Advertisement

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ನಾಯಕ

03:55 PM Aug 14, 2022 | Team Udayavani |

ಅಂಕೋಲಾ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದ ಹಿಂದೆ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಕಥಾನಕಗಳು ನಮ್ಮ ಎದುರಿಗೆ ತೆರೆದಿಡುತ್ತವೆ. ಅದೆಷ್ಟೊ ಸ್ವಾತಂತ್ರ್ಯ ಹೊರಾಟಗಾರರು ನಮ್ಮಿಂದ ದೂರವಾಗುತ್ತಿದ್ದಾರೆ. ಆ ಹೋರಾಟಗಾರರಲ್ಲಿ ಒಬ್ಬರಾದ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ ಸೂರ್ವೆ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ವೆಂಕಣ್ಣ ಬೊಮ್ಮಯ್ಯ ನಾಯಕರು.

Advertisement

ತಾಲೂಕಿನ ಬಾಸಗೋಡ ಸೂರ್ವೆ ಗ್ರಾಮದ ಬೊಮ್ಮಯ್ಯ ಹಾಗೂ ಸಾವಿತ್ರಿ ದಂಪತಿ ಹಿರಿಯ ಮಗನಾಗಿರುವ ವೆಂಕಣ್ಣ ನಾಯಕರು ಕೃಷಿ ಕುಟುಂಬದಲ್ಲಿ ಬೆಳೆದು ಬಂದವರು. ಶಾಲೆ ಕಲಿತದ್ದು ಮೂರನೇ ತರಗತಿಯಾದರೂ ಅಪಾರ ಜ್ಞಾನ ಸಂಪಾದಿಸಿದವರು. ಬಾಲ್ಯದಿಂದಲೇ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ತಮ್ಮಲ್ಲಿ ಅಳವಡಿಸಿಕೊಂಡು ತಮ್ಮೂರಿನ ಹಿರಿಯರ ಹೋರಾಟದತ್ತ ಆಕರ್ಷಿತರಾಗಿದ್ದ ಇವರು ಸೂರ್ವೆಯಲ್ಲಿ ಹಿರಿಯರೊಂದಿಗೆ ಗಾಂಧೀಜಿ ಹೋರಾಟದ ಕರೆಗೆ ಓಗೊಟ್ಟಿದ್ದರು.

ಸೂರ್ವೆ ಗ್ರಾಮದ ಕಳಸ ದೇವಸ್ಥಾನದಲ್ಲಿ ನಡೆದ ಪ್ರಥಮ ಸಭೆಯಲ್ಲಿ ಕರನಿರಾಕರಣೆಯ ಪ್ರತಿಜ್ಞೆ ಸಾಲಿನಲ್ಲಿ ವೆಂಕಣ್ಣ ನಾಯಕ ಕೂಡಾ ಪ್ರತಿಜ್ಞೆಗೈದು ಮುಂಚೂಣಿಯಲ್ಲಿದ್ದರು. ಸೂರ್ವೆಯ 39 ಖಾತೆದಾರರಲ್ಲಿ 33 ಖಾತೆದಾರರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವುದು ವಿಶೇಷ. ಕರನಿರಾಕರಣೆ, ಜಂಗಲ್‌ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ, ಸ್ವದೇಶಿ ಅಂದೋಲನ ಸೇರಿದಂತೆ ಬ್ರಿಟೀಷರ ವಿರುದ್ಧ ಕೈಗೊಂಡ ಹೋರಾಟದ ದಿನಗಳು ಇಂದಿಗೂ ಇವರ ಕಣ್ಣ ಮುಂದಿವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷದ ತುಂಬಿರುವ ಸಂತಸ ನನಗಿದೆಯಾದರೂ, ನಾವೆಣಿಸಿದ ಅಭಿವೃದ್ಧಿ ಸಾಧಿಸಿಲ್ಲ ಎಂಬ ನೋವು ನನಗಿದೆ. ಮುಂದಿನ ದಿನಗಳಲ್ಲಿ ದೇಶ ರಾಮರಾಜ್ಯವಾಗಬೇಕು. ಈ ದಿಸೆಯಲ್ಲಿ ಯುವ ಜನಾಂಗ ದೇಶ ಭಕ್ತಿಯನ್ನು ಬೆಳೆಸಿಕೊಳ್ಳುವುದರೊಂದಿಗೆ ಪ್ರಗತಿಗೆ ಶ್ರಮಿಸಬೇಕು ಎನ್ನುತ್ತಾರೆ ವೆಂಕಣ್ಣ ನಾಯಕರು. ಚೈತನ್ಯದ ಚಿಲುಮೆಯಂತಿರುವ ವೆಂಕಣ್ಣ ನಾಯಕರು ಪತ್ನಿ ಪಾರ್ವತಿ ಹಾಗೂ ಆರು ಮಕ್ಕಳೊಂದಿಗೆ ತುಂಬು ಸಂಸಾರ ನಡೆಸುತ್ತಿದ್ದಾರೆ.

