Advertisement

ಕುಷ್ಟಗಿ: ಡಿಎಪಿ ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ  ಮಾಡಿ ವಂಚನೆ ; 70 ಚೀಲಗಳು ವಶಕ್ಕೆ  

07:47 PM May 23, 2022 | Team Udayavani |

ಕುಷ್ಟಗಿ:  ಡಿಎಪಿ ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದ ರಸ ಗೊಬ್ಬರ ಹಾಗೂ ಕೀಟನಾಶಕ ಮಳಿಗೆಯ ಮೇಲೆ ಕೃಷಿ ಇಲಾಖೆ ಜಾಗೃತ ದಳ ದಾಳಿ ನಡೆಸಿ, 70 ಚೀಲಗಳನ್ನು ವಶಕ್ಕೆ ತೆಗೆದುಕೊಂಡಿದೆ.

Advertisement

ಇಲ್ಲಿನ ಬಸವೇಶ್ವರ ವೃತ್ತದ ಶ್ರೀ ಚಂದಾಲಿಂಗೇಶ್ವರ ಎಂಟರ್ ಪ್ರೈಸಸ್ ಈ ಮಳಿಗೆಗೆ ಕೃಷಿ ಇಲಾಖೆಯ ಜಾಗೃತ ದಳದ ತಂಡ ರಸ ಗೊಬ್ಬರ ಸ್ಟಾಕ್ ಪರಿಶೀಲನೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಡಿಎಪಿ ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಲಾಗುತ್ತಿತ್ತು. ಡಿಎಪಿ ಬೆಲೆ 1350 ರೂ. ಪ್ರತಿ ಚೀಲ (50 ಕೆ.ಜಿ) ಇದೆ. ಆದರೆ ಇಲ್ಲಿ ಸಾವಯವ ಗೊಬ್ಬರವನ್ನು ಇದೇ ಡಿಎಪಿ ಎಂದು 800 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಸಾವಯವ ಗೊಬ್ಬರದ ಚೀಲದ ಮೇಲೆ 50 ಕೆ.ಜಿ.ಯ ಪ್ರತಿ ಚೀಲಕ್ಕೆ 1,200 ರೂ.ಎಂ.ಆರ್.ಪಿ. ನಮೂದಿಸಲಾಗಿದೆ. ಸದರಿ ಚಂದಾಲಿಂಗೇಶ್ವರ ಎಂಟರ್ ಪ್ರೈಸಸ್ ನವರು ಯಾವುದೇ ಬಿಲ್ ಹಾಕದೇ ಮಾರಾಟ ಮಾಡುತ್ತಿದ್ದರು. ದಾಳಿಯ ವೇಳೆ ಡಿಎಪಿ ಹೆಸರಿನಲ್ಲಿ ಗೊಬ್ಬರ ಮಾರಾಟ ಮಾಡಿದ ಬಗ್ಗೆ ಬಿಲ್ ದಾಖಲಾತಿಗಳು ಲಭ್ಯವಾಗಿಲ್ಲ ಎಂದು ಕೃಷಿ ಇಲಾಖೆ ಜಾಗೃತ ದಳದ ಸಹಾಯಕ ನಿರ್ದೇಶಕ ನಿಂಗಪ್ಪ ಮಾಹಿತಿ ನೀಡಿದರು.

ರೈತರನ್ನು ವಂಚಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಶ್ರೀ ಚಂದಾಲಿಂಗೇಶ್ವರ ಎಂಟರ್ ಪ್ರೈಸಸ್ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ 50 ಕೆ.ಜಿಯ 70 ಚೀಲ ವಶಕ್ಕೆ ತೆಗೆದುಕೊಳ್ಳಲಾಗಿದ್ದು ಇದರ ಮೌಲ್ಯ 89,600 ರೂ. ಅಂದಾಜಿಸಲಾಗಿದೆ.

ಈ ದಾಳಿಯಲ್ಲಿ ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕ ನಿಂಗಪ್ಪ, ಕುಮಾರಸ್ವಾಮಿ, ಕುಷ್ಟಗಿ ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ, ಸಹಾಯಕ ಕೃಷಿ ಅಧಿಕಾರಿ ಪ್ರಮೋದ್ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next