Advertisement

ಕೋವಿಡ್‌ನಿಂದಾದ ಶೈಕ್ಷಣಿಕ ನಷ್ಟ ತುಂಬಿ; ಕೃಷ್ಣಮೂರ್ತಿ

05:40 PM Jun 24, 2022 | Team Udayavani |

ಕೋಲಾರ: ಕಲಿಕಾ ಹಾಳೆಗಳನ್ನು ಬಳಸುವ ಮೂಲಕ ಕೋವಿಡ್‌ ಸಂದರ್ಭದಲ್ಲಿ ಆದ ಶೈಕ್ಷಣಿಕ ನಷ್ಟವನ್ನು ತುಂಬಿ, ಪ್ರಾಥಮಿಕ ಶಾಲೆಗಳಲ್ಲಿ ಅನೇಕ ಕಡೆ ಹಿಂದಿ ಕಲಿಕೆಗೆ ಅವಕಾಶವಿಲ್ಲ, ಪ್ರೌಢಶಾಲೆಯಲ್ಲಿ ಹೆಚ್ಚಿನ ಮತುವರ್ಜಿ ವಹಿಸಿ ಕಲಿಕಾ ದೃಢೀಕರಣ ಮಾಡಿ ಎಂದು ಜಿಲ್ಲೆಯ ಹಿಂದಿ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಸಲಹೆ ನೀಡಿದರು.

Advertisement

ಕೆಜಿಎಫ್‌ ನಗರದ ಭಗವಾನ್‌ ಮಹಾವೀರ್‌ ಜೈನ್‌ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಆಶ್ರಯದಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಹಿಂದಿ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಕಾ ಚೇತರಿಕೆ ಹಾಳೆಗಳನ್ನು ಬಳಸುವಂತೆ ಸೂಚಿಸಿದ ಅವರು, ಮಕ್ಕಳ ಕಲಿಕಾ ಪ್ರಗತಿಯನ್ನು ವಿಶ್ಲೇಷಿಸಿ, ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುವಂತೆ ಮಾಡುವ ಹೊಣೆಯನ್ನು ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ಸುಲಭಗೊಳಿಸಲು ಪ್ರಯತ್ನಿಸಿ: ಹಿಂದಿ ಭಾಷೆ ಕಲಿಕೆಯನ್ನು ಸುಲಭಗೊಳಿಸಲು ಪ್ರಯತ್ನಿಸಿ, ಮಕ್ಕಳಿಗೆ ಪ್ರೀತಿಯಿಂದ ಕಲಿಯುವ ವಾತಾವರಣ ಸೃಷ್ಟಿಸಿ, 8ನೇ ತರಗತಿಯಲ್ಲಿ ನೀವು ವರ್ಣಮಾಲೆಯಿಂದಲೇ ಕಲಿಕೆ ಆರಂಭಿಸಬೇಕಾದ ಕಾರಣ ನಿಮಗೆ ಒತ್ತಡ ಇರುತ್ತದೆ ಆದರೆ ಅದನ್ನು ಮೀರಿ ನೀವು ಮಕ್ಕಳ ಕಲಿಕೆ ದೃಢೀಕರಣ ಮಾಡಬೇಕು ಎಂದು ತಿಳಿಸಿದರು.

ಉತ್ತಮ ಅಂಕ ಗಳಿಕೆ ಸಾಧ್ಯ: ಜಿಲ್ಲಾ ಪರೀಕ್ಷಾ ನೋಡಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌, ಶಾಲೆಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ, ಶಿಕ್ಷಕರು ಮತ್ತು ಮಕ್ಕಳಲ್ಲಿ ಭಾಷೆ ಕುರಿತಂತೆ ಕೌಶಲ್ಯ ಬೆಳೆಸಲು ತಿಳಿಸಿ, ಶಿಕ್ಷಕರು ತರಗತಿಯಲ್ಲಿ ಹಿಂದಿ ಭಾಷೆಯನ್ನೇ ಮಾತನಾಡುವ ಮೂಲಕ ಭಾಷೆ ಕಲಿಸುವ ಕೆಲಸವಾಗಬೇಕು. ಆಗ ಮಾತ್ರ ಹಿಂದಿ ವಿಷಯದಲ್ಲೂ ಉತ್ತಮ ಅಂಕ ಗಳಿಕೆ ಸಾಧ್ಯ ಎಂದು ಹೇಳಿದರು.

