Advertisement

13 ವರ್ಷದಿಂದ ಉಚಿತ ನೋಟ್‌ಬುಕ್‌ ವಿತರಣೆ

04:26 PM Jun 13, 2022 | Team Udayavani |

ಚಾಮರಾಜನಗರ: ತಾನು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾಗ ಬಡತನದಿಂದಾಗಿ ಎದುರಾದ ಕಷ್ಟಗಳ ಅರಿವಿದ್ದ ಕಾರಣ, ತನ್ನ ಕೈಲಾದ ನೆರವನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂದು ಇಲ್ಲೊಬ್ಬ ಯುವಕ ತನ್ನೂರು ಹಾಗೂ ಸುತ್ತಮುತ್ತಲ ಸುಮಾರು 7-8 ಸರ್ಕಾರಿ ಶಾಲೆಗಳ ಎಲ್ಲ ಮಕ್ಕಳಿಗೂ ಪ್ರತಿವರ್ಷ ನೋಟ್‌ಬುಕ್‌, ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುತ್ತಾ ಅದರಲ್ಲಿ ಸಾರ್ಥಕತೆ ಕಾಣುತ್ತಿದ್ದಾರೆ.

Advertisement

ಅವರು ತಾಲೂಕಿನ ಕಣ್ಣೇಗಾಲ ಗ್ರಾಮದ ಪ್ರಸಾದ್‌ ಶಿವಯ್ಯ ಶೆಟ್ಟಿ. ಕೂಲಿನಾಲಿ ಮಾಡುವ ಬಡ ಕುಟುಂಬದಿಂದ ಬಂದ ಪ್ರಸಾದ್‌ ಸರ್ಕಾರಿ ಶಾಲೆಯಲ್ಲೇ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಮುಗಿಸಿದವರು. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಮ್ಯಾನೇಜರ್‌ ಆಗಿದ್ದಾರೆ. ಅವರ ತಂದೆ ಶಿವಯ್ಯ ಶೆಟ್ಟಿ ಅವರದು ವೃತ್ತಿಯಲ್ಲಿ ಕುಂಬಾರಿಕೆ. ಮಣ್ಣಿನ ಮಡಕೆ, ಒಲೆ ಇತ್ಯಾದಿಗಳ ಮಾರಾಟ ಜೀವನ ನಿರ್ವಹಣೆಗೆ ಸಾಲದೇ, ತೋಟಗಳಲ್ಲಿ ಕೂಲಿ ಕೆಲಸ ಮಾಡಿ ತಮ್ಮಿಬ್ಬರು ಮಕ್ಕಳನ್ನು ಓದಿಸಿದರು. ಬಡತನ ಆದರ್ಶಗಳಿಗೆ ಅಡ್ಡ ಬರಲಿಲ್ಲ. ತೋಟದ ಕೆಲಸ ಮಾಡುತ್ತಲೇ ಗಿಡಗಳ ಕಸಿ ಕಟ್ಟುವುದು, ಬೀಜಗಳನ್ನು ಸಂಗ್ರಹಿಸಿ ಗಿಡ ಬೆಳೆಸಿ ಅದನ್ನು ಊರಾಚೆ ಸಾಲು ಮರಗಳಾಗಿ ನೆಡುವುದು ಅವರ ಹವ್ಯಾಸ. ಮಕ್ಕಳಿಗೆ ಪರೋಪಕಾರವೇ ಜೀವನ ಎಂಬ ಪಾಠ ಕಲಿಸಿದರು.

ಇದು ಅವರ ಪುತ್ರ ಪ್ರಸಾದ್‌ ಮೇಲೂ ಪ್ರಭಾವ ಬೀರಿದೆ. ಸ್ನಾತಕೋತ್ತರ ಪದವಿ ಪಡೆದ ಬಳಿಕ ಬೆಂಗಳೂರಿನಲ್ಲಿ ಕಂಪೆನಿಯೊಂದರ ಉದ್ಯೋಗಿಯಾದ ಪ್ರಸಾದ್‌, ಸ್ವಂತ ಗಳಿಕೆ ಆರಂಭಿಸಿದ ನಂತರ ತನ್ನ ಸಂಪಾದನೆಯಲ್ಲಿ ಒಂದು ಭಾಗವನ್ನು ಸರ್ಕಾರಿ ಶಾಲೆಗಳ ಮಕ್ಕಳ ಲೇಖನ ಸಾಮಗ್ರಿ ಖರೀದಿಗೆ ಮುಡಿಪಿಟ್ಟಿದ್ದಾರೆ. ತಮ್ಮ ಜೊತೆ ಸಮಾನ ಮನಸ್ಕ ಗೆಳೆಯರನ್ನು ಸೇರಿಸಿಕೊಂಡು ಕಳೆದ 13 ವರ್ಷಗಳಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಇವರ ಗೆಳೆಯರಾದ ಕಿರಣ್‌ ಪ್ರಸಾದ್‌, ನಟರಾಜು, ಎಚ್‌.ಆರ್‌. ನಂದೀಶ್‌, ನಿರಂಜನ್‌ ಈ ನೆರವಿನ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

