ. ಅದು 1934ರ ಫೆಬ್ರವರಿ 25ರಂದು. ಫೆ. 24ರಂದು ಮಡಿಕೇರಿ ಮೂಲಕ ಸಂಪಾಜೆಗೆ ಬಂದು ಸುಳ್ಯ, ಪುತ್ತೂರು, ಬಂಟ್ವಾಳ, ಮಂಗಳೂರಿನಲ್ಲಿ ತಂಗಿದರು. ಫೆ. 25ರಂದು ಮೂಲ್ಕಿ, ಉಡುಪಿ, ಬ್ರಹ್ಮಾವರ,
ಕುಂದಾಪುರದಲ್ಲಿ ಪ್ರವಾಸ ನಡೆಸಿದರು.

Advertisement

ಉದ್ಯಾವರದ ಹೊಳೆಯನ್ನು ದೋಣಿ ಮೂಲಕ ದಾಟಿ ಉಡುಪಿಗೆ ಬಂದ ಗಾಂಧೀಜಿಯವರು ಅಜ್ಜರಕಾಡಿನ ಮೈದಾನದಲ್ಲಿ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದವರು ಕಾರ್ಪೊರೇಶನ್‌ ಬ್ಯಾಂಕ್‌ ಸ್ಥಾಪಕ ಅಧ್ಯಕ್ಷರಾಗಿದ್ದ ಹಾಜಿ ಅಬ್ದುಲ್ಲಾ ಸಾಹೇಬ್‌. ಅಸ್ಪೃಶ್ಯತಾ ನಿವಾರಣೆಗಾಗಿಯೇ ಈ ಪ್ರವಾಸವನ್ನು ಗಾಂಧೀಜಿ ಕೈಗೊಂಡಿದ್ದರಿಂದ ವಿವಿಧೆಡೆಗಳಲ್ಲಿ ದಲಿತೋದ್ಧಾರಕ್ಕಾಗಿ ಹಣ ಸಂಗ್ರಹಿಸಿದ್ದರು. ಇದರಲ್ಲಿ ಚಿನ್ನ ಸಂಗ್ರಹವೂ ಇತ್ತು. ಉಡುಪಿಯಲ್ಲಿ ನಡೆದ ಸಭೆಯಲ್ಲಿ ಪಾಂಗಾಳ ನಾಯಕ್‌ ಕುಟುಂಬದ ನಿರುಪಮಾ ನಾಯಕ್‌ ಅವರೂ ಚಿನ್ನದ ಆಭರಣವನ್ನು ಸಮರ್ಪಿಸಿದ್ದರು.

ದೇಣಿಗೆ ಮೊತ್ತವನ್ನು ಏರಿಸುವುದಕ್ಕಾಗಿ ಏಲಂ ಹಾಕಿದಾಗ ಗಾಂಧೀಜಿಯವರು ಉಡುಪಿಯವರನ್ನು “ತಾಜಾ ಬನಿಯರು’
ಎಂದು ಹಾಸ್ಯ ಚಟಾಕಿ ಹಾರಿಸಿದರು. ಆ ಸನ್ನಿವೇಶ ಹೀಗಿತ್ತು: ಗಾಂಧೀಜಿಯವರು ಬಂದ ಚಿನ್ನಾಭರಣ ಉಡುಗೊರೆ ಗಳನ್ನು ಏಲಂ ಹಾಕಿದರು. ಗಾಂಧೀಜಿಯವರೇ ಸ್ವತಃ ಕರೆದರೂ ಏಲಂಗೆ ನಿರೀಕ್ಷಿತ ಲಾಭ ಆಗಲಿಲ್ಲ.

“ನಾನೇ ಕರೆದರೂ ಇಷ್ಟೇನಾ ಪ್ರತಿಕ್ರಿಯೆ’ ಎಂದು ಗಾಂಧೀಜಿ ಹೇಳಿದಾಗ ದಿ|ಡಾ| ಎಂ.ವಿ. ಕಾಮತ್‌ ಅವರ ತಂದೆ ವಿಟಲ ಕಾಮತ್‌ ಅವರು ಮುಂದೆ ನಿಂತು “ಇದು ಉಡುಪಿಯ ಮರ್ಯಾದೆ ಪ್ರಶ್ನೆ. ಎಲ್ಲರೂ ಬಿಡ್‌ ನಲ್ಲಿ ಭಾಗವಹಿಸಬೇಕು’ ಎಂದು ಹೇಳಿ ವಾರ್‌ ಕರೆದರು. ಆಗ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಬೆಲೆಗೆ ಏಲಂ ಆಯಿತು. ಆಗ ಗಾಂಧೀಜಿಯವರು “”I thought I am a good baniya. But you are a better baniya than I am'(“ನಾನೇ ಉತ್ತಮ ಬನಿಯಾ ಎಂದು ತಿಳಿದುಕೊಂಡಿದ್ದೆ. ನನಗಿಂತಲೂ ನೀವು ತಾಜಾ ಬನಿಯಾ’) ಎಂದು ವಿಟಲ ಕಾಮತ್‌ರನ್ನುದ್ದೇಶಿಸಿ ಹೇಳಿದರು.

