Advertisement

ಕರಾವಳಿಯಿಂದ ರಾಷ್ಟ್ರ ರಾಜಕಾರಣದತ್ತ!

12:29 AM Apr 06, 2019 | mahesh |

ಮಂಗಳೂರು: ಸಂಸದರಾದ ಬಳಿಕ ರಾಷ್ಟ್ರ ರಾಜಕೀಯದಲ್ಲಿ ಗಮನಾರ್ಹ ಸಾಧನೆ ಬರೆದ ಜನ ನಾಯಕರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಭಾರತದ ಸಂವಿಧಾನ ರಚನ ಸಭೆಯ ಸದಸ್ಯರಾಗಿದ್ದ ಬೆನಗಲ್‌ ಶಿವರಾವ್‌ 1951- 52ರ ಪ್ರಥಮ ಮಹಾ ಚುನಾವಣೆಯಲ್ಲಿ ಗೆದ್ದು ಸಂಸದರಾಗಿ, ಬಳಿಕ ರಾಜ್ಯ ಸಭೆಗೆ ನೇಮಕಗೊಂಡವರು. ಅಪ್ಪಟ ಗಾಂಧಿವಾದಿ ಎಂದೇ ಕರೆಸಿಕೊಂಡಿದ್ದ ಕೆ.ಆರ್‌. ಆಚಾರ್‌ 1957ರ ಚುನಾವಣೆಯಲ್ಲಿ ಗೆದ್ದು ಮಂಗಳೂರು ಕ್ಷೇತ್ರದ ಪ್ರಥಮ ಸಂಸದರಾದರು. 1962ರಲ್ಲಿ ಸಂಸದರಾದ ಕಾಸರ ಗೋಡಿನ
ಎ. ಶಂಕರ ಆಳ್ವರು ಎಐಸಿಸಿ ಸದಸ್ಯರಾಗಿದ್ದರು. 1972ರಲ್ಲಿ ಅವರು ಪುತ್ತೂರಿನ ಶಾಸಕರಾಗಿ ಅರಸು ಸಂಪುಟದಲ್ಲಿ ಸಚಿವರಾಗಿದ್ದರು. ಜೈಲುವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ ಕೆ.ಕೆ. ಶೆಟ್ಟಿ ಪತ್ರಕರ್ತರಾಗಿ ಗುರುತಿಸಿಕೊಂಡವರು. 1956ರಲ್ಲಿ ಮೈಸೂರು ರಾಜ್ಯದ ವಿ. ಪರಿಷತ್‌ಗೆ ಆಯ್ಕೆಯಾದ ಶೆಟ್ಟಿ ಅವರು, 1971ರಲ್ಲಿ ಮಂಗಳೂರಿನ ಸಂಸದರಾದರು.

Advertisement

ಪೂಜಾರಿ ದಾಖಲೆ
1977ರಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಜನಾರ್ದನ ಪೂಜಾರಿ ಬಳಿಕ ಸತತ ಮೂರು ಬಾರಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದರು. ಹಣಕಾಸು ಸಚಿವರಾಗಿ ಅವರು ಆರಂಭಿಸಿದ ಸಾಲ ಮೇಳ ಜನಪ್ರಿಯವಾಗಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್‌ ಪಾರ್ಲಿಮೆಂಟರಿ ಬೋರ್ಡ್‌ ಸದಸ್ಯ ಸಹಿತ ಹಲವು ಜವಾಬ್ದಾರಿಗಳನ್ನು ಅವರು ನಿರ್ವಹಿಸಿದರು. 1994ರಿಂದ 2000, 2002ರಿಂದ 2008ರ ವರೆಗೆ ರಾಜ್ಯ ಸಭಾ ಸದಸ್ಯರಾಗಿದ್ದರು.1983ರಲ್ಲಿ ಮಂಗಳೂರು ಕ್ಷೇತ್ರದಿಂದ ಗೆದ್ದ ಪ್ರಥಮ ಬಿಜೆಪಿ ಶಾಸಕ ವಿ. ಧನಂಜಯ ಕುಮಾರ್‌ ಗೆಲುವನ್ನು ನಾಲ್ಕು ಬಾರಿಗೆ ವಿಸ್ತರಿಸಿದ್ದರು, ವಾಜಪೇಯಿ ಸರಕಾರದಲ್ಲಿ ಸಚಿವರೂ ಆದರು.

