Advertisement

ಆ.9ರಂದು ಅರಣ್ಯ ಸಾಗುವಳಿದಾರರ ಸಭೆ

03:44 PM May 11, 2022 | Niyatha Bhat |

ಶಿವಮೊಗ್ಗ: ಜಿಲ್ಲೆಯ ಬಗರ್‌ ಹುಕುಂ,ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆಗಳನ್ನು ಇಟ್ಟುಕೊಂಡು ಶಿವಮೊಗ್ಗದ ಕಾಗೋಡಿನಲ್ಲಿ ಆ.9 ರಂದು ರಾಜ್ಯಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಘೋಷಿಸಿದರು.

Advertisement

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಮಂಗಳವಾರ ಜಿಲ್ಲಾ ಭೋವಿ ಸಮುದಾಯ ಭವನದ ಎದುರು ಆಯೋಜಿಸಲಾಗಿದ್ದ ಜನಧ್ವನಿ ಸಮಾವೇಶವನ್ನು ಡೊಳ್ಳು ಬಾರಿಸುವುದು ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕ್ವಿಟ್‌ ಇಂಡಿಯಾ ದಿನಾಚರಣೆ ಅಂಗವಾಗಿ ಆ.9 ರಂದು ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಕಾಗೋಡಿನಲ್ಲಿ ಬಗರ್‌ ಹುಕುಂ, ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಮಟ್ಟದ ಹೋರಾಟ ರೂಪಿಸಲಾಗುತ್ತದೆ. ರಾಜ್ಯಮಟ್ಟದ ನಾಯಕರೆಲ್ಲರೂ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಜನಧ್ವನಿ ಪ್ರತಿಭಟನೆ ಮೆರವಣಿಗೆಯನ್ನು ಹತ್ತು-ಹದಿನೈದು ದಿನಗಳ ಹಿಂದೆಯೇ ಮಾಡಬೇಕಿತ್ತು. ಈಶ್ವರಪ್ಪನವರ ರಾಜೀನಾಮೆಗೆ ನಾವು ಆಗ್ರಹ ಮಾಡಿರಲಿಲ್ಲ. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆತನ ಸಹೋದರ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಿಸಬೇಕು ಎಂಬುದು ನಮ್ಮ ಆಗ್ರಹವಾಗಿತ್ತು. ಸಂತೋಷ್‌ ಪಾಟೀಲ್‌ ಸಹೋದರನ ದೂರಿನಲ್ಲಿ ಸಚಿವ ಈಶ್ವರಪ್ಪ ಅವರು 40 ಪಸೆಂìಟ್‌ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರು. ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರೂ ನನಗೆ ಬಿಲ್‌ ಪಾವತಿ ಮಾಡಿರಲಿಲ್ಲ. ಹೀಗಾಗಿ ಸಂತೋಷ್‌ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ದಾಖಲಾಗಿತ್ತು. ಮುಖ್ಯಮಂತ್ರಿ ಬೊಮ್ಮಾಯಿಯವರು ಈಶ್ವರಪ್ಪನವರನ್ನು ಈ ಪ್ರಕರಣದಲ್ಲಿ ರಕ್ಷಣೆ ಮಾಡುವ ಉದ್ದೇಶದಿಂದ ಕೇವಲ ಆತ್ಮಹತ್ಯೆ ಪ್ರಕರಣ ಮಾತ್ರ ದಾಖಲಿಸಿದ್ದಾರೆ. ಇದು ಕೇವಲ ಆತ್ಮಹತ್ಯೆ ಅಲ್ಲ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಬೇಕಿತ್ತು. ಆಗ ಅವರಿಗೆ ನ್ಯಾಯ ಸಿಗುತ್ತಿತ್ತು ಎಂದರು.

ಇನ್ನು ಈಶ್ವರಪ್ಪನವರು ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜದ ಬದಲಿಗೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದರು. ಬಿಜೆಪಿ ನಾಯಕರು ಈಗ ತಮ್ಮ ತಲೆಯ ಮೇಲೆ ಕೇಸರಿ ಟೋಪಿ, ಯುವಕರ ಮೇಲೆ ಕೇಸರಿ ಶಾಲನ್ನು ಹಾಕುತ್ತಿದ್ದಾರೆ. ಅವರಿಗೂ ಕೇಸರಿ ಬಣ್ಣಕ್ಕೂ ಏನು ಸಂಬಂಧ? ಸ್ವತಂತ್ರ ಹೋರಾಟದಲ್ಲಿ ಅವರೇನಾದರೂ ತ್ಯಾಗ-ಬಲಿದಾನ ಮಾಡಿದ್ದರಾ? ದೇಶಕ್ಕಾಗಿ ಬಿಜೆಪಿ ನಾಯಕರು ಪ್ರಾಣ ಬಿಟ್ಟಿದ್ದಾರಾ? ಕೇಸರಿ ಶಾಂತಿಯ ಸಂಕೇತ. ಮಠಮಾನ್ಯಗಳಲ್ಲಿ ಸ್ವಾಮೀಜಿಗಳು, ಧರ್ಮಗುರುಗಳು ಕೇಸರಿ ವಸ್ತ್ರವನ್ನು ಧರಿಸುತ್ತಾರೆ. ನಾವು ಅವರಿಗೆ ಗೌರವ ನೀಡುತ್ತೇವೆ. ಆದರೆ ಬಿಜೆಪಿಯವರು ಈ ಕೇಸರಿ ಬಣ್ಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಸದಾ ರಕ್ತ ಹಾಗೂ ಹಿಂಸೆ ಮೇಲೆ ಆಸಕ್ತಿ ಹೊಂದಿದ್ದು, ಅವರು ಕೆಂಪುಬಣ್ಣದ ಶಾಲು ಹಾಗೂ ಟೋಪಿ ಹಾಕಿಕೊಳ್ಳಬೇಕು ಎಂದು ಹೇಳಿದರು.

