Advertisement

ಮಳೆಗಾಲದಲ್ಲೇ ಅರಣ್ಯ ಇಲಾಖೆ ಹಸಿರು ಪ್ರೀತಿ

05:53 PM Jun 30, 2022 | Team Udayavani |

ಮಸ್ಕಿ: ಮೇ ಅಂತ್ಯದೊಳಗೆ ಸಸಿ ನೆಟ್ಟು, ನೆಟ್ಟ ಸಸಿಗಳನ್ನು ಜೂನ್‌ ಮಾಹೆಯಲ್ಲಿ ಪೋಷಣೆ ಮಾಡಬೇಕಾದ ಅರಣ್ಯ ಇಲಾಖೆ ಜೂನ್‌ ಅಂತ್ಯದ ವೇಳೆಗೆ ಸಸಿ ನೆಡುವ ಅಭಿಯಾನ ಆರಂಭಿಸಿದೆ. ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳ ಈ ಯಡವಟ್ಟಿನ ನಡೆಗೆ ರೈತ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ತಾಲೂಕಿನ ಪಾಮನಕಲ್ಲೂರು-ಆನಂದಗಲ್‌ -ಚಿಲ್ಕರಾಗಿ-ಗುಡಿಹಾಳ ಮತ್ತು ಹಿಲಾಲಪುರ ಮಾರ್ಗ ಮಧ್ಯ ಸುಮಾರು 1,800 ಸಸಿಗಳನ್ನು ನೆಡುವ ಕಾರ್ಯಕ್ಕೆ ಲಿಂಗಸುಗೂರು ವಿಭಾಗದ ಅರಣ್ಯ ಇಲಾಖೆ ಅ ಧಿಕಾರಿಗಳು ಇತ್ತೀಚೆಗೆ ಚಾಲನೆ ನೀಡಿದ್ದಾರೆ. ರೈತರ ಕೃಷಿ ಚಟುವಟಿಕೆ ಆರಂಭವಾಗುವ ಮುನ್ನವೇ ನಡೆಯಬೇಕಿದ್ದ ಈ ಪ್ರಕ್ರಿಯೆ ತಡವಾಗಿ ಆರಂಭವಾಗಿದ್ದು, ರೈತರಿಗೆ ಮುಳುವಾಗಿದೆ. ಮಳೆಗಾಲದಲ್ಲೇ ಹಸಿರು ಪ್ರೀತಿ ಮೆರೆಯುತ್ತಿರುವುದು ಅಚ್ಚರಿಗೂ ಕಾರಣವಾಗಿದೆ.

ಏನಿದು ಯೋಜನೆ?: ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಪ್ರತಿ ವರ್ಷವೂ ಸಸಿ ನೆಟ್ಟು ಪೋಷಣೆ ಮಾಡುವ ಅಭಿಯಾನ ನಡೆಯುತ್ತದೆ. ಸಾಮಾನ್ಯವಾಗಿ ಏಪ್ರಿಲ್‌-ಮೇ ತಿಂಗಳಲ್ಲೇ ಅಂದಾಜು ಪಟ್ಟಿ ತಯಾರಿಸಿ ಜೂನ್‌ ಆರಂಭದ ವೇಳೆಗೆ ಸಸಿ ನೆಟ್ಟು ಪೋಷಣೆ ಮಾಡಬೇಕು. ಆದರೆ, ಈ ಬಾರಿ ಅತ್ಯಂತ ವಿಳಂಬವಾಗಿ ಸಸಿಗಳನ್ನು ನೆಡಲಾಗುತ್ತಿದೆ. ರಸ್ತೆ ಬದಿಯಲ್ಲಿ ರೈತರ ಕೃಷಿ ಜಮೀನುಗಳಲ್ಲಿ ಸಸಿಗಳನ್ನು ನೆಡಲಾಗುತ್ತಿದ್ದು, ಇದಕ್ಕಾಗಿ ಗುಂಡಿ ತೆಗೆಯಲಾಗುತ್ತಿದೆ. ಜೆಸಿಬಿ
ಯಂತ್ರಗಳನ್ನು ಬಳಕೆ ಮಾಡಿಕೊಂಡು ಗುಂಡಿ ಅಗೆಯಲಾಗುತ್ತಿದ್ದು, ಇದರಿಂದ ರೈತರ ಕೃಷಿ ಜಮೀನಿನಲ್ಲಿ ಹಾಕಿದ ಬೆಳೆಗಳಿಗೆ ಹಾನಿಯಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತಡವಾಗಿ ಸಸಿ ಅಭಿಯಾನ ಆರಂಭಿಸಿದ್ದರಿಂದಲೇ ಇಂತಹ ಸಮಸ್ಯೆಗೆ ಕಾರಣವಾಗಿದೆ.