Advertisement

“ಇದು ಗಾಂಧೀಜಿ ಕೊಟ್ಟ ದೊಡ್ಡ ಬಿರುದು ಎಂದು ನನ್ನ ತಂದೆ ಹೇಳುತ್ತಿದ್ದರು’ ಎಂದು ಡಾ|ಎಂ.ವಿ.ಕಾಮತ್‌ ನೆನಪಿಸಿಕೊಳ್ಳುತ್ತಿದ್ದರು. ಈ ಮಾತನ್ನು ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ಯು. ವಿನೀತ್‌ ರಾವ್‌ ಅವರಲ್ಲಿ ಡಾ|ಎಂ.ವಿ.ಕಾಮತ್‌ ನೆನಪಿಸಿಕೊಂಡಿದ್ದರು. ಉಡುಪಿಯಲ್ಲಿ ಸಂಗ್ರಹವಾದ ಮೊತ್ತ 1,240 ರೂ. ಇದರಲ್ಲಿ ಪಡುಬಿದ್ರಿ, ಕಾಪು, ಕಟಪಾಡಿ, ಉದ್ಯಾವರದಿಂದ ಸಂಗ್ರಹವಾದ ಮೊತ್ತವೂ ಸೇರಿದೆ.

ಉಡುಪಿಯ ಬಳಿಕ ಕಲ್ಯಾಣಪುರ, ಬ್ರಹ್ಮಾವರಕ್ಕೆ ಸಂಜೆ 5 ಗಂಟೆಗೆ ಗಾಂಧೀಜಿಯವರು ತೆರಳಿ ಭಾಷಣ ಮಾಡಿದರು. ಇಲ್ಲಿ 239 ರೂ. ಸಂಗ್ರಹವಾಯಿತು. ರಾತ್ರಿ 8 ಗಂಟೆಗೆ ಕುಂದಾಪುರಕ್ಕೆ ತೆರಳಿ ಅಲ್ಲಿ ಭಾಷಣ ಮಾಡಿದರು. ಕುಂದಾಪುರದಲ್ಲಿ 1,143 ರೂ.
ಸಂಗ್ರಹವಾಯಿತು. ರಾತ್ರಿ ಅಲ್ಲಿ ವಾಸ್ತವ್ಯವಿದ್ದು ಫೆ. 26ರಂದು ಸೋಮವಾರ ಮೌನವ್ರತ ಆಚರಿಸಿ ಫೆ. 27ರಂದು ದಯಾವತಿ ಹಡಗಿನ ಮೂಲಕ ಕಾರವಾರಕ್ಕೆ ತೆರಳಿ ತಮ್ಮ ಪ್ರವಾಸವನ್ನು ಮುಂದುವರಿಸಿದರು.

ಗಾಂಧೀಜಿ ಪ್ರತಿಮೆ ಅನಾವರಣ


2000ನೇ ಅ. 2 ಗಾಂಧೀ ಜಯಂತಿಯಂದು ಅಜ್ಜರಕಾಡಿನಲ್ಲಿ ಗಾಂಧೀಜಿಯವರ ಶಿಲಾ ಪ್ರತಿಮೆಯನ್ನು ಸಮಾಜ ಕಲ್ಯಾಣ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ಆನಾವರಣಗೊಳಿಸಿದ್ದರು. ಸಿಂಡಿಕೇಟ್‌ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಡಿ.ಟಿ.ಪೈ, ಸಂಸದರಾಗಿದ್ದ ವಿನಯಕುಮಾರ ಸೊರಕೆ, ಶಾಸಕರಾಗಿದ್ದ ಯು.ಆರ್‌. ಸಭಾಪತಿ, ವಿಧಾನ ಪರಿಷತ್‌ ಸದಸ್ಯರಾಗಿದ್ದ ಡಾ|ವಿ.
ಎಸ್‌.ಆಚಾರ್ಯ, ಜಿಲ್ಲಾಧಿಕಾರಿ ಗೌರವ ಗುಪ್ತ, ಉದ್ಯಮಿ ಕೆ.ಸತೀಶ್ಚಂದ್ರ ಹೆಗ್ಡೆ, ಡಾ|ಮುರಾರಿ ಬಲ್ಲಾಳ್‌, ನಗರಸಭಾಧ್ಯಕ್ಷೆಯಾಗಿದ್ದ ಆನಂದಿ, ಉಪಾಧ್ಯಕ್ಷರಾಗಿದ್ದ ರೆನೋಲ್ಡ್‌ ಪ್ರವೀಣ್‌ಕುಮಾರ್‌, ಪೌರಾಯುಕ್ತ ಡಿ.ಬಸಪ್ಪ
ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next