Advertisement

ಸಾಧನೆ ಆಧರಿಸಿ ಅನುದಾನ; ಕಾರ್ಯಕ್ಷಮತೆ ಆಧಾರದಲ್ಲಿ ರಾಜ್ಯಗಳಿಗೆ “ಆಯುಷ್ಮಾನ್‌’ಹಣ ಬಿಡುಗಡೆ

12:37 AM Aug 17, 2022 | Team Udayavani |

ನವದೆಹಲಿ: ಇನ್ನು ಮುಂದೆ ಆಯುಷ್ಮಾನ್‌ ಭಾರತ್‌ ಯೋಜನೆಗೆ ಸಂಬಂಧಿಸಿ ರಾಜ್ಯಗಳ ಕಾರ್ಯಕ್ಷಮತೆ ಹೇಗಿದೆ ಎಂಬುದನ್ನು ಆಧರಿಸಿಯೇ ಅನುದಾನ ಬಿಡುಗಡೆಯಾಗಲಿದೆ!

Advertisement

ಹೀಗೆಂದು ಸ್ವತಃ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್‌ಎಚ್‌ಎ)ವೇ ಮಂಗಳವಾರ ಘೋಷಣೆ ಮಾಡಿದೆ.

ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಆರೋಗ್ಯ ವೃತ್ತಿಪರರ ನೋಂದಣಿ ಮತ್ತು ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವುದರಲ್ಲಿ ಆಯಾ ರಾಜ್ಯಗಳ ಸಾಧನೆಯನ್ನು ಪರಿಗಣಿಸಿ, ಅದರ ಆಧಾರದಲ್ಲಿಯೇ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಎನ್‌ಎಚ್‌ಎ ಹೇಳಿದೆ.

ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ರಾಜ್ಯಗಳ ನಡುವೆ ಆರೋಗ್ಯಕರ ಪೈಪೋಟಿ ಏರ್ಪಡಬೇಕು ಎಂದು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ದೇಶದಲ್ಲಿ ಡಿಜಿಟಲ್‌ ಆರೋಗ್ಯ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್‌ಎಚ್‌ಎ), ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ನಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಜಿಲ್ಲೆಗಳು, ಆರೋಗ್ಯ ಕೇಂದ್ರಗಳನ್ನು ಗುರುತಿಸುವ ಕೆಲಸ ಮಾಡಲಿದೆ. ಹೆಲ್ತ್‌ ಫೆಸಿಲಿಟಿ ರಿಜಿಸ್ಟ್ರಿ(ಎಚ್‌ಎಫ್ಆರ್‌) ಮತ್ತು ಆರೋಗ್ಯಸೇವಾ ವೃತ್ತಿಪರರ ನೋಂದಣಿ(ಎಚ್‌ಪಿಆರ್‌)ಯಲ್ಲಿನ ದತ್ತಾಂಶಗಳ ದಾಖಲಾತಿ, ಆರೋಗ್ಯಸೇವೆಗಳ ಲಭ್ಯತೆಯಲ್ಲಿನ ಸಾಧನೆಯನ್ನು ಮೊದಲು ಪರಿಶೀಲಿಸಲಾಗುತ್ತದೆ.

Advertisement

ಆ.1, 2022ರಿಂದ ಸೆ.19, 2022ರವರೆಗೆ ಅಂದರೆ 50 ದಿನಗಳ ಅವಧಿಯಲ್ಲಿ ಯಾರು ಹೆಚ್ಚಿನ ಸಾಧನೆ ಮಾಡಿರುತ್ತಾರೋ ಅಂಥ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಜಿಲ್ಲಾ ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗುತ್ತದೆ ಎಂದು ಎನ್‌ಎಚ್‌ಎ ಮಾಹಿತಿ ನೀಡಿದೆ.

