Advertisement

ಸಾಮಾಜಿಕ ಅಂತರದಿಂದ ಬಹಿಷ್ಕಾರದತ್ತ…

12:07 PM Apr 28, 2020 | Sriram |

ಬೆಂಗಳೂರು: ವಿಶ್ವವ್ಯಾಪಿಯಾಗಿ ಬಾಧಿ ಸುತ್ತಿರುವ ಕೋವಿಡ್ 19 ನಮ್ಮ ಜನಪ್ರತಿನಿಧಿಗಳ ಹೊಸ ಮುಖದ ಪ್ರದರ್ಶನಕ್ಕೆ ಕಾರಣವಾಗಿದೆ. ಆ “ಹೊಸಮುಖ’ಕ್ಕೆ ಪಕ್ಷಾತೀತ ಬೆಂಬಲ ನಮ್ಮ ರಾಜ್ಯ ದಲ್ಲಂತೂ ಅಭೂತಪೂರ್ವವಾಗಿ ವ್ಯಕ್ತವಾಗಿದೆ!

Advertisement

ಅದೇ ನವ ಅಸ್ಪೃಶ್ಯತೆ! ಕೋವಿಡ್ 19 ತಡೆಗೆ ಇರ ಬೇಕಾದ ಸಾಮಾಜಿಕ ಅಂತರ ಈ ನಾಯಕರ ನಡವಳಿಕೆಯಿಂದ “ಸಾಮಾಜಿಕ ಬಹಿಷ್ಕಾರ’ದ ರೂಪ ತಳೆಯುತ್ತಿದೆ.ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ,ಅವರದೇ ಪಕ್ಷದ ಎಂಎಲ್‌ಸಿ ಶ್ರೀಕಂಠೇ ಗೌಡ, ಬಿಜೆಪಿಯಿಂದ ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಲ್ಲಿ ಒಬ್ಬರಾದ ಡಾ| ಭರತ್‌ ಶೆಟ್ಟಿ, ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಹೀಗೆ ರಾಜ್ಯದ ಅಲ್ಲಲ್ಲಿ, ಒಬ್ಬೊಬ್ಬ ನಾಯಕರು ತಮ್ಮದೇ ರೀತಿಯಲ್ಲಿ “ಸಾಮಾಜಿಕ ಪಿಡುಗೊಂದರ’ ಉದಯಕ್ಕೆ ಕಾರಣರಾಗುತ್ತಿರುವುದು ಒಟ್ಟಾರೆ ಬೆಳವಣಿಗೆಗಳಿಂದ ವ್ಯಕ್ತವಾಗುತ್ತಿದೆ.

ಪಾದರಾಯನಪುರ ಘಟನೆಯನ್ನೇ ಉದಾ ಹರಿಸಿದರೆ ಅಲ್ಲಿ ಕೋವಿಡ್ 19 ಸೇನಾನಿಗಳು “ತನ್ನ ಅಪ್ಪಣೆ ಇಲ್ಲದೆ ಯಾಕೆ ಹೋದರು’ ಎಂಬ ಶಾಸಕ ಜಮೀರ್‌ ಅಹಮದ್‌ ಹೇಳಿಕೆ ವಿಚಿತ್ರ ರಾಜಕೀಯ ತಿರುವುಗಳನ್ನು ಪಡೆಯಿತು.

ಇದಕ್ಕಿಂತಲೂ ಕಟುವಾದ ಬೆಳವಣಿಗೆಗಳು ಆ ಬಳಿಕ ನಡೆದವು. ಕೋವಿಡ್ 19 ಯೋಧರ ವಿರುದ್ಧ ಪುಂಡಾಟ ನಡೆಸಿದ ಸುಮಾರು 122 ಮಂದಿಯನ್ನು ಸರಕಾರ ರಾಮನಗರ ಕಾರಾಗೃಹಕ್ಕೆ ಸಾಗಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೋವಿಡ್ 19 ಮುಕ್ತವಾಗಿರುವ ರಾಮನಗರಕ್ಕೆ ಪ್ರವೇಶಿಸಬಾರದೆಂದು ಎಚ್ಚರಿಕೆಯ ಬಾಣವೆಸೆದರು. “ಉಗ್ರ ಪ್ರತಿಭಟನೆ’ಯ ಎಚ್ಚರಿಕೆ ಯನ್ನೂ ನೀಡಿದರು. ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಅವರೂ ದನಿಗೂಡಿಸಿ ಸರಕಾರಕ್ಕೆ ಪ್ರತ್ಯೇಕ ಎಚ್ಚರಿಕೆ ಸಂದೇಶ ಕಳುಹಿಸಿದರು.

ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಮನಗರದ ಬದಲಿಗೆ ಸಚಿವರಾದ ಡಾ| ಅಶ್ವತ್ಥನಾರಾಯಣ ಅವರ ಮಲ್ಲೇಶ್ವರದ ಮನೆಯಲ್ಲೇ ಶಂಕಿತರನ್ನು ಇರಿಸಬಹುದಲ್ಲವೇ ಎಂದು ವ್ಯಂಗ್ಯವಾಡಿದ್ದರು.

