Advertisement

ಮೀಸಲು ಅರಣ್ಯದ ತೂಗುಗತ್ತಿ

10:47 AM Sep 22, 2022 | Team Udayavani |

ಸುಳ್ಯ: ತಾಲೂಕಿನ 700ಕ್ಕೂ ಹೆಚ್ಚು ಕೃಷಿಕರ ತಲೆಯ ಮೇಲೆ ಮೀಸಲು ಅರಣ್ಯದ ತೂಗುಕತ್ತಿ ನೇತಾಡತೊಡಗಿದ್ದು, ಹಲವಾರು ವರ್ಷಗಳಿಂದ ಕೃಷಿ ಮಾಡಿ ಕುಟುಂಬ ಕಟ್ಟಿಕೊಂಡ ಕೃಷಿಕರಿಗೆ ಈಗ ಸಂಕಷ್ಟ ಎದುರಾಗಿದೆ.

Advertisement

ಅಕ್ರಮ ಸಕ್ರಮದಲ್ಲಿ ಡಿನೋಟಿಸ್‌, ಆರ್‌.ಟಿ.ಸಿ. ಆಗಿ 20 ವರ್ಷ ಕಳೆದವರಿಗೆ ಅರಣ್ಯ ಇಲಾಖೆಯಿಂದ ಈಗ ನೋಟಿಸ್‌ ಬರಲಾರಂಭಿಸಿದೆ. ಮೀಸಲು ಅರಣ್ಯದ ಈ ಸರ್ವೇ ನಂಬರಲ್ಲಿ ಇಷ್ಟು ಎಕ್ರೆ ಸ್ಥಳವನ್ನು ಭೂ ಕಬಳಿಕೆ ಮಾಡಿದ್ದೀರೆಂದು ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಬೇಕು ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಿಂದ ಕೃಷಿಕರಿಗೆ ನೋಟಿಸ್‌ ಬರಲಾರಂಭಿಸಿದೆ.

ಸುಳ್ಯ ತಾಲೂಕಿನ 30ಕ್ಕೂ ಅಧಿಕ ಮಂದಿಗೆ ಈಗಾಗಲೇ ನೋಟಿಸ್‌ ತಲುಪಿದೆ. 150 ಮಂದಿಯ ಪಟ್ಟಿ ಸಿದ್ಧವಾಗಿದೆ ಎನ್ನಲಾಗಿದೆ. ತಾಲೂಕಿನಲ್ಲಿ ಸುಮಾರು 700ಕ್ಕೂ ಅಧಿಕ ಪ್ರಕರಣಗಳು ಇಂತಹ ಮೀಸಲು ಅರಣ್ಯದಲ್ಲಿ ಇದೆ. ಸುಳ್ಯ ನಗರ ವ್ಯಾಪ್ತಿಯ ದುಗಲಡ್ಕದಲ್ಲಿ 5 ಮಂದಿ ಕೃಷಿಕರಿಗೆ ನೋಟಿಸ್‌ ತಲುಪಿದೆ. ಅವರಿಗೆಲ್ಲ 20 ವರ್ಷಕ್ಕಿಂತ ಮೊದಲೇ ಅಕ್ರಮ ಸಕ್ರಮದಲ್ಲಿ ಡಿನೋಟಿಸ್‌ ಆಗಿ ಆರ್‌.ಟಿ.ಸಿ. ಆಗಿದೆ. ಅದಕ್ಕಿಂತ ಹಲವಾರು ವರ್ಷಗಳಿಗಿಂತ ಮೊದಲೇ ಆ ಕೃಷಿಕರು ಅಲ್ಲಿ ನೆಲೆಸಿ ಕೃಷಿ ಮಾಡಿ ಬದುಕು ಕಟ್ಟಿಕೊಂಡಿದ್ದರು ಎಂದು ವಿವರಿಸಲಾಗುತ್ತಿದೆ.

ರಾಜ್ಯ ಸರಕಾರ ಇತ್ತೀಚೆಗೆ 9 ಲಕ್ಷ ಹೆಕ್ಟೇರ್‌ ಡೀಮ್ಡ್ ಭೂಮಿಯನ್ನು ಅರಣ್ಯ ಎಂಬ ದಾಖಲೆಯಿಂದ ತೆಗೆದು ಹಾಕಿದೆ. ಆದರೆ ಅದಕ್ಕಿಂತ ಮೊದಲು, ಹಿಂದಿನ ಮೀಸಲು ಅರಣ್ಯಕ್ಕಿಂತ ಹೊರಗೆ ಇದ್ದ ಅರಣ್ಯದ ಸ್ವರೂಪ ಇದ್ದ ಲಕ್ಷಾಂತರ ಎಕ್ರೆ ಜಾಗವನ್ನು ಅರಣ್ಯ ಇಲಾಖೆ ಅರಣ್ಯದ ಹೊಸ ಬ್ಲಾಕ್‌ಗೆ ಸೇರಿಸಲಾಗಿತ್ತು. ಈ ಸಂದರ್ಭದಲ್ಲಿ ಹೊಸ ಬ್ಲಾಕ್‌ನಲ್ಲಿ ಜಮೀನು ಇದ್ದ ಕೃಷಿಕರ ಕೃಷಿ ಜಾಗವನ್ನು ಗುರುತಿಸದೆ ಸರ್ವೇ ನಂಬರ್‌ ಅನ್ನು ಮಾತ್ರ ನಮೂದು ಮಾಡಿಕೊಂಡಿದ್ದರಿಂದ ಆ ಎಲ್ಲ ಪ್ರದೇಶ ಮೀಸಲು ಅರಣ್ಯ ಪ್ರದೇಶ ಎಂದು ಅರಣ್ಯ ಇಲಾಖೆ ಈಗ ವಾದ ಮಾಡುತ್ತಿದೆ. ಅರಣ್ಯ ಇಲಾಖೆಯಲ್ಲಿ ಆ ಜಾಗ ಅರಣ್ಯ ಪ್ರದೇಶವೆಂದು ಇದ್ದುದರಿಂದ ಸರಕಾರದ ಆದೇಶದ ಅನ್ವಯ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಎಲ್ಲ ಪ್ರಕರಣಗಳನ್ನು ಕೆಲವು ವರ್ಷಗಳ ಹಿಂದೆ ವರ್ಗಾಯಿಸಿದ್ದರು.

