Advertisement

ಕಾಡಾನೆ ದಾಳಿ: ಕೃಷಿ ಕಾರ್ಮಿಕ ಬಲಿ

03:27 PM Dec 24, 2017 | Team Udayavani |

ಹಾಸನ: ಅರಣ್ಯ ಇಲಾಖೆಯು ಎರಡು ಪುಂಡಾನೆಗಳನ್ನು ಹಿಡಿದು ಸಾಗಿಸಿದ ಬೆನ್ನಲ್ಲೇ ಕಾಡಾನೆ ದಾಳಿಗೆ ಕೃಷಿ ಫಾರಂವೊಂದರ ಕಾರ್ಮಿಕನೊಬ್ಬ ಬಲಿಯಾಗಿರುವ ಘಟನೆ ಆಲೂರು ತಾಲೂಕಿನ ಅಬ್ಬನಕೊಪ್ಪಲು ಬಳಿ ಶನಿವಾರ ಮುಂಜಾನೆ ಸಂಭವಿಸಿದೆ. ತಿಂಗಳೊಳಗೆ ಜಿಲ್ಲೆಯಲ್ಲಿ ಇಬ್ಬರನ್ನು ಕಾಡಾನೆಗಳು ಬಲಿ ತೆಗೆದುಕೊಂಡಿವೆ.

Advertisement

ಡಿ.6ರಂದು ಸಕಲೇಶಪುರ ತಾಲೂಕಿನ ರಾಜೇಂದ್ರಪುರದ ಬಳಿ ಕಾಫಿ ತೋಟದ ರೈಟರ್‌ ಯೋಗೀಶ್‌ ಎಂಬುವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರೆ, ರೈತರ ದಿನಾಚರಣೆಯ ದಿನವಾದ ಶನಿವಾರವೇ ಕೃಷಿ ಕಾರ್ಮಿಕ ಶಿವಪ್ಪ (65) ಎಂಬುವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.

40 ವರ್ಷಗಳಿಂದ ಕುದುರೆ ಸಾಕುವ ಮತ್ತು ಕಾಫಿ ತೋಟವೂ ಇರುವ ಫಾರಂವೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ಪ, ಶುಕ್ರವಾರ ರಾತ್ರಿ ಪಾಳಿ ಮುಗಿಸಿ ಶನಿವಾರ ಮುಂಜಾನೆ ನಡೆದುಕೊಂಡು ಮನೆಗೆ ವಾಪಸ್ಸಾಗುತ್ತಿದ್ದಾಗ, ದಿಢೀರ್‌ ದಾಳಿ ಮಾಡಿದ ಸಲಗ ಶಿವಪ್ಪ ಅವರ ತಲೆ ಮೇಲೆ ಕಾಲಿಟ್ಟು ಸಾಯಿಸಿದೆ.

ಪ್ರತಿಭಟನೆ: ವಿಷಯ ತಿಳಿಯುತ್ತಿದ್ದಂತೆಯೇ ಅಬ್ಬನಕೊಪ್ಪಲು ಸುತ್ತಮುತ್ತಲಿನ ಗ್ರಾಮಸ್ಥರು ದಿಢೀರ್‌ ಪ್ರತಿಭಟನೆ ನಡೆಸಿ
ಕಾಡಾನೆ ಉಪಟಳ ತಡೆಯದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಕಾಡಾನೆಗಳಿಂದ ಸಾವು ಸಂಭವಿಸಿದಾಗ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಅಷ್ಟಿಷ್ಟು ಪರಿಹಾರ ಕೊಟ್ಟು ಹೋಗುತ್ತಾರೆ.

ನಂತರ ಇತ್ತ ಮುಖ ಹಾಕುವುದಿಲ್ಲ ಎಂದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಹಾಗೂ ಡಿಎಫ್ಒ ಮಂಜುನಾಥ್‌ರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು. ಮೃತರ
ಕುಟುಂಬಕ್ಕೆ ಉದ್ಯೋಗ ನೀಡ ಬೇಕು ಹಾಗೂ ಈ ಭಾಗದಲ್ಲಿರುವ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡುವ ನಿರ್ಧಾರ
ಪ್ರಕಟಿಸಬೇಕು. ಅಲ್ಲಿಯವರೆಗೂ ಶವ ಎತ್ತುವುದಿಲ್ಲ ಎಂದು ಪಟ್ಟುಹಿಡಿದರು. ನಂತರ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಪ್ರತಿಭಟನಾಕಾರರ ಮನವೊಲಿಸಿ, ಮೃತದೇಹ ಸ್ಥಳಾಂತರ ಮಾಡಿಸಿದರು.

Advertisement

ಡಿಸೆಂಬರ್‌ 6ರಂದು ರಾಜೇಂದ್ರಪುರ ಬಳಿ ಕಾಫಿ ತೋಟದಲ್ಲಿ ರೈಟರ್‌ ಆಗಿದ್ದ ರಾಜೇಶ್‌ ಎಂಬಾತ ಸಲಗನ ದಾಳಿಗೆ ಬಲಿಯಾಗಿದ್ದರು.
ಅದಾದ ನಂತರ ಸ್ಥಳೀಯರು ಪ್ರತಿಭಟನೆ ತೀವ್ರಗೊಳಿಸಿದ್ದರಿಂದ ನಂತರ ಎರಡು ಪುಂಡಾನೆ ಹಿಡಿದು ಸ್ಥಳಾಂತರಿಸಲಾಗಿತ್ತು.
ಆದರೂ ಕಾಡಾನೆಗಳ ದಾಳಿ.

Advertisement

Udayavani is now on Telegram. Click here to join our channel and stay updated with the latest news.

Next