Advertisement

ಕೆಎಎಸ್‌ ಕನಸು ಕಂಡವಳಿಗೆ 59 ಲಕ್ಷ ರೂ. ವಂಚನೆ

01:41 PM Aug 08, 2022 | Team Udayavani |

ಬೆಂಗಳೂರು: ಕೆಎಎಸ್‌ ಪರೀಕ್ಷೆಯಲ್ಲಿ ಅನುಕೂಲಕರ ಅಂಕಗಳನ್ನು ನೀಡುವಂತೆ ಪರಿಚಿತ ಐಎಎಸ್‌ ಅಧಿಕಾರಿಗಳಿಗೆ ಶಿಫಾರಸು ಮಾಡಿಸಿ ತಹಶೀಲ್ದಾರ್‌ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಮಹಿಳೆಗೆ ಬರೊಬ್ಬರಿ 59.50 ಲಕ್ಷ ರೂ. ವಂಚಿಸಿದ್ದಾನೆ.

Advertisement

ಉತ್ತರ ಕರ್ನಾಟಕ ಮೂಲದ ಸಹಕಾರ ನಗರದ ನಿವಾಸಿ ಸವಿತಾ ಶಾಂತಪ್ಪ ಯಳಸಂಗೀಕರ್‌ ಕೊಟ್ಟ ದೂರಿನ ಆದಾರದ ಮೇಲೆ ವಿಜಯನಗರ ಠಾಣೆ ಪೊಲೀಸರು ಸಿದ್ದರಾಜ್‌ ಸುಭಾಷ್‌ ಚಂದ್ರ ಕಟ್ಟಿಮನಿ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. ಸ್ಫರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ಸವಿತಾ ವಿಜಯನಗರಕ್ಕೆ ಬಂದು ಪಿಜಿಯೊಂದರಲ್ಲಿ ವಾಸಿಸುತ್ತಿದ್ದರು. ಸ್ನೇಹಿತೆಯರ ಮೂಲಕ ಸವಿತಾಗೆ ಆರೋಪಿ ಸಿದ್ಧರಾಜು ಪರಿಚಯವಾಗಿತ್ತು. ನನಗೆ ಸಾಕಷ್ಟು ಮಂದಿ ಐಎಎಸ್‌ ಅಧಿಕಾರಿಗಳ ಪರಿಚಯವಿದ್ದು, ಅವರ ಮೂಲಕ ನಿಮಗೆ ಕೆಎಎಸ್‌ ಪರೀಕ್ಷೆಯಲ್ಲಿ ಅನುಕೂಲಕರ ಅಂಕಗಳನ್ನು ನೀಡುವಂತೆ ಶಿಫಾರಸು ಮಾಡಿಸಿ ತಹಶೀಲ್ದಾರ್‌ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ.

ಇದಕ್ಕೆ ಒಂದಿಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಿದ್ದ. ಆತನ ಮಾತಿನ ಮೋಡಿಗೆ ಮರುಳಾದ ಸವಿತಾ ಹಣ ಕೊಡಲು ಒಪ್ಪಿದ್ದರು. ಆರೋಪಿ ಸಿದ್ದರಾಜು ಸೂಚನೆಯಂತೆ 2020 ಆಗಸ್ಟ್‌ನಿಂದ ಹಂತ-ಹಂತವಾಗಿ ಆತನ ತಂದೆ ಹಾಗೂ ಸ್ನೇಹಿತನ ಬ್ಯಾಂಕ್‌ ಖಾತೆಗೆ 15.50 ಲಕ್ಷ ರೂ. ವರ್ಗಾವಣೆ ಮಾಡಿದ್ದರು.

ಇಷ್ಟಕ್ಕೆ ಸುಮ್ಮನಾಗದ ಸಿದ್ದರಾಜು ಐಎಎಸ್‌ ಅಧಿಕಾರಿಗಳು ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿ ದ್ದಾರೆ. ಇನ್ನು 24 ಲಕ್ಷ ರೂ. ಕೊಟ್ಟರೆ ಕೆಲಸ ಗ್ಯಾರೆಂಟಿ ಎಂದು ಸವಿತಾಳನ್ನು ನಂಬಿಸಿದ್ದ. ಹೇಗಾದರೂ ಮಾಡಿ ಕೆಎಎಸ್‌ ಅಧಿಕಾರಿಯಾ ಗಬೇಕೆಂದು ಕನಸು ಕಂಡಿದ್ದ ಸವಿತಾ ಮತ್ತೆ ಆತನಿಗೆ 24 ಲಕ್ಷ ರೂ. ಕೊಟ್ಟಿದ್ದರು. ಬಳಿಕ ಹಲವು ಸಬೂಬುಗಳನ್ನು ಹೇಳಿದ್ದ ಆರೋಪಿ ಸವಿತಾ ಅವರಿಂದ ಪುನಃ 20 ಲಕ್ಷ ರೂ. ಲಪಟಾಯಿಸಿದ್ದ. ಒಟ್ಟು 59.50 ಲಕ್ಷ ರೂ. ಪಡೆದಿದ್ದ ಸಿದ್ಧರಾಜು ವರ್ಷ ಉರುಳಿದರೂ ಕೆಲಸವನ್ನೂ ಕೊಡಿಸದೆ ಹಣವನ್ನೂ ನೀಡದೆ ವಂಚಿಸಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next