ಈಗ ಆ ಎಲ್ಲ ಪ್ರಕರಣಗಳಿಗೆ ಮರು ಜೀವ ಮಂದು ವಿಶೇಷ ನ್ಯಾಯಾಲಯದಿಂದ ಹಲವು ವರ್ಷಗಳಿಂದ ಬದುಕು ಕಟ್ಟಿ ಕೊಂಡವರಿಗೆ ನೋಟಿಸ್‌ ಬರ ಲಾರಂಭಿಸಿದೆ. ಇದರಿಂದ ರೈತರು ತಮ್ಮ ವಕೀಲರ ಮೂಲಕ ಬೆಂಗಳೂರಿನಲ್ಲಿರುವ ಈ ನ್ಯಾಯಾಲಯಕ್ಕೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.

Advertisement

ರೈತರಿಗೆ ಪೂರಕ ಕ್ರಮಕ್ಕೆ ಆಗ್ರಹ

ಒಂದು ಕಡೆ ಕಸ್ತೂರಿ ರಂಗನ್‌ ವರದಿಯ ತೂಗುಗತ್ತಿ ರೈತರ ಮೇಲೆ ಇರುವಾಗಲೇ ಮತ್ತೂಂದು ತೂಗುಗತ್ತಿ ಹಲವಾರು ಕುಟುಂಬಗಳ ಬದುಕು ಕಸಿದುಕೊಳ್ಳಲು ಸಿದ್ಧವಾಗಿದೆ. ಕೃಷಿಕರಿಗೆ ಯಾವುದೇ ಅನ್ಯಾಯ ಆಗದ ರೀತಿಯಲ್ಲಿ ಸರಕಾರ ಪೂರಕ ಕ್ರಮ ಕೈಗೊಳ್ಳಬೇಕಿದೆ ಎಂದು ಸಂತ್ರಸ್ತ ಕೃಷಿಕರು ಒತ್ತಾಯಿಸಿದ್ದಾರೆ.

ಸೂಕ್ತ ದಾಖಲೆ ಸಲ್ಲಿಸಬೇಕು: ಅರಣ್ಯ ಇಲಾಖೆಯ ಕಾಯಿದೆ ಪ್ರಕಾರ ಅರಣ್ಯದ ಹೊಸ ಬ್ಲಾಕ್‌ಗಳ ಒಳಗೆ ವಾಸ ಮಾಡಿಕೊಂಡಿರುವ ಪ್ರಕರಣಗಳನ್ನೆಲ್ಲ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಕೆಲ ವರ್ಷಗಳ ಹಿಂದೆ ಸಲ್ಲಿಸಲಾಗಿತ್ತು. ನ್ಯಾಯಾಲಯದಿಂದ ಈಗ ನೋಟಿಸ್‌ ಬರಲು ಆರಂಭಿಸಿದೆ. ನೋಟಿಸ್‌ ಬಂದ ಕುಟುಂಬಗಳು ತಮ್ಮಲ್ಲಿರುವ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. -ಪ್ರವೀಣ್‌ ಕುಮಾರ್‌ ಶೆಟ್ಟಿ, ಎ.ಸಿ.ಎಫ್., ಸುಳ್ಯ.

ಆತಂಕ ಮೂಡಿಸಿದೆ: ನನಗೆ 1995-96ರಲ್ಲಿ ಮೂರೂವರೆ ಎಕ್ರೆ ಭೂಮಿ ಅಕ್ರಮ ಸಕ್ರಮದಲ್ಲಿ ಮಂಜೂರಾಗಿದೆ. ಈಗ ಅದರಲ್ಲಿ 3 ಎಕ್ರೆ ಪ್ರದೇಶ ಅರಣ್ಯ ಇಲಾಖೆಯದ್ದು ಎಂದು ವಿಶೇಷ ನ್ಯಾಯಾಲಯದಿಂದ ನೋಟಿಸ್‌ ಬಂದಿದೆ. ನಾವು ಇಲ್ಲಿ 75 ವರ್ಷಗಳಿಂದ ನೆಲೆಸಿ ಕೃಷಿ ಮಾಡಿಕೊಂಡಿದ್ದೇವೆ. ನ್ಯಾಯಾಲಯದ ನೋಟಿಸ್‌ ನಮಗೆ ಆತಂಕ ಮೂಡಿಸಿದೆ. -ಬಾಬು ನಾಯ್ಕ, ನೀರಬಿದಿರೆ.

-ದಯಾನಂದ ಕಲ್ನಾರು

Advertisement

Udayavani is now on Telegram. Click here to join our channel and stay updated with the latest news.

Next