Advertisement

ಕ್ರಿಕೆಟ್‌ ತಂಡದಲ್ಲಿ ಪದೇ ಪದೆ ಬದಲಾವಣೆ ಸಲ್ಲದು

01:25 AM Jul 07, 2022 | Team Udayavani |

ಇದೇ ವರ್ಷದ ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಪುರುಷರ ಟಿ20 ವಿಶ್ವಕಪ್‌ ಪಂದ್ಯಾವಳಿ ನಡೆಯುತ್ತಿದ್ದು, ಎಲ್ಲ ದೇಶಗಳು ಸಜ್ಜಾಗುತ್ತಿವೆ. ಅಂದರೆ ಇನ್ನು ಸರಿಯಾಗಿ 3 ತಿಂಗಳುಗಳಲ್ಲಿ ಈ ಪಂದ್ಯಾವಳಿಗೆ ಇಡೀ ಜಗತ್ತು ಸಾಕ್ಷಿಯಾಗುತ್ತಿದೆ. ಇದಕ್ಕೆ ತಕ್ಕಂತೆ ಭಾರತದಲ್ಲೂ ತರಬೇತುದಾರ ರಾಹುಲ್‌ ದ್ರಾವಿಡ್‌ ಅವರ ನೇತೃತ್ವದಲ್ಲಿ ತಂಡವನ್ನು ತಯಾರು ಮಾಡಲಾಗುತ್ತಿದೆ.

Advertisement

ಭಾರತ ಕ್ರಿಕೆಟ್‌ ತಂಡದ ಈಗಿನ ಅತೀ ದೊಡ್ಡ ಸಮಸ್ಯೆ ಎಂದರೆ, ಸ್ಥಿರ ಪ್ರದರ್ಶನದ್ದು. ಇತ್ತೀಚೆಗಷ್ಟೇ ಐಪಿಎಲ್‌ ಪಂದ್ಯಾವಳಿ ಮುಗಿದಿದ್ದು, ಇದರಲ್ಲಿ ಮಿಂಚಿದ ಕೆಲವರನ್ನು ತಂಡಕ್ಕೆ ಸೇರಿಸಿಕೊಂಡು ಪ್ರಯೋಗ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಇವರಲ್ಲಿ ಯಾರಾದರೂ ಮಿಂಚಿದರೆ ಅವರನ್ನು ವಿಶ್ವಕಪ್‌ ತಂಡಕ್ಕೆ ಆರಿಸುವ ಇರಾದೆ ಬಿಸಿಸಿಐನದ್ದು. ಆದರೆ ಈ ಹೊತ್ತಿನಲ್ಲಿ ತಂಡದಲ್ಲಿ ಭಾರೀ ಪ್ರಮಾಣದ ಪ್ರಯೋಗ ತರವೇ ಎಂಬ ಪ್ರಶ್ನೆಯೂ ಎದ್ದಿದೆ. ಐಪಿಎಲ್‌ ಮುಗಿದ ಅನಂತರ, ಗಾಯದ ಸಮಸ್ಯೆಯಿಂದ ಕೆ.ಎಲ್‌. ರಾಹುಲ್‌ ಬ್ಯಾಟ್‌ ಹಿಡಿದೇ ಇಲ್ಲ. ಇನ್ನು ನಾಯಕ ರೋಹಿತ್‌ ಶರ್ಮ ಮತ್ತು ಮಾಜಿ ನಾಯಕ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲೇ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಇದ್ದುದರಲ್ಲಿ ಉತ್ತಮ ಬ್ಯಾಟಿಂಗ್‌ ಹರಿದು ಬಂದದ್ದು ಕೆ.ಎಲ್‌.ರಾಹುಲ್‌ ಅವರ ಕಡೆಯಿಂದಲೇ. ಆದರೆ ಇವರ ಗಾಯದ ಸಮಸ್ಯೆ ದೊಡ್ಡದಾಗಿ ಕುಳಿತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಐಪಿಎಲ್‌ ಗೆದ್ದ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಕೂಡ ಅಷ್ಟೇನೂ ಸಿಡಿದಿಲ್ಲ. ಇದು ಐರ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಸಾಬೀತಾಗಿದೆ.

