Advertisement

ಬಾಲ್ಯ ವಿವಾಹ ತಡೆಗೆ ಗ್ರಾಮಮಟ್ಟದಲ್ಲಿ ರಕ್ಷಣಾ ಸಮಿತಿ ರಚನೆ: ನಾಗಣ್ಣ ಗೌಡ

04:56 PM Jan 17, 2023 | Team Udayavani |

ಕಾರವಾರ: ಬಾಲ್ಯವಿವಾಹ ತಡೆಗೆ ಗ್ರಾಮ ಹಾಗೂ ಗ್ರಾಮ ಪಂಚಾಯತಿ ಹಾಗೂ ನಗರದ ವಾರ್ಡ್ ಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಲಾಗುವುದು.‌ ಈ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ಬಾಲ್ಯ ವಿವಾಹ ಎಂದರೆ ಜೈಲ್ ವಿವಾಹ ಎಂಬ ಎಚ್ಚರಿಗೆ ಮೂಡಿಸಲಾಗುವುದು ಎಂದು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಾಣ್ಣ ಗೌಡ ಹೇಳಿದರು.

Advertisement

ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಬೆಂಗಳೂರು ಶಾಲೆಯೊಂದರಲ್ಲಿ ಮಕ್ಕಳ ಬ್ಯಾಗ್ ನಲ್ಲಿ ಸಿಕ್ಕ ಆತಂಕಾರಿ ವಸ್ತುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಈ ಸಂಬಂಧ ಮೆಡಿಕಲ್ ಶಾಪ್ ಗಳಲ್ಲಿ ಅಪ್ರಾಪ್ತ ಮಕ್ಕಳಿಗೆ ಗರ್ಭನಿರೋಧಕಗಳನ್ನು ಮಾರದಂತೆ ಆರೋಗ್ಯ ಇಲಾಖೆಯ ಮೂಲಕ ಸೂಚನೆ ಕೊಡಿಸಲಾಗಿದೆ. ವೈನ್ ಶಾಪ್ ಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಅಬಕಾರಿ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ಕೊಡಿಸಲಾಗಿದೆ. ಅಪ್ರಾಪ್ತ ವಯಸ್ಕ ಮಕ್ಕಳಿಗೆ ಮದ್ಯ ಮಾರಾಟ ಮಾಡಿದರೆ ಅಂತ ಶಾಪ್ ಗಳ ಲೈಸೆನ್ಸ ರದ್ದು ಮಾಡಲಾಗುವುದು ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ 26 ಬಾಲ್ಯ ವಿವಾಹ ತಡೆದಿದ್ದೇವೆ. ಕಾರವಾರದಲ್ಲಿ ಒಂದು ಪ್ರಕರಣ ದಾಖಲಾಗಿದೆ. 45 ಜನ ಅಪ್ರಾಪ್ತರ ಮೇಲೆ ಅತ್ಯಾಚಾರ ಪ್ರಕರಣ ಕಾರವಾರ ಜಿಲ್ಲೆಯಲ್ಲಿ ದಾಖಲಾಗಿವೆ. 26 ಜಿಲ್ಲೆ ಪ್ರಯಾಣ ಮಾಡಿದ್ದೇನೆ. ರಾಜ್ಯದಲ್ಲಿ 2600 ಅತ್ಯಾಚಾರ ಪ್ರಕರಣ ದಾಖಲಾಗಿವೆ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಇಂತಹ ಘಟನೆಗಳಿವೆ. ಕೆಲವು ಕಡೆ ಶಿಕ್ಷಕರು ಮಕ್ಕಳ ಮೇಲೆ ದೌರ್ಜನ್ಯ ಮಾಡಿದ ಘಟನೆಗಳು ನಡೆದಿವೆ. ಇದು ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಹಾಗಾಗಿ ಶಿಕ್ಷಕರಿಗೆ ಕಟ್ಟು ನಿಟ್ಟಿನ ಸೂಚನೆಯನ್ನು ಇಲಾಖೆಯ ಮುಖ್ಯಸ್ಥರ ಮೂಲಕ ನೀಡಲಾಗುತ್ತಿದೆ ಎಂದರು.

ಮಕ್ಕಳ ಭಿಕ್ಷಾಟನೆ ತಡೆಯಲು ಕ್ರಮಗಳಾಗುತ್ತಿವೆ. ಉತ್ತರ ಕನ್ನಡದಲ್ಲಿ ಸಹ ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳನ್ನು ಬಾಲಮಂದಿರದಲ್ಲಿ ರಕ್ಷಿಸಲಾಗಿದೆ ಎಂದರು.

Advertisement

ಶಿರಸಿ ಸುತ್ತಮುತ್ತ‌ ಇರುವ ದುರಮುರಗಿ ಜನಾಂಗದ ಮಕ್ಕಳ ಸಮೇತ‌ ದೇವರ ಹೆಸರಲ್ಲಿ ಸಂಪ್ರದಾಯಕ್ಕಾಗಿ ಊರೂರು ಅಲೆದು ಭಿಕ್ಷಾಟನೆಗೆ ಮಾಡುವ ಪದ್ದತಿ ತೊಡೆದು ಹಾಕಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಎರಡು ದಶಕಗಳಿಂದ ಯಾಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಇಂದೇ ಮಾಹಿತಿ ಪಡೆಯುವೆ.‌ ಇದಕ್ಕಾಗಿ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಎಂದರು.

ಅಧಿಕಾರ ವಹಿಸಿಕೊಂಡು 75 ದಿನಗಳಾಗಿವೆ. ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರ ಅವಧಿ ಮೂರು ವರ್ಷ. ಆಯೋಗಕ್ಕೆ ಹಣಕಾಸಿನ ಕೊರತೆ ಇಲ್ಲ. ಮಕ್ಕಳ ರಕ್ಷಣೆ, ಅಲೆಮಾರಿ ಮಕ್ಕಳಿಗೆ ಶಿಕ್ಷಣ ಹಾಗೂ ಬಡ‌ಕುಟುಂಬ ಹಾಗೂ ಬುಡಕಟ್ಟು ಕುಟುಂಬದ ಮಕ್ಕಳ ರಕ್ಷಣೆಗೆ ಹಾಗೂ ಬಾಲ್ಯ ವಿವಾಹ ತಡೆಗೆ ಪ್ರಾಮಾಣಿಕ ಕೆಲಸ ಮಾಡುವೆ ಎಂದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ರಾಯ್ಕರ್ ಮತ್ತು ಮಕ್ಕಳ ರಕ್ಷಣಾ‌ ಘಟಕದ ಐಗಳ, ಡಿವೈಎಸ್ಪಿ ವೆಲಂಟೈನ್ ಡಿಸೊಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next