Advertisement

ಬಯಲು ಶೌಚ ಪ್ರಿಯರಿಗೆ ಸನ್ಮಾನ! :ಚೊಂಬು ಹಿಡಿದು ಹೊರಟವರಿಗೆ ಗುಲಾಬಿ ಹೂ

05:04 PM Jul 29, 2022 | Team Udayavani |

ಗದಗ: ಸಾಮಾನ್ಯವಾಗಿ ಸಾಧನೆ ಮಾಡಿದವರಿಗೆ, ಸಭೆ-ಸಮಾರಂಭಗಳಲ್ಲಿ ಮುಖ್ಯ ಅತಿಥಿಗಳಿಗೆ, ಪ್ರಶಸ್ತಿ ಪುರಸ್ಕೃತರಿಗೆ, ನವ ಜೋಡಿಗಳಿಗೆ ಹೂವಿನ ಹಾರ ಹಾಕಿ ಸತ್ಕರಿಸುವುದು ರೂಢಿ. ಆದರೆ, ಇಲ್ಲೊಂದು ಗ್ರಾಮದಲ್ಲಿ ಬೆಳಗಿನ ಜಾವ ಚೊಂಬು ಹಿಡಿದು ಹೊರಟವರ ಕೈಗೆ ಗುಲಾಬಿ ಹೂ ನೀಡಿ, ಕೊರಳಿಗೆ ಹೂವಿನ ಹಾರ ಹಾಕಿ ಸತ್ಕರಿಸಲಾಗುತ್ತಿದೆ!

Advertisement

ಅರೇ.. ಚೊಂಬು ಹಿಡಿದು ಹೊರಟವರಿಗೆ ಹಾರ ಹಾಕಿ ಸತ್ಕಾರವೇ ಎಂದು ಗಲಿಬಿಲಿಯಾಗಬೇಡಿ. ಗದಗ ಜಿಪಂ ವತಿಯಿಂದ ಸ್ವತ್ಛ ಭಾರತ ಮಿಷನ್‌ ಗ್ರಾಮೀಣ ಯೋಜನೆಯಡಿ ಗ್ರಾಮದಲ್ಲಿ ಶೌಚಾಲಯ ಬಳಕೆ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಚೊಂಬು ಹಿಡಿದು ಹೊರಟ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿರುವ ಪರಿಯಿದು.

ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ 2,380 ಕುಟುಂಬಗಳಿದ್ದು, 2,087 ವೈಯಕ್ತಿಕ ಶೌಚಾಲಯಗಳಿವೆ. ಆದರೆ, ಬಹುತೇಕ ಗ್ರಾಮಸ್ಥರು ವೈಯಕ್ತಿಕ ಶೌಚಾಲಯ ಬಳಸದೆ ಚೊಂಬು ಹಿಡಿದುಕೊಂಡು ರಸ್ತೆ ಬದಿ, ಕೆರೆ ದಂಡೆ ಹಾಗೂ ಖಾಲಿ ಜಾಗದಲ್ಲಿ ಬಯಲು ಬಹಿರ್ದೆಸೆಗೆ ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ವತಿಯಿಂದ ಹಲವು ಬಾರಿ ಗ್ರಾಮಸ್ಥರಿಗೆ ಶೌಚಾಲಯ ಬಳಸಬೇಕು, ರೋಗ ಮುಕ್ತ ಜೀವನ ನಡೆಸಬೇಕು ಎಂದು ತಿಳಿವಳಿಕೆ ನೀಡಿದರೂ ಚೊಂಬು ಹಿಡಿದುಕೊಂಡೇ ಬಯಲು ಬಹಿರ್ದೆಸೆಗೆ ತೆರಳುವುದನ್ನು ನಿಲ್ಲಿಸಿರಲಿಲ್ಲ. ಇದನ್ನರಿತ ಗ್ರಾಪಂ ಅಧಿ ಕಾರಿಗಳು ಹಾಗೂ ಸಿಬ್ಬಂದಿ, ಬಹಿರ್ದೆಸೆಗೆ ಹೋಗುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದಲ್ಲಿ ತಾವೇ ರಸ್ತೆಗಿಳಿದಿದ್ದಾರೆ.

ಚೊಂಬು ಹಿಡಿದವರಿಗೆ ಹಾರ: ಗ್ರಾಮದಲ್ಲಿ ಬೆಳಗಿನ ಜಾವ ಚೊಂಬು ಹಿಡಿದು ಬಹಿರ್ದೆಸೆಗೆ ಹೋಗುವವರಿಗೆ ಹೂವಿನ ಹಾರ ಹಾಕುವುದು, ಗುಲಾಬಿ ಹೂವು ಕೊಡುವುದು ಹಾಗೂ ಸೀಟಿ ಹೊಡೆಯುವ ಮೂಲಕ ಮುಜುಗರದ ಸನ್ನಿವೇಶ ಉಂಟು ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಹೂವಿನ ಹಾರ ಹಾಕಿ, ಕೈಗೆ ಗುಲಾಬಿ ಹೂ ನೀಡಲಾಗುತ್ತಿದೆ. ಶೌಚಾಲಯ ಬಳಕೆ ಮಾಡಿ ರೋಗದಿಂದ ಮುಕ್ತವಾಗಿರಿ ಎಂಬ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಲಹೆ ಪಡೆದ ಸಾರ್ವಜನಿಕರು ಶೌಚಾಲಯ ಬಳಸುವುದಾಗಿ ತಿಳಿಸುತ್ತಿದ್ದಾರೆ. ಕೆಲವರು ಸಮುದಾಯ ಶೌಚಾಲಯ ನಿರ್ಮಿಸಿಕೊಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದಾರೆ.