Advertisement

ಮರುದಿನವೇ ಪಾದರಾಯನಪುರದ ಅಷ್ಟೂ ಮಂದಿಯನ್ನು ರಾಮಕೃಷ್ಣ ಹೆಗಡೆ ನಗರದ ಹಜ್‌ ಭವನಕ್ಕೆ ಕಳುಹಿಸಲು ಸರಕಾರ ಉದ್ದೇಶಿಸಿತು. ಹಜ್‌ ಭವನದಲ್ಲಿ ಕ್ವಾರಂಟೈನ್ನಲ್ಲಿದ್ದ ವಿದೇಶೀಯರನ್ನು ಯಲಹಂಕ ಕ್ಷೇತ್ರದ ರೆಸಾರ್ಟ್‌ವೊಂದಕ್ಕೆ ಶಿಫ್ಟ್ ಮಾಡಲಾಯಿತು.

ಆದರೆ ಈ ಕ್ಷೇತ್ರದ ಶಾಸಕ ಎಸ್‌.ಆರ್‌. ವಿಶ್ವನಾಥ್‌ ತಮ್ಮ ಬೆಂಬಲಿಗರೊಂದಿಗೆ ಯಲಹಂಕದತ್ತ ” ಕೋವಿಡ್ 19 ಶಂಕಿತರು’ ಬರಲೇಬಾರದೆಂದು ಪಟ್ಟುಹಿಡಿದರು.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಪಾದರಾಯನಪುರದ ಪುಂಡರು ಯಾರಿಗೂ ಬೇಡವಾದುದಕ್ಕೆ ಕಾರಣ ಕೋವಿಡ್ 19. ವೈದ್ಯ ಜಗತ್ತು, ಪ್ರಧಾನಿ ಸಚಿವಾಲಯ, ಮುಖ್ಯಮಂತ್ರಿ ಹೀಗೆ ಅನೇಕರು ಕೊರೊನಾ ಒಂದು ಸಾಮಾಜಿಕ ಪಿಡುಗಲ್ಲ, ಅದೊಂದು ಸಾಂಕ್ರಾಮಿಕ ರೋಗ ಎಂದು ಘಂಟಾಘೋಷವಾಗಿ ಹೇಳುತ್ತಿದ್ದರೆ, ಇತ್ತ ನಮ್ಮ ರಾಜಕೀಯ ನೇತಾರರು ಕೋವಿಡ್ 19 ಒಂದು ಸಾಮಾಜಿಕ ಪಿಡುಗು ಎಂಬಂತೆ ವರ್ತಿಸುತ್ತಿರುವುದು ಅಚ್ಚರಿ ತರುತ್ತದೆ.

ಇನ್ನೊಂದೆಡೆ ಮಂಡ್ಯ ನಗರದಲ್ಲಿ ಶಾಸಕ ಶ್ರೀಕಂಠೇಗೌಡ ಮತ್ತವರ ಪುತ್ರ ಅಲ್ಲಿನ ಸಭಾಭವನವೊಂದರಲ್ಲಿ ಕೋವಿಡ್ 19 ಪರೀಕ್ಷೆಗೇ ಅಡ್ಡಿ ಉಂಟುಮಾಡಿದರು. ಇಲ್ಲೂ ಎದ್ದು ಕಾಣಿಸಿದ್ದು ಕೋವಿಡ್ 19 ಎಂಬುದು ಸಾಮಾಜಿಕ ಪಿಡುಗು ಅನ್ನುವಂತೆ ನೋಡುವ ಜನಪ್ರತಿನಿಧಿಗಳ ಮನೋಭಾವ!

ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19ಪೀಡಿತ ಮಹಿಳೆ ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆಯನ್ನು ಇಲ್ಲಿ ನಡೆಸಬಾರದು ಎಂದು ಪ್ರತಿಭಟಿಸಿದ ಜನರ ಜತೆಗೆ ಶಾಸಕ ಡಾ| ಭರತ್‌ ಶೆಟ್ಟಿ ಸೇರಿಕೊಂಡರು.. ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್, ರೆಡ್‌ಕ್ರಾಸ್‌ ಸಂಸ್ಥೆ, ಕೇಂದ್ರ ಸರಕಾರ, ರಾಜ್ಯ ಸರಕಾರ ಎಲ್ಲರೂ ಕೋವಿಡ್ 19 ಸಾಮಾಜಿಕ ಪಿಡುಗಲ್ಲ, ಅದೊಂದು ಸಾಂಕ್ರಾಮಿಕ ರೋಗವಷ್ಟೇ ಎಂದು ಪದೇ ಪದೆ ಹೇಳುತ್ತಿವೆ. ರೋಗ ಹರಡದಂತೆ ಸಾಮಾಜಿಕ ಅಂತರ ಕಾಪಾಡಬೇಕು ಅಷ್ಟೇ. ಸಾಮಾಜಿಕ ಪಿಡುಗಲ್ಲ ಎಂದು ವೈದ್ಯಲೋಕವೂ ಒಕ್ಕೊರಲಿನಿಂದ ಹೇಳುತ್ತಿದೆ. ನಮ್ಮ ಜನಪ್ರತಿನಿಧಿಗಳು ರಾಜಕೀಯ ಕಾರಣಕ್ಕೆ ಭಾವನಾತ್ಮಕವಾಗಿ ಯೋಚಿಸುವ ಬದಲಾಗಿ ವೈಜ್ಞಾನಿಕವಾಗಿ ಚಿಂತಿಸಬೇಕಿದೆ.

ಉದಯವಾಣಿ ವಿಶ್ಲೇಷಣೆ
ನವೀನ್‌ ಅಮ್ಮೆಂಬಳ

Advertisement

Udayavani is now on Telegram. Click here to join our channel and stay updated with the latest news.

Next