ಯಾಕೆ ವಿಳಂಬ?: ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳೇ ಹೇಳುವ ಪ್ರಕಾರ ಮೇ ಅಂತ್ಯದ ವೇಳೆಗೆ ಸಸಿ ನೆಡಬೇಕು. ಆದರೆ, ಈ ಬಾರಿ ಆ್ಯಕ್ಷನ್‌ ಪ್ಲಾನ್‌ (ಅಂದಾಜು ಪಟ್ಟಿ)ಗೆ ಅನುಮೋದನೆಯೇ ವಿಳಂಬವಾಗಿದೆ. ಈಗ ಸಸಿ ನೆಡುತ್ತಿದ್ದರೂ ಇನ್ನು ಜಿಪಂ ವತಿಯಿಂದ ಸಸಿ ನೆಡುವ ಯೋಜನೆಗೆ ಅನುಮೋದನೆಯೇ ದೊರೆತಿಲ್ಲ. ಆದರೂ ಗುತ್ತಿಗೆದಾರರ ಮನವೊಲಿಸಿ ಸಸಿ ನೆಡುವ ಕಾರ್ಯ ಆರಂಭಿಸಲಾಗಿದೆ. ಲಿಂಗಸುಗೂರು, ಮಸ್ಕಿ ಕ್ಷೇತ್ರದ ಶಾಸಕರು ಸಸಿ ನೆಡುವ ಯೋಜನೆ ತಡವಾಗಿದ್ದರ ಬಗ್ಗೆ ಪ್ರತ್ಯೇಕವಾಗಿ ಧ್ವನಿ ಎತ್ತಿದ್ದೂ ಆಗಿದೆ. ಆದರೂ ಈ ಬಾರಿ ಸಸಿ ನೆಡುವ ಕಾರ್ಯ ವಿಳಂಬವಾಗಿರುವುದು ಇಲಾಖೆಗಳ ನಡುವಿನ ಸಮನ್ವಯ ಕೊರತೆಯೇ ಕಾರಣ ಎನ್ನಲಾಗುತ್ತಿದೆ.

ಎಲ್ಲಿಂದ ಎಲ್ಲಿಗೆ ಅರಣ್ಯೀಕರಣ? 
ಮಸ್ಕಿ ತಾಲೂಕಿನ ಪಾಮನಕಲ್ಲೂರು, ಕೋಟೆಕಲ್‌ಕ್ರಾಸ್‌, ಆನಂದಗಲ್‌, ಚಿಲ್ಕರಾಗಿ, ಗುಡಿಹಾಳ ಹಾಗೂ ಹಿಲಾಲಪುರ ಮಾರ್ಗದ ರಸ್ತೆಯ ಎಡ-ಬಲ ಬದಿಗಳಲ್ಲಿ ಈ ಬಾರಿ ಅರಣ್ಯೀಕರಣಕ್ಕೆ ಅರಣ್ಯ ಇಲಾಖೆ ಗುರಿ ಹಾಕಿಕೊಂಡಿದೆ. 1 ಕಿ.ಮೀ. ಎಡ-ಬಲ ಬದಿ ಸೇರಿ 300 ಸಸಿ ನೆಡುವ ಯೋಜನೆ ಇದ್ದು, ಸುಮಾರು 6 ಕಿ.ಮೀ. 1,800 ಸಸಿಗಳನ್ನು ನೆಡಬೇಕಿದೆ. ಇದಕ್ಕಾಗಿ ಈಗಾಗಲೇ ರಸ್ತೆಯ ಒಂದು ಬದಿಯಲ್ಲಿ ಗುಂಡಿಗಳನ್ನು ಅಗೆದು ಸಸಿ ನೆಡಲಾಗುತ್ತಿದೆ. ಮತ್ತೂಂದು ಬದಿಯಲ್ಲಿ ಇನ್ನು ಗುಂಡಿ ಅಗೆದಿಲ್ಲ. ಬೆಳೆದು ನಿಂತ ಬೆಳೆ ಇರುವುದರಿಂದ ರೈತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಆಕ್ಷೇಪ ವ್ಯಕ್ತವಾದ ಕಡೆ ಜೆಸಿಬಿ ಬಳಕೆ ಬದಲು ಮಾನವ ಕೂಲಿ ಬಳಸಿ ಗುಂಡಿ ಅಗೆಯಲಾಗುತ್ತಿದೆ.

Advertisement

ಹಸಿರು ಹಾದಿ
ರಸ್ತೆಯ ಎರಡು ಬದಿಗಳಲ್ಲಿ ಹೊಂಗೆ, ಬೇವು, ಬಸಿರು ಮರಗಳನ್ನು ನೆಡಲಾಗುತ್ತಿದೆ. ರಸ್ತೆ ಮಾರ್ಗಗಳಲ್ಲಿ ಗಿಡ-ಮರ ನಡುವುದರಿಂದ ಹಸಿರು ಹಾದಿ ಸೃಷ್ಠಿಯಾಗಲಿದೆ. ಆದರೆ, ತಡವಾಗಿ ಈ ಕಾರ್ಯ ಆರಂಭಿಸಿದ್ದೇ ಬೇಸರಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿ ಸಸಿ ನೆಡುವುದು, ರೈತರು ಬೆಳೆದ ಬೆಳೆಗಳು ಇರುವ ವೇಳೆ ಈ ಕೆಲಸಕ್ಕೆ ಕೈ ಹಾಕಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಸಕ್ತ ವರ್ಷ ಸಸಿ ನೆಡುವ ಕೆಲಸ ವಿಳಂಬವಾಗಿರುವುದು ನಿಜ. ಕೆಲವು ತಾಂತ್ರಿಕ ಕಾರಣಕ್ಕೆ ವಿಳಂಬವಾಗಿದೆ. ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ.
ವಿಜಯಕುಮಾರ, ಆರ್‌ಎಫ್‌ಒ,
ಲಿಂಗಸುಗೂರ

*ಮಲ್ಲಿಕಾರ್ಜುನ ಚಿಲ್ಕರಾಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next