Advertisement

ಸಾವಿನ ಹೆದ್ದಾರಿಗೆ ಅಂತೂ ಕೂಡಿಬಂತು ಷಟ್ಪಥ ಭಾಗ್ಯ

03:29 PM Jan 08, 2022 | Team Udayavani |

ಹುಬ್ಬಳ್ಳಿ: ಸಾವಿನ ಹೆದ್ದಾರಿ ಎಂದೇ ಪರಿಗಣಿಸಲಾಗಿದ್ದ ಹುಬ್ಬಳ್ಳಿ-ಧಾರವಾಡ ನಡುವಿನ ಬೈಪಾಸ್‌ ರಾಷ್ಟ್ರೀಯ ಹೆದ್ದಾರಿ-4 ಅನ್ನು ಷಟ³ಥ ರಸ್ತೆಯಾಗಿಸಬೇಕೆಂಬ ಬೇಡಿಕೆ ಅನೇಕ ವರ್ಷಗಳಿಂದ ಇದ್ದು, ಹಲವು ವರ್ಷಗಳ ನಿರೀಕ್ಷೆಗೆ-ಬೇಡಿಕೆಗೆ ಇದೀಗ ಫಲ ದೊರೆತಂತಾಗಿದೆ. ಸುಮಾರು 31 ಕಿಮೀ ಉದ್ದದ ಬೈಪಾಸ್‌ ರಸ್ತೆಯನ್ನು ಷಟ್ಪಥ ಎಕ್ಸ್‌ಪ್ರೆಸ್‌ ಹೈವೇ ಆಗಲಿಸಲು ಟೆಂಡರ್‌ ಕರೆಯಲಾಗಿದೆ.

Advertisement

ಅಂದಾಜು 1,200 ಕೋಟಿ ರೂ. ವೆಚ್ಚದಲ್ಲಿ ಸುಮಾರು 31 ಕಿಮೀ ಉದ್ದದ ಬೈಪಾಸ್‌ ಹೆದ್ದಾರಿಯನ್ನು ಷಟ್ಪಥವಾಗಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಹು-ಧಾ ನಡುವಿನ ಬೈಪಾಸ್‌ ಹೆದ್ದಾರಿಯನ್ನು ಷಟ್ಪಥ ರಸ್ತೆಯಾಗಿಸುವ ನಿಟ್ಟಿನಲ್ಲಿ ಸಾಕಷ್ಟು ಯತ್ನಗಳನ್ನು ಕೈಗೊಂಡಿದ್ದರೂ ಕೆಲವೊಂದು ತಾಂತ್ರಿಕ ತೊಂದರೆ ಹಾಗೂ ಪ್ರಸ್ತುತ ಹೈವೇ ಟೋಲ್‌ ಗುತ್ತಿಗೆ ಪಡೆದ ಕಂಪೆನಿಯ ಒಪ್ಪಿಗೆ, ಭೂ ಸ್ವಾಧೀನ ಸಮಸ್ಯೆ ಇನ್ನಿತರ ಕಾರಣಗಳಿಂದ ವಿಳಂಬವಾಗಿತ್ತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಯತ್ನಗಳನ್ನು ಮುಂದುವರಿಸಿದ್ದರಲ್ಲದೆ, ಅಂತಿಮವಾಗಿ ರಸ್ತೆ ಕಾಮಗಾರಿ ಟೆಂಡರ್‌ ಕರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹು-ಧಾ ನಡುವಿನ 31 ಕಿಮೀ ರಸ್ತೆ ಅತ್ಯಂತ ಕಿರಿದಾಗಿದ್ದು, ಬೆಳಗಾವಿ ಕಡೆಯಿಂದ ಷಟ³ಥ ಮಾರ್ಗದಲ್ಲಿ ಆಗಮಿಸುವ ವಾಹನ ಸವಾರರು ಏಕಾಏಕಿ ಕಿರಿದಾದ ರಸ್ತೆಗೆ ಹೊಂದಿಕೊಳ್ಳಬೇಕಾಗಿತ್ತು. ಇದರಿಂದ ಹಲವು ಅನಾಹುತಗಳು ಆಗುತ್ತಿದ್ದವು. ಇದೇ ರಸ್ತೆಯ ಇಟಿಗಟ್ಟಿ ಬಳಿ ಪದೇ ಪದೇ ರಸ್ತೆ ಅಪಘಾತ ಆಗುತ್ತಿತ್ತು. 2021ರ ಜನವರಿಯಲ್ಲಿ ಇಟಗಟ್ಟಿ ಬಳಿ ಸಂಭವಿಸಿದ ಅಪಘಾತದಲ್ಲಿ ದಾವಣಗೆರೆಯಿಂದ ಪ್ರವಾಸಕ್ಕೆ ಹೊರಟಿದ್ದ ಸುಮಾರು 12 ಮಹಿಳೆಯರು ಮೃತಪಟ್ಟಿದ್ದರು. ಈ ಘಟನೆ ನಂತರದಲ್ಲಿ ಹೆದ್ದಾರಿ ಅಗಲೀಕರಣದ ಬೇಡಿಕೆ-ಒತ್ತಾಯ ಹೆಚ್ಚಿತ್ತು.

