ಲೂಧಿಯಾನ : ಇಲ್ಲಿನ ಧಂಧಾರಿ ಪ್ರದೇಶದ ಈಶ್ವರ್ ಕಾಲನಿಯಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ವರು ದಾರಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.
ನಿನ್ನೆ ಶುಕ್ರವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿತು. ರಂಜಿತ್ ಸಿಂಗ್ (27) ಅವರ ಪುತ್ರಿ, ಎಂಟು ವರ್ಷದ ಸಪ್ನಾ ಳ ಹುಟ್ಟುಹಬ್ಬವನ್ನು ಮನೆಯಲ್ಲಿ ಆಚರಿಸಲಾಗುತ್ತಿತ್ತು. ಕೇಕ್ ಕಟ್ ಮಾಡಿದ ಬಳಿಕ ರಂಜಿತ್ ಸಿಂಗ್ ಸಹಿತ ನಾಲ್ವರು ಮಹಡಿಗೆ ಹೋಗಿ ಅಲ್ಲಿ ಡ್ರಿಂಕ್ಸ್ ತೆಗೆದುಕೊಳ್ಳಲಾರಂಭಿಸಿದರು. ಆ ಸಂದರ್ಭದಲ್ಲಿ ಅವರಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿ ಮಾತಿನ ಜಗಳ ಉಂಟಾಯಿತು.
ಆಗ ರಂಜಿತ್ ಸಿಂಗ್ ಅವರು ಮನೆಯ ಆವರಣ ಗೋಡೆಗೆ ತಾಗಿಕೊಂಡು ಸಾಗುವ ಹೈಟೆನ್ಶನ್ ವಯರ್ ಸಂಪರ್ಕಕ್ಕೆ ಬಂದರು. ನೆರವಿಗಾಗಿ ಕೂಗಿ ಕೊಂಡರು. ಅಲ್ಲಿದ್ದ ಉಳಿದ ಮೂವರು ಕೂಡಲೇ ಅವರ ನೆರವಿಗೆ ಧಾವಿಸಿದರು. ಎಲ್ಲರೂ ವಿದ್ಯುದಾಘಾತಕ್ಕೆ ಗುರಿಯಾಗಿ ಅಸುನೀಗಿದರು.
ಮೃತರನ್ನು ರಂಜಿತ್ ಸಿಂಗ್, ಸರ್ವಜಿತ್ ಸಿಂಗ್ 28, ಅಮರ್ಜಿತ್ ಸಿಂಗ್ 25 (ಇಬ್ಬರೂ ಸಹೋದರರು) ಮತ್ತು ಬುಧ್ರಾಜ್ 23 ಎಂದು ಗುರುತಿಸಲಾಗಿದೆ.
ಮೃತರು ಬಿಹಾರದ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದು ಎಲ್ಲರೂ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.