ಎರಡು ಡಿವಿ ಸಂಸದ
ಎರಡು ಬಾರಿ ಪುತ್ತೂರಿನಿಂದ ಶಾಸಕರಾಗಿದ್ದ ಡಿ.ವಿ. ಸದಾನಂದ ಗೌಡ 2004ರಲ್ಲಿ ಮಂಗಳೂರು ಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾದರು. 2009ರಲ್ಲಿ ಉಡುಪಿಯಿಂದಲೂ ಆಯ್ಕೆಯಾದರು. ಸಂಸತ್‌ ಅವಧಿ ಮುಕ್ತಾಯಕ್ಕೆ ವರ್ಷ ಬಾಕಿ ಇರುವಾಗಲೇ ಮುಖ್ಯಮಂತ್ರಿ ಸ್ಥಾನ ದೊರೆಯಿತು. 2014ರಲ್ಲಿ ಬೆಂಗಳೂರು ಉತ್ತರದಿಂದ ಗೆದ್ದು ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆದರು.

ಸಚಿವ ಸ್ಥಾನ ಒಲ್ಲೆ ಅಂದ ಮಲ್ಯರು!
1952ರಿಂದ 1967ರ ವರೆಗೆ (3 ಅವಧಿ) ಉಡುಪಿಯಿಂದ ಚುನಾಯಿತರಾದ ಉಳ್ಳಾಲ ಶ್ರೀನಿವಾಸ ಮಲ್ಯ ಅವರು ಕೇಂದ್ರದಲ್ಲಿ ಸಚಿವ ಸಿಕ್ಕಿದರೂ ಒಪ್ಪಲಿಲ್ಲ. ಬದಲಾಗಿ ಜಿಲ್ಲೆಗೆ ಮಹತ್ವದ ಯೋಜನೆಗಳನ್ನು ಮಂಜೂರು ಮಾಡುವಂತೆ ಕೋರಿದ್ದರು. ಆಂಗ್ಲ ಸರಕಾರ ಕಾಲದಲ್ಲಿ ಗೋರಕ್‌ಪುರ ಜಿಲ್ಲೆಯ ಕಲೆಕ್ಟರ್‌ ಹಾಗೂ ಸ್ವಾತಂತ್ರ್ಯ ಬಳಿಕ ಆರೋಗ್ಯ ಇಲಾಖೆಯ ಅಧಿಕಾರಿ ಯಾಗಿದ್ದ ಜೆ.ಎಂ. ಲೋಬೋ ಪ್ರಭು 1967ರಲ್ಲಿ ಉಡುಪಿಯಿಂದ ಸಂಸದರಾಗಿ ಆಯ್ಕೆಯಾದರು. 1970ರಲ್ಲಿ ಪರ್ಕಳ ರಂಗನಾಥ ಶೆಣೈ ಅವರು ಉಡುಪಿಯಿಂದ ಗೆದ್ದು ಇಂದಿರಾ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. 1952ರ ಪ್ರಥಮ ಚುನಾ ವಣೆಯಲ್ಲಿ ಉಡುಪಿ ಶಾಸಕರಾದ ಟಿ.ಎ.ಪೈ 1972ರಲ್ಲಿ ರಾಜ್ಯಸಭಾ ಸದಸ್ಯರಾಗಿ ಇಂದಿರಾ ಸರಕಾರದಲ್ಲಿ ರೈಲ್ವೇ ಸಚಿವರಾದರು. ಬೃಹತ್‌ ಕೈಗಾರಿಕೆ ಸೇರಿ ದಂತೆ ವಿವಿಧ ಜವಾಬ್ದಾರಿ ನಿರ್ವ ಹಿಸಿದರು. 1977ರಲ್ಲಿ ಉಡುಪಿಯ ಸಂಸದರಾದ ಅವರು ವಿಪಕ್ಷದ ನಾಯಕರಾಗಿದ್ದರು.

1980ರಲ್ಲಿ ಉಡುಪಿಯ ಸಂಸದರಾದ ಆಸ್ಕರ್‌ ಫೆರ್ನಾಂಡಿಸ್‌ ಆ ಬಳಿಕ 1984, 1989, 1991 ಮತ್ತು 1996ರಲ್ಲಿ ಗೆದ್ದು ಸಂಸದರಾದರು. ರಾಜೀವ್‌, ಸೋನಿಯಾ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಕಾಂಗ್ರೆಸ್‌ನ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. 1998ರಿಂದ ಸತತ 4 ಬಾರಿ ರಾಜ್ಯಸಭೆಗೆ ನೇಮಕಗೊಂಡು ಯುಪಿಎ ಸರಕಾರದಲ್ಲಿ ಸಚಿವರಾಗಿದ್ದರು.