Advertisement

ಬಿಜೆಪಿ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಮುಂದಾಗಿದೆ. ಯಡಿಯೂರಪ್ಪನವರೇ, ಈಶ್ವರಪ್ಪನವರೇ ನೀವು ಬಂಡವಾಳ ಹೂಡಿಕೆದಾರರನ್ನು ಶಿವಮೊಗ್ಗ ಜಿಲ್ಲೆಗೆ ಕರೆತನ್ನಿ. ಈ ಜಿಲ್ಲೆಯ ಸುಮಾರು 8 ಸಾವಿರ ಜನರಿಗೆ ಉದ್ಯೋಗ ನೀಡಲು ಯಾರಾದರೂ ಧೈರ್ಯವಾಗಿ ಮುಂದೆ ಬರುತ್ತಾರಾ ಎಂಬುದನ್ನು ನೋಡಿ. ನೀವು ಶಿವಮೊಗ್ಗ ಜಿಲ್ಲೆಗೆ ಇಟ್ಟಿರುವ ಕಪ್ಪುಚುಕ್ಕೆ ಪರಿಣಾಮ ಇಲ್ಲಿ ಉದ್ಯೋಗ ಸೃಷ್ಟಿ ಮಾಡಲು ಯಾವುದೇ ಬಂಡವಾಳ ಹೂಡಿಕೆದಾರರು ಮುಂದೆ ಬರುವುದಿಲ್ಲ ಎಂದರು.

ಬಿಜೆಪಿ ಸರ್ಕಾರ ರಾಜ್ಯಕ್ಕೆ ತಂದಿರುವ ಕಳಂಕವನ್ನು ತೊಳೆಯಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಗ್ರಾಪಂ ಕಚೇರಿಗಳಲ್ಲಿ, ನಗರಸಭೆ, ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಅಕ್ರಮಗಳು ನಡೆಯುತ್ತಿವೆ. ಈ ಅಕ್ರಮಗಳನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷದ ನಾಯಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದೆವು. ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕು. ಆಗ ಕಾಂಗ್ರೆಸ್‌ ಪಕ್ಷ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದರು. ಶಿವಮೊಗ್ಗ ಜಿಲ್ಲೆಗೆ ಕೋಮುಗಲಭೆ ಮೂಲಕ ಕಪ್ಪುಚುಕ್ಕೆ ಇಟ್ಟು ಇಡೀ ಜಿಲ್ಲೆಯ ಜನತೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ನೀವೆಲ್ಲರೂ ಅವರನ್ನು ಮನೆಗೆ ಕಳುಹಿಸಬೇಕು, ಈ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್‌, ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ಶಾಸಕರಾದ ರಾಜೇಗೌಡ, ವೆಂಕಟರಮಣಪ್ಪ, ಬಿ.ಕೆ. ಸಂಗಮೇಶ್‌, ಮಾಜಿ ಶಾಸಕ ಮಧುಬಂಗಾರಪ್ಪ, ಆರ್.ಪ್ರಸನ್ನ ಕುಮಾರ್‌, ಎಐಸಿಸಿ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌, ಮುಖಂಡರಾದ ಆರ್‌.ಎಂ. ಮಂಜುನಾಥ ಗೌಡ, ಮುಖಂಡರಾದ ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್.ಎಸ್‌ ಸುಂದರೇಶ್‌ ಹಾಗೂ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯರು ಇತರರು ಇದ್ದರು.

ಯಾರು ತಪ್ಪು ಮಾಡಿದ್ರೂ ತಪ್ಪೇ

ಈ ಜಿಲ್ಲೆಯ ಯುವಕ ಸಾವನ್ನಪ್ಪಿದ್ದಾನೆ. ತಪ್ಪು ಯಾರು ಮಾಡಿದರೂ ತಪ್ಪೇ, ಆದರೆ ಅದೇ ರೀತಿ ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಲು ಮತ್ತೂಂದು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಪೊಲೀಸ್‌ ಅಧಿಕಾರಿಗಳು ಅದನ್ನು ತಡೆದು 13 ಮಂದಿಯನ್ನು ಬಂಧಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ.