ಸತ್ಯಾಗ್ರಹದ ಕಾಲದಲ್ಲಿ ನಾವು ಕಂಡ ಕನಸುಗಳು ಮಾತ್ರ ಇನ್ನೂ ಸಾಕಾರಗೊಂಡಿಲ್ಲ ಎಂಬ ಕೊರಗು ನಮಗಿದೆ ಎಂದು ಸೂರ್ವೆಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ವೆಂಕಣ್ಣ ಬೊಮ್ಮಯ್ಯ ನಾಯಕರು ಮನದಾಳದ ಮಾತನ್ನು ಹೊರಹಾಕಿದರು.

ದೇಶ ಅಭಿವೃದ್ಧಿ ದಿಸೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ ನಾವು ಎಣಿಸಿದಷ್ಟು ಅಭಿವೃದ್ಧಿಯಾಗಿಲ್ಲ. ನಮ್ಮ ಕನಸಿನಂತೆ ದೇಶ ಸುಧಾರಣೆಯಾಗಿದ್ದರೆ ರಾಮ ರಾಜ್ಯ ನಮ್ಮದಾಗಿರುತ್ತಿತ್ತು. ಇಂದಿನ ರಾಜಕಾರಣಕ್ಕೂ, ಅಂದಿನ ರಾಜಕೀಯಕ್ಕೂ ಅಜಗಜಾಂತರ ವ್ಯತ್ಯಾಸ. ಅಂದು ದೇಶಕ್ಕಾಗಿ ಸಮರ್ಪಣಾ ಮನೋಭಾವದಿಂದ ಸೇವೆಗೈದರೆ, ಇಂದು ಸ್ವಾರ್ಥಕ್ಕಾಗಿ ರಾಜಕೀಯ ಮಾಡುವವರೇ ಅಧಿಕ. ಮಾಡು ಇಲ್ಲವೇ ಮಡಿ ಗಾಂಧೀಜಿಯ ನುಡಿಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಸೂರ್ವೆಯವರದ್ದು ಸಿಂಹ ಪಾಲೆಂದರೂ ಅತಿಶಯೋಕ್ತಿಯಾಗದು. ಇಲ್ಲಿನ 39 ಖಾತೆದಾರರಲ್ಲಿ 33 ಖಾತೆದಾರರು ಹೋರಾಟದಲ್ಲ ಪಾಲ್ಗೊಂಡಿರುವುದು ವಿಶೇಷ. ಸೂರ್ವೆಯ ಕಳಸ ದೇವಸ್ಥಾನದಲ್ಲಿ ಕರ ನಿರಾಕರಣೆಯ ಮೊದಲ ಸಭೆ ನಡೆದ ಸ್ಥಳ. ಅಂದು ನಮಗೆಲ್ಲರಿಗೂ ಹೋರಾಟವೇ ಬಹುದೊಡ್ಡ ಹಬ್ಬವಾಗಿತ್ತು ಎನ್ನುತ್ತಾರೆ ವೆಂಕಣ್ಣ ನಾಯಕರು.

Advertisement

 

ತಾಮ್ರ ಫಲಕ ಪಡೆದ ಸೂಲಪ್ಪ ಹರಿಕಾಂತ

ಅಂಕೋಲಾ: ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಹಲವು ನಾಯಕರ ಪೈಕಿ ದಿ| ಸೂಲಪ್ಪ ಬೊಮ್ಮಯ್ಯ ಹರಿಕಾಂತ ತ್ಯಾಗ, ಸಮರ್ಪಣಾ ಭಾವನೆ, ರಾಷ್ಟ್ರ ರಕ್ಷಣೆಗೆ ಮುಂದಾ ಗಿದ್ದವರಲ್ಲಿ ಇವರು ಕೂಡ ಒಬ್ಬರು.

