Advertisement

ಮಾಜಿ ಶಾಸಕ ಬಸವರಾಜನ್‌ಗೆ ನಾಲ್ಕು ದಿನ ಪೊಲೀಸ್‌ ಕಸ್ಟಡಿ

09:21 PM Nov 10, 2022 | Team Udayavani |

ಚಿತ್ರದುರ್ಗ: ಮುರುಘಾಮಠದ ಮಾಜಿ ಆಡಳಿತಾ ಧಿಕಾರಿ ಮತ್ತು ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ನಗರದ 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

Advertisement

ಡಾ|ಶಿವಮೂರ್ತಿ ಮುರುಘಾ ಶರಣರ ವಿರುದ್ಧ 2ನೇ ಪೋಕ್ಸೋ ಪ್ರಕರಣ ದಾಖಲಾಗಲು ಪ್ರಚೋದನೆ ನೀಡಿದ ಆರೋಪದಡಿ ಗುರುವಾರ ಪೊಲೀಸರು ಬಸವರಾಜನ್‌ ಹಾಗೂ ಆಡಿಯೋದಲ್ಲಿ ಮಾತನಾಡಿದ್ದಾರೆ ಎನ್ನಲಾದ ಮಠದ ಪ್ರೌಢಶಾಲೆಯ ಶಿಕ್ಷಕ ಬಸವರಾಜೇಂದ್ರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇಬ್ಬರನ್ನೂ ನಾಲ್ಕು ದಿನಗಳ ಕಾಲ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ನೀಡಲಾಗಿದೆ.

ಎರಡನೇ ಪೋಕ್ಸೋ ಪ್ರಕರಣದಲ್ಲಿ ಸ್ವಾಮೀಜಿ ವಿರುದ್ಧ ದೂರು ದಾಖಲಿಸಲು ವಿದ್ಯಾರ್ಥಿನಿಯ ಮೇಲೆ ಶಿಕ್ಷಕ ಬಸವರಾಜೇಂದ್ರ ಒತ್ತಡ ಹಾಕುವ ಆಡಿಯೋ ವೈರಲ್‌ ಆಗಿತ್ತು. ಇದರಲ್ಲಿ ವಿದ್ಯಾರ್ಥಿನಿಯ ತಾಯಿಯೇ ಮಗಳ ಮನವೊಲಿಸಲು ಶಿಕ್ಷಕನಿಗೆ ಮನವಿ ಮಾಡಿದ್ದಳು. ಬಸವರಾಜನ್‌ ಅವರು ಹೊಸಮನೆ, ವಿದ್ಯಾಭ್ಯಾಸಕ್ಕೆ ನೆರವು ಇತರೆ ಸೌಲಭ್ಯ ನೀಡುವ ಆಶ್ವಾಸನೆ ನೀಡಿದ್ದರು ಎನ್ನುವ ಅಂಶಗಳು ತನಿಖೆ ವೇಳೆ ಗೊತ್ತಾಗಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಕೆ.ಪರಶುರಾಮ್‌ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಂಧನವಾಗಿದ್ದು, ಗುರುವಾರ ಸಂಜೆ ಬಸವರಾಜನ್‌ ಹಾಗೂ ಶಿಕ್ಷಕ ಬಸವರಾಜೇಂದ್ರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಬಸವರಾಜನ್‌ ಅವರನ್ನು ಹತ್ತು ದಿನಗಳ ಕಾಲ ತಮ್ಮ ವಶಕ್ಕೆ ನೀಡಲು ಕೋರಿದರು. ಇದಕ್ಕೆ ಬಸವರಾಜನ್‌ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಾ ಧೀಶರಾದ ಅನಿತಾಕುಮಾರಿ ಅವರು ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದರು.

