Advertisement

ಅರಣ್ಯಾಧಿಕಾರಿಗಳ ನಡುವಿನ ತಿಕ್ಕಾಟ, ಕಾಡಿಗೆ ಕಂಟಕ!

12:50 AM Mar 06, 2017 | |

ಮೈಸೂರು: ಪ್ರತಿ ಬೇಸಿಗೆಯಲ್ಲೂ ಮರುಕಳಿಸುತ್ತಿರುವ ಕಾಡ್ಗಿಚ್ಚಿಗೆ ಕಾಡಂಚಿನ ಗ್ರಾಮಗಳ ಜನರತ್ತ ಬೊಟ್ಟು ಮಾಡಿ, ದುಷ್ಕರ್ಮಿಗಳು-ಕಿಡಿಗೇಡಿಗಳ ಕೃತ್ಯವೆಂದು ಅರಣ್ಯ ಇಲಾಖೆಯು ಷರಾ ಬರೆದು ಕೈಚೆಲ್ಲುವುದನ್ನು ಬಿಟ್ಟರೆ, ವರ್ಷದಿಂದ ವರ್ಷಕ್ಕೆ ಸಾವಿರಾರು ಹೆಕ್ಟೇರ್‌ ಅರಣ್ಯವನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಕಾಡಿನ ಬೆಂಕಿ ತಡೆಗೆ ಪ್ರಾಮಾಣಿಕ ಪ್ರಯತ್ನವನ್ನೇ ಮಾಡುತ್ತಿಲ್ಲ.

Advertisement

ಅರಣ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಅಧಿಕಾರಿಗಳು, ನೌಕರರಲ್ಲಿ ಕೆಳ ಹಂತದವರಿಂದ ಮೇಲಿನ ಹಂತದವರೆಗಿನ ಅಧಿಕಾರಿಗಳಲ್ಲಿನ ವಿಶ್ವಾಸದ ಕೊರತೆ, ನೌಕರರನ್ನು ವಿಶ್ವಾಸಕ್ಕೆತೆಗೆದುಕೊಳ್ಳದಿರುವುದು, ಅರಣ್ಯ ಕಾನೂನಿನ ಹೆಸರಲ್ಲಿ ಕಾಡಂಚಿನ ಗ್ರಾಮಸ್ಥರನ್ನು ವಿಲನ್‌ ಗಳಂತೆ ಕಾಣುತ್ತಾ ಸದಾ ಕಾಡುವ ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆಯೇ ಕಾಡಿನ ಬೆಂಕಿಗೆ ಕಾರಣವಾಗುತ್ತಲಿದೆ ಎನ್ನುತ್ತಾರೆ ಇಲಾಖೆಯನ್ನು ಹತ್ತಿರದಿಂದ ಬಲ್ಲವರು.

ಪರಿಸರ, ವನ್ಯಜೀವಿಗಳ ಬಗೆಗಿನ ಕಾಳಜಿಯಿಂದಲೇ ಭಾರತೀಯ ಅರಣ್ಯ ಸೇವೆ (ಐಎಫ್ಎಸ್‌)ಗೆ ಸೇರಿದ ಬಹುತೇಕಅಧಿಕಾರಿಗಳು ಕಾಡು ಕಾಯುವುದನ್ನು ಬಿಟ್ಟು ಬೇರೆ ಇನ್ನೇನನ್ನೋ ಮಾಡುತ್ತಾ ಬಂದಿದ್ದಾರೆ. ದಶಕಗಳಿಂದ ಈ ಕೆಲಸ ಮುಂದುವರಿಯುತ್ತಲೇ ಬಂದಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳಿಗೆ ವಿಶ್ವವಿದ್ಯಾಲಯ, ಜಿಲ್ಲಾ ಪಂಚಾಯಿತಿ ಸೇರಿ ಸರ್ಕಾರದ ವಿವಿಧ ನಿಗಮ-ಮಂಡಳಿಗಳಲ್ಲಿ ಅದರಲ್ಲೂ ಅರಣ್ಯಕ್ಕೆ ಸಂಬಂಧ ಪಡದ ಇಲಾಖೆಗಳಲ್ಲಿ ನಿಮಗೇನು ಕೆಲಸ, ಅರಣ್ಯ ಇಲಾಖೆಗೆ ನಡೆಯಿರಿ ಎಂದು ಹೇಳುವ ಗೋಜಿಗೆ ಸರ್ಕಾರವು ಮುಂದಾಗುತ್ತಿಲ್ಲ.

