Advertisement

ತೇರದಾಳ ಮತಕ್ಷೇತ್ರಕ್ಕೆ ಸಿದ್ದು ಸವದಿ ಅಭ್ಯರ್ಥಿ –ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ

04:01 PM Mar 14, 2023 | Team Udayavani |

ರಬಕವಿ-ಬನಹಟ್ಟಿ: ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದು, ಅವರೇ ತೇರದಾಳ ಮತಕ್ಷೇತ್ರದ ಅಭ್ಯರ್ಥಿಯಾಗಿ ಮುಂದುವರೆಯಲಿದ್ದಾರೆ ಮತ್ತು ಈ ಬಾರಿಯೂ ಕೂಡಾ ಭಾರಿ ಅಂತರದಿಂದ ಜಯ ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

Advertisement

ಮಂಗಳವಾರ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಟಹಟಿ ತಾಲೂಕಿನ ಬನಹಟ್ಟಿಯ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಸರಿಸಮಾನರಲ್ಲ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತಾವೇ ಮುಖ್ಯಮಂತ್ರಿಗಳಾಗುತ್ತೇವೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಅವರ ಕನಸು ನನಸಾಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ನೀಡಿರುವ ಜನಪರ ಕಾರ್ಯಕ್ರಮಗಳು, ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹಾಗೂ ಓಬಿಸಿಗಳಿಗೆ ನೀಡಿದ ಸೌಲಭ್ಯಗಳು ನಮ್ಮ ಗೆಲುವಿಗೆ ಸಹಕಾರಿಯಾಗಲಿವೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಇದನ್ನೂ ಓದಿ: ಏಕದಿನ ಸರಣಿಗೂ ಗೈರಾದ ಪ್ಯಾಟ್ ಕಮಿನ್ಸ್; ತಂಡ ಮುನ್ನಡೆಸಲಿದ್ದಾರೆ ಸ್ಮಿತ್ 

ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್ ಶಾರವರ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಯುತ್ತಿದ್ದು, ಮಂಗಳವಾರ ಮತ್ತು ಬುಧವಾರದಂದು ಬಾಗಲಕೋಟೆ ಜಿಲ್ಲೆಯಲ್ಲಿಯೇ ಪ್ರವಾಸವಿದ್ದು ಈಗಾಗಲೇ 50 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮುಗಿಸಿದ್ದು, ಭಾರಿ ಜನ ಬೆಂಬಲ ದೊರೆತಿದೆ ಎಂದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಮತ್ತು ನಾವು ಆತ್ಮೀಯ ಸ್ನೇಹಿತರು, ಯಾವುದೋ ಒಂದೆರಡು ಸಂದರ್ಭದಲ್ಲಿ ಹೇಳಿಕೆಗಳನ್ನು ನೀಡಿರುವುದನ್ನು ನಾವು ಅಪರಾಧ ಎಂದು ಪರಿಗಣಿಸುವುದಿಲ್ಲ. ನಮ್ಮ ಮಧ್ಯದಲ್ಲಿ ಯಾವುದೆ ಗೊಂದಲವಿಲ್ಲ. ನಾವೆಲ್ಲರೂ ಒಟ್ಟಾಗಿ ಹೋಗುತ್ತೇವೆ ಎಂದರು.

Advertisement

ವಿಜಯೇಂದ್ರ ಹಾಗೂ ರಾಜ್ಯದ ಯಾವುದೆ ಬಿಜೆಪಿ ಶಾಸಕರ ಟಿಕೆಟ್ ನಿರ್ಧಾರವನ್ನು ಚುನಾವಣಾ ಸಮಿತಿ ಮಾಡುತ್ತದೆ. ನಾವು ಕೇವಲ ಸಲಹೆ ಕೊಡಬಹುದು. ಅಂತಿಮ ತೀರ್ಮಾನ ಚುನಾವಣೆಯ ಸಮಿತಿಯದ್ದಾಗಿದೆ.

ಸಚಿವ ಸೋಮಣ್ಣ ನವರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ವಿಚಾರವಾಗಿ ಮಾತನಾಡಿ, ಆ ರೀತಿಯ ಯಾವುದೇ ವಾತಾವರಣ ಇಲ್ಲ, ಅಂತಹ ಸುದ್ದಿಗಳಿಗೆ ಮಹತ್ವ ಇಲ್ಲ. ಬಿಜೆಪಿ ಪಕ್ಷದ ಹಿರಿಯ ಮುಖಂಡರು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷದ ಯಾವುದೆ ಸಭೆ ಸಮಾರಂಭಗಳಲ್ಲಿ ಮತ್ತು ರೋಡ್ ಶೋಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುತ್ತಿರುವುದನ್ನು ಮತ್ತು ಅವರ ಪ್ರೀತಿ ವಿಶ್ವಾಸವನ್ನು ಗಮನಿಸಿದಾಗ ಬಿಜೆಪಿ ಪಕ್ಷ 140ಕ್ಕೂ  ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತ ಪಡಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ನಾನೇ ರಾಜೀನಾಮೆಯನ್ನು ನೀಡಿದ್ದೇನೆ. ನನಗೆ ಯಾವುದೆ ಒತ್ತಡವಿರಲಿಲ್ಲ ಮತ್ತು ಅದೇ ರೀತಿಯಾಗಿ ಚುನಾವಣೆಗೆ ನಿಲ್ಲುವುದು ಇಲ್ಲ ಎಂಬುದು ಕೂಡಾ ನನ್ನ ಸ್ವಂತ ನಿರ್ಧಾರ ಎಂದರು. ಈಗ ಎಂಬತ್ತು ವರ್ಷಗಳಾಗಿದ್ದು, ರಾಜಕೀಯದ ಎಲ್ಲ ಸ್ಥಾನಗಳನ್ನು ಅಲಂಕರಿಸಿದ್ದೇನೆ. ಬೇರೆಯವರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮತ್ತು ಬೊಮ್ಮಾಯಿಯವರಿಗೆ ಮುಖ್ಯಮಂತ್ರಿಯಾಗಲು ನಾನೇ ಸಹಕರಿಸಿದ್ದೇನೆ ಎಂದು ಸ್ಪಷ್ಠೀಕರಿಸಿದರು.

ಪಕ್ಷದ ಹಿರಿಯ ಮುಖಂಡರಾದ ರಾಹುಲ್ ಗಾಂಧಿ ಹೊರದೇಶಕ್ಕೆ ಹೋಗಿ ನಮ್ಮ ದೇಶಕ್ಕೆ ಅಪಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುರಿಂದ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯಾಗಲಿದೆ. ಇಂಥಹ ಚಿಕ್ಕ ಮಕ್ಕಳಂತೆ ಹೇಳಿಕೆಗಳನ್ನು ನೀಡದೆ ಒಬ್ಬ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಮುರಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಮಾಜಿ ಸದಸ್ಯರಾದ ಅರುಣ ಶಹಾಪುರ, ಜಿ,ಎಸ್,ನ್ಯಾಮಗೌಡ ಬಾಗಲಕೋಟೆ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next