Advertisement

ಸಾಗರ: ಸಬ್ಸಿಡಿ ದರದಲ್ಲಿ ಸಾಲ ಕೊಡುವುದಾಗಿ ರೈತನಿಗೆ ವಂಚನೆ; ದೂರು ದಾಖಲು

07:00 PM Jun 22, 2022 | Team Udayavani |

ಸಾಗರ: ತಾಲೂಕಿನ ತಾಳಗುಪ್ಪ ಹೋಬಳಿಯ ತಡಗಳಲೆ ಗ್ರಾಮದ ಮಲ್ಲೇಶ್‌ರಿಗೆ ವ್ಯಾಪಾರ ಮಾಡಲು ಸಬ್ಸಿಡಿ ದರದಲ್ಲಿ ಸಾಲ ಕೊಡುವುದಾಗಿ ವಂಚಿಸಿದ ಪ್ರಕರಣ ಸಾಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

Advertisement

ಮಲ್ಲೇಶ್ ಮೊಬೈಲ್‌ಗೆ ಶೇ. 50 ರ ಸಬ್ಸಿಡಿ ದರದಲ್ಲಿ ವ್ಯಾಪಾರಕ್ಕೆ ಸಾಲ ಕೊಡುವುದಾಗಿ ಸಂದೇಶ ಬಂದಿತ್ತು. ಈ ಸಂದೇಶ ಗಮನಿಸಿದ ಕೃಷಿಕ ಸಂದೇಶ ಕಳುಹಿಸಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಸಬ್ಸಿಡಿ ಬೇಕಾದಲ್ಲಿ ರಿಜಿಸ್ಟರ್ ಮಾಡಬೇಕು. ಇದಕ್ಕಾಗಿ 7,200 ರೂ. ಹಣ ಕಟ್ಟಬೇಕೆಂದಿದ್ದಾರೆ.

ಕೃಷಿಕ ಪೋನ್ ಪೇ ಮೂಲಕ ಹಣ ಪಾವತಿಸಿದ್ದಾರೆ. ಮತ್ತೆ ಕರೆ ಮಾಡಿ ತೆರಿಗೆ ಬಾಬತ್ತು ಎಂದು 22,600 ರೂ. ಪಡೆದಿದ್ದಾರೆ. ಅಂತಿಮವಾಗಿ ಆರ್‌ಬಿಐ ತೆರಿಗೆಯನ್ನೂ ನೀವು ಕಟ್ಟಬೇಕಾಗುತ್ತದೆ ಎಂದು ಹೇಳಿಕೊಂಡು 30,700 ರೂ. ಹಣ ಪಾವತಿಸಿಕೊಂಡಿದ್ದಾರೆ. ಒಟ್ಟು 60,500 ರೂ. ಹಣ ಪಡೆದುಕೊಂಡ ವ್ಯಕ್ತಿ ನಂತರ ಕರೆ ಸ್ವೀಕರಿಸದೆ ಇರುವುದರಿಂದ ಕೃಷಿಕ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆನ್‌ಲೈನ್ ವಂಚನೆ ಎಚ್ಚರ ಅಗತ್ಯ; ವಂಚಿತರ ದೂರು ನೀಡಬೇಕು  :

ಆನ್‌ಲೈನ್ ಸಂದೇಶ ಮತ್ತು ಕರೆಗಳ ಮೂಲಕ ವಂಚನೆ ಪ್ರಕರಣ ಸಂಬಂಧ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಪ್ರವೀಣ್‌ಕುಮಾರ್ ಮಾತನಾಡಿ, ಸಾಲ ಸೌಲಭ್ಯ ನೀಡುವ ಆಕರ್ಷಣೆ ಮೂಲಕ ಹಣ ಕಟ್ಟಿಸಿಕೊಂಡು ವಂಚಿಸಿದ ಪ್ರಕರಣ ಸೇರಿದಂತೆ ಆನ್‌ಲೈನ್ ಮೂಲಕ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೊಬೈಲ್ ಸಂದೇಶ, ದೂರವಾಣಿ ಕರೆಗಳ ಮೂಲಕ ವಂಚಿಸುವ ಅಪರಾಧಗಳ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ಎಚ್ಚರ ವಹಿಸಬೇಕಾಗಿದೆ. ಹಲವು ಸಲ ಇಂತಹ ಪ್ರಕರಣಗಳಲ್ಲಿ ವಂಚಿತರು ದೂರು ನೀಡುವುದಿಲ್ಲ. ದೂರು ನೀಡುವುದರ ಜತೆ ಜನಜಾಗೃತಿಗೆ ಕಾರಣರಾಗಬೇಕು. ಮುಖ್ಯವಾಗಿ ಸಾರ್ವಜನಿಕರು ಮೊಬೈಲ್ ಸಂದೇಶ, ಕರೆಗಳಿಂದ ವಂಚನೆಗೊಳಗಾದಂತೆ ಬಹಳ ಎಚ್ಚರ ವಹಿಸಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next