ಇದು ಯಾವುದೇ ಕಂಪೆನಿಯ ಸಿಎಸ್‌ಆರ್‌ ಫ‌ಂಡ್‌ ಅಲ್ಲ ಎಂಬುದು ವಿಶೇಷ. ತಾವು ಓದಿದ ಚಾಮರಾಜನಗರ ತಾಲೂಕಿನ ಕಣ್ಣೇಗಾಲ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ, ಮಂಗಲ ಹೊಸೂರು, ಸಿಂಗನಪುರ, ಹುರುಳಿ ಕೆಬ್ಬೆಮೋಳೆ, ಸಂತೆಮರಹಳ್ಳಿ ಮೋಳೆ, ಹೊಸ ಮೋಳೆ ಶಾಲೆಗಳಿಗೆ ವಿತರಿಸುತ್ತಿದ್ದಾರೆ. ಕೇವಲ ತೋರಿಕೆಗಾಗಿ ನಾಲ್ಕು ನೋಟ್‌ ಬುಕ್‌ ವಿತರಿಸುವ ಕಾರ್ಯ ಇವರದಲ್ಲ. ಈ ಶಾಲೆಗಳ ಶಿಕ್ಷಕರಿಂದ 1ನೇ ತರಗತಿಯಿಂದ 8ನೇ ತರಗತಿಯವರೆಗೂ ಎಷ್ಟು ಮಕ್ಕಳಿದ್ದಾರೆ ಎಂಬ ಮಾಹಿತಿ ಪಡೆದು, ಅವರೆಲ್ಲರಿಗೂ ಒಂದು ವರ್ಷಕ್ಕಾಗುವಷ್ಟು ನೋಟ್‌ ಪುಸ್ತಕ, ಕಾಪಿ ಬರಹದ ಪುಸ್ತಕ, ಪೆನ್ಸಿಲ್‌ಗ‌ಳು, ನೀಲಿ, ಕೆಂಪು ಶಾಯಿಯ ಪೆನ್ನುಗಳು, ಪೆನ್ಸಿಲ್‌ ಶಾರ್ಪನರ್‌, ಎರೇಸರ್‌, ಜಾಮಿಟ್ರಿ ಬಾಕ್ಸ್‌, ಮಗ್ಗಿಪುಸ್ತಕ 5ನೇ ತರಗತಿ ನಂತರ ಮಕ್ಕಳಿಗೆ ಇಂಗ್ಲಿಷ್‌ ಕನ್ನಡ ಡಿಕ್ಷನರಿಗಳನ್ನು ವಿತರಿಸುತ್ತಾರೆ. ಈ ಶೈಕ್ಷಣಿಕ ವರ್ಷದಲ್ಲಿಯೂ ಮೇಲ್ಕಂಡ ಶಾಲೆಗಳಿಗೆ ಪ್ರಸಾದ್‌ ಲೇಖನ ಸಾಮಗ್ರಿಗಳನ್ನು ವಿತರಿಸಿದರು.

ಕಣ್ಣೇಗಾಲ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಾದ್‌ ಹಾಗೂ ಅವರ ಗೆಳೆಯ ಕಿರಣ್‌ ಪ್ರಸಾದ್‌ ಎಲ್ಲ ವಿದ್ಯಾರ್ಥಿಗಳಿಗೂ ಲೇಖನ ಸಾಮಗ್ರಿ ವಿತರಿಸಿದರು. ಶಾಲೆಯ ಮುಖ್ಯಶಿಕ್ಷಕ ನಟರಾಜು, ಶಿಕ್ಷಕರಾದ ಪುಷ್ಪಮ್ಮ, ಶೋಭಾ, ಮಾಲಾ, ಪ್ರಸಾದ್‌ ಅವರ ತಂದೆ ಶಿವಯ್ಯ ಶೆಟ್ಟಿ, ಗ್ರಾಪಂ ಸದಸ್ಯ ಉಮೇಶ್‌ ಉಪಸ್ಥಿತರಿದ್ದರು.

Advertisement

ನಾನೊಬ್ಬ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯಾಗಿ ಆಗ ಏನೇನು ಸಮಸ್ಯೆಗಳನ್ನು ಎದುರಿಸಿದ್ದೇನೋ, ಅದನ್ನು ಈಗಿನ ವಿದ್ಯಾರ್ಥಿಗಳು ಅನುಭವಿಸಬಾರದೆಂದು ಲೇಖನ ಸಾಮಗ್ರಿಗಳನ್ನು ನನ್ನ ಕೈಲಾದಷ್ಟು ಶಾಲೆಗಳಿಗೆ ವಿತರಿಸುತ್ತಿದ್ದೇನೆ. ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಹಾಜರಾಗಿ ಹೆಚ್ಚಲಿ ಎಂಬ ಉದ್ದೇಶ ನನ್ನದು. -ಪ್ರಸಾದ್‌ ಶಿವಯ್ಯಶೆಟ್ಟಿ, ಕಣ್ಣೇಗಾಲ.

Advertisement

Udayavani is now on Telegram. Click here to join our channel and stay updated with the latest news.

Next