ಜತೆಗೆ ಅರಣ್ಯ ಇಲಾಖೆಯಲ್ಲಿದ್ದರೂ ವರ್ಷಗಳ ಕಾಲ ಬೆಂಗಳೂರಿನ ಅರಣ್ಯಭವನದ ಮಾನವ ನಿರ್ಮಿತ ಹವಾನಿಯಂತ್ರಿತ ಕೋಣೆ ಬಿಟ್ಟು ಪ್ರಕೃತಿ ನಿರ್ಮಿತ ಹವಾನಿಯಂತ್ರಿತ ಕಾಡುಗಳತ್ತ ಬರುವುದೇ ಇಲ್ಲ. ಅಪರೂಪಕ್ಕೆ ಬಂದರೂ ಪ್ರವಾಸಕ್ಕೆ ಬಂದಂತೆ ಅರಣ್ಯದ ಕೋರ್‌ ವಲಯದಲ್ಲಿ ಸಫಾರಿ ನಡೆಸಿ, ಅರಣ್ಯ ವಿಶ್ರಾಂತಿ ಗೃಹಗಳಲ್ಲಿ ತಂಗಿದ್ದು ವಾಪಸ್ಸಾಗುವ ಅಧಿಕಾರಿಗಳೇ ಹೆಚ್ಚು ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಇಲಾಖೆಯ ಕೆಳ ಹಂತದ ನೌಕರರು.

ಐಎಫ್ಎಸ್‌ ಮಾಡಿದ ನಂತರ ಪ್ರೊಬೇಷನರಿ ಐಎಫ್ಎಸ್‌ ಅಧಿಕಾರಿಯಾಗಿ ವಲಯ ಅರಣ್ಯಾಧಿಕಾರಿಯಾಗಿ ಬರುವ ಬೇರೆ ರಾಜ್ಯಗಳವರು (ಅದರಲ್ಲೂ ಉತ್ತರ ಭಾರತದವರೇ ಹೆಚ್ಚು) ಸ್ಥಳೀಯವಾಗಿ ಭಾಷೆ ಕಲಿಕೆ ಜತೆಗೆ ಆಡಳಿತವನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಬಡ್ತಿಹೊಂದಿ ಎಸಿಎಫ್, ಡಿಸಿಎಫ್, ಸಿಎಫ್ ಹೀಗೆ ಹಂತ ಹಂತವಾಗಿ ಹುದ್ದೆಯಲ್ಲಿ ಮೇಲೇರುತ್ತಾ ಹೋದಂತೆ ಕಾಡಿನಿಂದ ದೂರವಾಗಿ ಬಿಡುತ್ತಾರೆ ಎನ್ನುತ್ತಾರೆ.

Advertisement

ನಿಯೋಜನೆಯೇ ಹೆಚ್ಚು: ರಾಜ್ಯದಲ್ಲಿರುವ 93 ಐಎಫ್ಎಸ್‌ ಅಧಿಕಾರಿಗಳ ಪೈಕಿ ಹೆಚ್ಚಿನವರು ಮಲ್ಲೇಶ್ವರದ ಅರಣ್ಯ ಭವನದಲ್ಲಿ ದಶಕಗಳಿಂದ ಬೇರೆ ಬೇರೆ ವಿಭಾಗಗಳಲ್ಲಿ ಪ್ರತಿಷ್ಠಾಪನೆಯಾಗಿದ್ದರೆ, ಹತ್ತಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ಆದರೂ 33 ಐಎಫ್ಎಸ್‌ ಅಧಿಕಾರಿಗಳು ಬೇರೆ ಬೇರೆ ಇಲಾಖೆ, ನಿಗಮ-ಮಂಡಳಿಗಳಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಾ ರಾಜಧಾನಿಯಲ್ಲೇ ಉಳಿದಿದ್ದಾರೆ. ಉಳಿದವರೂ ಸಹ ಕೇಂದ್ರ ಸ್ಥಾನ, ಆಡಳಿತ, ತರಬೇತಿ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಹಂಚಿ ಹೋಗಿದ್ದಾರೆ ಹೀಗಾಗಿ ಕಾಡು ಕಾಯುವವರ್ಯಾರು ಎಂಬ ಪ್ರಶ್ನೆ ಎದುರಾಗಿದೆ.

