Advertisement

ವಿದೇಶ ವ್ಯಾಪಾರ ನೀತಿ ಆತ್ಮನಿರ್ಭರ ಭಾರತಕ್ಕೆ ಒತ್ತು

11:49 PM Mar 31, 2023 | Team Udayavani |

ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ದೀರ್ಘಾವಧಿಗೆ ಅನ್ವಯವಾಗುವ ವಿದೇಶ ವ್ಯಾಪಾರ ನೀತಿಯನ್ನು ಶುಕ್ರವಾರ ಘೋಷಿಸಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಪಿಯೂಷ್‌ ಗೋಯಲ್‌, ತಮ್ಮ ಇಲಾಖೆಯ ಉನ್ನತ ಅಧಿಕಾರಿಗಳ ಸಮಕ್ಷಮದಲ್ಲಿ ಹೊಸ ವಿದೇಶ ವ್ಯಾಪಾರ ನೀತಿಯನ್ನು ಬಿಡುಗಡೆಗೊಳಿಸಿ 2030ರ ವೇಳೆಗೆ ದೇಶದ ಒಟ್ಟಾರೆ ರಫ್ತು ವ್ಯವಹಾರವನ್ನು 2 ಟ್ರಿಲಿಯನ್‌ ಡಾಲರ್‌ಗಳಿಗೇರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

Advertisement

ವಿದೇಶಗಳೊಂದಿಗಿನ ವಾಣಿಜ್ಯ ಮತ್ತು ಕೈಗಾರಿಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಜತೆಜತೆಯಲ್ಲಿ ಈ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಪೂರಕವಾದ ಹಲವಾರು ಮಹತ್ವದ ಮತ್ತು ದೂರದೃಷ್ಟಿಯ ಯೋಜನೆಗಳನ್ನು ಒಳಗೊಂಡಿದೆ. ಈ ಹಿಂದೆ ಕೇಂದ್ರ ಸರಕಾರ ಪ್ರತೀ 5 ವರ್ಷಗಳಿಗೊಮ್ಮೆ ತನ್ನ ವಿದೇಶ ವ್ಯಾಪಾರ ನೀತಿಯನ್ನು ರೂಪಿಸಿ ಬಿಡುಗಡೆ ಮಾಡುತ್ತಿತ್ತು. ಆದರೆ ಈ ಬಾರಿ ಈ ಸಂಪ್ರದಾಯದಿಂದ ಹೊರಬಂದು ದೀರ್ಘಾವಧಿಗೆ ಅನ್ವಯವಾಗುವಂತೆ ಆದರೆ ಅಗತ್ಯಕ್ಕೆ ತಕ್ಕಂತೆ ಸಂದರ್ಭಕ್ಕಾನುಸಾರವಾಗಿ ನೀತಿಯಲ್ಲಿ ಮಾರ್ಪಾಡುಗಳನ್ನು ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ತನ್ಮೂಲಕ ನಿಗದಿಪಡಿಸಿರುವ ರಫ್ತು ಗುರಿಯನ್ನು ತಲುಪಲು ಅಗತ್ಯವಾದ ಉತ್ತೇಜನ ಮತ್ತು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳಲು ಹಾಗೂ ವಾಣಿಜ್ಯ ಮತ್ತು ಕೈಗಾರಿಕ ಕ್ಷೇತ್ರ ಸಂಕಷ್ಟಕ್ಕೆ ತುತ್ತಾದಲ್ಲಿ ತುರ್ತು ಉಪಶಮನ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ಅಷ್ಟು ಮಾತ್ರವಲ್ಲದೆ ಈ ಕ್ಷೇತ್ರದಲ್ಲಿನ ಸಂಭಾವ್ಯ ಬೆಳವಣಿಗೆಗೆ ತಕ್ಕಂತೆ ದೇಶದಲ್ಲಿನ ಉದ್ಯಮ ಕ್ಷೇತ್ರವೂ ಹೆಜ್ಜೆ ಹಾಕಲು ಸರಕಾರದ ಈ ಉಪಕ್ರಮ ನೆರವಾಗಲಿದೆ.

ಕಳೆದೊಂದು ವರ್ಷಕ್ಕೂ ಅಧಿಕ ಸಮಯದಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ನಡುವಣ ಯುದ್ಧದಿಂದ ಎದುರಾಗಿರುವ ಆರ್ಥಿಕ ಮತ್ತು ವ್ಯಾಪಾರ ಸಂಕಷ್ಟದ ಸನ್ನಿವೇಶವನ್ನು ಭಾರತ ಸಮರ್ಪಕವಾಗಿ ನಿಭಾಯಿಸಿದೆ. ಡಾಲರ್‌ನ ಬದಲಾಗಿ ರೂಪಾಯಿ ಮೂಲಕ ಕಚ್ಚಾ ತೈಲ ಆಮದು ಸಹಿತ ವ್ಯಾಪಾರ-ವ್ಯವಹಾರ ನಡೆಸುವ ಮೂಲಕ ರಷ್ಯಾದೊಂದಿಗಿನ ತನ್ನ ವ್ಯಾಪಾರ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದಿದೆ. ಇದೀಗ ವಿದೇಶ ವ್ಯಾಪಾರ ನೀತಿಯಲ್ಲೂ ಇದೇ ಮಂತ್ರವನ್ನು ಬಲವಾಗಿ ಪ್ರತಿಪಾದಿಸಿರುವ ಭಾರತ ವಿಶ್ವದ ಯಾವುದೇ ರಾಷ್ಟ್ರದ ಕರೆನ್ಸಿ ವೈಫ‌ಲ್ಯ ಅಥವಾ ಡಾಲರ್‌ ಕೊರತೆ ಎದುರಿಸುತ್ತಿದ್ದರೆ ರೂಪಾಯಿ ಮೂಲಕ ವ್ಯಾಪಾರ ಮಾಡಲು ಆ ದೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದೆ. ಈ ಮೂಲಕ ವಿಶ್ವ ಮಟ್ಟದಲ್ಲಿನ ಆರ್ಥಿಕ ಬೆಳವಣಿಗೆಗಳು ತನ್ನ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಖಾತರಿಪಡಿಸುವ ಜತೆಯಲ್ಲಿ ಭಾರತದ ರೂಪಾಯಿಯನ್ನು ಜಾಗತಿಕ ಕರೆನ್ಸಿಯಾಗಿ ಮುಂಚೂಣಿಗೆ ತರಲು ಮುಂದಾಗಿದೆ.