ಶಿವಮೊಗ್ಗ ಈಗ ಭ್ರಷ್ಟರ ಕೂಪ

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್‌ ಮಾತನಾಡಿ, ಶಿವಮೊಗ್ಗ ಸ್ಥಿತಿ ಯಾವ ರೀತಿಯಲ್ಲಿ ಇದೆಯೆಂದು ನಾನೂ ದೂರದಿಂದ ಶಿವಮೊಗ್ಗ ನೋಡುತ್ತಿರುತ್ತೇನೆ. ಬಿಜೆಪಿಯವರು ಯಾವತ್ತು ಜನಪರ, ರೈತರ ಪರ ಯೋಚನೆ ಮಾಡಲು ಸಮಯ ಇಲ್ಲ ಎಂದು ಹೇಳಿದರು.

8 ವರ್ಷದಿಂದ ಭಾರತವನ್ನು ವಿಶ್ವ ಗುರು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಯಾವುದಾದರೂ ಒಳ್ಳೆ ಕೆಲಸ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಅವರು, ಕೊರೊನಾ ಸಂದರ್ಭದಲ್ಲಿ ನಮ್ಮ ಪ್ರಧಾನಿಯವರು ನವಿಲಿಗೆ ಕಾಳು ಹಾಕಿಕೊಂಡು ಕುಳಿತಿದ್ದರು ಎಂದು ಲೇವಡಿ ಮಾಡಿದರು.

ಬೃಹತ್‌ ಪ್ರತಿಭಟನೆ

ಶಿವಮೊಗ್ಗ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್‌ ನಿಂದ ನಗರದಲ್ಲಿ ಜನಧ್ವನಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕಾರ್ಯಧ್ಯಕ್ಷ ಧ್ರುವ ನಾರಾಯಣ್‌ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು. ನಗರದ ಅಶೋಕ ಸರ್ಕಲ್‌ನಿಂದ ಹೊರಟ ಪ್ರತಿಭಟನಾ ಮೆರವಣಿಗೆ ಭೋವಿ ಸಮುದಾಯ ಭವನದ ಬಳಿ ಬಹಿರಂಗ ಸಭೆ ನಡೆಸಲಾಯಿತು.

ಕಳಂಕ ತೊಳೆಯೋಣ

ಶಿವಮೊಗ್ಗ ಜಿಲ್ಲೆ ಭ್ರಷ್ಟಾಚಾರ ಕಳಂಕವನ್ನು ಹೊತ್ತುಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರವನ್ನು ಕಾಂಗ್ರೆಸ್‌ ಗೆಲ್ಲಬೇಕು. ಆ ಮೂಲಕ ತುಂಗಾನದಿಯಲ್ಲಿ ಭ್ರಷ್ಟಾಚಾರದ ಕಳಂಕ ತೊಳೆಯಬೇಕು ಎಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಆಕ್ರೋಶ ಹೊರಹಾಕಿದರು.

ಜಿಲ್ಲೆಯಿಂದ ಬಂದಿರುವ ಗೃಹ ಸಚಿವರು ಅರಗ ಜ್ಞಾನೇಂದ್ರ ಅಲ್ಲ ಅರ್ಧ ಜ್ಞಾನೇಂದ್ರ. ಗಂಧದ ನಾಡು, ಮಲೆನಾಡಿಗೆ ಆರಗ ಕಳಂಕ ತರುತ್ತಿದ್ದಾರೆ. ಅನ್ಯಾಯದ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು. ರಾಜ್ಯದಲ್ಲಿರುವ ಭ್ರಷ್ಟಾಚಾರದ ಸರ್ಕಾರವನ್ನು ಕಿತ್ತು ಬಿಸಾಕಬೇಕು. ಪಕ್ಷದ ಕಾರ್ಯಕರ್ತರು ಭಾಷಣ ಕೇಳಿ ಮನೆಗೆ ಹೋಗಿ ಸುಮ್ಮನಾಗಬಾರದು. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು ಎಂದರು.

ಮತ್ತೆ ಅಧಿಕಾರಕ್ಕೆ ಬರೋಣ

ಶಿವಮೊಗ್ಗ ಜಿಲ್ಲೆ ಹೋರಾಟದ ನೆಲ. ಹೋರಾಟದ ಮೂಲಕವೇ ಹಲವು ಶಾಸನ, ಸೌಲಭ್ಯಗಳನ್ನು ಪಡೆಯಲಾಗಿದೆ. ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಹೋರಾಟದ ಮೂಲಕವೇ ಮತ್ತೆ ಅಧಿಕಾರಕ್ಕೆ ಬರೋಣ. ಜನವಿರೋಧಿ ಸರ್ಕಾರವನ್ನು ಕಿತ್ತೂಗೆಯಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next