ಇತ್ತ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ನಿರ್ದೇಶಕರಾಗಿರುವವರು, ಅಭಯಾರಣ್ಯಗಳಲ್ಲಿ ಉಪ ಅರಣ್ಯಸಂರಕ್ಷಣಾಧಿಕಾರಿಗಳಾಗಿರುವ ಐಎಫ್ಎಸ್‌ ಅಧಿಕಾರಿಗಳು ಕೆಳ ಹಂತದಿಂದ ಬಡ್ತಿ ಹೊಂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯಸಂರಕ್ಷಣಾಧಿಕಾರಿ ಹುದ್ದೆಗೇರಿರುವ (ನಾನ್‌ ಐಎಫ್ಎಸ್‌) ತಮ್ಮ ಸಹಪಾಠಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಡು ಬೆಂದರೆ ಬೇಯಲಿ ನನಗೇನು ಮೂರು ವರ್ಷ ಇದ್ದು ಹೋದರಾಯಿತು ಎಂಬ ಉಡಾಫೆ ಧೋರಣೆಯೂ ಕಾಡಿಗೆ ಕಂಟಕವಾಗುತ್ತಿದೆ ಎನ್ನುತ್ತಾರೆ ನೌಕರರು.

ಜಾತಿ ಪ್ರೀತಿಯೂ ಕೆಲಸ ಮಾಡುತ್ತೆ: ಅರಣ್ಯದ ಅಂಚಿನ ವಲಯದ ಜವಾಬ್ದಾರಿ ಹೊತ್ತಿರುವ ವಲಯ ಅರಣ್ಯಾಧಿಕಾರಿಯಂತೂ ಬೇಸಿಗೆ ಮಾತ್ರವಲ್ಲ ವರ್ಷವಿಡೀ ಜಾಗೃತನಾಗಿರಬೇಕು. ಸೋಲಾರ್‌ ಬೇಲಿ ಮುರಿದು, ಕಂದಕವನ್ನು ಮುಚ್ಚಿ ಜಾನುವಾರುಗಳನ್ನು ಮೇಯಲು ಬಿಡುವ, ಕಳ್ಳಬೇಟೆ, ಮರ ಕಡಿತಲೆಗಳ ತಡೆಗೆ ಕಾನೂನಿನ ಅಂಕುಶಕ್ಕಿಂತ ಹಳ್ಳಿಗರ ಮನಗೆಲ್ಲುವುದು ಮುಖ್ಯ. ಅಧಿಕಾರಿ ನಮ್ಮವನೆಂಬ ಜಾತಿ ಪ್ರೇಮ ವನ್ನು ಹಳ್ಳಿಗರಲ್ಲಿ ಭಿತ್ತಿ, ಸಾಹೇಬ್ರು ನಮ್ಮವರೆಂಬ ವಿಶ್ವಾಸಗಳಿಸಿ ಸದಾ ಅವರೊಂದಿಗೆ ಒಡನಾಟ ಇರಿಸಿಕೊಂಡು ತನ್ನ ಕೈಲಾದಮಟ್ಟಿಗೆ ಅವರ ಬೇಕು-ಬೇಡ ಈಡೇರಿಸುತ್ತಾ, ಸಣ್ಣಪುಟ್ಟ ಕೆಲಸಗಳನ್ನು ಹಳ್ಳಿಯವರಿಂದಲೇ ಮಾಡಿಸಿ ಕೂಲಿ ಕೊಡುತ್ತಾ, ಕಾಡನ್ನು ಕಾಯ್ದ ಅನೇಕ ವಲಯ ಅರಣ್ಯಾಧಿಕಾರಿಗಳಿದ್ದಾರೆ.

ಈ ರೀತಿ ಕೆಳ ಹಂತದಿಂದ ಡಿಎಫ್ಒ ಹುದ್ದೆಗೇರಿದ ಅನೇಕ ಅಧಿಕಾರಿಗಳಿಗೆ ಕಾಡಿನ ಇಂಚಿಂಚೂ ಹಾಗೂ ಕಾಡಂಚಿನ ಗ್ರಾಮಗಳ ಜನರ ನಾಡಿಮಿಡಿತವು ಗೊತ್ತು. ಆದರೆ, ಬಹುತೇಕ ಐಎಫ್ಎಸ್‌ ಅಧಿಕಾರಿಗಳು ಇಂತಹ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಡು ಕಾಯುವ ಕೆಲಸಕ್ಕೆ ಹಚ್ಚಿ ದುಡಿಸಿಕೊಳ್ಳುವುದೇ ಇಲ್ಲ ಎನ್ನುತ್ತಾರೆ ಹೆಸರು ಹೇಳಲು ಬಯಸದ ಅರಣ್ಯ ಇಲಾಖೆ ನೌಕರರು.

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next