ಫ‌ರೀದಾಬಾದ್‌, ಮೊರದಾಬಾದ್‌, ಮಿರ್ಜಾಪುರ ಮತ್ತು ವಾರಾಣಸಿಯನ್ನು ದೇಶದ ನೂತನ ರಫ್ತು ಕೇಂದ್ರಗಳಾಗಿ ಅಭಿವೃದ್ಧಿ, ವಿದೇಶ ವ್ಯಾಪಾರ ನೀತಿಗೆ ಸಂಬಂಧಿಸಿದ ಅರ್ಜಿಗಳ ಡಿಜಿಟಲೀಕರಣ, ಇಡೀ ಪ್ರಕ್ರಿಯೆಯ ನಿಯಮಾ ವಳಿಗಳನ್ನು ಮತ್ತಷ್ಟು ಸರಳೀಕರಣಗೊಳಿಸುವುದು, ಡೈರಿ ವಲಯಕ್ಕೆ ಸರಾಸರಿ ರಫ್ತು ಬಾಧ್ಯತೆ ನಿಯಮದಿಂದ ವಿನಾಯಿತಿ, ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ವಾಣಿಜ್ಯ ಇಲಾಖೆಗೆ ಕಾಯಕಲ್ಪ ಸಹಿತ ಹಲವಾರು ಮಹತ್ತರವಾದ ಯೋಜನೆ, ಉಪಕ್ರಮಗಳನ್ನು ಈ ಹೊಸ ವಿದೇಶ ವ್ಯಾಪಾರ ನೀತಿ ಒಳಗೊಂಡಿದೆ.

2 ವರ್ಷಗಳ ಹಿಂದೆಯೇ ಈ ಹಿಂದಿನ ನೀತಿಯ ಕಾಲಾವಧಿ ಮುಕ್ತಾಯ ಗೊಂಡಿತ್ತಾದರೂ ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷದ ಮಾ.31ರ ವರೆಗೆ ಅದೇ ನೀತಿಯನ್ನು ಮುಂದುವರಿಸಲಾಗಿತ್ತು. ಈ ಅವಧಿಯಲ್ಲಿ ವಾಣಿಜ್ಯ ಇಲಾಖೆ ಸಾಕಷ್ಟು ಅಧ್ಯಯನ ನಡೆಸಿ ಹೊಸ ನೀತಿಯನ್ನು ರೂಪಿಸಿ ಈಗ ಬಿಡುಗಡೆ ಮಾಡಿದ್ದು ಶನಿವಾರದಿಂದ ಜಾರಿಗೆ ಬರಲಿದೆ. ಕೇಂದ್ರ ಸರಕಾರ ಈಗಾಗಲೇ ದೇಶದಲ್ಲಿ ಜಾರಿ ಗೊಳಿಸಿರುವ ಆತ್ಮನಿರ್ಭರ ನೀತಿಗಳಿಗೆ ಪೂರಕ ಮತ್ತು ಉತ್ತೇಜನದಾಯಕವಾದ ಅಂಶಗಳನ್ನು ಇದು ಒಳಗೊಂಡಿದೆ. ಇ-ಕಾಮರ್ಸ್‌, ಎಲೆಕ್ಟ್ರಿಕ್‌ ವಾಹನ ಸಹಿತ ಈಗಿನ ತುರ್ತು ಮತ್ತು ಪರಿಸರಸ್ನೇಹಿ ಯೋಜನೆಗಳಿಗೆ ಪ್ರೇರಣೆ ಮತ್ತು ಉತ್ತೇಜನ ನೀಡಬಲ್ಲ ದೂರದೃಷ್ಟಿಯಿಂದ ಕೂಡಿದ ವಿದೇಶ ವ್ಯಾಪಾರ ನೀತಿಯನ್ನು ಬಿಡು ಗಡೆಗೊಳಿಸುವ ಮೂಲಕ ವಾಣಿಜ್ಯ ಕ್ಷೇತ್ರದಲ್ಲೂ ಭಾರತವನ್ನು ವಿಶ್ವದ ಮುಂಚೂ ಣಿಯ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಸರಕಾರ ಮುಂದಡಿ ಇಟ್ಟಿರುವುದು ಸ್ತುತ್ಯಾರ್ಹ.

Advertisement
Advertisement

Udayavani is now on Telegram. Click here to join our channel and stay updated with the latest news.

Next