Advertisement

ಕೊಡಗಿನ ಸಿಎಂ ಮಂಗಳೂರಿನ ಎಂಪಿ!
ಕೊಡಗಿನ ಅಟ್ಟೂರಿನಲ್ಲಿ ಜನಿಸಿದ ಸಿ.ಎಂ. ಪೂಣಚ್ಚ ಅವರು ಸ್ವಾತಂತ್ರ್ಯ ಪೂರ್ವದ ಭಾರತ ಸಂವಿಧಾನ ಅಸೆಂಬ್ಲಿಗೆ ಚುನಾಯಿತರಾಗಿದ್ದರು. 1951ರಲ್ಲಿ ಕೊಡಗು ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅವರು ಗೆದ್ದು ಮುಖ್ಯಮಂತ್ರಿಯಾದರು. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ ಪುಟ್ಟ ರಾಜ್ಯ ಕೊಡಗು ಜಿಲ್ಲೆಯಾಗಿ ಮೈಸೂರು ರಾಜ್ಯದಲ್ಲಿ ವಿಲೀನವಾಯಿತು. 1967ರ ಚುನಾವಣೆಯಲ್ಲಿ ಮಂಗಳೂರಿನಿಂದ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ರೈಲ್ವೇ ಸಚಿವರಾದರು. ಕೇಂದ್ರದಲ್ಲಿ ಜನತಾ ಸರಕಾರ ಆಡಳಿತಕ್ಕೆ ಬಂದಾಗ 1978 ಮತ್ತು 1980ರಲ್ಲಿ ಮಧ್ಯಪ್ರದೇಶ, ಒಡಿಶಾ ರಾಜ್ಯಪಾಲರಾದರು.

ಮೊದಲು ಶಾಸಕ-ಬಳಿಕ ಸಂಸದ!
1994ರ ಬೈಂದೂರಿನ ಬಿಜೆಪಿ ಶಾಸಕ ಐ.ಎಂ. ಜಯರಾಮ ಶೆಟ್ಟಿ 1998ರಲ್ಲಿ ಉಡುಪಿ ಸಂಸದರಾಗಿದ್ದರು. 1985 ಮತ್ತು 1989ರಲ್ಲಿ ಪುತ್ತೂರಿನ ಶಾಸಕರಾಗಿದ್ದ ಕಾಂಗ್ರೆಸ್‌ನ ವಿನಯ್‌ ಕುಮಾರ್‌ ಸೊರಕೆ 1999ರಲ್ಲಿ ಸಂಸದರಾದರು. ಬ್ರಹ್ಮಾವರ ಶಾಸಕರಾಗಿದ್ದ ಜಯಪ್ರಕಾಶ್‌ ಹೆಗ್ಡೆ 2012ರಲ್ಲಿ ಉಪಚುನಾವಣೆಯಲ್ಲಿ ಗೆದ್ದು ಸಂಸದರಾದರು. 4 ಬಾರಿ ಕಾಂಗ್ರೆಸ್‌ ಶಾಸಕಿಯಾಗಿದ್ದ ಮನೋರಮಾ ಮಧ್ವರಾಜ್‌ 2004ರಲ್ಲಿ ಬಿಜೆಪಿ ಸೇರಿ ಸಂಸದೆಯಾದರು. 2004ರಲ್ಲಿ ವಿ. ಪರಿಷತ್‌ ಸದಸ್ಯರಾಗಿದ್ದ ಶೋಭಾ ಕರಂದ್ಲಾಜೆ 2008ರಲ್ಲಿ ಯಶವಂತಪುರದ ಶಾಸಕಿಯಾಗಿ 2014ರಲ್ಲಿ ಉಡುಪಿ ಸಂಸದೆಯಾದರು. ಸತತ ಆರು ಬಾರಿ ಕಾರ್ಕಳ ಶಾಸಕರಾಗಿದ್ದ ವೀರಪ್ಪ ಮೊಯ್ಲಿ 1992ರಲ್ಲಿ ಮುಖ್ಯ ಮಂತ್ರಿಯಾದರು. 1999 ಮತ್ತು 2004ರಲ್ಲಿ ಮಂಗಳೂರು ಮತ್ತು 1991ರಲ್ಲಿ ಒಮ್ಮೆ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ ಮೊಯ್ಲಿ ಅವರನ್ನು ಮತದಾರರು ಕೈ ಹಿಡಿಯಲಿಲ್ಲ. 2009 ಮತ್ತು 2014ರಲ್ಲಿ ಚಿಕ್ಕಬಳ್ಳಾಪುರದಿಂದ ಗೆದ್ದು ಯುಪಿಎ ಸರಕಾರದ ಕಾಲದಲ್ಲಿ ಸಚಿವರಾದರು.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next