2021ರ ಸೆಪ್ಟೆಂಬರ್‌ನಲ್ಲಿ ದೇಶವ್ಯಾಪಿ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಅನುಷ್ಠಾನಗೊಂಡ ಬಳಿಕ, ಈವರೆಗೆ 23 ಕೋಟಿ ಆರೋಗ್ಯ ಗುರುತಿನ ಚೀಟಿಗಳು, 1.14 ಲಕ್ಷ ಆರೋಗ್ಯ ಕೇಂದ್ರಗಳು ನೋಂದಣಿಯಾಗಿವೆ ಎಂದು ಎನ್‌ಎಚ್‌ಎ ತಿಳಿಸಿದೆ. ಇದಲ್ಲದೇ, ಎಚ್‌ಪಿಆರ್‌ನಲ್ಲಿ 33 ಸಾವಿರ ಆರೋಗ್ಯಸೇವಾ ವೃತ್ತಿಪರರು ನೋಂದಣಿ ಮಾಡಿಕೊಂಡಿದ್ದಾರೆ. 6.6 ಲಕ್ಷ ಎಬಿಎಚ್‌ಎ ಆ್ಯಪ್‌ಗ್ಳು ಡೌನ್‌ಲೋಡ್‌ ಆಗಿವೆ, 3.4 ಲಕ್ಷ ಆರೋಗ್ಯ ದಾಖಲೆಗಳು ವ್ಯಕ್ತಿಗಳ ಎಬಿಎಚ್‌ಎ ಸಂಖ್ಯೆಯೊಂದಿಗೆ ಲಿಂಕ್‌ ಆಗಿವೆ.

ಎಲ್ಲ ರಾಜ್ಯಗಳೂ ಕೇಂದ್ರದ ಅನುದಾನವನ್ನು ಸಮಯೋಚಿಸವಾಗಿ ಬಳಸಬೇಕು. ಆಗ ಮಾತ್ರ ಜನಕೇಂದ್ರಿತ ಆರೋಗ್ಯ ಸೇವೆಗಳನ್ನು ಬೇರುಮಟ್ಟದಲ್ಲಿ ಜಾರಿ ಮಾಡಲು ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಬಲಿಷ್ಠಗೊಳಿಸಲು ಸಾಧ್ಯ.
– ಮನಸುಖ ಮಾಂಡವಿಯ, ಕೇಂದ್ರ ಆರೋಗ್ಯ ಸಚಿವ

ನಿಲ್ದಾಣ, ಧಾರ್ಮಿಕ ಸ್ಥಳಗಳಲ್ಲೂ ಲಸಿಕೆ ಅಭಿಯಾನ ನಡೆಸಿ
ದೇಶದಲ್ಲಿ ಕೊರೊನಾ ಮುನ್ನೆಚ್ಚರಿಕಾ ಡೋಸ್‌ಗೆ ಅರ್ಹರಾಗಿರುವವರ ಪೈಕಿ ಕೇವಲ ಶೇ.17 ಮಂದಿ ಮಾತ್ರ ಅದನ್ನು ಪಡೆದಿರುವ ಹಿನ್ನೆಲೆ ಎಲ್ಲೆಡೆ ಲಸಿಕೆ ಅಭಿಯಾನವನ್ನು ಚುರುಕುಗೊಳಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಮಂಗಳವಾರ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ. ರೈಲ್ವೆ ನಿಲ್ದಾಣಗಳು, ಬಸ್‌ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಧಾರ್ಮಿಕ ಸ್ಥಳಗಳಲ್ಲೂ ಲಸಿಕೆ ಅಭಿಯಾನ ನಡೆಸುವಂತೆ ಅವರು ರಾಜ್ಯಗಳ ಆರೋಗ್ಯ ಸಚಿವರಿಗೆ ಸೂಚಿಸಿದ್ದಾರೆ. ಜು.14ರವರೆಗೆ ದೇಶದಲ್ಲಿ ಕೇವಲ ಶೇ.8 ಅರ್ಹರು ಮಾತ್ರವೇ ಮುನ್ನೆಚ್ಚರಿಕಾ ಡೋಸ್‌ ಪಡೆದಿದ್ದರು. ಅದು ಆ.15ಕ್ಕೆ ಶೇ.17ಕ್ಕೆ ಏರಿದೆ. ಆ.15ರಿಂದ ಕೇಂದ್ರ ಸರ್ಕಾರವು 75 ದಿನಗಳ ಕಾಲ ವಿಶೇಷ ಲಸಿಕೆ ಅಭಿಯಾನ ನಡೆಸುತ್ತಿದ್ದು, 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹರಿಗೆ ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಮುನ್ನೆಚ್ಚರಿಕಾ ಡೋಸ್‌ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next