1921ರಲ್ಲಿ ಜನಿಸಿದ ಇವರಿಗೆ ರಾಷ್ಟ್ರಾಭಿಮಾನ ತಾಯ್ನಾಡಿನ ಸೇವೆಗೆ ಧುಮುಕಿ ಬ್ರಿಟಿಷರ ವಿರುದ್ಧ ಹಲವರ ಜೊತೆಯಲ್ಲಿ ಹೋರಾಡಿ ಒಂಭತ್ತು ತಿಂಗಳು ಹಿಂಡಲ್ಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು.

ಸ್ವಾತಂತ್ರ್ಯ ಚಳವಳಿಯ ಅಂಗವಾಗಿ ಅಂಕೋಲಾದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಕರನಿರಾಕರಣೆ ಚಳವಳಿಯಲ್ಲಿ ಹಿಂದುಳಿದ ವರ್ಗದಲ್ಲಿ ಪಾಲ್ಗೊಂಡವರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಇವರು ಅಪ್ರತಿಮ ಹೋರಾಟಗಾರರಾಗಿದ್ದು ಸದೃಢಕ್ಕಾಗಿ ಜೊತೆಗೆ ಲಾಠಿ ತಿರುವುದರಲ್ಲಿ ಹಾಗೂ ಈಜುಗಾರಿಕೆಯಲ್ಲಿ ಪ್ರವೀಣ ರಾಗಿದ್ದರು. ಹಲವು ಬಾರಿ ಇವರನ್ನು ಬ್ರಿಟಿಷರು ದಾಳಿ ನಡೆಸಿದ ಸಂದರ್ಭದಲ್ಲಿ ಹಿಚ್ಕಡದ ದಂಡೆಭಾಗದ ನದಿಯಲ್ಲಿ ಧುಮುಕಿ ಕೂರ್ವೆ ನಡುಗಡ್ಡೆ ಸೇರಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿರುವ ಘಟನೆ ಕುರಿತು ಹಾಗೂ ಜೈಲುವಾಸದಲ್ಲಿ ಅವರಿಗೆ ಉಪವಾಸದ ಆಚರಣೆ ಇರುವುದರಿಂದ ಜೈಲುಗಳಲ್ಲಿ ಒಂದು ಬಾರಿ ಉಪವಾಸ ಎಂದು, ಇನ್ನೊಂದು ಬಾರಿ ಇಲ್ಲವೆಂದು ತನಗೆ ಊಟ ಕೊಡಿ ಎಂಬಂತೆ ಜೈಲು ಊಟ ಇವರಿಗೆ ಅರೆಬರೆ ಹೊಟ್ಟೆ ತುಂಬುತ್ತಿತ್ತಂತೆ. ಹಲವಾರು ರೋಚಕ ಹೋರಾಟದ ಕತೆಯನ್ನು ನಮಗೆಲ್ಲರಿಗೂ ಹೇಳುತ್ತಿದ್ದರು ಎಂದು ಅವರ ಮೊಮ್ಮಗ ಹರಿಹರ ಹರಿಕಾಂತ ಹಿಲ್ಲೂರು ಮಾಹಿತಿ ನೀಡುತ್ತ ದೇಶವು 25ನೇ ಸ್ವಾತಂತ್ರೋತ್ಸವದ ದಿನದಂದು ಅಂದಿನ ಸರಕಾರ ಇವರಿಗೆ ತಾಮ್ರ ಫಲಕ ನೀಡಿ ಗೌರವಿಸಿತ್ತು.

ಇಂತವರ ಹೋರಾಟದ ಪರವಾಗಿ ಇಂದು ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ಸಾಧ್ಯವಾಗಿದೆ. ಇವರು ನಂತರ ಹಿಲ್ಲೂರಿಗೆ ವಲಸೆ ಹೋಗಿ ತುಂಬು ಕುಟುಂಬದೊಂದಿಗೆ ಜೀವನ ನಡೆಸಿ ಅಗಸ್ಟ್‌ 1, 2000 ರಲ್ಲಿ ದೈವಾದಿಧೀನರಾದರು. ಅವರು ಯೋಧರಾಗಿ ಹೋರಾಡಿದ ಪ್ರೇರಣೆಯೇ ನಮ್ಮ ಕುಟುಂಬಕ್ಕೆ ದಾರಿದೀಪವಾಗಿದೆ ಎಂದು ಅವರ ಮೊಮ್ಮಗ ಹರಿಹರ ಹರಿಕಾಂತ ಹಿಲ್ಲೂರು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

-ಅರುಣ ಶೆಟ್ಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next