ಶೌಚಾಲಯ ನಿರ್ಮಾಣಕ್ಕೆ ಸಹಾಯಧನ: ಜಿಪಂ ವತಿಯಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಎಸ್ಸಿ-ಎಸ್ಟಿ ಸಮುದಾಯದವರಿಗೆ 15,000 ರೂ., ಸಾಮಾನ್ಯ ಜನರಿಗೆ 12,000 ರೂ. ಸಹಾಯಧನ ನೀಡಲಾಗುತ್ತಿದೆ. ಸಾರ್ವಜನಿಕರು ಸಿಟಿಜನ್‌’ ಅಪ್ಲಿಕೇಶನ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Advertisement

ಸ್ವಚ್ಛ ಸೋಮವಾರ ಅಭಿಯಾನ: ಗದಗ ಜಿಪಂ ವತಿಯಿಂದ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸ್ವತ್ಛ ಭಾರತ ಮಿಷನ್‌ ಗ್ರಾಮೀಣ ಯೋಜನೆಯಡಿ ಸ್ವತ್ಛ ಸೋಮವಾರ ಅಭಿಯಾನದ ಅಂಗವಾಗಿ ಶೌಚಾಲಯ ಬಳಕೆ, ತ್ಯಾಜ್ಯ ವಸ್ತುಗಳ ನಿರ್ವಹಣೆ, ಅಂತರ್ಜಲ ಪುನಃಶ್ಚೇತನ, ನೀರಿನ ಮೂಲಗಳ ಸಂರಕ್ಷಣೆ, ಮಳೆ ನೀರು ಇಂಗಿ ಸುವ ವಿಧಾನಗಳು, ನೀರಿನ ಸ್ವಚ್ಛತೆ, ಇಂಗು ಗುಂಡಿ ನಿರ್ಮಾಣ ಮಾಡಿಕೊಳ್ಳುವುದು, ವೈಯಕ್ತಿಕ, ಕೌಟುಂಬಿಕ ಸಮುದಾಯ ಶುಚಿತ್ವ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರಮದಾನ, ನನ್ನ ಶಾಲೆ ಕಸ ಮುಕ್ತ ಶಾಲೆ ವಿಶೇಷ ಅಭಿಯಾನ, ಪ್ಲಾಸ್ಟಿಕ್‌ ನಿಷೇಧದ ಕುರಿತು ಕಿರಾಣಿ, ಚಹಾ ಅಂಗಡಿ ಮಾಲಿಕರಿಗೆ ತಿಳಿವಳಿಕೆ ನೀಡುವುದು ಸೇರಿದಂತೆ ಗ್ರಾಮೀಣ ಜನರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಸ್ವಚ್ಛ ಭಾರತ ಮಿಷನ್‌ ಗ್ರಾಮೀಣ ಯೋಜನೆಯಡಿ ಸ್ವತ್ಛ ಸೋಮವಾರ ಅಭಿಯಾನದ ಅಂಗವಾಗಿ ಪ್ರತಿ ಗ್ರಾಮದಲ್ಲಿ ಪ್ರತಿ ಸೋಮವಾರ ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಸ್ಪಂದಿಸುತ್ತಿದ್ದಾರೆ. ●ಸಂತೋಷ ಕುಮಾರ ಪಾಟೀಲ, ತಾಪಂ ಇಒ

ಗ್ರಾಮದಲ್ಲಿ ಅನೇಕ ಜನರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದರೂ ಅವುಗಳನ್ನು ಬಳಸದೆ ಬಯಲನ್ನೇ ಆಧರಿಸಿದ್ದರು. ಗ್ರಾಪಂ ವತಿಯಿಂದ ಹಮ್ಮಿಕೊಂಡ ಜನಜಾಗೃತಿ ಅಭಿಯಾನದಲ್ಲಿ ಮುಜುಗರಕ್ಕೊಳಗಾಗಿ ಕೆಲವರು ಶೌಚಾಲಯಗಳನ್ನು ಬಳಸಲು ಮುಂದಾಗಿದ್ದಾರೆ. ●ತಾಯಪ್ಪ ಕೆಂಗಾರ, ಅಬ್ಬಿಗೇರಿ ಗ್ರಾಮಸ್ಥ

-ಅರುಣಕುಮಾರ ಹಿರೇಮಠ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next