Advertisement

ಶಿಕ್ಷಣ ಇಲಾಖೆ ಅತಿ ಹೆಚ್ಚು ಶ್ರಮ: ಮಹಾವೀರ್‌ ಜೈನ್‌ ಕಾಲೇಜಿನ ಪ್ರಾಂಶುಪಾಲೆ ರೇಖಾ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗುಣಾತ್ಮಕತೆ ಕಾಪಾಡುವಲ್ಲಿ ಶಿಕ್ಷಣ ಇಲಾಖೆ ಅತಿ ಹೆಚ್ಚು ಶ್ರಮವಹಿಸಿದೆ. ಡಿಡಿಪಿಐ ಕೃಷ್ಣಮೂರ್ತಿ, ಪರೀಕ್ಷಾ ನೋಡಲ್‌ ಅಧಿಕಾರಿ ನಾಗೇಂದ್ರಪ್ರಸಾದ್‌ ನೇತೃತ್ವದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕೆಗೆ ಪೂರಕವಾಗಿ ಒದಗಿಸಿದ ಅಧ್ಯಾಯವಾರು ಪ್ರಶ್ನೋತ್ತರ ಮಾಲಿಕೆ, ನನ್ನನ್ನೊಮ್ಮೆ ಗಮನಿಸಿ ಮತ್ತಿತರ ಸಾಧನಗಳು ಹೆಚ್ಚು ಉಪಯುಕ್ತವಾಯಿತು ಎಂದು ಹೇಳಿದರು.

ಗುಣಾತ್ಮಕ ಫ‌ಲಿತಾಂಶ: ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಹಾಗೂ ಗುಣಾತ್ಮಕ ಫಲಿತಾಂಶ ಬಂದಿದೆ. ಇದಕ್ಕೆ ಕಾರಣರಾದ ಶಿಕ್ಷಕರನ್ನು ಅಭಿನಂದಿಸಿ, ಪ್ರಾಥಮಿಕ ಶಾಲಾ ಹಂತದಲ್ಲಿ ಅನೇಕ ಶಾಲೆಗಳಲ್ಲಿ ಹಿಂದಿ ಕಲಿಕೆಗೆ ಅವಕಾಶವಿಲ್ಲದ ಕಾರಣ, ಪ್ರೌಢಶಾಲೆಗಳಲ್ಲಿ ಕಲಿಕೆ ಸ್ವಲ್ಪ ಕಷ್ಟವಾದರೂ ಮೂರು ವರ್ಷಗಳಲ್ಲಿ ಮಕ್ಕಳನ್ನು ಸಮರ್ಥವಾಗಿ ಸಿದ್ಧಗೊಳಿಸುವಲ್ಲಿ ಹಿಂದಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಗೌರವಾಧ್ಯಕ್ಷೆ ಎಂ.ಆರ್‌.ಜಯಂತಿ, ಕಾರ್ಯದರ್ಶಿ ಎಲ್‌.ನರಸಿಂಹಮೂರ್ತಿ, ಖಜಾಂಚಿ ವೇಣುಗೋಪಾಲ್‌, ಸೋಮಶೇಖರ್‌, ಅರಾಭಿಕೊತ್ತನೂರು ಪ್ರೌಢಶಾಲೆಯ ಶಿಕ್ಷಕಿ ಸಿದ್ದೇಶ್ವರಿ, ಜಿಲ್ಲೆಯ ಎಲ್ಲಾ ಹಿಂದಿ ಶಿಕ್ಷಕರು, ಸಂಘದ ಪದಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next