Advertisement

ಫ್ರಾನ್ಸ್‌ ತಂಡಕ್ಕೆ ದೇಸಿ ಸಂಸ್ಕೃತಿ ಅರಿವು

11:42 AM Aug 26, 2018 | Team Udayavani |

ಹುಣಸೂರು: ದೂರದ ದೇಶ ಫ್ರಾನ್ಸ್‌ನ ಇಂಜಿನಿಯರ್‌ಗಳು ಭಾರತದ ಸಂಸ್ಕೃತಿಯನ್ನು ಅರಿಯಲು ಕರ್ನಾಟಕಕ್ಕೆ ಆಗಮಿಸಿರುವುದೂ ಅಲ್ಲದೆ ಹಾಡಿಯೊಂದರಲ್ಲಿ ಶೌಚಾಲಯ ಹಾಗೂ ಸ್ನಾನಗೃಹವನ್ನು ನಿರ್ಮಿಸಿಕೊಡುವ ಮೂಲಕ ಪರಿಸರ ಜಾಗೃತಿ ಮೂಡಿಸುವಲ್ಲಿ ಮಾದರಿಯಾಗಿದ್ದಾರೆ. 

Advertisement

ಫ್ರಾನ್ಸ್‌ನ ಹಿಲಾಪ್‌ ಗ್ರೂಪ್‌ ನೆರವಿನೊಂದಿಗೆ ಇಎಸ್‌ಟಿಪಿ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಸ್ವಯಂಸೇವಕರಾದ ಜಿನಾಥನ್‌, ಸಲೋಮಿ ತಂಡದ ನಾಯಕರಾಗಿದ್ದು, ನೆವಿರಿನಾ, ಅಮಾಂಡಿನ್‌, ಅಲೀಸ್‌, ಲಿಯಾ, ಅಗೆತ್‌,ರಾಬಿನ್‌, ಕೂಮ್ಸನ್‌, ಬ್ಯಾಟಿಸ್ಟೆ, ಲುಕಾಸೊ, ಕೌಸನ್‌, ಕಿಮಿ, ಅಡ್ರಿಯೋನ್‌ ದೇಶದ ಸಂಸ್ಕೃತಿ, ಪರಿಸರ, ಕೃಷಿ ಪದ್ಧತಿ ಸೇರಿದಂತೆ ದೇಶದ ಸಮಗ್ರ ಅಧ್ಯಯನಕ್ಕೆ ಆಗಮಿಸಿದೆ.

ಫ್ರಾನ್ಸ್‌ನ ಪ್ಯಾರೀಸ್‌ನ ಇಂಜಿನಿಯರ್ ಸ್ಕೂಲ್‌ ಸ್ಪೆಷಲ್‌ ಫಾರ್‌ ಪಬ್ಲಿಕ್‌ ಕಾಲೇಜಿನ ಹಿಲಾಪ್‌ ಗ್ರೂಪ್‌ ನ 15 ವಿದೇಶಿ ವಿದ್ಯಾರ್ಥಿಗಳ ತಂಡಕ್ಕೆ ಇಲ್ಲಿನ ಎಫ್‌ಎಸ್‌ಎಲ್‌ ಸ್ವಯಂಸೇವಾ ಸಂಸ್ಥೆ, ಹುಣಸೂರು ತಾಲೂಕು ಬಲ್ಲೇನಹಳ್ಳಿ ಗಿರಿಜನರು ನೆರವಾಗಿದ್ದಾರೆ.

ಹಾಡಿಯಲ್ಲಿ 6 ಕುಟುಂಬಗಳಿಗೆ ಬಿಡುವಿನ ವೇಳೆಯಲ್ಲಿ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡಿ ಉಳಿಸಿದ ಹಣದಲ್ಲಿ ತಲಾ 50 ಸಾವಿರ ವೆಚ್ಚದಡಿ ತಾವೇ ಶ್ರಮದಾನ ನಡೆಸಿ, ಸುಂದರವಾದ ಸ್ನಾನಗೃಹ ಸಹಿತ ಶೌಚಾಲಯವನ್ನು ನಿರ್ಮಿಸಿಕೊಟ್ಟಿರುವುದಲ್ಲದೆ ಬಣ್ಣದ ಚಿತ್ತಾರ ಬಿಡಿಸಿ ಅಚ್ಚುಕಟ್ಟು ಮಾಡಿದ್ದಾರೆ.

ಶೌಚಾಲಯ ನಿರ್ಮಾಣವಾಗಿದ್ದು ಹೀಗೆ: ಮಳೆ-ಬಿಸಿಲಿನ ನಡುವೆ ಶ್ರಮದಾನದ ಮೂಲಕ ಶೌಚಾಲಯ ಕಟ್ಟಡದ ಪಿಟ್‌ ತೋಡಿದರು. ಕಟ್ಟಡ ನಿರ್ಮಾಣ-ಗಿಲಾವ್‌ನ ಗಾರೆ ಕಲಸಿ, ಸ್ಥಳೀಯ ಗಾರೆ ಕೆಲಸಗಾರರ ಸಹಕಾರದಲ್ಲಿ ಇಡೀ ಕಟ್ಟಡ ನಿರ್ಮಿಸಿದರು. ಕ್ಯೂರಿಂಗ್‌ ಸಹ ಮಾಡಿದರು. ಇಷ್ಟೆ ಅಲ್ಲದೆ ಕಟ್ಟಡಕ್ಕೆ ಬಣ್ಣ ಹಚ್ಚಿ, ಶೌಚಾಲಯ ಬಳಕೆ ಹಾಗೂ ಶುಚಿತ್ವದ ಮಹತ್ವವನ್ನು ಚಿತ್ರ ಸಮೇತ ಅರಿವು ಮೂಡಿಸಿದರು. 