ಹು-ಧಾ ನಡುವಿನ ಬೈಪಾಸ್‌ ಹೆದ್ದಾರಿ ಕಿರಿದಾಗಿದ್ದರಿಂದ ವಾಹನ ದಟ್ಟಣೆ ಹೆಚ್ಚಿತ್ತು. ಸಣ್ಣ ಅಪಘಾತ ಸಂಭವಿಸಿದರೂ ಕಿಮೀಗಟ್ಟಲೇ ವಾಹನಗಳು ನಿಲ್ಲುವಂತಾಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಸ್ತೆ ಅಗಲೀಕರಣಕ್ಕೆ ಮುಂದಾಗಿರುವುದು ಉತ್ತಮ ನಡೆಯಾಗಿದೆ.

ಎರಡೂವರೆ ದಶಕದಲ್ಲಿ 1200 ಜನರ ಬಲಿ ಪಡೆದ ಹೆದ್ದಾರಿ; ಪ್ರಸಕ್ತ ಏಳೇ ದಿನದಲ್ಲಿ ಮೂವರ ಸಾವು ಹುಬ್ಬಳ್ಳಿ-ಧಾರವಾಡ ಬೈಪಾಸ್‌ನ್ನು ಡೆತ್‌ ಕಾರಿಡಾರ್‌ (ಸಾವಿನ ಹೆದ್ದಾರಿ) ಎಂದೇ ಎಲ್ಲರೂ ಕರೆಯುತ್ತಿದ್ದಾರೆ. ಈ ರಸ್ತೆ ನಿರ್ಮಾಣವಾಗಿ 23 ವರ್ಷಗಳು ಕಳೆಯುವರಷ್ಟರಲ್ಲಿ ಈ ಸಾವಿನ ಹೆದ್ದಾರಿ ಬರೊಬ್ಬರಿ 1200 ಜನರನ್ನು ಬಲಿ ಪಡೆದಿದೆ. ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ಕ್ರಾಸ್‌ವರೆಗಿನ 31 ಕಿಮೀ ಉದ್ದದ ಈ ರಸ್ತೆ ಇನ್ನೂ ದ್ವಿಪಥದಲ್ಲಿರುವುದೇ
ಹೆಚ್ಚು ಅಪಘಾತಗಳು ಸಂಭವಿಸಲು ಪ್ರಮುಖ ಕಾರಣ.