ಇದಕ್ಕೂ ಮುನ್ನ ಬಸವರಾಜನ್‌ ಅವರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು, ನಗರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಇಲ್ಲಿಂದ ಕೆಲಕಾಲ ಪೊಲೀಸ್‌ ಗೆಸ್ಟ್‌ಹೌಸ್‌ಗೆ ಕರೆದೊಯ್ದರು. ಬಸವರಾಜನ್‌ ಪತ್ನಿ ಸೌಭಾಗ್ಯ ಅವರು ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

Advertisement

ವಿದ್ಯಾರ್ಥಿನಿಗೆ ಪ್ರಚೋದನೆ ನೀಡಿ ಮುರುಘಾ ಶರಣರ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿದ್ದ ಆಡಿಯೋ ವೈರಲ್‌ ಆದ ಬೆನ್ನಲ್ಲೇ ಮುರುಘಾ ಮಠದ ಉಸ್ತುವಾರಿ ಶ್ರೀಬಸವಪ್ರಭು ಸ್ವಾಮೀಜಿ ಬುಧವಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಮಠದ ಉದ್ಯೋಗಿ ಗಾಯತ್ರಿ ಎಂಬುವವರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದರು.

ಮತ್ತೂಬ್ಬನ ಬಂಧನ: ಈ ನಡುವೆ ಮುರುಘಾ ಮಠದಿಂದ 47 ಫೋಟೋಗಳ ಕಳವು ಆರೋಪದಡಿ ಶ್ರೀನಿವಾಸ್‌ ಎಂಬವನನ್ನೂ ಬಂಧಿ ಸಲಾಗಿದೆ. ಈ ಮುನ್ನ ಇದೇ ಪ್ರಕರಣದಲ್ಲಿ ಹೊಸಹಳ್ಳಿ ಗ್ರಾಪಂ ಮಾಜಿ ಸದಸ್ಯ ಮೋಹನ್‌ಮೂರ್ತಿ ಹಾಗೂ ಡಿಪ್ಲೋಮಾ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿ ಅವರನ್ನು ಬಂಧಿಸಲಾಗಿತ್ತು.

ಶ್ರೀಮಠಕ್ಕೆ ಆಗಮಿಸಿದ್ದ ಗಣ್ಯರ ಜೊತೆಗೆ ಮುರುಘಾ ಶರಣರು ತೆಗೆಸಿಕೊಂಡಿದ್ದ ಈ 47 ಫೋಟೋಗಳನ್ನು ಮಠದ ರಾಜಾಂಗಣದಲ್ಲಿ ಅಳವಡಿಸಲಾಗಿತ್ತು. ಈ ಫೋಟೋಗಳನ್ನು ಕಳೆದ ಅ.6ರಂದು ರಾತ್ರಿ ಕಳುವು ಮಾಡಲಾಗಿತ್ತು. ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎಸ್‌.ಬಿ.ವಸ್ತ್ರಮಠ ಅವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳ್ಳತನದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನ.7ರಂದು ಇಬ್ಬರನ್ನು ಬಂ ಸಲಾಗಿತ್ತು.

ಮುರುಘಾ ಶರಣರ ವಿರುದ್ಧ ಒಟ್ಟು ಎರಡು ಪೋಕ್ಸೋ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿವೆ. ಮೊದಲ ಪ್ರಕರಣದಲ್ಲಿ ಮೂವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಎರಡೂ ಪ್ರಕರಣಗಳೂ ಬೇರೆ ಬೇರೆಯಾಗಿದ್ದು, ವಿಚಾರಣೆಯನ್ನು ಬೇರೆ ಬೇರೆಯಾಗಿಯೇ ಪಾರದರ್ಶಕವಾಗಿ ಮಾಡಲಾಗುತ್ತಿದೆ. ಸತ್ಯಾಂಶವಿದ್ದರೆ ಎರಡನೇ ಪ್ರಕರಣದಲ್ಲೂ ದೋಷಾರೋಪಣಾ ಪಟ್ಟಿ ಸಲ್ಲಿಸುತ್ತೇವೆ.ಕೆ.ಪರಶುರಾಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next