Advertisement

ಮಕ್ಕಳಿಗೆ ಇಂಗ್ಲಿಷ್‌ ಪಾಠ: ಗ್ರಾಮದ ಸರಕಾರಿ ಹಿರಿಯ ಫ್ರಾಥಮಿಕ ಶಾಲೆಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಿಗೆ ಶುಚಿತ್ವದ ಮಹತ್ವ, ಪರಿಸರದ ಅರಿವು, ಇಂಗ್ಲಿಷ್‌, ಗಣಿತ, ಸಮಾಜಶಾಸ್ತ್ರದ ಬಗ್ಗೆ ಜಾಗೃತಿ ಮೂಡಿಸಿದರು ಹಾಗೂ ಶಾಲೆಯ ಗೋಡೆಗಳ ಮೇಲೆ ನೀರು ಮತ್ತು ಪರಿಸರದ ಮಹತ್ವ ಸಾರುವ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. 

ಹಾಡಿ ಜನರು, ರೈತರು ಇಲ್ಲಿನ ಕೃಷಿ, ಸಂಸ್ಕೃತಿ, ಸಾಂಸ್ಕೃತಿಕ, ಹಬ್ಬ-ಹರಿದಿನಗಳ ಬಗ್ಗೆ ವಿವರಿಸಿದರು. ವಿದೇಶಿ ತಂಡ ಕೆಸರುಗದ್ದೆಗಿಳಿದು ಭತ್ತದ ನಾಟಿ ಮಾಡಿ ದೇಸಿ ಭತ್ತದ ನಾಟಿ ಬಗ್ಗೆ ತಿಳಿದುಕೊಂಡರು.

ಪ್ರವಾಸ: ಶ್ರಮದಾನದ ಜೊತೆಗೆ ವೀಕೆಂಡ್‌ಗಳಲ್ಲಿ ನಾಗರಹೊಳೆ ಉದ್ಯಾನ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಮಡಿಕೇರಿ, ಮೈಸೂರು, ಚಾಮುಂಡಿಬೆಟ್ಟ ಮತ್ತಿತರ ಕಡೆ ಪ್ರವಾಸ ಮಾಡಿ ಇಲ್ಲಿನ ವೈವಿದ್ಯಮಯ ಸಂಸ್ಕೃತಿ ಪರಿಚಯ ಮಾಡಿಕೊಂಡರು.

ಕಳೆದ ನಾಲ್ಕು ವರ್ಷಗಳಿಂದ ಫ್ರಾನ್ಸ್‌ನ ಇ.ಎಸ್‌.ಟಿ.ಪಿ ಕಾಲೇಜಿನ ಇತರೆ ವಿದ್ಯಾರ್ಥಿಗಳ ತಂಡ ಉಚಿತವಾಗಿ ಎರಡು ಮನೆ ಹಾಗೂ ಈವರೆವಿಗೆ 30 ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ. ಜತೆಗೆ ಶಾಲೆಗೂ ನೆರವಾಗಿದೆ ಎಂದು ಎಫ್‌ಎಸ್‌ಎಲ್‌ ಸಂಸ್ಥೆಯ ಮಂಜು ತಿಳಿಸಿದರು.

ಭಾರತದ ಸಂಸ್ಕೃತಿ ಅರಿವಿಗೆ ಪ್ರವಾಸ: ಫ್ರಾನ್ಸ್‌ನ ಪ್ಯಾರೀಸ್‌ನ ಇಂಜಿನಿಯರ್ ಸ್ಕೂಲ್‌ ಸ್ಪೆಷಲ್‌ ಫಾರ್‌ ಪಬ್ಲಿಕ್‌ ವರ್ಕ್‌ ಇಂಜಿನಿಯರಿಂಗ್‌ ಕಾಲೇಜಿನ 15 ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಮಾಲ್‌ಗ‌ಳಲ್ಲಿ ಕೆಲಸ ಮಾಡಿ ಸಂಪಾದಿಸಿ ಉಳಿತಾಯ ಮಾಡಿದ್ದ ಹಣದಲ್ಲಿ ವಿಶ್ವಾದ್ಯಂತ ತನ್ನ ಶಾಖೆಗಳನ್ನು ಹೊಂದಿರುವ ಹಿಲಾಪ್‌ ಗ್ರೂಪ್‌ಸಂಪರ್ಕಿಸಿ ಭಾರತದ ಸಂಸ್ಕೃತಿಯನ್ನು ಅರಿಯಲು ಪ್ರವಾಸ ಕೈಗೊಂಡಿದ್ದರು.

ಆದರೆ, ಭಾರತಕ್ಕಾಗಮಿಸಿದ ವೇಳೆ ನೆರವಿಗೆ ಬಂದಿದ್ದು, ಬೆಂಗಳೂರು ಮೂಲದ ಎಫ್‌ಎಸ್‌ಎಲ್‌ ಸ್ವಯಂಸೇವಾ ಸಂಸ್ಥೆಯ ಮಂಜುರವರ ಸಹಕಾರದಿಂದ ಹುಣಸೂರು ತಾಲೂಕು ಬಲ್ಲೇನಹಳ್ಳಿ ಗಿರಿಜನ ಹಾಡಿಯ ಜನರ ಆಚಾರ ವಿಚಾರ ಅರಿಯಲು ಬಂದಿರುವುದಾಗಿ ತಂಡದ ನಾಯಕ ಜಿನಾಥನ್‌ ಹೇಳಿದರು.

* ಸಂಪತ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next