Advertisement

ಈ ಬಗ್ಗೆ ಈಗಾಗಲೇ ಅನೇಕ ಸರ್ಕಾರಗಳು, ಮಂತ್ರಿಗಳು, ಮಾತುಕತೆಗಳು ಒಂದೇ ಎರಡೇ ಅನೇಕ ಸರ್ಕಸ್‌ಗಳು ನಡೆದು ಹೋಗಿವೆ. ದಾವೆಗಳು ಸುಪ್ರೀಂ ಕೋರ್ಟ್‌ ವರೆಗೂ ಹೋಗಿಯಾಗಿದೆ. ಬೈಕ್‌, ಕಾರು, ಲಾರಿ, ಟಿಪ್ಪರ್‌, ಚಕ್ಕಡಿ, ದನ ಕಾಯುವ ಹುಡುಗರು, ರಸ್ತೆ ದಾಟುವ ವಯೋವೃದ್ಧರು, ಶಾಲಾ ಮಕ್ಕಳು, ರೈತರು ಒಬ್ಬರೇ ಇಬ್ಬರೇ ಹೀಗೆ ಎಲ್ಲರೂ ಸಾವಿನ ಹೆದ್ದಾರಿಗೆ ಈಗಾಗಲೇ ಬಲಿಯಾಗಿದ್ದಾರೆ. ಯರಿಕೊಪ್ಪದಲ್ಲಿ ನಡೆದ ಅಪಘಾತಗಳಿಗೆ ಲೆಕ್ಕವಿಲ್ಲ. 2021ರಲ್ಲಿ ಇದೇ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಬರೋಬ್ಬರಿ 46 ಮಂದಿ ಜೀವ ಕಳೆದುಕೊಂಡಿದ್ದಾರೆ. 2022ರಲ್ಲಿ ಕಳೆದ ಏಳು ದಿನಗಳಲ್ಲಿ ಯರಿಕೊಪ್ಪ, ಕೆಲಗೇರಿ, ತಾರಿಹಾಳ ಬಳಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಅಸುನೀಗಿದ್ದಾರೆ. ದಶಕಗಳ ಕೂಗಿಗೆ ಅಂತೂ ಈಗ ಫಲ ದೊರೆಯುವ ಕಾಲ ಕೂಡಿಬಂದಿದ್ದು, ಆದಷ್ಟು ಬೇಗ ಯೋಜನೆ ಅನುಷ್ಠಾನವಾಗಲಿ. ಷಟ³ಥವಾಗಿ ಮೇಲ್ದರ್ಜೆಗೆ ಏರಲಿ ಎಂಬುದು ಜನಾಶಯವಾಗಿದೆ.