ಇದರ ನಡುವೆಯೇ ಬುಧವಾರ ಬಿಸಿಸಿಐ, ವೆಸ್ಟ್‌ ಇಂಡೀಸ್‌ ವಿರು ದ್ಧದ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡಿದ್ದು, ಅನುಭವಿಗಳಿಗೆ ವಿಶ್ರಾಂತಿ ನೀಡಿದೆ. ಅಂದರೆ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯ, ರಿಷಭ್‌ ಪಂತ್‌ ಅವರನ್ನು ತಂಡದಿಂದ ಕೈಬಿಟ್ಟು ಶಿಖರ್‌ ಧವನ್‌ ನೇತೃತ್ವದಲ್ಲಿ ತಂಡವನ್ನು ಕಳುಹಿಸಿಕೊಡಲು ಮುಂದಾಗಿದೆ. ಅನುಭವಿ ಆಟಗಾರ ರವೀಂದ್ರ ಜಡೇಜ ಅವರಿಗೆ ಉಪನಾಯಕ ಪಟ್ಟ ಕಟ್ಟಲಾಗಿದೆ.

ಐಪಿಎಲ್‌ನಲ್ಲಿ ಮಿಂಚಿದ ಋತುರಾಜ್‌ ಗಾಯಕ್‌ವಾಡ್‌, ಶುಭ್ಮನ್ ಗಿಲ್‌, ದೀಪಕ್‌ ಹೂಡಾ, ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌, ಶಾದೂìಲ್‌ ಠಾಕೂರ್‌, ಯಜುವೇಂದ್ರ ಚಹಲ್‌, ಅಕ್ಸರ್‌ ಪಟೇಲ್‌, ಆವೇಶ್‌ ಖಾನ್‌, ಪ್ರಸಿದ್ಧ ಕೃಷ್ಣ, ಮೊಹಮ್ಮದ್‌ ಸಿರಾಜ್‌, ಅರ್ಷದೀಪ್‌ ಸಿಂಗ್‌ ಅವರಿಗೆ ಸ್ಥಾನ ನೀಡಲಾಗಿದೆ. ವಿಶೇಷವೆಂದರೆ, ಇವರಲ್ಲಿ ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌, ಶಿಖರ್‌ ಧವನ್‌, ಚಹಲ್‌, ಸಿರಾಜ್‌ ಸೇರಿ ಕೆಲವರಿಗೆ ಮಾತ್ರ ಏಕದಿನದಲ್ಲಿ ಆಡಿದ ಅನುಭವವಿದೆ. ಉಳಿದಂತೆ ಬಹುತೇಕರು ಏಕದಿನಕ್ಕೆ ಹೊಂದಿಕೊಳ್ಳುವರೇ ಎಂದು ನೋಡಬೇಕಾಗಿದೆ.

ಆದರೆ ಇದೆಲ್ಲದಕ್ಕಿಂತ ಹೆಚ್ಚಾಗಿ, ವಿಶ್ವಕಪ್‌ಗೆ ಇನ್ನು 3 ತಿಂಗಳುಗಳಿರು ವಾಗ ಈ ಮಟ್ಟದ ಪ್ರಯೋಗ ಬೇಕಾಗಿರಲಿಲ್ಲ ಎಂಬುದು ಹಿರಿಯ ಕ್ರಿಕೆಟಿಗರ ಮಾತುಗಳು. ಇರ್ಫಾನ್‌ ಪಠಾಣ್‌ ಅವರು ವಿಶ್ರಾಂತಿ ನೀಡುವ ನಿರ್ಧಾರವನ್ನು ಟೀಕಿಸಿದ್ದಾರೆ. ಇದರಿಂದ ಫಾರ್ಮ್ ಬರುತ್ತದೆಯೇ ಎಂದೂ ಪ್ರಶ್ನಿಸಿದ್ದಾರೆ. ಒಮ್ಮೆ ಅವಲೋಕಿಸಿದರೆ, ಅವರು ಮಾತು ಸತ್ಯ ಎನ್ನಿಸುತ್ತದೆ. ವಿಶ್ವಕಪ್‌ಗೆ ಮುನ್ನ ಒಂದು ಗಟ್ಟಿ ತಂಡ ತಯಾರಾದರೆ ಉತ್ತಮ ಎಂದೇ ತೋರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next