ಎರಡುವರೆ ವರ್ಷ ಕಾಲಮಿತಿ
ಹುಬ್ಬಳ್ಳಿ: ಹು-ಧಾ ನಡುವಿನ 31 ಕಿಮೀ ಬೈಪಾಸ್‌ ರಸ್ತೆಯನ್ನು ಷಟ³ಥ ಎಕ್ಸ್‌ಪ್ರೆಸ್‌ ಹೈವೇ ಆಗಿ ಮಾರ್ಪಡಿಸಲು ಹಾಗೂ ಚತುಷ್ಪಥ ಸೇವಾ ರಸ್ತೆ ನಿರ್ಮಿಸಲು ಇಪಿಸಿ ((Engineering, procurement, and constructio) ಮಾದರಿಯಲ್ಲಿ ಟೆಂಡರ್‌ ಕರೆಯಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಹು-ಧಾ ನಡುವೆ ಆರು ಪಥದ ಎಕ್ಸ್‌ಪ್ರೆಸ್‌ ರಸ್ತೆ ಹಾಗೂ ಸಮರ್ಪಕವಾಗಿ ಎರಡೂ ಬದಿಯಲ್ಲಿ ದ್ವಿಪಥದ ಸೇವಾ ರಸ್ತೆ ನಿರ್ಮಿಸುವ ಕಾಮಗಾರಿಗೆ ಶುಕ್ರವಾರ ಟೆಂಡರ್‌ ಕರೆಯಲಾಗಿದೆ. ಫೆ.22 ಟೆಂಡರ್‌ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕಾಮಗಾರಿ ಮುಗಿಸಲು ಎರಡೂವರೆ ವರ್ಷ ನಿಗದಿಗೊಳಿಸಲಾಗಿದೆ ಹಾಗೂ ನಿರ್ಮಾಣದ ನಂತರ 5 ವರ್ಷದ ನಿರ್ವಹಣೆಯನ್ನೂ ಗುತ್ತಿಗೆದಾರರೇ ನಿರ್ವಹಿಸುವ ಕರಾರೊಂದಿಗೆ ಟೆಂಡರ್‌ನಲ್ಲಿ ಸೂಚಿಸಲಾಗಿದೆ. ಈ ಯೋಜನೆ ಒಟ್ಟು 1200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳಿಯ ಗಬ್ಬೂರು ಎನ್‌ಎಚ್‌-4 ರಸ್ತೆಯ 402.6 ಕಿಮೀಯಿಂದ ಧಾರವಾಡದ ನರೇಂದ್ರ ಕ್ರಾಸ್‌ ಬಳಿ 433.2 ಕಿಮೀ ವರೆಗಿನ ಒಟ್ಟು
31 ಕಿಮೀ ಆರು ಪಥದ ಎಕ್ಸ್‌ಪ್ರೆಸ್‌ ವೇ ಹಾಗೂ ನಾಲ್ಕು ಪಥದ ಸೇವಾ ರಸ್ತೆ ನಿರ್ಮಾಣಕ್ಕೆ 800 ಕೋಟಿ ರೂ. ಹಾಗೂ ಭೂ ಸ್ವಾಧೀನ, ಡಿಪಿಆರ್‌ ತಯಾರಿಕೆ ಹಾಗೂ ಇನ್ನಿತರೆ ಕಾರ್ಯಕ್ಕೆ 400 ಕೋಟಿ ರೂ. ಕೇಂದ್ರ ಸರಕಾರ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯವಾಗಿ ಈಗಿರುವ ಬೈಪಾಸ್‌ನ ಎಲ್ಲಾ ಟೋಲ್‌ ಪ್ಲಾಜಾಗಳನ್ನು ತೆಗೆದು ಕೇವಲ ಒಂದು ಟೋಲ್‌ ಪ್ಲಾಜಾ ಮಾತ್ರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಟೋಲ್‌ ಕೆಲಗೇರಿ ಮತ್ತು ನರೇಂದ್ರ ಮಧ್ಯೆ ಮಾಡಲಾಗಿದ್ದು, ಇದರಿಂದ ಹುಬ್ಬಳ್ಳಿ ಮತ್ತು ಧಾರವಾಡ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಟೋಲ್‌ನಿಂದ ವಿನಾಯಿತಿ ನೀಡಲಾಗಿದೆ.

ಈ ಬೈಪಾಸ್‌ ನಿರ್ಮಾಣದಿಂದ ನಗರ ಮಧ್ಯದೊಳಗಿನ ವಾಹನಗಳ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಪುಣೆ-ಬೆಂಗಳೂರು ಹೆದ್ದಾರಿ ವಿಸ್ತರಣೆ ಆಯಿತು. ಆದರೆ ಹು-ಧಾ ಬೈಪಾಸ್‌ ವಿಸ್ತರಣೆ ಆಗಿಲ್ಲ. ಆರು ಪಥದ ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಬರುವ ಚಾಲಕರು ಬೈಪಾಸ್‌ನಲ್ಲಿಯೂ ಅದೇ ವೇಗದಲ್ಲಿ ಬರುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂಬುದು ತಜ್ಞರ ಅಭಿಪ್ರಾಯದೊಂದಿಗೆ ಬೈಪಾಸ್‌ ಕೂಡ ಕನಿಷ್ಟ ಆರು ಪಥಗಳಿಗೆ ವಿಸ್ತರಣೆ ಆಗಬೇಕೆಂಬುದು ಸಚಿವ ಜೋಶಿ ಆಗ್ರಹವಾಗಿತ್ತು. ಈ ಬೈಪಾಸ್‌ ರಸ್ತೆಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಭೂ ಸಾರಿಗೆ
ಸಚಿವ ನಿತಿನ ಗಡ್ಕರಿ ಅವರಿಗೆ ಸಚಿವ ಜೋಶಿ ಅವರು ಅವಳಿ ನಗರದ ನಾಗರಿಕರ ಪರವಾಗಿ ಕೃತಜ್ಞತೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next